ಸುಶಾಂತ್ ಸಿಂಗ್ ವಿರುದ್ಧದ ಮೀ ಟೂ ಆರೋಪ: ಮೌನ ಮುರಿದ ಸಂಜನಾ
ಕಳೆದ ವರ್ಷ ಮೀ ಟೂ ಚಳವಳಿ ಇಡೀ ದೇಶವನ್ನು ಅಲ್ಲಾಡಿಸಿತ್ತು. ಅದರಲ್ಲಿಯೂ ವಿವಿಧ ಚಿತ್ರರಂಗಗಳಲ್ಲಿ 'ಮೀ ಟೂ' ಆರೋಪಗಳು ಕೇಳಿಬಂದಿದ್ದರಿಂದ ದೊಡ್ಡ ದೊಡ್ಡ ಸ್ಟಾರ್ಗಳು ಸಂಕಷ್ಟಕ್ಕೆ ಸಿಲುಕಿದ್ದರು. ಚಳವಳಿ ತೀವ್ರವಾಗಿರುವಾಗಲೇ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ವಿರುದ್ಧವೂ ಆರೋಪ ಕೇಳಿಬಂದಿತ್ತು.
Recommended Video
ದಿಲ್ ಬೇಚಾರ ಚಿತ್ರದ ಮೂಲಕ ಪದಾರ್ಪಣೆ ಮಾಡಿರುವ ಸಹ ನಟಿ ಸಂಜನಾ ಸಂಘಿ ಜತೆ ಸುಶಾಂತ್ ಸಿಂಗ್ ಅನುಚಿತವಾಗಿ ವರ್ತಿಸಿದ್ದರು ಎಂದು ಹೇಳಲಾಗಿತ್ತು. ಈ ವರದಿಗಳನ್ನು ಇಬ್ಬರೂ ನಿರಾಕರಿಸಿದ್ದರು. ಸಂಜನಾ ಜತೆ ನಡೆಸಿದ್ದ ಚಾಟ್ನ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದ ಸುಶಾಂತ್, ಲೈಂಗಿಕವಾಗಿ ಆಕೆಯನ್ನು ಶೋಷಣೆ ಮಾಡಿದ್ದ ಆರೋಪವನ್ನು ತಳ್ಳಿಹಾಕಿದ್ದರು. ಕೆಲವು ದಿನಗಳ ಬಳಿಕ ಟ್ವೀಟ್ ಮಾಡಿದ್ದ ಸಂಜನಾ ಕೂಡ ವರದಿಗಳಿಗೆ ಸ್ಪಷ್ಟೀಕರಣ ನೀಡಿದ್ದರು. ಇಂತಹ ಘಟನೆ ನಡೆದೇ ಇಲ್ಲ. ಆರೋಪಗಳಿಗೆ ಅಂತ್ಯ ಹಾಡಿ ಎಂದು ಹೇಳಿದ್ದರು.
ಈ ಬಗ್ಗೆ ಸಂಜನಾ ಕೊನೆಗೂ ಬಹಿರಂಗವಾಗಿ ಮಾತನಾಡಿದ್ದಾರೆ. ಮೀ ಟೂ ಆರೋಪದ ಘಟನೆ ತಮ್ಮನ್ನು ಬಹಳ ಕಾಡಿತ್ತು ಎಂದು ಹೇಳಿದ್ದಾರೆ. ಮುಂದೆ ಓದಿ...

ಸತ್ಯ ನಮಗೆ ಗೊತ್ತು
ಬಾಲಿವುಡ್ನಲ್ಲಿ ಸುಶಾಂತ್ಗೆ ಮಾತ್ರ ಕಷ್ಟಗಳನ್ನು ನೀಡಲಾಗಿದೆ ಎಂದು ಎಲ್ಲರೂ ಭಾವಿಸಿದ್ದಾರೆ. ಆದರೆ ನನ್ನನ್ನೂ ಅಷ್ಟೇ ಕಾಡಲಾಗಿದೆ. ನಮ್ಮ ಸತ್ಯ ನಮಗೆ ಗೊತ್ತು. ಅವರು ನನಗೆ ಎಷ್ಟು ಮುಖ್ಯವಾಗಿದ್ದರು ಎನ್ನುವುದು ನನಗೆ ಗೊತ್ತು. ಹಾಗೆಯೇ ನಾನೇನೆಂದು ಅವರಿಗೆ ಗೊತ್ತಿತ್ತು. ಅಷ್ಟು ಸಾಕು. ನಾವು ಪ್ರತಿ ದಿನ ಶೂಟಿಂಗ್ಗಾಗಿ ಸೆಟ್ನಲ್ಲಿರುತ್ತಿದ್ದೆವು. ಒಂದೆರಡು ಲೇಖನಗಳು ಬಂದಾಗ ನಾವು ಅದರ ಬಗ್ಗೆ ಗಮನ ಕೊಡದೆ ಹೋಗಲಿ ಎಂದು ಬಿಟ್ಟುಬಿಡಬೇಕು. ಆದರೆ ಅದು ಗದ್ದಲ ಸೃಷ್ಟಿಸಿದಾಗ ಮತ್ತು ಲೇಖನಗಳು ನಿರಾಧಾರವಾಗಿದ್ದಾಗ ಅವುಗಳನ್ನು ಬರೆಯುವ ಅಥವಾ ಅದನ್ನು ನಂಬುವವರನ್ನು ನಾನು ಗೌರವಿಸುವುದಿಲ್ಲ.

ಸತ್ಯವನ್ನು ಮನದಟ್ಟು ಮಾಡುವುದು ಹೇಗೆ?
ಈಗ ಜನರು ನಮ್ಮಿಬ್ಬರನ್ನೂ ನೋಡುತ್ತಾರೆ. ಅವರಿಗೆ ಸತ್ಯ ಅರಿವಾಗುತ್ತದೆ. ನಮ್ಮ ನಡುವೆ ಏನೂ ಬದಲಾಗಲಿಲ್ಲ. ಏಕೆಂದರೆ ನಮ್ಮ ನಡುವೆ ಅಂತಹದ್ದು ಏನೂ ಇರಲಿಲ್ಲ. ಇದೆಲ್ಲವೂ ನಡೆದು ಹೋಯಿತು. ಆದರೆ ಸತ್ಯವನ್ನು ನಾವು ಹೇಗೆ ನಂಬುವಂತೆ ಮಾಡುವುದು? ಒಬ್ಬರನ್ನೊಬ್ಬರು ಮೆಚ್ಚಿಕೊಳ್ಳುವ ಇಬ್ಬರು ವ್ಯಕ್ತಿಗಳು ಕುಳಿತು ಇದನ್ನು ಸಾಬೀತುಪಡಿಸಬೇಕು ಎಂದರೆ ನಮ್ಮ ಪರಿಸ್ಥಿತಿಯ ಕಷ್ಟ ಹೇಗಿರಬಹುದು ಊಹಿಸಿ.

ನಂಬುವ ಸ್ಥಿತಿಯಲ್ಲಿ ಜನರಿಲ್ಲ
ಈ ಚಾಟ್ಅನ್ನು ಬಹಿರಂಗಪಡಿಸಬಹುದೇ ಎಂದು ಸುಶಾಂತ್ ಕೇಳಿದರು. ಖಂಡಿತಾ ಮಾಡಿ, ಅದರಿಂದ ಸಹಾಯವಾಗಬಹುದು ಎಂದಿದ್ದೆ. ಬಳಿಕ ಸುಶಾಂತ್ ಅದನ್ನು ಬಹಿರಂಗಪಡಿಸಿದರು. ಆದರೂ ಜನರು ನಮ್ಮನ್ನು ನಂಬಲು ತಯಾರಿರಲಿಲ್ಲ. ಹೀಗಾಗಿ ನಾನೇ ಅದರ ಬಗ್ಗೆ ಮಾತನಾಡಿದೆ. ಹುಡುಗನ ವಿರುದ್ಧ ಆರೋಪ ಮಾಡಿದ ಹುಡುಗಿಯೇ ಸ್ಪಷ್ಟೀಕರಣ ನೀಡಬೇಕು. ಆದರೆ ಅದೂ ಕೆಲಸ ಮಾಡಲಿಲ್ಲ. ಅದರಿಂದ ನಾವು ಕುಳಿತು ಯೋಚಿಸಿದೆವು. ಎಂತಹ ಸಮಾಜದಲ್ಲಿ ನಾವಿದ್ದೇವೆ? ಒಂದು ಸತ್ಯವನ್ನು ನಂಬುವ ಮನಸ್ಥಿತಿಯೂ ಇಲ್ಲವಲ್ಲ. ನಾವಿಬ್ಬರೂ ಒಬ್ಬರನ್ನೊಬ್ಬರು ಇಷ್ಟಪಟ್ಟು ಒಂದು ಸುಂದರವಾದ ಸಿನಿಮಾ ಮಾಡಿದ್ದೇವೆ ಎಂಬುದನ್ನು ಜನರು ಏಕೆ ಒಪ್ಪಿಕೊಳ್ಳುತ್ತಿಲ್ಲ? ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬುದು ತಿಳಿಯದಷ್ಟು ಚಿಕ್ಕವಳಾಗಿದ್ದೆ ನಾನು.

ವದಂತಿಗಳಿಗೆ ಸ್ಪಷ್ಟನೆ ನೀಡಬೇಕೇ?
ಆ ಸಮಯದಲ್ಲಿ ಅದೇ ಸತ್ಯ ಎಂದು ಜನರು ಭಾವಿಸಿದ್ದರು. ಆದರೆ ಅವರಿಗೆ ವಾಸ್ತವ ತಿಳಿದಿರಲಿಲ್ಲ. ಸುಳ್ಳುಗಳಿಗೆ ಸ್ಪಷ್ಟೀಕರಣ ಸಿಗುವಂತೆ ನೀವು ಕಾಯುತ್ತಿದ್ದರೆ ಆ ಸಂಸ್ಕೃತಿಯನ್ನು ನಾನು ಅನುಮೋದಿಸುವುದಿಲ್ಲ. ಹೊರಬೀಳುವ ಪ್ರತಿ ರೂಮರ್ಗಳ ಬಗ್ಗೆಯೂ ಮಾತನಾಡುವ ಅಗತ್ಯವಿದೆ ಎಂದು ನನಗೆ ಅನಿಸುವುದಿಲ್ಲ. ಹೀಗಾಗಿ ನಾನು ಸತ್ಯದೊಂದಿಗೆ ಸಮಯ ತೆಗೆದುಕೊಳ್ಳುವುದಿಲ್ಲ. ಏನೂ ಆಗದೆ ಇದ್ದಾಗ ಯಾವುದರ ಬಗ್ಗೆಯೂ ನಾನು ಸ್ಪಷ್ಟೀಕರಣ ನೀಡುವ ಅಗತ್ಯವಿಲ್ಲ. ಅವರು ಅದ್ಭುತ ಸಹನಟ. ಸುಶಾಂತ್ ನನಗೆ ನೀಡಿದ ಪ್ರತಿ ಗುಟುಕು ಪ್ರೀತಿ ಮತ್ತು ಗೌರವವನ್ನು ಸುಶಾಂತ್ ಬಗ್ಗೆ ಹೊಂದಿದ್ದೇನೆ.

ಹಾಗೆ ನಡೆದಿದ್ದರೆ ಸಿನಿಮಾ ಆಗುತ್ತಿತ್ತೇ?
ಸುದ್ದಿ ಹರಡಿದಂತೆ ಏನಾದರೂ ಆಗಿದ್ದರೆ, ನಾವು ನಮ್ಮ ಪ್ಯಾರಿಸ್ ಚಿತ್ರೀಕರಣಕ್ಕೆ ಹೋಗುತ್ತಿರಲಿಲ್ಲ. ನಮ್ಮ ಸಿನಿಮಾ ಮುಂದುವರಿಸುವುದು ಅಥವಾ ಡಬ್ಬಿಂಗ್ ಮಾಡುವುದನ್ನು ನಡೆಸುತ್ತಿರಲಿಲ್ಲ. ಪರಿಸ್ಥಿತಿ ಈಗಿನಂತೆ ಇರುತ್ತಿರಲಿಲ್ಲ. ಸತ್ಯವನ್ನು ನಂಬಿ ಎಂದು ಜನರಲ್ಲಿ ಮನವಿ ಮಾಡುತ್ತೇನೆ. ಆದರೆ ಆ ಸತ್ಯವನ್ನು ಅವರಿಗೆ ನೀಡಿರಲಿಲ್ಲ, ಇದು ದುಃಖದ ಸಂಗತಿ ಎಂದು ಸಂಜನಾ ಹೇಳಿದ್ದಾರೆ.


Click it and Unblock the Notifications











