ದಕ್ಷಿಣ ಭಾರತ ಸಿನಿಮಾರಂಗಕ್ಕೆ ಬುದ್ಧಿ ಕಲಿಸುತ್ತೇನೆಂದ ನಿರ್ಮಾಪಕ: 'ಖಿಲಾಡಿ' ವಿರುದ್ಧ ಕೇಸು
ತೆಲುಗು ನಟ ರವಿತೇಜ ನಟನೆಯ ಹೊಸ ಸಿನಿಮಾ ಒಂದು ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಆದರೆ ಸಿನಿಮಾಕ್ಕೆ ಬಾಲಿವುಡ್ನ ನಿರ್ಮಾಪಕರೊಬ್ಬರು ಅಡ್ಡಗಾಲು ಹಾಕಿದ್ದಾರೆ.
ರವಿತೇಜ ನಟನೆಯ 'ಖಿಲಾಡಿ' ಸಿನಿಮಾ ಫೆಬ್ರವರಿ 11 ರಂದು ಬಿಡುಗಡೆ ಆಗಿ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಹಿಂದಿ ಭಾಷಿಕ ರಾಜ್ಯಗಳಲ್ಲಿಯೂ ಈ ಸಿನಿಮಾ ಬಿಡುಗಡೆ ಆಗಿ ಹಿಟ್ ಎನಿಸಿಕೊಳ್ಳುವತ್ತ ಸಾಗಿದೆ. ಈ ನಡುವೆ ಸಿನಿಮಾದ ವಿರುದ್ಧ ಬಾಲಿವುಡ್ ನಿರ್ಮಾಪಕರೊಬ್ಬರು ಪ್ರಕರಣ ದಾಖಲಿಸಿದ್ದಾರೆ.
ರವಿತೇಜರ ಸಿನಿಮಾದ ಹೆಸರಿನ ಬಗ್ಗೆ ಆಕ್ಷೇಪಣೆ ಎತ್ತಿ ನಿರ್ಮಾಪಕ ರತನ್ ಜೈನ್, ನ್ಯಾಯಾಲಯದ ಮೆಟ್ಟಿಲೇರಿದ್ದು, ದೆಹಲಿ ಹೈಕೋರ್ಟ್ನಲ್ಲಿ ದಾವೆ ಹೂಡಿದ್ದಾರೆ.
ರತನ್ ಜೈನ್ 1992 ರಲ್ಲಿ 'ಖಿಲಾಡಿ' ಹೆಸರಿನ ಹಿಂದಿ ಸಿನಿಮಾ ನಿರ್ಮಾಣ ಮಾಡಿದ್ದರು. ಅಕ್ಷಯ್ ಕುಮಾರ್ ನಟಿಸಿದ್ದ ಆ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ಆ ಸಿನಿಮಾ ಮೂಲಕ ಅಕ್ಷಯ್ ಕುಮಾರ್ ಅವರಿಗೆ ಖಿಲಾಡಿ ಎಂಬ ಉಪನಾಮವೂ ಸೇರಿಕೊಂಡಿತ್ತು.

ವಿತರಕರು, ನಿರ್ಮಾಪಕ ಮೇಲೆ ಕೇಸು
ಈಗ ಅದೇ ಹೆಸರಿನಲ್ಲಿ ರವಿ ತೇಜ ಸಿನಿಮಾ ಬಿಡುಗಡೆ ಮಾಡಿರುವುದು ಅದೂ ಹಿಂದಿ ಭಾಷೆಗೆ ಡಬ್ ಮಾಡಿ ಬಿಡುಗಡೆ ಮಾಡಿರುವುದು ರತನ್ ಜೈನ್ ಅನ್ನು ಕೆರಳಿಸಿದ್ದು, ಸಿನಿಮಾದ ನಿರ್ಮಾಪಕರು ನನ್ನ ಒಪ್ಪಿಗೆ ಪಡೆಯದೇ ನನ್ನ ಸಿನಿಮಾದ ಹೆಸರು ಇಟ್ಟಿದ್ದಾರೆ ಹಾಗಾಗಿ ಸಿನಿಮಾ ಪ್ರದರ್ಶನಕ್ಕೆ ತಡೆ ನೀಡಬೇಕು ಎಂದು ಅವರು ಮನವಿ ಸಲ್ಲಿಸಿದ್ದಾರೆ. ''ನಾವು ಸಿನಿಮಾದ ವಿತರಕರು, ಡಬ್ಬಿಂಗ್ ಹಕ್ಕು ಹೊಂದಿರುವವರು ಹಾಗೂ ನಿರ್ಮಾಪಕರು ಮೂವರ ಮೇಲೆಯೂ ಪ್ರಕರಣ ದಾಖಲಿಸಿದ್ದೇವೆ. ಸಿನಿಮಾದ ಹಿಂದಿ ಆವೃತ್ತಿ ಮಾತ್ರವೇ ಅಲ್ಲ ತೆಲುಗು ಆವೃತ್ತಿ ಸಹ 'ಖಿಲಾಡಿ' ಹೆಸರು ಹೊಂದುವಂತಿಲ್ಲ'' ಎಂದು ರತನ್ ಜೈನ್ ಹೇಳಿದ್ದಾರೆ.

ಬಿಡುಗಡೆಗೆ ತಡೆ ನೀಡಲು ಆಗಲಿಲ್ಲ: ರತನ್ ಜೈನ್
''ನಿನ್ನೆ ನಮ್ಮ ಅರ್ಜಿಯ ವಿಚಾರಣೆ ನಡೆದಿದೆ. ಈಗಾಗಲೇ ಬಹಳ ತಡವಾಗಿದೆ ಹಾಗಾಗಿ ಸಿನಿಮಾದ ಬಿಡುಗಡೆ ತಡೆಯಲು ಈಗ ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ. ನಮಗೆ ವಿಷಯ ಗೊತ್ತಾಗಿದ್ದೇ ತಡವಾಗಿ ನಾವು ಫೆಬ್ರವರಿ 10 ಕ್ಕೆ ಅರ್ಜಿ ಹಾಕಿದೆವು ಆದರೆ ಅರ್ಜಿ ವಿಚಾರಣೆ ನಿನ್ನೆ ನಡೆಯಿತು. ಅವರು (ಖಿಲಾಡಿ ತೆಲುಗು ಸಿನಿಮಾ) ಬೇಕೆಂದೇ ಸಿನಿಮಾದ ಟ್ರೇಲರ್ ಅನ್ನು ತಡವಾಗಿ ಬಿಡುಗಡೆ ಮಾಡಿದ್ದಾರೆ. ಫೆಬ್ರವರಿ 8 ಕ್ಕೆ ಟ್ರೇಲರ್ ಬಿಡುಗಡೆ ಮಾಡಿ ಫೆಬ್ರವರಿ 11 ಕ್ಕೆ ಸಿನಿಮಾ ಬಿಡುಗಡೆ ಮಾಡಿದ್ದಾರೆ'' ಎಂದಿದ್ದಾರೆ ರತನ್ ಜೈನ್.

ತಡವಾಗಿ ವಿಷಯ ಗೊತ್ತಾಯಿತು: ರತನ್
''ನಮಗೆ ಇಷ್ಟು ದಿನ ಸಿನಿಮಾದ ಬಗ್ಗೆ ಗೊತ್ತೇ ಇರಲಿಲ್ಲ. ಫೆಬ್ರವರಿ 8 ರಂದು ಟ್ರೇಲರ್ ಬಿಡುಗಡೆ ಆದಾಗಲೇ ವಿಷಯ ಗೊತ್ತಾಗಿದ್ದು. ಎಲ್ಲೋ ತೆಲುಗಿನಲ್ಲಿ ಬಾಲಿವುಡ್ ಸಿನಿಮಾದ ಹೆಸರು ಇಟ್ಟು ಸಿನಿಮಾ ಮಾಡುತ್ತಿದ್ದಾರೆಂದು ಮುಂಬೈನಲ್ಲಿ ಕೂತ ನನಗೆ ಹೇಗೆ ಗೊತ್ತಾಗಬೇಕು ಎಂದು ಪ್ರಶ್ನಿಸಿರುವ ರತನ್ ಜೈನ್, ''ಪುಷ್ಪ' ಸಿನಿಮಾದ ಯಶಸ್ಸಿನಿಂದ ತೆಲುಗು ಸಿನಿಮಾಗಳು ಹಿಂದಿ ಭಾಷೆಯಲ್ಲಿ ಮೊದಲ ದಿನವೇ ಬಿಡುಗಡೆ ಆಗುತ್ತಿವೆ. ಹಿಂದಿ ಸಿನಿಮಾದ ಹೆಸರುಗಳನ್ನೇ ಅವರು ಬಳಸುತ್ತಿದ್ದಾರೆ. ಇದರಿಂದ ಭವಿಷ್ಯದಲ್ಲಿ ಸಾಕಷ್ಟು ಗೊಂದಲಗಳು ಹುಟ್ಟುತ್ತವೆ. ಈಗ ಹಿಂದಿ ಸಿನಿಮಾದ 'ಖಿಲಾಡಿ'ಗಾಗಿ ಗೂಗಲ್ ಸರ್ಚ್ ಮಾಡಿದರೆ ತೆಲುಗು ಸಿನಿಮಾದ ಮಾಹಿತಿ ಸಿಗುತ್ತಿದೆ. ಇದು ಅನ್ಯಾಯ ಅಲ್ಲವೆ?'' ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಬುದ್ಧಿ ಕಲಿಸಲು ಕೇಸು ಹಾಕಿದ್ದೇನೆ: ರತನ್ ಜೈನ್
''ಈ ದಕ್ಷಿಣದ ಜನ ನಮ್ಮ ಸಿನಿಮಾಗಳ ಹೆಸರನ್ನೇಕೆ ಇಟ್ಟುಕೊಳ್ಳುತ್ತಾರೆ'' ಎಂದು ಅಸಹನೆಯಿಂದ ಪ್ರಶ್ನೆ ಮಾಡಿರುವ ರತನ್ ಜೈನ್, ''ನಾನು ಅವರಿಗೆ ಸರಿಯಾದ ಬುದ್ಧಿ ಕಲಿಸಲು ಯೋಜಿಸಿದ್ದೇನೆ. ಹಾಗಾಗಿ ಈ ಕೇಸು ಹಾಕಿದ್ದೇನೆ. ಮುಂದಿನ ವಿಚಾರಣೆಯು ಫೆಬ್ರವರಿ 16 ಕ್ಕೆ ಇದೆ. ತೆಲುಗಿನ ಸಿನಿಮಾದವರಿಗೆ (ಖಿಲಾಡಿ) ದಂಡ ಹಾಕಬೇಕು ಹಾಗೂ ಅದೇ ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡುವಾಗ ಹೆಸರು ಬದಲಾಯಿಸಿ ಬಿಡುಗಡೆ ಮಾಡಬೇಕು'' ಎಂದು ರತನ್ ಜೈನ್ ದಕ್ಷಿಣ ಭಾರತ ಸಿನಿಮಾಕರ್ಮಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


Click it and Unblock the Notifications











