Ponniyin Selvan I Review: 'ಪೊನ್ನಿಯಿನ್ ಸೆಲ್ವನ್ 1' ಸಿನಿಮಾ ಹೇಗಿದೆ?
'ಪೊನ್ನಿಯಿನ್ ಸೆಲ್ವನ್' ಕಾದಂಬರಿಯನ್ನು ಸಿನಿಮಾ ಮಾಡುವುದಾಗಿ ಮಣಿರತ್ನಂ ಘೋಷಿಸಿದಾಗಲೇ ಹಲವರಿಗೆ ಗೊತ್ತಿತ್ತು ಇದು ಬೃಹತ್ ಕ್ಯಾನ್ವಸ್ನಲ್ಲಿ ಮೂಡಿಬರಲಿದೆ. ಅಂತೆಯೇ ಜನರ ನಿರೀಕ್ಷೆಯನ್ನು ಮಣಿರತ್ನಂ ಹುಸಿ ಮಾಡಿಲ್ಲ.
'ಪೊನ್ನಿಯಿನ್ ಸೆಲ್ವನ್ 1' ಸಿನಿಮಾದಲ್ಲಿ ನಾಟಕೀಯತೆ ಇದೆ, ಆಕ್ಷನ್ ಇದೆ, ಮೈನವಿರೇಳಿಸುವ ದೃಶ್ಯಗಳಿವೆ, ಕಲಾವಿದರ ಅದ್ಭುತವಾದ ನಟನೆ ಇದೆ ಜೊತೆಗೆ ಕುತೂಹಲವೂ ಇದೆ.
ಕಾದಂಬರಿಯಲ್ಲಿ ಇರುವಂತೆ ನೇರವಾಗಿಯೇ ಸಿನಿಮಾದ ಕತೆಯನ್ನು ಹೇಳಲಾಗಿದೆ, ರಿವರ್ಸ್ ಸ್ಕ್ರೀನ್ ಪ್ಲೇ ಅಥವಾ ಇನ್ನಾವುದೇ ರೀತಿಯ ಬೇರೆಯ ರೀತಿಯ ನಿರೂಪಣಾ ಯತ್ನವನ್ನು ನಿರ್ದೇಶಕರು ಮಾಡಿಲ್ಲ ಇದು ಹಲವರಿಗೆ ಇಷ್ಟವಾಗುತ್ತದೆ. ಸಿನಿಮಾ ಆರಂಭವಾಗುವುದು ಚೋಳರ ರಾಜ ಆದಿತ್ಯ ಕರಿಕಾಳನ್, ತನ್ನ ಸಹೋದರರಾದ ಕುಂದವೈ, ಅರುಳ್ಮೋಳಿ ಅವರ ತಂದೆ ಸುಂದರ ಚೋಳ ಅವರುಗಳಿಗೆ ವಂತಿಯತೇವನ್ ಮೂಲಕ ಸಂದೇಶವೊಂದನ್ನು ಕಳಿಸುವ ಮೂಲಕ. ಸಂದೇಶವೆಲ್ಲ ತಲುಪುವ ವೇಳೆಗೆ ಸಿನಿಮಾ ಮುಗಿಯುತ್ತದೆ!

ನಟರ ನಟನೆ ಅದ್ಭುತ
ವಂತಿಯತೇವನ್ ಪಾತ್ರದಲ್ಲಿ ನಟಿಸಿರುವ ಕಾರ್ತಿ ಆ ಪಾತ್ರದ ಮಗುವಿನ ಮುಗ್ಧತೆ, ತುಂಟಾಟ ಹಾಗೂ ಸಾಹಸಭರಿತ ವ್ಯಕ್ತಿತ್ವವನ್ನು ಆವಾಹಿಸಿಕೊಂಡು ನಟಿಸಿದ್ದಾರೆ. ತುಂಟತನ, ಸಾಹಸ, ಗಾಂಭೀರ್ಯ ಎಲ್ಲದರಲ್ಲೂ ಅವರ ನಟನೆ ಅದ್ಭುತ. ಇನ್ನು ಅರುಳ್ಮೋಳಿ ಅಲಿಯಾಸ್ ಪೊನ್ನಿಯಿನ್ ಸೆಲ್ವನ್ ಪಾತ್ರದಲ್ಲಿ ಜಯಂ ರವಿ ಪಾತ್ರಕ್ಕೆ ಬೇಕಾದ ಗಾಂಭೀರ್ಯವನ್ನು, ರಾಜತ್ವವನ್ನು ತುಂಬಿದ್ದಾರೆ. ಆದಿತ್ಯ ಕರಿಕಾಳನ್ ಪಾತ್ರದಲ್ಲಿ ವಿಕ್ರಂ ನಟನೆ ಅದ್ಭುತ. ರೇಜಿಗೆ ತುಂಬಿರುವ, ಜಗತ್ತನ್ನೇ ಸುಟ್ಟು ನಾಶ ಮಾಡುವಷ್ಟು ಸಿಟ್ಟು ತುಂಬಿರುವ ಪಾತ್ರದಲ್ಲಿ ವಿಕ್ರಂ ಅಬ್ಬರಿಸಿದ್ದಾರೆ.

ನಟಿಯರಲ್ಲಿ ಯಾರು ಅದ್ಭುತ?
ಪೂಂಗುಳೈ ಪಾತ್ರದಲ್ಲಿ ನಟಿಸಿರುವ ಐಶ್ವರ್ಯಾ ಲಕ್ಷ್ಮಿ ನಟನೆ ಅದ್ಭುತವಾಗಿದೆ. ಪೊನ್ನಿಯಿನ್ ಸೆಲ್ವನ್ ಮೇಲೆ ಆಕೆಗಿರುವ ಪ್ರೀತಿ ಸಿನಿಮಾದಲ್ಲಿ ಚೆನ್ನಾಗಿ ಶೋ ಆಗಿದೆ. ಆಕೆಯ ಸಹಜವಾದ ಅಭಿನಯ, ಆಕೆಯ ಸೌಂದರ್ಯದ ಜೊತೆ ಬೆರುತು ನೋಡುಗರ ಹೃದಯ ಹೊಕ್ಕುತ್ತದೆ. ಇನ್ನು ನಟಿ ಐಶ್ವರ್ಯಾ ರೈ ನಂದಿನಿ ಪಾತ್ರದಲ್ಲಿ ರಾಣಿಯಾಗಿ ಅದ್ಭುತವಾಗಿ ನಟಿಸಿದ್ದಾರೆ. ಐಶ್ವರ್ಯಾ ರೈ ನೆರಳಿನಲ್ಲಿ ಮಹಾತ್ವಾಕಾಂಕ್ಷಿ ಕುಂದವೈ ಪಾತ್ರದಲ್ಲಿ ತ್ರಿಶಾ ಸಹ ಗಮನ ಸೆಳೆಯುತ್ತಾರೆ.

ವಾಲ್ ಪೇಪರ್ ಆಗುವಷ್ಟು ಅದ್ಭುತವಾಗಿವೆ ದೃಶ್ಯಗಳು
ಸಿನಿಮಾದ ಪ್ರತಿ ದೃಶ್ಯ, ಪ್ರತಿ ಫ್ರೇಮ್ ಸಹ ಡೆಸ್ಕ್ಟಾಪ್ನ ವಾಲ್ ಪೇಪರ್ ಆಗುವಷ್ಟು ಅದ್ಭುತವಾಗಿದೆ. ದೃಶ್ಯಗಳಿಗೆ ನೀಡಲಾಗಿರುವ ಟೋನ್, ಸೆರೆ ಹಿಡಿದಿರುವ ಆಂಗಲ್ಗಳು ಅದ್ಭುತವಾಗಿವೆ. ಸೆರೆ ಹಿಡಿದಿರುವ ದೃಶ್ಯಗಳನ್ನು ನೋಡಲೆಂದೇ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ನೋಡಿದರೂ ಪ್ರೇಕ್ಷಕನಿಗೆ ಹಣ ನಷ್ಟವಾಗುವುದಿಲ್ಲ. ಸಿನಿಮಾದ ಎಡಿಟಿಂಗ್ ಸಹ ಸಹಜವಾಗಿ, ಸರಳವಾಗಿ ಹಾಗೂ ಸಮತೋಲಿತವಾಗಿದೆ. ಅನವಶ್ಯಕ ಕಟ್ಗಳು ಸಿನಿಮಾದಲ್ಲಿಲ್ಲ. ಸಿನಿಮಾದ ಕತೆಯು ಒಂದೇ ವೇಗವನ್ನು ಉಳಿಸಿಕೊಳ್ಳುವಂತೆ ಎಡಿಟ್ ಮಾಡಲಾಗಿದೆ. ಸಿನಿಮಾದಲ್ಲಿನ ಅದ್ಭುತ ದೃಶ್ಯ ವೈಭವಕ್ಕೆ ಸಿನಿಮಾಟೊಗ್ರಫರ್ ರವಿವರ್ಮ ಹಾಗೂ ಮಣಿರತ್ನಂ ಅಭಿನಂದನಾರ್ಹರು.

ಒಟ್ಟಾರೆಯಾಗಿ ಸಿನಿಮಾ ಹೇಗಿದೆ?
ತಮಿಳಿನ ಅದ್ಭುತ ಸಾಹಿತ್ಯವನ್ನು ಕತೆಯನ್ನಾಗಿಸಿರುವುದರಿಂದ ಕತೆ ಖಂಡಿತ ಇಷ್ಟವಾಗುತ್ತದೆ. ಕಾದಂಬರಿಯನ್ನು ಚಿತ್ರಕತೆ ಮಾಡಿಕೊಂಡಿರುವ ರೀತಿ ಸಹ ಚೆನ್ನಾಗಿದೆ. ಸಿನಿಮಾದ ಮೇಕಿಂಗ್ ಬಹುವಾಗಿ ಗಮನ ಸೆಳೆಯುತ್ತದೆ. ನಟರ ನಟನೆ ಸಹ ಅದ್ಭುತ. ಸಿನಿಮಾದಲ್ಲಿ ತುಸು ಹಿನ್ನೆಡೆ ಎಂದರೆ ಚಿತ್ರಕತೆ ಬಹಳ ವೇಗದಿಂದ ಸಾಗುತ್ತದೆ. ಕತೆಗೆ ಅಲ್ಪವಿರಾಮವೇ ಇಲ್ಲ. ದೊಡ್ಡ ಕಾದಂಬರಿಯನ್ನು ಎರಡು ಸಿನಿಮಾಕ್ಕೆ ಸೀಮಿತ ಮಾಡಬೇಕಿರುವ ಕಾರಣಕ್ಕೆ ಹೀಗಾಗಿರಬಹುದು. ಒಟ್ಟಾರೆಯಾಗಿ ಇದೊಂದು ಅದ್ಭುತವಾದ ಸಿನಿಮ್ಯಾಟಿಕ್ ಅನುಭವ. ಚಿತ್ರಮಂದಿರದಲ್ಲಿ ಮಿಸ್ ಮಾಡಿಕೊಡುವಂತಿಲ್ಲ.


Click it and Unblock the Notifications











