ವಿದೇಶ ಪ್ರವಾಸಕ್ಕೂ ಮುನ್ನ ಸಲ್ಮಾನ್ ಖಾನ್ ಗೆ ಕೋರ್ಟ್ ಅನುಮತಿ ಅತ್ಯಗತ್ಯ.!
ಇನ್ಮುಂದೆ ಪ್ರತಿ ಬಾರಿ ವಿದೇಶಕ್ಕೆ ಹೋಗುವ ಮುನ್ನ ಬಾಲಿವುಡ್ 'ಬಾಕ್ಸ್ ಆಫೀಸ್ ಟೈಗರ್' ಸಲ್ಮಾನ್ ಖಾನ್ ನ್ಯಾಯಾಲಯದ ಅನುಮತಿ ಪಡೆಯಬೇಕು ಎಂದು ಜೋಧ್ ಪುರ ನ್ಯಾಯಾಲಯ ಆದೇಶ ನೀಡಿದೆ.
ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೋಧ್ ಪುರ ನ್ಯಾಯಾಲಯ ವಿಚಾರಣೆ ನಡೆಸಿತು. ಇದೇ ವೇಳೆ ವಿದೇಶ ಪ್ರವಾಸಕ್ಕಾಗಿ ಅನುಮತಿ ವಿನಾಯಿತಿ ಕೋರಿ ಸಲ್ಮಾನ್ ಖಾನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ ಪ್ರತಿ ಬಾರಿ ವಿದೇಶ ಪ್ರವಾಸ ಕೈಗೊಳ್ಳುವ ಮುನ್ನ ನ್ಯಾಯಾಲಯದ ಅನುಮತಿ ಅತ್ಯಗತ್ಯ ಎಂದು ಆದೇಶಿಸಿದೆ.
ಹಾಗ್ನೋಡಿದ್ರೆ, ಸಲ್ಮಾನ್ ಖಾನ್ ಸದ್ಯ 'ಭಾರತ್' ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. 'ಭಾರತ್' ಶೂಟಿಂಗ್ ಗಾಗಿ ಸಲ್ಮಾನ್ ವಿದೇಶಕ್ಕೆ ಹಾರುವ ಅನಿವಾರ್ಯತೆ ಇದೆ. ಈ ನಡುವೆ ಪ್ರತಿ ಬಾರಿ ವಿದೇಶ ಪ್ರವಾಸ ಕೈಗೊಳ್ಳುವ ಮುನ್ನ ಪರ್ಮಿಷನ್ ತೆಗೆದುಕೊಳ್ಳಬೇಕಾಗಿರುವ ಕಾರಣ, ಸಲ್ಮಾನ್ ಗೆ ಸಂಕಷ್ಟ ಎದುರಾಗಿದೆ.

ಏನಿದು ಕೃಷ್ಣಮೃಗ ಬೇಟೆ ಪ್ರಕರಣ: 1998 ರಲ್ಲಿ 'ಹಮ್ ಸಾಥ್ ಸಾಥ್ ಹೇ' ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಕೃಷ್ಣಮೃಗಗಳನ್ನು ಬೇಟೆ ಆಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಲ್ಮಾನ್ ಖಾನ್ ದೋಷಿ ಎಂದು ಜೋಧ್ ಪುರ ನ್ಯಾಯಾಲಯ ತೀರ್ಪು ನೀಡಿತ್ತು. ವನ್ಯಜೀವಿ ಸಂರಕ್ಷಣಾ ಕಾಯ್ದೆ ಸೆಕ್ಷನ್ 51ರ ಅಡಿಯಲ್ಲಿ ಸಲ್ಮಾನ್ ಖಾನ್ ಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಬಳಿಕ ಜಾಮೀನಿನ ಮೇಲೆ ಹೊರಬಂದ ಸಲ್ಮಾನ್ ಖಾನ್ ಸದ್ಯ 'ಭಾರತ್' ಸಿನಿಮಾ ಶೂಟಿಂಗ್ ನಲ್ಲಿ ತೊಡಗಿದ್ದಾರೆ.


Click it and Unblock the Notifications











