ಶಾರುಖ್ ಮಗನ ಡ್ರಗ್ಸ್ ಪ್ರಕರಣ: ಎನ್ಸಿಬಿಯಿಂದ ಅಕ್ರಮ ತನಿಖೆ!
ಕಳೆದ ವರ್ಷ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಎನ್ಸಿಬಿಯಿಂದ ಬಂಧನಕ್ಕೆ ಒಳಗಾಗಿದ್ದಿದ್ದು ಭಾರಿ ದೊಡ್ಡ ಸುದ್ದಿಯಾಗಿತ್ತು. ಆದರೆ ಆ ಪ್ರಕರಣದ ಆಂತರಿಕ ತನಿಖೆಯನ್ನು ಎನ್ಸಿಬಿಯ ವಿಶೇಷ ತಂಡ ಮಾಡಿದ್ದು, ದುರುದ್ದೇಶಪೂರ್ವಕವಾಗಿ ಶಾರುಖ್ ಖಾನ್ ಪುತ್ರನನ್ನು ಗುರಿ ಮಾಡಿಕೊಂಡೇ ಪ್ರಕರಣ ದಾಖಲಿಸಲಾಗಿತ್ತು ಎಂದು ವರದಿ ನೀಡಲಾಗಿದೆ.
ಶಾರುಖ್ ಖಾನ್ ಪುತ್ರನ ಪ್ರಕರಣದ ತನಿಖೆ ನಡೆಸಿದ ಎನ್ಸಿಬಿಯ ಅಧಿಕಾರಿಗಳು ಅಕ್ರಮ ಮತ್ತು ಲೋಪಪೂರಿತ ತನಿಖೆ ಮಾಡಿದೆ ಎಂದು ಎನ್ಸಿಬಿಯ ವಿಶೇಷ ತನಿಖಾ ತಂಡ ಹೇಳಿದೆ. ಅಲ್ಲದೆ, ಶಾರುಖ್ ಖಾನ್ ಪುತ್ರನನ್ನು ಉದ್ದೇಶಪೂರ್ವಕವಾಗಿ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಸಹ ವರದಿ ಹೇಳಿದೆ.
ಈ ಅಕ್ರಮದಲ್ಲಿ ಸುಮಾರು ಎಂಟು ಅಧಿಕಾರಿಗಳು ಹಾಗೂ ಮುಖ್ಯಾಧಿಕಾರಿ ಸಮೀರ್ ವಾಂಖಡೆ ಸಹ ಆರೋಪಿಯಾಗಿದ್ದು, ಅವರ ನಡೆ ಬಗ್ಗೆ ಸಹ ವಿಶೇಷ ತನಿಖಾ ತಂಡವು ಅನುಮಾನ ವ್ಯಕ್ತಪಡಿಸಿದೆ. ಹಣಕ್ಕಾಗಿ ಬಂಧಿಸಿರುವ ಗುಮಾನಿಯನ್ನೂ ತನಿಖಾ ತಂಡ ವ್ಯಕ್ತಪಡಿಸಿದೆ.

3000 ಪುಟಗಳ ಆರೋಪ ಪಟ್ಟಿ
ಆಂತರಿಕ ತನಿಖಾ ತಂಡವು 3000 ಪುಟಗಳ ಆರೋಪ ಪಟ್ಟಿಯನ್ನು ಅಧಿಕಾರಿಗಳ ವಿರುದ್ಧ ಸಲ್ಲಿಸಿದೆ. ಈ ಆರೋಪ ಪಟ್ಟಿಯು ಆರ್ಯನ್ ಖಾನ್ ಮಾತ್ರವೇ ಅಲ್ಲದೆ ಇತರ ಆರೋಪಿಗಳ ಬಂಧನ ಹಾಗೂ ತನಿಖೆಯಲ್ಲಾಗಿರುವ ಲೋಪದೋಷಗಳ ಬಗ್ಗೆಯೂ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬ್ಯಾಂಕ್ ಖಾತೆಗಳ ಪರಿಶೀಲನೆ
ವಿಶೇಷ ತನಿಖಾ ತಂಡವು 65 ಜನರ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ. ಅನುಮಾನವುಳ್ಳ ಅಧಿಕಾರಿಗಳ ಬ್ಯಾಂಕ್ ಖಾತೆ, ಅವರ ಹತ್ತಿರದ ಸಂಬಂಧಿಗಳ ಬ್ಯಾಂಕ್ ಖಾತೆಗಳನ್ನೂ ಸಹ ಪರಿಶೀಲಿಸಿದೆ. ವಿಚಾರಣೆ ವೇಳೆ ಕೆಲವು ಅಧಿಕಾರಿಗಳು ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆ ಸಹ. ಆರ್ಯನ್ ಖಾನ್ ಬಂಧನದ ಸಮಯದಲ್ಲಿ ಶಾರುಖ್ ಖಾನ್ರ ಮ್ಯಾನೇಜರ್ನಿಂದ ವ್ಯಕ್ತಿಯೊಬ್ಬ ಎನ್ಸಿಬಿ ಪರವಾಗಿ ಹಣ ಪಡೆದಿದ್ದು ಸಹ ಬಹಿರಂಗಗೊಂಡಿತ್ತು.

ಬೇರೆ ಇಲಾಖೆಗಳಿಗೆ ವರ್ಗಾವಣೆ ಆಗಿದ್ದಾರೆ
''ಪ್ರಕರಣದಲ್ಲಿ 8 ಅಧಿಕಾರಿಗಳ ನಡೆ ಅನುಮಾನಕ್ಕೆ ಕಾರಣವಾಗಿದ್ದರಿಂದ ತನಿಖೆಗೆ ಆದೇಶಿಸಲಾಗಿದ್ದು, ಇದೀಗ ವರದಿ ಬಂದಿದ್ದು, ಆ ಎಂಟು ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ. ಎನ್ಸಿಬಿಯ ಹೊರಗಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ ಆಯಾ ಇಲಾಖೆಯ ಮುಖ್ಯಸ್ಥರನ್ನು ಕೇಳಲಾಗಿದೆ'' ಎಂದು ಎನ್ಸಿಬಿ ಅಧಿಕಾರಿಗಳು ಹೇಳಿದ್ದಾರೆ. ಆರ್ಯನ್ ಖಾನ್ ಪ್ರಕರಣದ ತನಿಖೆ ನಡೆಸಿದ್ದ ಕೆಲವು ಅಧಿಕಾರಿಗಳು ಆ ಬಳಿಕ ಎನ್ಸಿಬಿಯಿಂದ ಬೇರೆ ವಿಭಾಗಕ್ಕೆ ವರ್ಗಾವಣೆಗೊಂಡಿದ್ದಾರೆ.

ಕಳೆದ ವರ್ಷ ಅಕ್ಟೋಬರ್ನಲ್ಲಿ ಬಂಧನ
ಕಳೆದ ವರ್ಷ ಅಕ್ಟೋಬರ್ 02 ರಂದು ಮುಂಬೈನ ಕ್ರೂಡೆಲಿಯಾ ಕ್ರೂಸ್ ಮೇಲೆ ಎನ್ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಆಗ ಆರ್ಯನ್ ಖಾನ್, ಆತನ ಗೆಳೆಯ ಅರ್ಬಾಜ್ ಮರ್ಚೆಂಟ್ ಹಾಗೂ ಮುನ್ಮುನ್ ಧಮೇಚಾ ಎಂಬುವರನ್ನು ವಶಕ್ಕೆ ಪಡೆಯಲಾಗಿತ್ತು. ಬಳಿಕ ಅಕ್ಟೋಬರ್ 3 ರಂದು ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನದಲ್ಲಿ ಇಡಲಾಗಿತ್ತು. ಈ ಪ್ರಕರಣದಲ್ಲಿ ಎನ್ಸಿಬಿಗೆ ಸಂಬಂಧಿಸಿದ ಬಾಹ್ಯ ವ್ಯಕ್ತಿಗಳ ಹಸ್ತಕ್ಷೇಪ ಇದ್ದಿದ್ದು ಆಗಲೇ ಪತ್ತೆಯಾಗಿತ್ತು. ಎನ್ಸಿಬಿ ಪರವಾಗಿ ಮೂವರು ವ್ಯಕ್ತಿಗಳು ಶಾರುಖ್ ಖಾನ್ರ ಮ್ಯಾನೇಜರ್ನಿಂದ ಹಣ ಪಡೆದಿದ್ದು ಸಹ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಆ ಬಳಿಕ ಎನ್ಸಿಬಿ ಮುಖ್ಯ ಕಚೇರಿಯು ಆರ್ಯನ್ ಖಾನ್ ಪ್ರಕರಣದ ತನಿಖೆ ನಡೆಸಿದ ಅಧಿಕಾರಿಗಳ ವಿರುದ್ಧ ಆಂತರಿಕ ತನಿಖೆಗೆ ಆದೇಶ ನೀಡಿತು. ಮಾಡದ ತಪ್ಪಿಗೆ ಜೈಲು ಸೇರಿದ್ದ ಆರ್ಯನ್ ಖಾನ್ ಸುಮಾರು ಒಂದು ತಿಂಗಳು ಆರ್ಥರ್ ರಸ್ತೆಯ ಜೈಲಿನಲ್ಲಿ ದಿನ ದೂಡಬೇಕಾಯಿತು.


Click it and Unblock the Notifications











