ಅಕ್ಷಯ್ ಕುಮಾರ್ನ ಕೆಣಕಿ ರಿಚಾ ಚಡ್ಡಾ ಪರ ಬ್ಯಾಟ್ ಬೀಸಿದ ಪ್ರಕಾಶ್ ರಾಜ್!
ಭಾರತೀಯ ಸೈನಿಕರ ಕುರಿತು ನಟಿ ರಿಚಾ ಚಡ್ಡಾ ಮಾಡಿದ ಅದೊಂದು ಟ್ವೀಟ್ ಭಾರೀ ವಿವಾದಕ್ಕೆ ಕಾರಣವಾಗಿದೆ. ಆ ತನ್ನ ಪೋಸ್ಟ್ ಬಗ್ಗೆ ಕ್ಷಮೆ ಕೇಳಿದರೂ ವಿವಾದ ಮಾತ್ರ ತಣ್ಣಗಾಗುತ್ತಿಲ್ಲ. ಇದೀಗ ರಿಚಾ ಚಡ್ಡಾ ಪೋಸ್ಟ್ ನಟ ಅಕ್ಷಯ್ ಕುಮಾರ್ ಹಾಗೂ ನಟ ಪ್ರಕಾಶ್ ರಾಜ್ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.
ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಉಪೇಂದ್ರ ದ್ವಿವೇದಿ ನೀಡಿದ್ದ ಹೇಳಿಕೆ ಕುರಿತಾಗಿ ರಿಚಾ ಚಡ್ಡಾ ಒಂದು ಸಣ್ಣ ಟ್ವೀಟ್ ಮಾಡಿದ್ದರು. ಪಾಕ್ ಅಕ್ರಮವಾಗಿ ವಶಪಡಿಸಿಕೊಂಡಿರುವ ಪ್ರದೇಶವನ್ನು ಮರಳಿ ವಶಪಡಿಸಿಕೊಳ್ಳಲು ಸೇನೆ ಸದಾ ಸಿದ್ಧವಾಗಿರುತ್ತದೆ. ಅವರಿಗೆ ತಕ್ಕ ಉತ್ತರ ನೀಡಿ ನಾವು ವಶಪಡಿಸಿಕೊಳ್ಳುತ್ತೇವೆ ಎಂದು ಉಪೇಂದ್ರ ತ್ರಿವೇದಿ ಹೇಳಿದ್ದರು. ಈ ಮಾಹಿತಿಯನ್ನು ಬಾಬಾ ಬನಾರಸ್ ಹೆಸರಿನ ಟ್ವಿಟರ್ ಹ್ಯಾಂಡಲ್ ಪೋಸ್ಟ್ ಮಾಡಿತ್ತು. ಇದನ್ನು ರೀಟ್ವೀಟ್ ಮಾಡಿ ರಿಚಾ ಚಡ್ಡಾ 'ಗಲ್ವಾನ್ ಹಾಯ್ ಎಂದು ಹೇಳುತ್ತಿದೆ' ಎಂದು ಬರೆದಿದ್ದರು.
ಈ ಸಣ್ಣ ಪೋಸ್ಟ್ ಭಾರೀ ವಿವಾದ ಸೃಷ್ಟಿಸಿದೆ. ಸಾಕಷ್ಟು ಜನ ಆಕೆಯ ಪೋಸ್ಟ್ ವಿರುದ್ಧ ಆಕ್ರೋಶಗೊಂಡಿದ್ದಾರೆ. ನಟ ಅಕ್ಷಯ್ ಕುಮಾರ್ ಕೂಡ ಈ ಬಗ್ಗೆ ಟ್ವೀಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಪ್ರಕಾಶ್ ರಾಜ್ ಈಗ ತಿರುಗೇಟು ನೀಡಿದ್ದಾರೆ.

ಅಕ್ಷಯ್ ಕುಮಾರ್ ಹೇಳಿದ್ದೇನು?
ರಿಚಾ ಚಡ್ಡಾ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಟ್ವೀಟ್ ಮಾಡಿ " ನಿಮ್ಮ ಪೋಸ್ಟ್ ತನ್ನ ಮನಸ್ಸಿಗೆ ನೋವು ತಂದಿದೆ. ಸೈನಿಕರನ್ನು ಮೀರಿ ಯಾರು ಇಲ್ಲ. ದೇಶ ಕಾಯುವ ಯೋಧರ ಬಗ್ಗೆ ಕೃತಜ್ಞತೆ ಇರಬೇಕು. ಅವರು ಗಡಿ ಕಾಯುತ್ತಿರುವುದರಿಂದಲೇ ನಾವು ಸುರಕ್ಷಿತವಾಗಿದ್ದೇವೆ" ಎಂದು ಟ್ವೀಟ್ ಮಾಡಿದ್ದಾರೆ.

ಅಕ್ಷಯ್ಗೆ ಪ್ರಕಾಶ್ ರಾಜ್ ಕೌಂಟರ್
ಇನ್ನು ಅಕ್ಷಯ್ ಕುಮಾರ್ ಮಾಡಿರುವ ಟ್ವೀಟ್ ಬಗ್ಗೆ ದಕ್ಷಿಣದ ನಟ ಪ್ರಕಾಶ್ ರಾಜ್ ಟ್ವೀಟ್ ಮಾಡಿ ತಿರುಗೇಟು ನೀಡಿದ್ದಾರೆ. "ಅಕ್ಷಯ್ ಕುಮಾರ್ ಅವರಿಂದ ಇಂತಹ ಪ್ರತಿಕ್ರಿಯೆ ಊಹಿಸಿರಲಿಲ್ಲ. ರಿಚಾ ಚಡ್ಡಾ ನಮ್ಮ ದೇಶದ ಪ್ರಜೆ" ಎನ್ನುವ ಅರ್ಥ ಬರುವಂತೆ ಅಕ್ಷಯ್ ಕುಮಾರ್ ಹಾಗೂ ರಿಚಾ ಚಡ್ಡಾ ಇಬ್ಬರನ್ನು ಟ್ಯಾಗ್ ಮಾಡಿ ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ. ಆ ಮೂಲಕ ಅಕ್ಷಯ್ ಕುಮಾರ್ ಪೌರತ್ವದ ಬಗ್ಗೆ ಪರೋಕ್ಷವಾಗಿ ಕೆಣಕಿದ್ದಾರೆ. ಪ್ರಕಾಶ್ ರಾಜ್ ಪೋಸ್ಟ್ಗೆ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ.

ಕೆನಡಾ ಪೌರತ್ವ ಹೊಂದಿರುವ ಅಕ್ಷಯ್
ಅಕ್ಷಯ್ ಕುಮಾರ್ ಬಾಲಿವುಡ್ ಪ್ರವೇಶಿಸಿ 30 ವರ್ಷಗಳಾಗಿದೆ. ಅಕ್ಷಯ್ ಕುಮಾರ್ ಕೆನಡಾ ಪೌರತ್ವ ಹೊಂದಿದ್ದಾರೆ. ಬಾಲಿವುಡ್ನಲ್ಲಿ ಅತಿ ಹೆಚ್ಚು ತೆರಿಗೆ ಕಟ್ಟುವ ನಟನಾಗಿ ಗುರ್ತಿಸಿಕೊಂಡಿದ್ದಾರೆ. ಕೆನಡಾ ಪೌರತ್ವ ಇರುವ ಕಾರಣಕ್ಕೆ ಅವರು ಭಾರತದಲ್ಲಿ ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸಿರಲಿಲ್ಲ. ಕೆಲ ವರ್ಷಗಳ ಹಿಂದೆ ಈ ಬಗ್ಗೆ ಚರ್ಚೆ ನಡೆದಾಗ ಶೀಘ್ರದಲ್ಲೇ ಭಾರತದ ಪಾಸ್ಪೋರ್ಟ್ಗಾಗಿ ಅರ್ಜಿ ಸಲ್ಲಿಸುವುದಾಗಿ ಅಕ್ಷಯ್ ಕುಮಾರ್ ಹೇಳಿದ್ದರು.

ಕ್ಷಮೆ ಯಾಚಿಸಿದ ನಟಿ ರಿಚಾ ಚಡ್ಡಾ
ಇನ್ನು ತಮ್ಮ ಪೋಸ್ಟ್ ವಿವಾದ ಸೃಷ್ಟಿಸುತ್ತಿದ್ದಂತೆ ಎಚ್ಚೆತ್ತುಕೊಂಡ ನಟಿ ರಿಚಾ ಚಡ್ಡಾ ಪೋಸ್ಟ್ ಡಿಲೀಟ್ ಮಾಡಿ ಕ್ಷಮೆ ಕೇಳಿದ್ದರು. "ನನ್ನ ಉದ್ದೇಶ ಆ ರೀತಿ ಇರಲಿಲ್ಲ. ವಿವಾದಕ್ಕೆ ಕಾರಣವಾದ 3 ಪದಗಳಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಸೇನೆಯಲ್ಲಿರುವ ನನ್ನ ಸಹೋದರರ ಬಗ್ಗೆ ಗೌರವ ಇದೆ. ನನ್ನ ಮಾತುಗಳಿಂದ ಅವರಿಗೆ ನೋವಾಗಿದ್ದರೆ ನನಗೆ ದುಃಖವಾಗುತ್ತದೆ. ನನ್ನ ತಾತ ಕೂಡ ಸೇನೆಯಲ್ಲಿದ್ದರು. ಇಂಡೋ-ಚೀನಾ ಯುದ್ದದಲ್ಲಿ ಕಾಲಿಗೆ ಗುಂಡು ಬಿದ್ದಿತ್ತು. ನನ್ನ ಮಾಮ ಪ್ಯಾರಾಟೂಪರ್ ಆಗಿದ್ದರು. ಸೇನೆಯೊಂದಿಗೆ ನನ್ನ ರಕ್ತ ಸಂಬಂಧಿಕರಿದ್ದಾರೆ. ಅವರನ್ನು ನೋಯಿಸುವ ಉದ್ಧೇಶ ಇರಲಿಲ್ಲ" ಎಂದು ರಿಚಾ ಕ್ಷಮೆ ಕೋರಿ ಪೋಸ್ಟ್ ಮಾಡಿದ್ದಾರೆ.


Click it and Unblock the Notifications











