"ನಾನು ಇವತ್ತೂ ಏನೇ ಆಗಿದ್ದರೂ ಅದು ಕನ್ನಡದಿಂದ..ಕನ್ನಡಿಗರಿಂದ.. ನಾನು ಹಿಂದಿ ಸಿನಿಮಾ ಮಾಡಲ್ಲ": ರಿಷಬ್ ಶೆಟ್ಟಿ
'ಕಾಂತಾರ' ಸಿನಿಮಾದಿಂದ ರಾತ್ರೋರಾತ್ರಿ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿಬಿಟ್ಟಿದ್ದಾರೆ. ಅಕ್ಕಪಕ್ಕದ ಇಂಡಸ್ಟ್ರಿ ನಿರ್ಮಾಪಕರು ತಮ್ಮ ಭಾಷೆಯಲ್ಲಿ ಸಿನಿಮಾ ಮಾಡುವಂತೆ ಆಫರ್ ಕೊಡುತ್ತಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ನಾನು ಬೇರೆ ಭಾಷೆ ಸಿನಿಮಾ ಮಾಡಲ್ಲ, ಕನ್ನಡ ಚಿತ್ರರಂಗ ಬಿಟ್ಟು ಎಲ್ಲೂ ಹೋಗಲ್ಲ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
ಸೆಪ್ಟೆಂಬರ್ 30ರಂದು ರಿಲೀಸ್ ಆಗಿದ್ದ 'ಕಾಂತಾರ' ಸಿನಿಮಾ ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ನೋಡುವಂತೆ ಮಾಡಿದೆ. ಹೊರ ದೇಶದಲ್ಲಿ ಜನ ಕ್ಯೂ ನಿಂತು ಟಿಕೆಟ್ ಖರೀದಿಸಿ ಸಿನಿಮಾ ನೋಡಿದ್ದಾರೆ. ವಿಶ್ವದಾದ್ಯಂತ 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಮುನ್ನುಗ್ಗುತ್ತಿದೆ. ಬಾಲಿವುಡ್ನ ಸೂಪರ್ ಸ್ಟಾರ್ಗಳ ಸಿನಿಮಾಗಳಿಗೆ ಸೆಡ್ಡು ಹೊಡೆದು ಬಾಕ್ಸಾಫೀಸ್ನಲ್ಲಿ ಶೇಕ್ ಮಾಡ್ತಿದೆ. ಹಿಂದಿ ಬೆಲ್ಟ್ನಲ್ಲಿ ಸಿನಿಮಾ 50 ಕೋಟಿ ರೂ. ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರಿಸಿದೆ. ಹೊರ ರಾಜ್ಯಗಳಲ್ಲಿ ರಿಷಬ್ ಕ್ರೇಜ್ ನೋಡಿ ಕನ್ನಡ ಬಿಟ್ಟು ಬೇರೆ ಇಂಡಸ್ಟ್ರಿಗೆ ಹೋಗುತ್ತಾರಾ ಎನ್ನುವ ಪ್ರಶ್ನೆ ಕೆಲವರನ್ನು ಕಾಡ್ತಿದೆ.
ಇತ್ತೀಚಿಗೆ ಬಾಲಿವುಡ್ ಬಬಲ್ ಯೂಟ್ಯೂಬ್ ಚಾನಲ್ಗೆ ನೀಡಿರುವ ಸಂದರ್ಶನದಲ್ಲಿ ನಟ- ನಿರ್ದೇಶಕ ರಿಷಬ್ ಶೆಟ್ಟಿ ಮಾತನಾಡಿದ್ದಾರೆ. ಯಾವುದೇ ಕಾರಣಕ್ಕೂ ಕನ್ನಡ ಚಿತ್ರರಂಗ ಬಿಟ್ಟು ಬರುವ ಮಾತೇ ಇಲ್ಲ ಎಂದು ಹೇಳಿದ್ದಾರೆ.

ಬೇರೆ ಭಾಷೆ ಸಿನಿಮಾ ಮಾಡಲ್ಲ
"ನಾನು ಕನ್ನಡದಲ್ಲಿ ಕೆಲಸ ಮಾಡಬೇಕು. ನಾನು ಕನ್ನಡದಲ್ಲಿ ಕೆಲಸ ಮಾಡಲು ಬಯಸುತ್ತೇನೆ ಏಕೆಂದರೆ ನಾನು ಇಂದು ಇಲ್ಲಿದ್ದೀನಿ ಅಂದರೆ ಅದಕ್ಕೆ ಕನ್ನಡ ಇಂಡಸ್ಟ್ರಿ, ಕನ್ನಡ ಅಭಿಮಾನಿಗಳು ಮತ್ತು ಕನ್ನಡ ಚಿತ್ರರಂಗ ಕಾರಣ. ಆದ್ದರಿಂದ, ನನ್ನ ಮೂಲ ಮತ್ತು ನನ್ನ ಮನೆಯನ್ನು ನಾನು ಮರೆಯಲು ಸಾಧ್ಯವಿಲ್ಲ. ನನ್ನ ಸಿನಿಮಾ ಇವತ್ತು ಸದ್ದು ಮಾಡ್ತಿದೆ ಎನ್ನುವ ಕಾರಣಕ್ಕೆ ಅದು ನನ್ನ ಕುಟುಂಬ ಮತ್ತು ಸ್ನೇಹಿತರನ್ನು ಬದಲಾಯಿಸುವುದಿಲ್ಲ. ನನ್ನ ಮೂಲ ಅಲ್ಲಿದೆ. ಆದ್ದರಿಂದ, ನಾನು ಅದನ್ನು ಬಿಡಲು ಸಾಧ್ಯವಿಲ್ಲ ಮತ್ತು ನಾನು ಬಿಡುವುದಿಲ್ಲ" ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

'ಕಾಂತಾರ' ಪ್ಯಾನ್ ಇಂಡಿಯಾ ಆಗಿದ್ದು
ತಮ್ಮ ಮಾತಿಗೆ ಉದಾಹರಣೆ ಕೊಟ್ಟ ರಿಷಬ್ ಶೆಟ್ಟಿ "ಹೆಚ್ಚು ಪ್ರಾದೇಶಿಕತೆ ಹೆಚ್ಚು ಸಾರ್ವತ್ರಿಕ ಎನ್ನುವುದನ್ನು ನಾನು ನಂಬುತ್ತೇನೆ. ಜನರು ನನ್ನ ಪ್ರಾದೇಶಿಕ ವಿಷಯವನ್ನು ಇಷ್ಟಪಟ್ಟರೆ, ನಾನು ಅದನ್ನು ಇಲ್ಲಿಯೂ ಪ್ರಸ್ತುತಪಡಿಸುತ್ತೇನೆ. ಆದರೆ ಕನ್ನಡದಲ್ಲಿ ಮಾತ್ರ ರಿಲೀಸ್ ಮಾಡಬೇಕೆಂದರೆ ಅದನ್ನೂ ಮಾಡುತ್ತೇನೆ. ಕಾಂತಾರವು ತಾನಾಗಿಯೇ ಪ್ಯಾನ್-ಇಂಡಿಯಾ ಸಿನಿಮಾ ಆಯಿತು. ನಾವು ಅದನ್ನು ಪ್ಯಾನ್ ಇಂಡಿಯಾ ಮಾಡಲಿಲ್ಲ. ಅದು ಹೇಗೆ ಆಯಿತು ಎನ್ನುವುದು ಗೊತ್ತಿಲ್ಲ. ನಾವು ಆ ಬಗ್ಗೆ ಯೋಚಿಸಿರಲಿಲ್ಲ. ಹಾಗಾಗಿ ಅದು ಹೇಗಾಯಿತು ಎನ್ನುವುದು ಗೊತ್ತಿಲ್ಲ ಎನ್ನುತ್ತಿದ್ದಾರೆ."

ಕನ್ನಡಕ್ಕೆ ನನ್ನ ಆದ್ಯತೆ
"ಕೇವಲ ಬಾಯಿಮಾತಿನಿಂದಲೇ 'ಕಾಂತಾರ' ಸಿನಿಮಾ ಈ ಮಟ್ಟಿಗೆ ಸದ್ದು ಮಾಡ್ತಿದೆ. ಈ ಸಿನಿಮಾ ಪ್ಯಾನ್ ಇಂಡಿಯಾ ಆಯಿತು ಎನ್ನುವ ಕಾರಣಕ್ಕೆ ನಾನು ಮತ್ತೆ ಇದೇ ರೀತಿ ಮಾಡುತ್ತೇನೆ ಎಂದು ಹೇಳುವುದಿಲ್ಲ. ಮುಂದೆ ಕನ್ನಡದಲ್ಲಿ ಒಂದು ಕಥೆ ಹೇಳಲು ನಾನು ಬಯಸುತ್ತೇನೆ. ಅದು ನನ್ನನ್ನು ಹೆಚ್ಚು ಪ್ರೇರೇಪಿಸುತ್ತದೆ. ನಾನು ಕನ್ನಡದಲ್ಲಿ ಸಿನಿಮಾ ಮಾಡಬೇಕು" ಎಂದಿದ್ದಾರೆ.

ದೇಶ ವಿದೇಶದಲ್ಲೂ 'ಕಾಂತಾರ' ಕ್ರೇಜ್
ಕರಾವಳಿಯ ಸಂಸ್ಕೃತಿ ಆಚಾರ ವಿಚಾರವನ್ನು ಕೇಂದ್ರವಾಗಿಟ್ಟುಕೊಂಡು ರಿಷಬ್ ಶೆಟ್ಟಿ 'ಕಾಂತಾರ' ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಮೊದಲಿಗೆ ಚಿತ್ರವನ್ನು ಕನ್ನಡದಲ್ಲಿ ಮಾತ್ರ ರಿಲೀಸ್ ಮಾಡಲು ತಂಡ ಮನಸ್ಸು ಮಾಡಿತ್ತು. ಆದರೆ ಸಿನಿಮಾ ರಿಲೀಸ್ ನಂತರ ಬೇರೆ ಭಾಷೆಗೆ ಡಬ್ ಮಾಡುವಂತೆ ಪರಭಾಷಾ ಪ್ರೇಕ್ಷಕರಿಂದ ಪರಭಾಷಾ ವಿತರಕರು, ಪ್ರದರ್ಶಕರಿಂದ ಬೇಡಿಕೆ ಬಂದಿತ್ತು. ಹಾಗಾಗಿ ಅಕ್ಟೋಬರ್ 14ರ ನಂತರ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಿಗೆ ಸಿನಿಮಾ ಡಬ್ ಆಗಿ ರಿಲೀಸ್ ಆಗಿತ್ತು. ಎಲ್ಲಾ ಭಾಷೆಗಳಲ್ಲೂ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು.


Click it and Unblock the Notifications











