ಎತ್ತ ಸಾಗುತ್ತಿದ್ದೇವೆ ಎಂದಿದ್ದ ಪ್ರಕಾಶ್ ರಾಜ್ಗೆ 'ಸಿಂಹಕ್ಕೆ ಹಲ್ಲುಗಳಿವೆ' ಎಂದ ಅನುಪಮ್ ಖೇರ್!
ಭಾರತದ ಹೊಸ ರಾಷ್ಟ್ರೀಯ ಲಾಂಛನ ಬಗ್ಗೆ ವಿರುದ್ಧ ವಿಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿವೆ. ಸೌಮ್ಯ ರೂಪದ ರಾಷ್ಟ್ರೀಯ ಲಾಂಛನಕ್ಕೆ ಉಗ್ರ ರೂಪ ಕೊಟ್ಟಿರುವುದಕ್ಕೆ ಹಲವು ರಾಜಕೀಯ ಮುಖಂಡರು ಕಿಡಿ ಕಾರುತ್ತಿದ್ದಾರೆ. ವಿವಾದದ ಕಿಡಿ ಹೊತ್ತಿಕೊಳ್ಳುತ್ತಿದ್ದಂತೆ ಪರವಾಗಿ ಬ್ಯಾಟ್ ಬೀಸುವವರ ಸಂಖ್ಯೆ ಕೂಡ ಹೆಚ್ಚಾಗಿದೆ.
ಹೊಸ ರಾಷ್ಟ್ರೀಯ ಲಾಂಛನದ ಬಗ್ಗೆ ನಟ ಪ್ರಕಾಶ್ ರಾಜ್ ಕೂಡ ಕಿಡಿಕಾರಿದ್ದರು. ಟ್ವೀಟ್ ಮೂಲಕ ಉಗ್ರ ಸ್ವರೂಪದ ರಾಷ್ಟ್ರೀಯ ಲಾಂಛನದ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. ಕೇಂದ್ರ ಸರ್ಕಾರದ ಈ ನಡೆಯನ್ನು ವ್ಯಂಗ್ಯವಾಗಿ ಟೀಕೆ ಮಾಡಿದ್ದಾರೆ.
ಪ್ರಕಾಶ್ ರಾಜ್ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಬಾಲಿವುಡ್ ನಟ ಅನುಪಮ್ ಖೇರ್ ಅಖಾಡಕ್ಕಿಳಿದಿದ್ದಾರೆ. ಪರೋಕ್ಷವಾಗಿ ಪ್ರಕಾಶ್ ರಾಜ್ ಟ್ವೀಟ್ಗೆ ಟಕ್ಕರ್ ಕೊಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಹೊಸ ರಾಷ್ಟ್ರೀಯ ಲಾಂಛನವನ್ನು ಸಮರ್ಥಿಸಿಕೊಳ್ಳುವ ಪ್ರಯತ್ನಮಾಡಿದ್ದಾರೆ.
ಪ್ರಕಾಶ್ ಟ್ವೀಟ್ನಲ್ಲಿ ಏನಿದೆ?
ಉಗ್ರಸ್ವರೂಪ ತಾಳಿರುವ ರಾಷ್ಟ್ರೀಯ ಲಾಂಛನದ ಬಗ್ಗೆ ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಷ್ಟೇ ಅಲ್ಲದೆ. ಕೆಲವು ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದರು. ಹಿಂದೆ ಸೌಮ್ಯ ಸ್ವರೂಪದ ಶ್ರೀರಾಮ ಈಗ ಉಗ್ರಸ್ವರೂಪ ತಾಳಿದ್ದು, ಹಾಗೇ ಸೌಮ್ಯ ಸ್ವರೂಪದ ಹನುಮಂತ ಇತ್ತೀಚೆಗೆ ಉಗ್ರ ಸ್ವರೂಪ ತಾಳಿದ ಫೋಟೊಗಳನ್ನು ಶೇರ್ ಮಾಡಿದ್ದರು. ಇದರೊಂದಿಗೆ ರಾಷ್ಟ್ರೀಯ ಲಾಂಛನದಲ್ಲಿ ಶಾಂತವಾಗಿದ್ದ ಸಿಂಹಗಳಿಗೆ ಉಗ್ರಸ್ವರೂಪ ತಾಳಿದ ಫೋಟೊವನ್ನು ಶೇರ್ ಮಾಡಿದ್ದರು. ಈ ಫೋಟೊಗಳಿಗೆ 'ನಾವು ಎತ್ತ ಸಾಗುತ್ತಿದ್ದೇವೆ' ಎಂದು ಕ್ಯಾಪ್ಶನ್ ಕೂಡ ನೀಡಿದ್ದರು.
ಅನುಪಮ್ ಖೇರ್ ಹೇಳಿದ್ದೇನು?
ಪ್ರಕಾಶ್ ರಾಜ್ ನೂತನ ರಾಷ್ಟ್ರೀಯ ಲಾಂಛನದ ಬಗ್ಗೆ ಕಿಡಿಕಾರುತ್ತಿದ್ದಂತೆ ಬಾಲಿವುಡ್ ನಟ ಅನುಪಮ್ ಖೇರ್ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. "ಅರೇ.. ಸಹೋದರ.. ಸಿಂಹಗಳಿಗೂ ಹಲ್ಲುಗಳಿವೆ. ಅದನ್ನು ತೋರಿಸದೇ ಬಿಡುವುದಿಲ್ಲ. ಅಷ್ಟಕ್ಕೂ ಇದು ಸ್ವಾತಂತ್ರ್ಯ ಭಾರತದ ಸಿಂಹ. ಸಂದರ್ಭ ಬಂದರೆ, ಕಚ್ಚಲುಬಹುದು." ಎಂದು ಅನುಪಮ್ ಖೇರ್ ರಾಷ್ಟ್ರೀಯ ಲಾಂಛನದ ವಿಡಿಯೋವನ್ನು ಶೇರ್ ಮಾಡಿ ಟ್ವೀಟ್ ಮಾಡಿದ್ದಾರೆ.

ಪರ-ವಿರೋಧದ ನಟರು
ಮೊದಲಿನಿಂದಲೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಕಾರ್ಯವೈಖರಿಯನ್ನು ಪ್ರಕಾಶ್ ಕಟುವಾಗಿ ವಿರೋಧಿಸುತ್ತಲೇ ಬಂದಿದ್ದಾರೆ. ಅದೇ ಇನ್ನೊಂದು ಕಡೆ ಅನುಪಮ್ ಖೇರ್ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿಯ ಕೆಲಸವನ್ನು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇಬ್ಬರ ಹಿರಿಯ ನಟರ ಭಿನ್ನಾಭಿಪ್ರಾಯಗಳು ಸೋಶಿಯಲ್ ಮೀಡಿಯಾಗಳಲ್ಲಿ ವ್ಯಕ್ತವಾಗಿದ್ದು, ಹೊಸ ವಾಗ್ಯುದ್ಧಕ್ಕೆ ಕಾರಣವಾಗಿದೆ.

ಪ್ರತಿ ಪಕ್ಷಗಳಿಂದ ಟೀಕೆ
ಪ್ರಧಾನಿ ನರೇಂದ್ರ ಮೋದಿ ಜುಲೈ 12 ರಂದು ನೂತನ ಸಂಸತ್ ಭವನದ ಛಾವಣಿಯ ಮೇಲೆ ಈ ಹೊಸ ರಾಷ್ಟ್ರೀಯ ಲಾಂಛನವನ್ನು ಅನಾವರಣಗೊಳಿಸಿದ್ದರು. ಅಲ್ಲಿಂದ ಉಗ್ರ ಸ್ವರೂಪದ ರಾಷ್ಟ್ರೀಯ ಲಾಂಛನದ ವಿರುದ್ಧ ವಿಪಕ್ಷಗಳು ಟೀಕೆ ಮಾಡುತ್ತಿದೆ. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಸೇರಿದಂತೆ ಬೇರೆ ಬೇರೆ ಪಕ್ಷದ ಮುಖಂಡರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











