'ಅರ್ಜುನ್ ರೆಡ್ಡಿ' ರೀಮೇಕ್ ನಲ್ಲಿ ನಟಿಸಲು ಶಾಹಿದ್ ಕಪೂರ್ ಒಪ್ಪಿಕೊಂಡಿದ್ದು 'ಈ' ಕಾರಣಕ್ಕೆ.!
2017 ರಲ್ಲಿ ತೆರೆಕಂಡ.. ಇಡೀ ಟಾಲಿವುಡ್ ನಲ್ಲಿಯೇ ಹೊಸ ಸಂಚಲನ ಸೃಷ್ಟಿಸಿದ ಸಿನಿಮಾ 'ಅರ್ಜುನ್ ರೆಡ್ಡಿ'. ವಿಜಯ್ ದೇವರಕೊಂಡ ಹಾಗೂ ಶಾಲಿನಿ ಪಾಂಡೆ ಅಭಿನಯದ 'ಅರ್ಜುನ್ ರೆಡ್ಡಿ' ಬಾಕ್ಸ್ ಆಫೀಸ್ ನಲ್ಲಿ ಲೂಟಿ ಹೊಡೆಯಿತು.
ತೆಲುಗು ಸಿನಿ ಅಂಗಳದಲ್ಲಿ ಸೂಪರ್ ಹಿಟ್ ಆದ 'ಅರ್ಜುನ್ ರೆಡ್ಡಿ' ಸಿನಿಮಾ ಇದೀಗ ಹಿಂದಿಯಲ್ಲಿ ರೀಮೇಕ್ ಆಗುತ್ತಿದೆ. ತೆಲುಗಿನಲ್ಲಿ ವಿಜಯ್ ದೇವರಕೊಂಡ ಅಭಿನಯಿಸಿದ ಪಾತ್ರಕ್ಕೆ ಹಿಂದಿಯಲ್ಲಿ ಶಾಹಿದ್ ಕಪೂರ್ ಜೀವ ತುಂಬಲಿದ್ದಾರೆ.
ಅಸಲಿಗೆ, 'ಅರ್ಜುನ್ ರೆಡ್ಡಿ' ರೀಮೇಕ್ ಚಿತ್ರದಲ್ಲಿ ನಟಿಸಲು ಶಾಹಿದ್ ಕಪೂರ್ ಒಪ್ಪಿಕೊಳ್ಳಲು ಪ್ರಮುಖ ಕಾರಣ ಸಿನಿಮಾದ ಕಥೆ. ''ಅರ್ಜುನ್ ರೆಡ್ಡಿ' ಸಿನಿಮಾ ನೋಡಿದಾಗ, ನಿಜಕ್ಕೂ ನನಗೆ ಆಶ್ಚರ್ಯ ಆಯ್ತು. ಯಾಕಂದ್ರೆ, ಅದು ನಾವೆಲ್ಲ ನೋಡುವ ಮಾಮೂಲಿ ಸಿನಿಮಾ ಅಲ್ಲ. ಚಿತ್ರವನ್ನ ಉತ್ತಮವಾಗಿ ತೆರೆಗೆ ತಂದಿದ್ದಾರೆ. ಈಗ ರೀಮೇಕ್ ಹೇಗೆ ಬರುತ್ತೋ, ಗೊತ್ತಿಲ್ಲ. ಆದ್ರೆ, ಟ್ರೈ ಮಾಡುತ್ತೇವೆ. ನನಗಿದು ಉತ್ತಮ ಅವಕಾಶ'' ಎನ್ನುತ್ತಾರೆ ನಟ ಶಾಹಿದ್ ಕಪೂರ್.

''ನಾಯಕನ ಪಾತ್ರದಲ್ಲಿ ಇರುವ ಭಾವನೆ ನನಗೆ ತುಂಬಾ ಇಷ್ಟ ಆಯ್ತು. ತುಂಬಾ ನೈಜವಾಗಿ ಚಿತ್ರೀಕರಣ ಮಾಡಿದ್ದಾರೆ'' ಅಂತ ಹೇಳುವ ಶಾಹಿದ್ ಕಪೂರ್ ಸದ್ಯ 'ಅರ್ಜುನ್ ರೆಡ್ಡಿ' ಹಿಂದಿ ವರ್ಷನ್ ಗಾಗಿ ಗಡ್ಡ ಬಿಡುತ್ತಿದ್ದಾರೆ.
ಟಿ-ಸೀರೀಸ್ ನಿರ್ಮಾಣ ಮಾಡುವ ಈ ಚಿತ್ರಕ್ಕೆ ಸಂದೀಪ್ ರೆಡ್ಡಿ ಆಕ್ಷನ್ ಕಟ್ ಹೇಳಲಿದ್ದಾರೆ. ಸೆಪ್ಟೆಂಬರ್ ಅಂತ್ಯಕ್ಕೆ ಚಿತ್ರೀಕರಣ ಶುರುವಾಗಲಿದ್ದು, ಮುಂದಿನ ವರ್ಷದ ಜೂನ್ ತಿಂಗಳಲ್ಲಿ ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











