ಸುಶಾಂತ್ ಜೀವನ ಆಧರಿಸಿದ 'ನ್ಯಾಯ್' ಸಿನಿಮಾ ಟ್ರೇಲರ್ ಬಿಡುಗಡೆ
ಸುಶಾಂತ್ ಸಿಂಗ್ ಜೀವನ ಆಧರಿಸಿದ 'ನ್ಯಾಯ್' ಸಿನಿಮಾ ಬಿಡುಗಡೆಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದ ಬೆನ್ನಲ್ಲೆ ಸಿನಿಮಾದ ಟ್ರೇಲರ್ ಇಂದು ಬಿಡುಗಡೆ ಆಗಿದೆ.
ದಿಲೀಪ್ ಗುಲಾಟಿ ಎಂಬುವರು ಸುಶಾಂತ್ ಜೀವನ ಆಧರಿಸಿದ 'ನ್ಯಾಯ್' ಸಿನಿಮಾ ನಿರ್ದೇಶಿಸಿದ್ದು, ಇಂದು ಬಿಡುಗಡೆ ಆಗಿರುವ ಸಿನಿಮಾದ ಟ್ರೇಲರ್ ಅತ್ಯಂತ ಕಳಪೆಯಾಗಿದೆ. ಸಿನಿಮಾಕ್ಕೆ ಹೈಕೋರ್ಟ್ ತಡೆ ನೀಡಿದ್ದಿದ್ದರೆ ಹೆಚ್ಚು ಸೂಕ್ತವಾಗಿತ್ತೇನೋ ಎನಿಸುವಂತಿದೆ ಟ್ರೇಲರ್.
ಸಿನಿಮಾದ ಟ್ರೇಲರ್ ಬಹಳ ಕಳಪೆಯಾಗಿದ್ದು, ಸಿನಿಮಾ ಹೇಗಿರಬಹುದೆಂಬ ಅಂದಾಜನ್ನು ನೀಡುತ್ತಿದೆ. ಧಾರಾವಾಹಿಗಿಂತಲೂ ಕಳಪೆ ಗುಣಮಟ್ಟದ ಕ್ಯಾಮೆರಾ ಬಳಸಿ ಚಿತ್ರೀಕರಣ ಮಾಡಿರುವುದು ಟ್ರೇಲರ್ನಲ್ಲಿ ಗೊತ್ತಾಗುತ್ತಿದೆ. ಧ್ವನಿಯಂತೂ ಮೊಬೈಲ್ನಲ್ಲಿಯೇ ಡಬ್ಬಿಂಗ್ ಮಾಡಿದಂತಿದೆ.
ಸಿನಿಮಾ ಬಗ್ಗೆ ಹೆಚ್ಚು ಗೊತ್ತಿಲ್ಲದವರು, ಸುಶಾಂತ್ ಸಾವು ಹಾಗೂ ಅದರ ಹಿಂದಿನ ವಿವಾದವನ್ನು ಬಳಸಿಕೊಂಡು ಹಣ, ಖ್ಯಾತಿಗಳಿಸಿಕೊಳ್ಳಲ್ಲಷ್ಟೆ ಈ ಸಿನಿಮಾವನ್ನು ಮಾಡಿರುವುದು ಟ್ರೇಲರ್ನ ಗುಣಮಟ್ಟದಿಂದಲೇ ಗೊತ್ತಾಗುತ್ತಿದೆ.

ರಿಯಾ ಚಕ್ರವರ್ತಿಯನ್ನು ಕೆಟ್ಟದಾಗಿ ಬಿಂಬಿಸಲಾಗಿದೆ
ಟ್ರೇಲರ್ನಿಂದ ತಿಳಿದುಬರುತ್ತಿರುವಂತೆ ರಿಯಾ ಚಕ್ರವರ್ತಿ, ಮಹೇಶ್ ಭಟ್ ಹಾಗೂ ಇನ್ನೂ ಕೆಲವರನ್ನು ಕೆಟ್ಟದಾಗಿ ಬಿಂಬಿಸಿದಂತಿದೆ. ಮಹೇಶ್ ಭಟ್, ರಿಯಾ ಚಕ್ರವರ್ತಿ, ಸುಶಾಂತ್ ಸಿಂಗ್, ಸುಶಾಂತ್ ಕುಟುಂಬ, ಎನ್ಸಿಬಿ, ಇಡಿ, ಸಿಬಿಐ, ಮುಂಬೈ ಪೊಲೀಸ್, ಬಿಹಾರದ ಪೊಲೀಸ್ ಎಲ್ಲ ಪಾತ್ರಗಳು ಸಿನಿಮಾದಲ್ಲಿ ಇವೆ. ಎಲ್ಲರ ಹೆಸರನ್ನೂ ಮೂಲ ಹೆಸರಿಗೆ ಹತ್ತಿರವಿರುವಂತೆ ನಾಮಕರಣ ಮಾಡಲಾಗಿದೆ.

ತಡೆ ನೀಡಲು ನಿರಾಕರಿಸಿದ ಹೈಕೋರ್ಟ್
'ನ್ಯಾಯ್' ಸಿನಿಮಾದ ಬಿಡುಗಡೆಗೆ ತಡೆ ನೀಡಬೇಕು ಎಂದು ಸುಶಾಂತ್ ಸಿಂಗ್ ತಂದೆ ಕಿಶೋರ್ ಕುಮಾರ್ ಸಿಂಗ್ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಸಿನಿಮಾ ಬಿಡುಗಡೆ ತಡೆ ನೀಡಲು ನಿರಾಕರಿಸಿದೆ. 'ನ್ಯಾಯ್' ಸಿನಿಮಾ ನಿರ್ದೇಶಕ, ನಿರ್ಮಾಪಕರು ನಮ್ಮ ಅನುಮತಿ ಪಡೆಯದೇ ಮಗ ಸುಶಾಂತ್ ಜೀವನದ ಬಗ್ಗೆ ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಸುಶಾಂತ್ ಅನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಸುಶಾಂತ್ ತಂದೆ ಆರೋಪಿಸಿದ್ದರು.

ಶಕ್ತಿ ಕಪೂರ್ ಸಹ ನಟಿಸಿದ್ದಾರೆ
'ನ್ಯಾಯ್' ಸಿನಿಮಾದಲ್ಲಿ ಸುಶಾಂತ್ ಸಿಂಗ್ ಪಾತ್ರವನ್ನು ಜುಬೇರ್ ಖಾನ್ ನಿರ್ವಹಿಸಿದ್ದಾರೆ. ರಿಯಾ ಪಾತ್ರದಲ್ಲಿ ಶ್ರೆಯಾ ಶುಕ್ಲಾ ನಟಿಸಿದ್ದಾರೆ. ಸಿನಿಮಾದಲ್ಲಿ ಶಕ್ತಿ ಕಪೂರ್ ಸಹ ಇದ್ದಾರೆ. ವಿಶೇಷವೆಂದರೆ ಸುಶಾಂತ್ ಪ್ರಕರಣದಿಂದ ಹೊರಬಿದ್ದ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಕ್ತಿ ಕಪೂರ್ ಪುತ್ರಿ ಶ್ರದ್ಧಾ ಕಪೂರ್ ಅನ್ನು ವಿಚಾರಣೆ ನಡೆಸಲಾಗಿತ್ತು. ಇನ್ನುಳಿದಂತೆ ದಿಲಿಪ್ ಗುಲಾಟಿ ನಿರ್ದೇಶಿಸಿದ್ದಾರೆ. ನಿರ್ಮಾಣ ಮಾಡಿರುವುದು ಸರಳಾ ಸರ್ಗೋಯಿ ಮತ್ತು ರಾಹುಲ್ ಶರ್ಮಾ.
Recommended Video

ಸುಶಾಂತ್ ಸಿಂಗ್ ರಜಪೂತ್ ಸಾವು
ಬಾಲಿವುಡ್ನ ಖ್ಯಾತ ಯುವನಟ ಆಗಿದ್ದ ಸುಶಾಂತ್ ಸಿಂಗ್ ರಜಪೂತ್ ಕಳೆದ ವರ್ಷ ಜೂನ್ 14 ರಂದು ಮುಂಬೈನ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದರು. ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಸುಶಾಂತ್ ಸಾವಿಗೆ ನಟಿ ರಿಯಾ ಚಕ್ರವರ್ತಿ ಕಾರಣವೆಂದು ಆರೋಪಿಸಲಾಗಿತ್ತು. ನಿರ್ದೇಶಕ ಮಹೇಶ್ ಭಟ್ ಸೇರಿದಂತೆ ಹಲವರ ಹೆಸರು ಪ್ರಕರಣದಲ್ಲಿ ಬಂದಿತ್ತು. ಸುಶಾಂತ್ ಸಾವಿನ ಪ್ರಕರಣದ ತನಿಖೆ ವೇಳೆಯೇ ಡ್ರಗ್ಸ್ ಪ್ರಕರಣ ಹೊರಗೆ ಬಿದ್ದು ಹಲವು ಸೆಲೆಬ್ರಿಟಿಗಳ ಬಂಧನ ಸಹ ಆಯಿತು. ಸುಶಾಂತ್ ಪ್ರಕರಣದ ತನಿಖೆಯನ್ನು ಸಿಬಿಐ ತನಿಖೆ ನಡೆಸುತ್ತಿದೆ.


Click it and Unblock the Notifications











