'ಗಂಗೂಭಾಯಿ ಕಾತ್ಯಾವಾಡಿ' ಸಿನಿಮಾ ವಿರುದ್ಧ ಕಾಂಗ್ರೆಸ್ ಶಾಸಕ ಆಕ್ಷೇಪ
ಆಲಿಯಾ ಭಟ್ ನಟಿಸಿರುವ 'ಗಂಗೂಭಾಯಿ ಕಾತ್ಯಾವಾಡಿ' ಸಿನಿಮಾಕ್ಕೆ ಒಂದಾದ ನಂತರ ಒಂದು ಅಡಚಣೆಗಳು ಎದುರಾಗುತ್ತಲೇ ಇವೆ.
ಅಂತಿಮ ಹಂತದ ಚಿತ್ರೀಕರಣ ನಡೆಯುತ್ತಿರುವ ವೇಳೆ ಸಿನಿಮಾದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಗೆ ಕೊರೊನಾ ಪಾಸಿಟಿವ್ ಆಗಿರುವ ಕಾರಣ ಚಿತ್ರೀಕರಣವನ್ನು ಬಂದ್ ಮಾಡಲಾಗಿದೆ.
ಇದರ ನಡುವೆಯೇ ಮತ್ತೊಂದು ತಲೆನೋವು ತಲೆದೋರಿದೆ. ಕಾಂಗ್ರೆಸ್ ಶಾಸಕರೊಬ್ಬರು ಸಿನಿಮಾದ ಹೆಸರನ್ನು ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿಯೇ ಅವರು ಈ ವಿಷಯವನ್ನು ಚರ್ಚೆ ಮಾಡಿದ್ದಾರೆ.

ಮುಂಬಾದೇವಿ ಕ್ಷೇತ್ರದ ಶಾಸಕರಾಗಿರುವ ಅಮಿನ್ ಪಟೇಲ್ ಅವರು 'ಗಂಗೂಬಾಯಿ ಕಾತ್ಯಾವಾಡಿ' ಸಿನಿಮಾದ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾವು ಕಾಮಾಟಿಪುರದ ಬಗ್ಗೆ ಸಮಾಜಕ್ಕೆ ತಪ್ಪು ಸಂದೇಶ ನೀಡಲಿದೆ ಎಂದು ಅವರು ಹೇಳಿದ್ದಾರೆ.
ಕಾಮಾಟಿಪುರ ವು ಮುಂಬಾದೇವಿ ಕ್ಷೇತ್ರಕ್ಕೆ ಸೇರಿದ್ದಾಗಿದ್ದು, ಕಾಮಾಟಿಪುರ 1950 ರಲ್ಲಿ ಇದ್ದಂತೆ ಈಗ ಇಲ್ಲ. ಕಾಮಾಟಿಪುರದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಜನರ ಜೀವನ ಶೈಲಿ, ಉದ್ಯೋಗ ಎಲ್ಲವೂ ಬದಲಾಗಿದೆ. ಆದರೆ ಈ ಸಿನಿಮಾದಿಂದ ಕಾಮಾಟಿಪುರದ ಬಗ್ಗೆ ಜನರಿಗೆ ತಪ್ಪು ಸಂದೇಶ ರವಾನೆ ಆಗಲಿದೆ ಎಂದು ಅವರು ಹೇಳಿದ್ದಾರೆ.
ಸಿನಿಮಾದ ಹೆಸರು 'ಗಂಗೂಭಾಯಿ ಕಾತ್ಯಾವಾಡಿ' ಸಿನಿಮಾದ ಹೆಸರು ಕಾತ್ಯಾವಾಡ ನಗರದ ಬಗ್ಗೆಯೂ ಕೆಟ್ಟ ಸಂದೇಶ ರವಾನೆ ಮಾಡುತ್ತದೆ. ಹಾಗಾಗಿ ಸಿನಿಮಾದ ಹೆಸರು ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಿರುವ ಶಾಸಕರು, ರಾಜ್ಯ ಸರ್ಕಾರವು ಈ ವಿಷಯದಲ್ಲಿ ಮಧ್ಯ ಪ್ರವೇಶ ಮಾಡಬೇಕು ಎಂದು ಶಾಸಕ ಅಮಿನ್ ಪಟೇಲ್ ಒತ್ತಾಯಿಸಿದ್ದಾರೆ.
'ಗಂಗೂಭಾಯಿ ಕಾತ್ಯಾವಾಡಿ' ಸಿನಿಮಾವು ಮುಂಬೈ ನ ಮಹಿಳಾ ಡಾನ್ಗಳಲ್ಲಿ ಒಬ್ಬರಾದ ಗಂಗೂಭಾಯಿ ಕಾತ್ಯಾವಾಡಿ ಅಲಿಯಾಸ್ ಗಂಗೂಭಾಯಿ ಕೋಟೆವಾಲಿ ಕುರಿತದ್ದಾಗಿದೆ. 1950 ರ ಕಾಲದಲ್ಲಿ ಮುಂಬೈ ನ ಎಲ್ಲ ವೇಶ್ಯಾಗೃಹಗಳು ಗಂಗೂಭಾಯಿ ಅಡಿಯಲ್ಲಿಯೇ ನಡೆಯುತ್ತಿತ್ತು. ಆ ನಂತರ ಗಂಗೂಭಾಯಿ ಅವರು ರಾಜಕೀಯಕ್ಕೆ ಬಂದು ಸ್ಥಳೀಯ ಸಂಸ್ಥೆಗಳ ಚುನಾವಣೆ ಗೆದ್ದಿದ್ದರು ಅದರ ನಂತರ ವೇಶ್ಯೆಯರ ಹಾಗೂ ಅವರ ಕುಟುಂಬದವರ ಕಲ್ಯಾಣಕ್ಕಾಗಿ ದುಡಿದರು.
ಆಲಿಯಾ ಭಟ್ ಅವರು ಗಂಗೂಭಾಯಿ ಪಾತ್ರವನ್ನು ನಿರ್ವಹಿಸುತ್ತಿದ್ದು, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡಿದ್ದಾರೆ. ಸಿನಿಮಾವು ಜುಲೈ 30 ರಂದು ತೆರೆಗೆ ಬರಲಿದೆ.


Click it and Unblock the Notifications











