ತುಂಡುಡುಗೆಯ ಯುವತಿಯರ ನಡುವೆ ಚಿತ್ರಗುಪ್ತ: 'ಥ್ಯಾಂಕ್ ಗಾಡ್' ಚಿತ್ರ ಬ್ಯಾನ್ಗೆ ಶಿಕ್ಷಣ ಸಚಿವರ ಒತ್ತಾಯ
ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಚಿತ್ರಗಳಿಗೆ ಬ್ಯಾನ್, ಬಾಯ್ಕಾಟ್ ಎನ್ನುವುದು ಸಾಮಾನ್ಯ ವಿಚಾರ. ಚಿತ್ರ ತೆರೆ ಕಾಣುವ ಮೊದಲೇ ಚಿತ್ರದ ಕಥಾ ವಸ್ತುವಿನಿಂದ ಅನೇಕ ಚಿತ್ರಗಳು ವಿವಾದದ ಸುಳಿಯಲ್ಲಿ ಸಿಲುಕಿಕೊಳ್ಳುತ್ತಿವೆ. ಇತ್ತೀಚಿಗೆ ತೆರೆಕಂಡ ರಣ್ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಅಭಿನಯದ 'ಬ್ರಹ್ಮಾಸ್ತ್ರ' ಚಿತ್ರ ಕೂಡ ಬಾಯ್ಕಾಟ್ ಬಿಸಿ ಅನುವಿಸಿತ್ತು. ಆದರೆ ಚಿತ್ರ ಬಾಕ್ಸ್ ಆಫೀಸ್ನಲ್ಲಿ ದಾಖಲೆಯ ಮೊತ್ತ ಗಳಿಕೆ ಮಾಡಿ ಯಶಸ್ಸು ಕಂಡಿದೆ. ಸದ್ಯ ಇಂತಹ ಚಿತ್ರಗಳ ಪಟ್ಟಿಯಲ್ಲಿ ಅಜಯ್ ದೇವಗನ್ ನಟನೆಯ 'ಥ್ಯಾಂಕ್ ಗಾಡ್' ಚಿತ್ರ ಕೂಡ ಸೇರಿಕೊಂಡಿದೆ.
ಸಿದ್ದಾರ್ಥ್ ಮೆಲ್ಹೋತ್ರಾ ಹಾಗೂ ಅಜಯ್ ದೇವಗನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ 'ಥ್ಯಾಂಕ್ ಗಾಡ್' ಚಿತ್ರದ ಬಗ್ಗೆ ಪ್ರೇಕ್ಷಕರು ಕಾತುರರಾಗಿದ್ದಾರೆ. ಮಲ್ಟಿಸ್ಟಾರ್ ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಇದ್ದರೂ ಕೂಡ, ಟ್ರೈಲರ್ ಬಿಡುಗಡೆ ಬಳಿಕ ಚಿತ್ರದ ಬಗ್ಗೆ ವಿವಾದ ಆರಂಭವಾಗಿದೆ. 'ಥ್ಯಾಂಕ್ ಗಾಡ್' ಚಿತ್ರದ ಟ್ರೈಲರ್ ಬಿಡುಗಡೆಯಾಗುತ್ತಿದ್ದಂತೆ ಒಂದಿಷ್ಟು ಜನ ಚಿತ್ರವನ್ನು ಬ್ಯಾನ್ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪವನ್ನು ಚಿತ್ರ ಎದುರಿಸುತ್ತಿದೆ.
'ಥ್ಯಾಂಕ್ ಗಾಡ್' ಚಿತ್ರದಲ್ಲಿ ಅಜಯ್ ದೇವಗನ್ ಚಿತ್ರಗುಪ್ತ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್ನಲ್ಲಿ ನೋಡಿದಂತೆ ಅಜಯ್ ದೇವಗನ್ ಸೂಟು-ಭೂಟು ಧರಿಸಿ ಆಧುನಿಕವಾಗಿ ಕಂಡಿದ್ದಾರೆ. ಅಲ್ಲದೆ ಅಸಭ್ಯ ಭಾಷೆ ಬಳಸಿ ಜೋಕ್ ಮಾಡುತ್ತಾರೆ. ಅಲ್ಲದೇ ಚಿತ್ರಗುಪ್ತರ ಆಸ್ಥಾನದಲ್ಲಿ ತುಂಡುಡುಗೆಯ ಯುವತಿಯರನ್ನು ಸಹ ತೋರಿಸಲಾಗಿದೆ. ಹಿಂದೂ ಸಂಪ್ರದಾಯದ ಪ್ರಕಾರ ಚಿತ್ರಗುಪ್ತರನ್ನು ಕರ್ಮದ ದೇವರು ಎಂದು ಪರಿಗಣಿಸಲಾಗುತ್ತದೆ. ಹೀಗಿರುವಾಗ 'ಥ್ಯಾಂಕ್ ಗಾಡ್' ಚಿತ್ರದಲ್ಲಿ ಈ ರೀತಿಯಾಗಿ ಚಿತ್ರೀಕರಿಸಿರುವುದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಹಿಂದೂ ಕಾರ್ಯಕರ್ತರು ಆರೋಪಿಸಿದ್ದು, ಈ ಚಿತ್ರಕ್ಕೆ ಸೆನ್ಸಾರ್ ಬೋರ್ಡ್ ಸರ್ಟಿಫಿಕೇಟ್ ನೀಡಬಾರದು ಎಂದು ಅನೇಕರು ಒತ್ತಾಯಿಸಿದ್ದರು.

ಇದೀಗ ಮಧ್ಯ ಪ್ರದೇಶದ ಶಿಕ್ಷಣ ಸಚಿವರೂ ಕೂಡ 'ಥ್ಯಾಂಕ್ ಗಾಡ್' ಚಿತ್ರವನ್ನು ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರಿಗೆ ಪತ್ರ ಬರೆದಿರುವ ಮಧ್ಯ ಪ್ರದೇಶದ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್, 'ಥ್ಯಾಂಕ್ ಗಾಡ್' ಚಿತ್ರದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರುವಂತಹ ಅಂಶಗಳಿವೆ. ಹಿಂದೂ ದೇವರನ್ನು ಆಕ್ಷೇಪಾರ್ಹವಾಗಿ ತೋರಿಸಲಾಗಿದೆ ಎಂದು ವಿಶ್ವಾಸ್ ಸಾರಂಗ್ ಚಿತ್ರವನ್ನು ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಹಿಂದೆ ಕರ್ನಾಟಕದಲ್ಲಿಯೂ 'ಥ್ಯಾಂಕ್ಗಾಡ್' ಚಿತ್ರವನ್ನು ಬ್ಯಾನ್ ಮಾಡಬೇಕು ಎಂದು ಹಿಂದೂ ಜನ ಜಾಗೃತಿ ಸಮಿತಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿತ್ತು. ಹಿಂದೂ ಭಾವನೆಗಳಿಗೆ ಧಕ್ಕೆ ತಂದಿರುವ 'ಥ್ಯಾಂಕ್ ಗಾಡ್' ಚಿತ್ರದ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದೆ ಇದ್ದರೆ, ಹಿಂದೂ ಜನ ಜಾಗೃತಿ ಸಮಿತಿ ಕಾರ್ಯಕರ್ತರು ಬೀದಿಗಳಿದು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ಕೊಟ್ಟಿದ್ದರು. ಉತ್ತರ ಪ್ರದೇಶದಲ್ಲಿ 'ಥ್ಯಾಂಕ್ ಗಾಡ್' ಚಿತ್ರದ ಟ್ರೈಲರ್ ಬಿಡುಗಡೆಯಾಗಿ ವೈರಲ್ ಆದ ದಿನವೇ ಚಿತ್ರದ ನಿರ್ದೇಶಕ ಇಂದ್ರ ಕುಮಾರ್, ನಾಯಕ ನಟರಾದ ಅಜಯ್ ದೇವಗನ್ ಹಾಗೂ ಸಿದ್ದಾರ್ಥ್ ಮೆಲ್ಹೋತ್ರಾ ವಿರುದ್ಧ ದೂರು ದಾಖಲಾಗಿತ್ತು. ಹೀಗೆ 'ಥ್ಯಾಂಕ್ ಗಾಡ್' ಚಿತ್ರದ ವಿರುದ್ಧ ಒಂದೊಂದೇ ದೂರು ದಾಖಲಾಗುತ್ತಿದ್ದು, ಅಜಯ್ ದೇವಗನ್ ಚಿತ್ರದ ಬಗ್ಗೆ ಸರ್ಕಾರ ಕ್ರಮವಹಿಸುತ್ತಾ ಕಾದು ನೋಡ ಬೇಕಿದೆ.
ಇನ್ನು ಇಂದ್ರ ಕುಮಾರ್ ನಿರ್ದೇಶನದ 'ಥ್ಯಾಂಕ್ ಗಾಡ್' ಚಿತ್ರ ಬಾಲಿವುಡ್ನ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದ್ದು, ಅಜಯ್ ದೇವಗನ್, ಸಿದ್ದಾರ್ಥ್ ಮೆಲ್ಹೋತ್ರಾ, ರಕುಲ್ ಪ್ರೀತ್ ಸಿಂಗ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಕ್ಟೋಬರ್ 24 ರಂದು ಚಿತ್ರ 'ಥ್ಯಾಂಕ್ ಗಾಡ್' ಚಿತ್ರ ತೆರೆ ಕಾಣುವ ನಿರೀಕ್ಷೆ ಇದ್ದು, ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಲಿದೆ ಎನ್ನುವುದು ಟ್ರೈಲರ್ನಿಂದ ಖಚಿತವಾಗಿದೆ.


Click it and Unblock the Notifications











