ಭಾರತೀಯ ಮುಸ್ಲೀಮರಿಗೆ ನಾಸಿರುದ್ದೀನ್ ಶಾ ಎಚ್ಚರಿಕೆ
ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ಬಗ್ಗೆ ಭಾರತದ ಕೆಲವರು ಅದರಲ್ಲೂ ಮುಸ್ಲಿಂ ಸಮುದಾಯಕ್ಕೆ ಸೇರಿದ ಕೆಲವರು ಸಂಭ್ರಮಿಸಿದ್ದಾರೆ. ಇದಕ್ಕೆ ಹಲವರಿಂದ ವಿರೋಧ ವ್ಯಕ್ತವಾಗಿದೆ.
ಬಾಲಿವುಡ್ನ ಹಿರಿಯ ನಾಸಿರುದ್ಧೀನ್ ಶಾ ಇದೇ ಮೊದಲ ಬಾರಿಗೆ ತಾಲಿಬಾನ್ ವಿಷಯದ ಬಗ್ಗೆ ಮಾತನಾಡಿದ್ದು, ಟ್ವಿಟ್ಟರ್ನಲ್ಲಿ ವಿಡಿಯೋ ಪ್ರಕಟಿಸಿರುವ ಈ ಹಿರಿಯ ನಟ '' ಅಫ್ಘಾನ್ ನಲ್ಲಿ ಮತ್ತೆ ತಾಲಿಬಾನಿ ಉಗ್ರರಿಗೆ ಅಧಿಕಾರ ಸಿಕ್ಕಿರುವುದು ಇಡೀ ಜಗತ್ತು ದುಖಃ ಪಡುವಂತಹ ವಿಷಯ. ಆದರೆ ಇಲ್ಲಿ ಕೆಲವು ಭಾರತೀಯ ಮುಸ್ಲಿಮರು ಸಂತೋಷ ವ್ಯಕ್ತಪಡಿಸುತ್ತಿರುವುದು ಅವರ ಅನಾಗರೀಕತೆಯನ್ನು ತೋರಿಸುತ್ತದೆ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
''ಭಾರತದ ಪ್ರತಿಯೊಬ್ಬ ಮುಸಲ್ಮಾನನೂ ಇಂದು ತನಗೆ ತಾನೇ ಪ್ರಶ್ನೆ ಕೇಳಿಕೊಳ್ಳಬೇಕು. ಅವನಿಗೆ ತನ್ನ ಧರ್ಮದಲ್ಲಿ ಬದಲಾವಣೆ, ಪುನರುಜ್ಜೀವನ, ಆಧುನಿಕತೆ ಬೇಕಿದೆಯೊ ಅಥವಾ ಅದೇ ಹಳೆಯ ನಾಗರೀಕತೆಯೇ ಇಷ್ಟವೇ ಎಂದು ಆತ ಪ್ರಶ್ನೆ ಮಾಡಿಕೊಳ್ಳಬೇಕು'' ಎಂದಿದ್ದಾರೆ ನಾಸಿರುದ್ದೀನ್ ಶಾ.

''ನಾನು ಭಾರತೀಯ ಮುಸಲ್ಮಾನ ಆಗಿದ್ದೇನೆ. ಮಿರ್ಜಾ ಗಾಲೀಬ್ ಕೆಲವು ದಶಕಗಳ ಮೊದಲೇ ಹೇಳಿರುವಂತೆ, ನನಗೆ ಅಲ್ಹಾನ ಜೊತೆ ಸಂಬಂಧವಿದೆ. ನನಗೆ ಧಾರ್ಮಿಕ ಕಾನೂನುಗಳ ಅವಶ್ಯಕತೆ ಇಲ್ಲ. ಭಾರತದ ಇಸ್ಲಾಂ ವಿಶ್ವದ ಇಸ್ಲಾಂ ಗಿಂತಲೂ ಪ್ರಗತಿಪರವಾಗಿದೆ. ದೇವರನ್ನು ಗುರುತಿಸಲು ಸಹ ಸಾಧ್ಯವಾಗದಂಥಹಾ ದಿನಗಳು ನಮಗೆ ಬರದೇ ಇರಲಿ'' ಎಂದು ನಾಸಿರುದ್ದೀನ್ ಶಾ ಹೇಳಿದ್ದಾರೆ.
ಕನ್ನಡದ 'ಮನೆ' ಸಿನಿಮಾದಲ್ಲಿಯೂ ನಟಿಸಿರುವ ನಾಸಿರುದ್ದೀನ್ ಶಾ, ಭಾರತದ ಅತ್ಯಂತ ಹಿರಿಯ ಮತ್ತು ಪ್ರತಿಭಾವಂತ ನಟರು. ಈ ಹಿಂದೆ ಭಾರತದಲ್ಲಿ ಅಸಹಿಷ್ಣುತೆ ಇದೆ ಎಂದು ನಾಸಿರುದ್ದೀನ್ ಶಾ ಹೇಳಿದ್ದರು. ಇದರಿಂದಾಗಿ ಬಲಪಂಥೀಯ ವರ್ಗದ ಜನರಿಂದ ತೀವ್ರ ನಿಂದನೆಗೆ ಒಳಗಾಗಿದ್ದರು. ತಾಲಿಬಾನ್ ಘಟನೆ ಆದಾಗ ಕೆಲವರು ನಾಸಿರುದ್ದೀನ್ ಶಾ ಚಿತ್ರ ಪ್ರಕಟಿಸಿ 'ಅಫ್ಘಾನ್ಗೆ ಹೋಗು' ಎಂದು ಟ್ರೋಲ್ ಮಾಡಿದ್ದರು. ಆದರೆ ನಾಸಿರುದ್ದೀನ್ ಶಾ ತಾಲಿಬಾನಿಗಳನ್ನು ತೀವ್ರ ವಿರೋಧಿಸುತ್ತಿರುವುದಲ್ಲದೆ, ತಾಲಿಬಾನಿಗಳನ್ನು ಬೆಂಬಲಿಸುತ್ತಿರುವ ಮುಸ್ಲಿಮರನ್ನು ಸಹ ವಿರೋಧಿಸಿದ್ದಾರೆ.
ನಟ ನಾಸಿರುದ್ದೀನ್ ಶಾ ಕನ್ನಡದಲ್ಲಿ ಗಿರೀಶ್ ಕಾರ್ನಾಡ್ ನಿರ್ದೇಶೀಸಿದ 'ತಬ್ಬಲಿಯು ನೀನಾದೆ ಮಗನೆ', ಗಿರೀಶ್ ಕಾಸರವಳ್ಳಿ ನಿರ್ದೇಶನದ 'ಮನೆ' ಸಿನಿಮಾಗಳಲ್ಲಿ ನಟಿಸಿದ್ದಾರೆ. ಪದ್ಮಶ್ರೀ, ಪದ್ಮಭೂಷಣ ಗೌರವಕ್ಕೆ ಭಾಜನರಾಗಿರುವ ನಾಸಿರುದ್ದೀನ್ ಶಾ, ಮೂರು ಬಾರಿ ರಾಷ್ಟ್ರಪ್ರಶಸ್ತಿಯನ್ನು ಪಡೆದಿದ್ದಾರೆ.
ಅಮೆರಿಕ ಸೇನೆ ಅಫ್ಘಾನಿಸ್ತಾನ ತೊರೆದ ಬಳಿಕ ತಾಲಿಬಾನಿಗಳು ಅಫ್ಘಾನ್ ಅನ್ನು ತಮ್ಮ ವಶಕ್ಕೆ ಪಡೆದಿವೆ. ಬಂದೂಕು ಹಿಡಿದು, ಶರಿಯಾ ಕಾನೂನು ಜಾರಿಗೊಳಿಸುವ ತಾಲಿಬಾನಿಗಳ ಈ ಅತಿಕ್ರಮಣವನ್ನು ಭಾರತದ ಬುದ್ದಿಜೀವಿಗಳು, ಸೆಲೆಬ್ರಿಟಿಗಳು ಖಂಡಿಸಿದ್ದಾರೆ. ಕರ್ನಾಟಕದಲ್ಲಿಯೂ ಒಬ್ಬಾತ 'ಐ ಲವ್ ತಾಲಿಬಾನ್' ಎಂದು ಕಮೆಂಟ್ ಹಾಕಿದ್ದವನನ್ನು ಪೊಲೀಸರು ವಶಕ್ಕೆ ಸರಿಯಾಗಿ 'ಬುದ್ಧಿ ಕಲಿಸಿದ' ಘಟನೆ ಕೆಲವು ದಿನಗಳ ಹಿಂದಷ್ಟೆ ನಡೆದಿತ್ತು. ಕೆಲವು ಪತ್ರಿಕೆಗಳು, ಮಾಧ್ಯಮಗಳು ಸಹ ತಾಲಿಬಾನ್ ಬಗ್ಗೆ ಮೃದು ಧೋರಣೆ ಪ್ರಕಟಿಸಿರುವುದು ಚರ್ಚೆಗೆ ಕಾರಣವಾಗಿದೆ.


Click it and Unblock the Notifications











