ರಿಯಾ ಚಕ್ರವರ್ತಿ ಬೆಂಬಲಕ್ಕೆ ನಿಂತ ನಟ ರಿತೇಶ್ ದೇಶ್ ಮುಖ್
ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ನಟಿ ರಿಯಾ ಚಕ್ರವರ್ತಿ ಇತ್ತೀಚಿಗೆ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಇದೀಗ ರಿಯಾ ತನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದವರ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ರಿಯಾ ಇತ್ತೀಚಿಗೆ ತನ್ನ ಪಕ್ಕದ ಮನೆಯವರಾದ ಡಿಂಪಲ್ ಥವಾನಿ ವಿರುದ್ಧ ದೂರು ಸಲ್ಲಿಸಿದ್ದಾರೆ. ಜೂನ್ 13ರಂದು ಸುಶಾಂತ್ ಸಿಂಗ್ ಅವರನ್ನು ರಿಯಾ ಭೇಟಿಯಾಗಿದ್ದರು ಎಂದು ಹೇಳಿಕೆ ಕೊಟ್ಟಿದ್ದರು. ಈ ಬಗ್ಗೆ ರಿಯಾ ಎಸ್ ಐ ಟಿ ಮತ್ತು ಸಿಬಿಐನ ಸೂಪರಿಟೆಂಡೆಂಟ್ ನೂಪುರ್ ಪ್ರಸಾದ್ ಅವರಿಗೆ ಪತ್ರ ಬರೆದು ಅದರಲ್ಲಿ ಡಿಂಪಲ್ ತನಿಖೆಯ ದಾರಿ ತಪ್ಪಿಸಲು ಸುಳ್ಳು ಮತ್ತು ನಕಲಿ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ನಡವಳಿಕೆ ಭಾರತೀಯ ದಂಡ ಸಂಹಿತೆ ಸೆಕ್ಷನ್ 203 ಮತ್ತು 211ರ ಅಡಿ ಶಿಕ್ಷಾರ್ಹ ಅಪರಾಧವಾಗುತ್ತೆ ಎಂದು ಉಲ್ಲೇಖಿಸಿದ್ದಾರೆ. 'ಸುಶಾಂತ್ ಸಿಂಗ್ ಸಾವಿಗೆ ಸಂಬಂಧಿಸಿದಂತೆ ಸಿ ಬಿ ಐ ನನ್ನನ್ನು 5 ದಿನಗಳಿಂತ ಹೆಚ್ಚು ಕಾಲ ವಿಚಾರಣೆಗೊಳಪಡಿಸಿದೆ ಎಂದು ನಾನು ಹೇಳುತ್ತೇನೆ. ತನಿಖೆಯ ಸಮಯದಲ್ಲಿ ಹಲವಾರು ಮಾಧ್ಯಮಗಳು ಸುಳ್ಳು ಮತ್ತು ನಕಲಿ ಕಥೆಗಳನ್ನು ಕಟ್ಟಿ ಬಿತ್ತರಮಾಡಿ, ತಮ್ಮದೆ ಆದ ಉದ್ದೇಶ ಸಾಧಿಸಿವೆ.' ಎಂದು ದೂರಿನಲ್ಲಿ ತಿಳಿಸಿದ್ದಾರೆ.

ರಿಯಾ ಪಕ್ಕದ ಮನೆಯವರಾದ ಡಿಂಪಲ್ ತನ್ನ ಖ್ಯಾತಿಗಾಗಿ ಸುಳ್ಳು ಹೇಳಿದ್ದಾರೆ ಎಂದು ರಿಯಾ ಪರ ವಕೀಲ ಸತೀಶ್ ಮನೇಶಿಂದೆ ಆರೋಪಿಸಿದ್ದಾರೆ. ಈ ಎಲ್ಲಾ ಪ್ರಕರಣದ ಬಳಿಕ ನಟ ರಿತೇಶ್ ದೇಶ್ ಮುಖ್ ರಿಯಾ ಬೆಂಬಲಕ್ಕೆ ನಿಂತಿದ್ದಾರೆ. ತನ್ನ ನೆರೆಯವರ ವಿರುದ್ಧ ಕಾನೂನು ಕ್ರಮ ಕೈಗೊಂಡ ಬಗ್ಗೆ ಟ್ವಿಟ್ಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
'ನಿಮಗೆ ಹೆಚ್ಚಿನ ಶಕ್ತಿ ಬರಲಿ ರಿಯಾ ಚಕ್ರವರ್ತಿ. ಸತ್ಯಕ್ಕಿಂತ ಶಕ್ತಿಶಾಲಿ ಯಾವುದು ಇಲ್ಲ' ಎಂದು ಹೇಳಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಸುಶಾಂತ್ ಪ್ರಕರಣದಲ್ಲಿ ಮೌನ ಮುರಿದಿದ್ದಾರೆ.
ರಿಯಾ ಚಕ್ರವರ್ತಿ 28 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದರು. ಸುಶಾಂತ್ ಪ್ರಕರಣದಲ್ಲಿ ಡ್ರಗ್ಸ್ ಖರೀದಿಸಿ ಸುಶಾಂತ್ ಸಿಂಗ್ ಗೆ ನೀಡುತ್ತಿದ್ದರು ಎನ್ನುವ ಆರೋಪದಡಿ ರಿಯಾ ಚಕ್ರವರ್ತಿ ಅವರನ್ನು ಎನ್ ಸಿ ಬಿ ಬಂಧಿಸಿತ್ತು. ರಿಯಾ ಸಹೋದರ ಶೋಯಿಕ್ ಚಕ್ರವರ್ತಿ ನ್ಯಾಯಾಂಗ ಬಂಧನದಲ್ಲಿದ್ದಾರೆ.


Click it and Unblock the Notifications











