ನಟ, ಹೋರಾಟಗಾರ ದೀಪ್ ಸಿಧು ಅಪಘಾತದಲ್ಲಿ ನಿಧನ
ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪಂಜಾಬ್ ರೈತರ ಮುಂದಾಳತ್ವದಲ್ಲಿ ನಡೆದ ಐತಿಹಾಸಿಕ ಹೋರಾಟದಲ್ಲಿ ಭಾಗಿಯಾಗಿದ್ದ ಪಂಜಾಬಿ ಸಿನಿಮಾ ನಟ ದೀಪ್ ಸಿಧು ಇಂದು (ಫೆಬ್ರವರಿ 15) ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ದೆಹಲಿಯ ಕುಂಡ್ಲಿ ಮನ್ಸೀರ್ ಹೈವೇ ಬಳಿ ಕಾರಿನಲ್ಲಿ ಪ್ರಯಾಣ ಮಾಡಬೇಕಾದರೆ ಅಪಘಾತ ಸಂಭವಿಸಿ ದೀಪ್ ಸಿಧು ಮೃತಪಟ್ಟಿದ್ದು, ಅವರಿಗೆ 37 ವರ್ಷ ವಯಸ್ಸಾಗಿತ್ತು.
ದೀಪ್ ಸಿಧು ತಮ್ಮ ಸ್ಕಾರ್ಮಿಯೋ ಕಾರಿನಲ್ಲಿ ಪ್ರಯಾಣಿಸಬೇಕಾದರೆ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ ಕಾರಿನಲ್ಲಿ ಮೂವರು ಇದ್ದು, ದೀಪ್ ಸಿಧು ಹಾಗೂ ಇನ್ನೊಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನೊಬ್ಬ ವ್ಯಕ್ತಿಗೆ ತೀವ್ರ ಗಾಯಗಳಾಗಿವೆ.

ದೀಪ್ ಸಿಧು ಹಲವು ಪಂಜಾಬಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಅವರ ಹೆಸರು ಬೆಳಕಿಗೆ ಬಂದಿದ್ದು ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸಿದ್ದ ಪ್ರತಿಭಟನೆಯಿಂದ.
2021ರ ಗಣರಾಜ್ಯೋತ್ಸವದ ದಿನದಂದು ರೈತರು ನಡೆಸಿದ ಪ್ರತಿಭಟನೆ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ದೀಪ್ ಸಿಧು ಹಾಗೂ ಅವರ ಗೆಳೆಯ ಲಖಾ ಸಿಧಾನಾ (ರೌಡಿ ಶೀಟರ್) ಅವರುಗಳು ಕೆಂಪು ಕೋಟೆಯ ಎದುರು ಹಾರಿಸಿದ್ದ ಭಾರತ ಧ್ವಜದ ತೆಗೆದು ಆ ಜಾಗದಲ್ಲಿ ಸಿಖ್ಖರ ಪವಿತ್ರ ಧ್ವಜ ಹಾರಿಸಿದ್ದರು. ಈ ಘಟನೆ ದೇಶದೆಲ್ಲೆಡೆ ಚರ್ಚೆಯಾಯಿತು.
ಬಳಿಕ ರೈತ ಮುಖಂಡರು ದೀಪ್ ಸಿಧು ವಿರುದ್ಧ ಆರೋಪಗಳನ್ನು ಮಾಡಿದರು. ದೀಪ್ ಸಿಧು, ಬಿಜೆಪಿಗೆ ನಿಕಟವಾದ ವ್ಯಕ್ತಿಯಾಗಿದ್ದು, ರೈತ ಪ್ರತಿಭಟನೆಗೆ ಬಸಿ ಬಳಿಯಲು ಬಿಜೆಪಿಯೇ ಆತನನ್ನು ಕಳಿಸಿದೆ ಎಂದು ಆರೋಪಿಸಿದರು. ತಮ್ಮ ಆರೋಪಗಳಿಗೆ ಸಾಕ್ಷಿಯಾಗಿ ದೀಪ್ ಸಿಧು, ಬಿಜೆಪಿ ಸಂಸದ ಸನ್ನಿ ಡಿಯೋಲ್ ಹಾಗೂ ಪ್ರಧಾನಿ ಮೋದಿ ಜೊತೆಗಿರುವ ಚಿತ್ರಗಳನ್ನು ಪ್ರದರ್ಶಿಸಿದರು.
ಧ್ವಜ ಹಾರಿಸಿದ ಘಟನೆ ಬಳಿಕ ಸ್ಥಳದಿಂದ ಮೋಟಾರ್ ಬೈಕ್ನಲ್ಲಿ ಪರಾರಿಯಾಗಿ ತಲೆ ಮರೆಸಿಕೊಂಡಿದ್ದ ದೀಪ್ ಸಿಧು ಹಾಗೂ ಅವರ ಗ್ಯಾಂಗ್ಸ್ಟರ್ ಗೆಳೆಯ ಲಖಾ ಅನ್ನು ಫೆಬ್ರವರಿ 9 ರಂದು ಬಂಧಿಸಿ ವಿಚಾರಣೆ ನಡೆಸಲಾಯ್ತು. ನಂತರ ಜಾಮೀನಿನ ಮೇಲೆ ಅವರು ಹೊರ ಬಂದಿದ್ದರು. ಈಗ ರಸ್ತೆ ಅಪಘಾತದಲ್ಲಿ ದೀಪ್ ಸಿಧು ಮೃತಪಟ್ಟಿದ್ದಾರೆ.
ಮಾಡೆಲ್ ಆಗಿದ್ದ ದೀಪ್ ಸಿಧು ಒಟ್ಟು ಆರು ಪಂಜಾಬಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ನಟಿಸಿದ ಮೊದಲ ಪಂಜಾಬಿ ಸಿನಿಮಾ 'ರಮ್ತಾ ಜೋಗಿ' ಅನ್ನು ಬಾಲಿವುಡ್ನ ಖ್ಯಾತ ನಟ ಧರ್ಮೇಂದ್ರ ನಿರ್ಮಾಣ ಮಾಡಿದ್ದರು. ಬಾಲಿವುಡ್ ನಟ, ಬಿಜೆಪಿ ಸಂಸದ ಸನ್ನಿ ಡಿಯೋಲ್ಗೆ ಬಹಳ ಆಪ್ತವಾಗಿದ್ದ ದೀಪ್ ಸಿಧು, ಸನ್ನಿ ಡಿಯೋಲ್ ಪರವಾಗಿ 2019 ರ ಲೋಕಸಭೆ ಚುನಾವಣೆಯಲ್ಲಿ ಪ್ರಚಾರವನ್ನೂ ಮಾಡಿದ್ದರು.


Click it and Unblock the Notifications











