'ಆದಿಪುರುಷ್' ಟೀಸರ್ ವಿವಾದ: ಚಿತ್ರತಂಡಕ್ಕೆ ದೆಹಲಿ ನ್ಯಾಯಾಲಯ ಶಾಕ್.. ಪ್ರಭಾಸ್ಗೂ ನೋಟಿಸ್ ಜಾರಿ
'ಆದಿಪುರುಷ್' ಸಿನಿಮಾ ಬಿಡುಗಡೆಗೆ ತಡೆಯಾಜ್ಞೆ ನೀಡುವಂತೆ ಇತ್ತೀಚೆಗೆ ದೆಹಲಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಚಿತ್ರದಲ್ಲಿ ರಾಮ, ಹನುಮಂತ, ರಾವಣನ ಪಾತ್ರಗಳನ್ನು ತಪ್ಪಾಗಿ ಚಿತ್ರಿಸಲಾಗಿದೆ ಎನ್ನುವ ಆರೋಪ ಕೇಳಿಬಂದಿತ್ತು. ಇದು ಹಿಂದುಗಳ ಮನೋಭಾವಕ್ಕೆ ಧಕ್ಕೆ ತಂದಿದೆ ಎಂದು ವಕೀಲರಾದ ರಾಜ್ ಗೌರವ್ ತಿಳಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ 'ಆದಿಪುರುಷ್' ನೋಟಿಸ್ ಜಾರಿ ಮಾಡಿದೆ. ನಟ ಪ್ರಭಾಸ್ಗೂ ನೋಟಿಸ್ ನೀಡಲಾಗಿದೆ.
ಕಳೆದೊಂದು ವಾರದಿಂದ 'ಆದಿಪುರುಷ್' ಸಿನಿಮಾ ಟೀಸರ್ ಸೃಷ್ಟಿಸಿರುವ ವಿವಾದ ಅಷ್ಟಿಷ್ಟಲ್ಲ. ಸೋಶಿಯಲ್ ಮೀಡಿಯಾದಲ್ಲಿ ಟೀಸರ್ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಬಿಜೆಪಿ ಪಕ್ಷದ ಮುಖಂಡರು ಸೇರಿದಂತೆ ಸಾಕಷ್ಟು ಜನ ಚಿತ್ರತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಮಾಯಣದ ಪಾತ್ರಗಳನ್ನು ಮನಸ್ಸಿಗೆ ಬಂದಂತೆ ತೋರಿಸಿರುವುದು ಸರಿಯಲ್ಲ. ಈ ಸಿನಿಮಾ ರಿಲೀಸ್ ಮಾಡಬಾರದು, ನಾವು ಬಾಯ್ಕಾಟ್ ಮಾಡ್ತೀವಿ ಎಂದು ಹೇಳುತ್ತಿದ್ದಾರೆ. 500 ಕೋಟಿ ರೂ. ಬಜೆಟ್ನ ಸಿನಿಮಾ ಕಾರ್ಟೂನ್ ಸಿನಿಮಾದಂತಿದೆ ಎಂದು ಕೆಲವರು ವ್ಯಂಗ್ಯ ಮಾಡುತ್ತಿದ್ದಾರೆ.
ಚಿತ್ರತಂಡ ಮಾತ್ರ ಸಿನಿಮಾ ನೋಡಿ ಮಾತನಾಡಿ ಎನ್ನುತ್ತಿದ್ದಾರೆ. ಇದು ತ್ರಿಡಿಯಲ್ಲಿ ಮಾಡಿರುವ ಸಿನಿಮಾ. ಮೊಬೈಲ್, ಟಿವಿಯಲ್ಲಿ ಚೆನ್ನಾಗಿ ಕಾಣುವುದಿಲ್ಲ. ಥಿಯೇಟರ್ಗೆ ಬಂದು ತ್ರಿಡಿಯಲ್ಲಿ ಎಕ್ಸ್ಪಿಯರೆನ್ಸ್ ಮಾಡಬೇಕು ಎನ್ನುತ್ತಿದೆ. ಇನ್ನು ಪಾತ್ರಗಳನ್ನು ಚಿತ್ರಿಸಿರುವ ರೀತಿಯಲ್ಲಿ ಯಾವುದೇ ತಪ್ಪು ನಮಗೆ ಕಾಣುತ್ತಿಲ್ಲ ಎಂದು ವಾದಿಸುತ್ತಿದ್ದಾರೆ.

ರಾಮ, ಹನುಮಂತನಿಗೆ ರಬ್ಬರ್ ಉಡುಪು
" ಆದಿಪುರುಷ್ ಟೀಸರ್ನಲ್ಲಿ ರಾಮು, ಹನುಮಂತನನ್ನು ಅಸಮಂಜಸವಾಗಿ ತೋರಿಸಿದ್ದಾರೆ. ಎರಡು ಪಾತ್ರಗಳು ರಬ್ಬರ್ ಉಡುಪು ಧರಿಸಿರುವಂತೆ ಚಿತ್ರಿಸಿದ್ದಾರೆ. ಅಷ್ಟೇ ಅಲ್ಲ ರಾವಣನ ಪಾತ್ರವನ್ನು ಕೂಡ ತಪ್ಪಾಗಿ ತೋರಿಸಿದ್ದಾರೆ. ಹಿಂದು ಮತ, ಸಾಂಸ್ಕೃತಿಕ, ಚಾರಿತ್ರಿಕ, ನಾಗರೀಕ ಮನೋಭಾವಕ್ಕೆ ಧಕ್ಕೆ ತರುವಂತೆ ಬಿಂಬಿಸಲಾಗಿದೆ. ಇನ್ನು ರಾಮನ ಪಾತ್ರವನ್ನು ಬಹಳ ಕೋಪವಾಗಿ ಇತರರನ್ನು ಕೊಲ್ಲುವ ಭಾವನೆ ಹೊಂದಿರುವ ವ್ಯಕ್ತಿಯಾಗಿ ತೋರಿಸಿದ್ದಾರೆ. ಇದು ಸರಿಯಲ್ಲ" ಎಂದು ರಾಜ್ ಗೌರವ್ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.

ರಾವಣನನ್ನು ಖಿಲ್ಜಿ ರೀತಿ ಬಿಂಬಿಸಲಾಗಿದೆ!
"ಬರೀ ರಾಮ, ಹನುಮ ಅಷ್ಟೇ ಅಲ್ಲ ರಾವಣನ ಪಾತ್ರವನ್ನು ತಪ್ಪಾಗಿ ತೋರಿಸಿದ್ದಾರೆ. ಬಾಯ್-ಕಟ್, ಕ್ರೂಕಟ್ ಹೆಯಿರ್ಸ್ಟೈಲ್ತೋ ಕಿವಿಗಳ ಮೇಲೆ ಬ್ಲೆಡ್ ಗುರುತುಗಳು ಇವೆ. ಶಿವನ ಪರಮಭಕ್ತನಾದ ರಾವಣ ಸದಾ ಮನೋಹರವಾದ ವಸ್ತ್ರಗಳನ್ನು ಧರಿಸುವುದರ ಜೊತೆಗೆ ಗಿರಿಜಾ ಮೀಸೆ ಇರುತ್ತದೆ. ಯಾವಾಗಲೂ ಚಿನ್ನದ ಕಿರೀಟವನ್ನು ಧರಿಸುತ್ತಾನೆ, ಪುಷ್ಪಕ ವಿಮಾನದಲ್ಲಿ ಸಂಚರಿಸುವ ರಾವಣನನ್ನು ಬಹಳ ದೇಶಗಳಲ್ಲಿ ಪೂಜಿಸುತ್ತಾರೆ. ಅಂತಹ ರಾವಣನನ್ನು ಮೊಹಮದ್ ಖಿಲ್ಜಿ ರೀತಿ ಚಿತ್ರಿಸಿರುವುದು ಸರಿಯಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಟ್ರೋಲ್ಗೆ ಗುರಿಯಾದ 'ಆದಿಪುರುಷ್' ಟೀಸರ್
ಮೋಷನ್ ಕ್ಯಾಪ್ಚರ್ ಲೈವ್ ಆಕ್ಷನ್ ಸಿನಿಮಾ ಆದಿಪುರುಷ್. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ. ಪ್ರಭಾಸ್ ರಾಮನ ವೇಷದಲ್ಲಿ ನಟಿಸ್ತಾರೆ ಎಂದಾಗಲೇ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿತ್ತು. ಚಿತ್ರದ ಟೀಸರ್ಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದರು. ಅಯೋಧ್ಯೆಯಲ್ಲಿ ಬಿಡುಗಡೆಯಾಗಿದ್ದ ಟೀಸರ್ ಮೊದಲ ನೋಟದಲ್ಲೇ ಬಹುತೇಕರಿಗೆ ನಿರಾಸೆ ಮೂಡಿಸಿತ್ತು. 500 ಕೋಟಿ ಖರ್ಚು ಮಾಡಿ ನಿರ್ಮಿಸಿದ ಸಿನಿಮಾ ಇದೇನಾ? ಎನ್ನುವ ಅನುಮಾನ ಮೂಡಿಸಿತ್ತು. ಗ್ರಾಫಿಕ್ಸ್ ಆಗಲಿ, ಪಾತ್ರಗಳನ್ನು ತೋರಿಸಿರುವ ರೀತಿಯಾಗಲಿ ಬೇಸರ ತರಿಸಿತ್ತು. ಇದೇ ಕಾರಣಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು.

ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ರಿಲೀಸ್
ಓಂ ರಾವುತ್ ನಿರ್ದೇಶನದ 'ಆದಿಪುರುಷ್' ಚಿತ್ರದಲ್ಲಿ ಕೃತಿ ಸನೂನ್ ಸೀತಾದೇವಿಯಾಗಿ ಕಾಣಿಸಿಕೊಂಡಿದ್ದಾರೆ. ಸನ್ನಿ ಸಿಂಗ್ ಲಕ್ಷ್ಮಣನಾಗಿ, ಸೈಫ್ ಅಲಿಖಾನ್ ರಾವಣನಾಗಿ ಬಣ್ಣ ಹಚ್ಚಿದ್ದಾರೆ. ಟಿ ಸೀರಿಸ್ ಹಾಗೂ ರೆಟ್ರೋಫಿಲಿಸ್ ಸಂಸ್ಥೆಗಳು ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡ್ತಿವೆ. ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಜನವರಿ 12ಕ್ಕೆ ಹಲವು ಭಾಷೆಗಳಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ.


Click it and Unblock the Notifications










