ಒತ್ತಾಯಕ್ಕೆ ಮಣಿದು 'ಪಠಾಣ್' ಸಿನಿಮಾಕ್ಕೆ ಸೆನ್ಸಾರ್: ಟಿ.ಎಸ್ ನಾಗಾಭರಣ ಅಸಮಾಧಾನ
ಸೆನ್ಸಾರ್ ಮಂಡಳಿ ಸದಸ್ಯರು, ಹಿರಿಯ ಸಿನಿಮಾ ನಿರ್ದೇಶಕರೂ ಆಗಿರುವ ಟಿ.ಎಸ್.ನಾಗಾಭರಣ ಅವರು, ಶಾರುಖ್ ಖಾನ್ ನಟನೆಯ 'ಪಠಾಣ್' ಸಿನಿಮಾದ ನಿಯಮಬಾಹಿರ ಸೆನ್ಸಾರ್ ಪ್ರಕ್ರಿಯೆಯನ್ನು ಪ್ರಶ್ನಿಸಿದ್ದಾರೆ.
ಆಂಗ್ಲ ಮಾಧ್ಯಮದೊಟ್ಟಿಗೆ ಮಾತನಾಡಿರುವ ಟಿ.ಎಸ್.ನಾಗಾಭರಣ, ಸೆನ್ಸಾರ್ ಬೋರ್ಡ್ನ ನಿರ್ಣಯದ ಮೇಲೆ ಸಾಮಾಜಿಕ ಜಾಲತಾಣದ ಚರ್ಚೆ, ಒತ್ತಡಗಳು ಪ್ರಭಾವ ಬೀರಬಾರದು ಎಂದಿದ್ದಾರೆ. ಆ ಮೂಲಕ 'ಪಠಾಣ್' ಸಿನಿಮಾದ ನಿಯಮಬಾಹಿರ ಸೆನ್ಸಾರ್ ಪ್ರತಿಕ್ರಿಯೆಯನ್ನು ವಿರೋಧಿಸಿದ್ದಾರೆ.
ಶಾರುಖ್ ಖಾನ್ ನಟನೆಯ 'ಪಠಾಣ್' ಸಿನಿಮಾದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಪೋಸ್ಟ್ಗಳನ್ನು ಹರಿಬಿಡುತ್ತಿದ್ದು, ಸಿನಿಮಾವನ್ನು ಬ್ಯಾನ್ ಮಾಡುವಂತೆ ಒತ್ತಾಯ ಮಾಡಲಾಗುತ್ತಿದೆ. ಹಾಗೂ ಹಾಡೊಂದರಲ್ಲಿ ದೀಪಿಕಾ ಪಡುಕೋಣೆ ತೊಟ್ಟಿರುವ ಬಿಕಿನಿಯ ಬಣ್ಣದ ಬಗ್ಗೆ ಆಕ್ಷೇಪ ಎತ್ತಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಹಿಂದುಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ ಕಾರಣ ಸೆನ್ಸಾರ್ ಬೋರ್ಡ್, 'ಪಠಾಣ್' ಸಿನಿಮಾಕ್ಕೆ ಹತ್ತು ಕಟ್ಗಳನ್ನು ಸೂಚಿಸಿದೆ. ಸಿನಿಮಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಎದ್ದಿರುವ ಚರ್ಚೆಯ ಆಧಾರದಲ್ಲಿಯೇ ಈ ಎಲ್ಲ ಕಟ್ಗಳನ್ನು ಸೂಚಿಸಲಾಗಿದೆ ಎನ್ನಲಾಗುತ್ತಿದೆ.
'ಪಠಾಣ್' ಸಿನಿಮಾದ 'ಬೇಷರಮ್' ಹಾಡೊಂದು ಬಿಡುಗಡೆ ಆಗಿದ್ದು ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಧರಿಸಿ ನರ್ತಿಸಿದ್ದಾರೆ. ದೀಪಿಕಾ ಭಗವಾ ಬಣ್ಣದ ಬಿಕಿನಿ ಧರಿಸಿದ್ದಾರೆ ಹಾಗಾಗಿ ಇದು ಹಿಂದೂ ವಿರೋಧಿ ಎಂದು ಕೆಲವರು ಬೀದಿಗಿಳಿದು ರಂಪ ಮಾಡಿದ್ದಾರೆ. ಸಿನಿಮಾ ಬ್ಯಾನ್ ಮಾಡುವಂತೆ ಒತ್ತಾಯ ಹೇರಿದ್ದಾರೆ. ಕೆಲವೆಡೆ ಶಾರುಖ್ ಖಾನ್ ವಿರುದ್ಧ ಹಿಂದುಪರ ಸಂಘಟನೆಗಳು ಪ್ರತಿಭಟನೆ ಸಹ ನಡೆಸಿವೆ. ಕೆಲವು ಕಡೆ ಮಲ್ಟಿಪ್ಲೆಕ್ಸ್ಗಳಿಗೆ ನುಗ್ಗಿ ದಾಂಧಲೆಯನ್ನು ಸಹ ಕೆಲವು ಪುಂಡರು ಮಾಡಿದ್ದಾರೆ.
ಸಮಾಜದಲ್ಲಿ ಶಾಂತಿ ನೆಲೆಸುವ ಕಾರಣದಿಂದ ತಾವು ಸಿನಿಮಾಕ್ಕೆ 12 ಕಡೆ ಕಟ್ಗಳನ್ನು ಸೂಚಿಸಿರುವುದಾಗಿ ಸೆನ್ಸಾರ್ ಬೋರ್ಡ್ನ ಅಧ್ಯಕ್ಷ ಪ್ರಸೂನ್ ಜೋಷಿ ಹೇಳಿದ್ದಾರೆ. ಸ್ವತಃ ಹಿಂದುತ್ವವಾದಿಯೂ ಮೋದಿ ಪ್ರಿಯರೂ ಆಗಿರುವ ಪ್ರಸೂನ್ ಜೋಷಿ, ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಚರ್ಚೆ ಹಾಗೂ ಹಿಂದುಪರ ಸಂಘಟನೆಗಳು ಹೇರುತ್ತಿರುವ ಒತ್ತಡದ ಪ್ರಭಾವಕ್ಕೆ ಒಳಗಾಗಿ ಹೀಗೆ 'ಪಠಾಣ್' ಸಿನಿಮಾಕ್ಕೆ ಸುಖಾ ಸುಮ್ಮನೆ ಕಟ್ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.
ಹಿಂದುಪರ ಸಂಘಟನೆಗಳಿಗೆ ಬಾಲಿವುಡ್ನ ಖಾನ್ಗಳ ಮೇಲೆ ಮೊದಲಿನಿಂದಲೂ ಅಸಹಿಷ್ಣುತೆ ಇರುವುದು ಜಗಜ್ಜಾಹೀರು. ಆಮಿರ್ ಖಾನ್ರ 'ಲಾಲ್ ಸಿಂಗ್ ಚಡ್ಡ' ಸಿನಿಮಾಕ್ಕೆ ಬ್ಯಾನ್ ಬಿಸಿ ತಾಗಿಸಿ ಸಿನಿಮಾ ಫ್ಲಾಪ್ ಆಗುವಂತೆ ಮಾಡಿದ್ದು, ಶಾರುಖ್ ಖಾನ್ ಸಿನಿಮಾಕ್ಕೂ ಇದೇ ಗತಿ ಹಿಡಿಸುತ್ತೇವೆ ಎಂದು ಹಲವು ಹಿಂದುಪರ ಸಂಘಟನೆಗಳ ಸದಸ್ಯರು ಈ ಹಿಂದೆಯೇ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು. ಅಂತೆಯೇ ಈಗ ಕ್ಷುಲ್ಲಕ ವಿಷಯ ಹಿಡಿದು ಶಾರುಖ್ ಖಾನ್ ಸಿನಿಮಾ ಬ್ಯಾನ್ ಮಾಡುವಂತೆ ಪ್ರತಿಭಟನೆ ಮಾಡುತ್ತಿದ್ದಾರೆ.
'ಪಠಾಣ್' ಸಿನಿಮಾವು ಗೂಢಚಾರಿಯ ಕುರಿತಾದ ಕತೆಯನ್ನು ಹೊಂದಿದ್ದು, ಸಿನಿಮಾದಲ್ಲಿ ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ಸಹ ನಟಿಸಿದ್ದಾರೆ. ಸಿನಿಮಾವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡಿದ್ದು, ನಿರ್ಮಾಣ ಮಾಡಿರುವುದು ಯಶ್ ರಾಜ್ ಫಿಲಮ್ಸ್.


Click it and Unblock the Notifications











