ಸುಶಾಂತ್ ಸಾವಿನ ದಿನ ಮಹೇಶ್ ಭಟ್ಗೆ ರಿಯಾ ಕಳಿಸಿದ್ದ ಸಂದೇಶ ಬಹಿರಂಗ
ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಇದೀಗ ಸಿಬಿಐ ಮಾಡುತ್ತಿದೆ. ಈಗಾಗಲೇ ದೇಶದಾದ್ಯಂತ ಕುತೂಹಲ ಕೆರಳಿಸಿದ್ದ ಈ ಪ್ರಕರಣ ಸಿಬಿಐ ಕೈಗೆ ಹೋದ ನಂತರ ಇನ್ನಷ್ಟು ಕುತೂಹಲ ಹೆಚ್ಚಿಸಿದೆ.
Recommended Video
ಸಿಬಿಐ, ಪ್ರಸ್ತುತ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಅನ್ನು ಆರೋಪಿಯನ್ನಾಗಿಸಿ ಎಫ್ಐಆರ್ ದಾಖಲಿಸಿಕೊಂಡಿದ್ದು, ತನಿಖೆಯನ್ನು ಪ್ರಾರಂಭಿಸಿದೆ.
ಸುಶಾಂತ್ ಸಾವಿಗೆ ರಿಯಾ ಚಕ್ರವರ್ತಿ, ಮಹೇಶ್ ಭಟ್ ಇನ್ನಿತರರು ಕಾರಣ ಎಂದು ಮೊದಲಿನಿಂದಲೂ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಲೇ ಇದೆ. ಮೊದಲ ಆರೋಪಿ ರಿಯಾ ಚಕ್ರವರ್ತಿ, ನಿರ್ದೇಶಕ, ನಿರ್ಮಾಪಕ ಮಹೇಶ್ ಭಟ್ ಜೊತೆಗೆ ಆಪ್ತವಾಗಿದ್ದರು. ಹಾಗಾಗಿ ಅವರನ್ನೂ ಮುಂಬೈ ಪೊಲೀಸರು ಈ ಹಿಂದೆ ವಿಚಾರಣೆ ನಡೆಸಿದ್ದರು.

ವಾಟ್ಸ್ಆಪ್ ಸಂದೇಶ ಬಹಿರಂಗ
ರಿಯಾ ಚಕ್ರವರ್ತಿ ಸುಶಾಂತ್ ಜೊತೆಗೆ ಬ್ರೇಕ್ಅಪ್ ಮಾಡಿಕೊಂಡ ದಿನ (ಜೂನ್ 08) ದಿಂದ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡ ದಿನದ ವರೆಗೆ ರಿಯಾ ಚಕ್ರವರ್ತಿ, ಮಹೇಶ್ ಭಟ್ಗೆ ಏನು ಸಂದೇಶ ಕಳುಹಿಸಿದ್ದರು ಎಂಬುದು ಇದೀಗ ಬಹಿರಂಗವಾಗಿದೆ.

ನಿಮ್ಮ ಜೊತೆ ಮಾತನಾಡಿದ್ದು ನನ್ನ ಕಣ್ಣು ತೆರೆಸಿತು: ರಿಯಾ
ಸುಶಾಂತ್ ಸಿಂಗ್ ಜೊತೆಗೆ ಬ್ರೇಕ್ ಮಾಡಿಕೊಂಡು, ಅವರ ಮನೆಯಿಂದ ವಾಪಸ್ ಬಂದ ದಿನ ಅಂದರೆ ಜೂನ್ 8 ರಂದು ಮಹೇಶ್ ಭಟ್ಗೆ ಸಂದೇಶ ಕಳಿಸಿದ್ದ ರಿಯಾ, 'ಅಂತೂ, ಭಾರವಾದ ಹೃದಯ ಹೊತ್ತು ಹೊರಗೆ ಬಂದು ಬಿಟ್ಟೆ. ಈಗ ತುಸು ನಿರಾಳವಾಗಿದ್ದೇನೆ' ಎಂದಿದ್ದರು. ನಿಮ್ಮ ಜೊತೆ ಮಾತನಾಡಿದ್ದು ನನ್ನ ಕಣ್ಣು ತೆರೆಸಿತು, ನೀವು ನನ್ನ ದೇವರಿದ್ದಂತೆ' ಎಂದು ಮಹೇಶ್ ಭಟ್ಗೆ ಸಂದೇಶ ಕಳುಹಿಸಿದ್ದರು ರಿಯಾ.

ಸುಶಾಂತ್ ಅನ್ನು ಬಿಡುವಂತೆ ಮನವೊಲಿಸಿದ್ದ ಮಹೇಶ್ ಭಟ್
ರಿಯಾ ಸಂದೇಶಕ್ಕೆ ಪ್ರತಿಕ್ರಿಯಿಸಿದ್ದ ಮಹೇಶ್ ಭಟ್, 'ಹಿಂತಿರುಗಿ ನೋಡಬೇಡ. ನಿನ್ನ ನಿರ್ಧಾರ ನಿನ್ನ ತಂದೆಗೆ ಸಂತೋಶ ತಂದಿರುತ್ತದೆ' ಎಂದಿದ್ದಾರೆ. ಸುಶಾಂತ್ ಅನ್ನು ಬಿಟ್ಟುಬಿಡುವಂತೆ ರಿಯಾಳನ್ನು ಮನವೊಲಿಸಿದ್ದು ಮಹೇಶ್ ಭಟ್ ಎಂಬುದು ಈ ವಾಟ್ಸ್ಆಪ್ ಚಾಟ್ಗಳಿಂದ ಖಾತ್ರಿ ಆಗುತ್ತದೆ.

ಸುಶಾಂತ್ ಸಾವಿನ ದಿನ ಕಳಿಸಿದ್ದ ಸಂದೇಶವೇನು?
ಜೂನ್ 9 ರ ನಂತರವೂ ಈ ಇಬ್ಬರೂ ಪ್ರತಿದಿನ ಸಂಪರ್ಕದಲ್ಲಿರುತ್ತಿದ್ದರು. ಸುಶಾಂತ್ ಸಿಂಗ್ ಸಾವನ್ನಪ್ಪಿದ ದಿನ (ಜೂನ್ 14) ರಂದು ಬೆಳಿಗ್ಗೆ 9:30 9 ರ ವೇಳೆಗೆ ಮಹೇಶ್ ಭಟ್ಗೆ ಸಂದೇಶ ಕಳುಹಿಸಿದ್ದ ರಿಯಾ, 'ನನ್ನ ಬೆಳಗ್ಗೆಗಳು ನಿಮ್ಮ ಸ್ಪೂರ್ತಿದಾಯಕ ಸಂದೇಶಗಳಿಂದಲೇ ಶುರುವಾಗಬೇಕು' ಎಂದಿದ್ದರು. ಇದಕ್ಕೆ ಪ್ರತಿಕ್ರಿಯಸಿದ್ದ ಮಹೇಶ್ ಭಟ್, 'ಭಾವನೆಗಳು, ಆಕಾಶದಲ್ಲಿನ ಮೋಡಗಳಂತೆ ಬರುತ್ತವೆ, ಹಾರಿ ಹೋಗುತ್ತವೆ, ಸ್ಥಿತ ಪ್ರಜ್ಞೆಯೊಂದೇ ಆಧಾರವಾಗಿರಲಿ' ಎಂದಿದ್ದರು. ಜೊತೆಗೆ 'ನನ್ನ ಪ್ರೀತಿಯ ಮಗು'(ಲವ್ ಯೂ ಚೈಲ್ಡ್) ಎಂದು ಸಂದೇಶ ಕಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ರಿಯಾ, 'ಲವ್ ಯು, ಮೈ ಏಂಜಲ್' ಎಂದಿದ್ದರು.


Click it and Unblock the Notifications











