ವಂಚನೆ ಜಾಲದಲ್ಲಿ ಶಿಲ್ಪಾಶೆಟ್ಟಿ ದಂಪತಿ

ಆನಂದ್ ಸಿಂಗ್ ಎಂಬ ಖಾಸಗಿ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಿಗೆ 8 ಲಕ್ಷ ರು ನೀಡದೆ ಶಿಲ್ಪಾ ಶೆಟ್ಟಿ ಸತಾಯಿಸಿದ್ದಾರೆ ಎನ್ನಲಾಗಿದೆ. ಪ್ರತಿಭಾವಂತ ಯುವ ಆಟಗಾರರನ್ನು ಪರಿಚಯಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂಬಂಧ ಆನಂದ್ ಸಿಂಗ್ ಗೆ ಶಿಲ್ಪಾ ಶೆಟ್ಟಿ ದಂಪತಿ 8 ಲಕ್ಷ ರು ನೀಡಬೇಕಿತ್ತು.
ಇಂಡಿಯನ್ ಪ್ರಿಮಿಯರ್ ಲೀಗ್ ನ ರಾಜಸ್ಥಾನ್ ರಾಯಲ್ಸ್ ತಂಡದ ಒಡತಿಯಾಗಿರುವ ಶಿಲ್ಪಾಶೆಟ್ಟಿ ಹಾಗೂ ಉದ್ಯಮಿ ಪತಿ ರಾಜ್ ಕುಂದ್ರಾ ಅವರ ಮೇಲೆ ಆನಂದ್ ಸಿಂಗ್ ಅವರು ದೂರು ನೀಡಿದ್ದಾರೆ. ಮುಂಬೈ ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂಬ ಸುದ್ದಿಯಿದೆ.
ಆನಂದ್ ಸಿಂಗ್ ಕೂಡಾ ಸಾರ್ವಜನಿಕವಾಗಿ ಚಿರಪರಿಚಿತ ವ್ಯಕ್ತಿ. ಕ್ರಿಕೆಟ್ ಅಕಾಡೆಮಿ ಅಲ್ಲದೆ ನಾಗರಿಕ ಕರ್ತವ್ಯ ಮರೆತ ತಾರೆಗಳನ್ನು ಎಚ್ಚರಿಸುವ ಸ್ವಯಂ ಸೇವಕ ವೃತ್ತಿ ಮಾಡುತ್ತಿದ್ದಾರೆ. ಈ ಹಿಂದೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದ ಕಿಂಗ್ ಖಾನ್ ಶಾರುಖ್ ಹಾಗೂ ಇರ್ಫಾನ್ ಖಾನ್ ಅವರ ವಿರುದ್ಧ ದೂರು ದಾಖಲಿಸಿದ್ದರು.
ಸದ್ಯ ಶಿಲ್ಪಾ ಶೆಟ್ಟಿ ಪ್ರಕರಣ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿದೆ. ದೂರು ಸಲ್ಲಿಸಿರುವ ಆನಂದ್ ಸಿಂಗ್ ಅವರನ್ನು ಮೇ.14ರಂದು ಸೂಕ್ತ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ. ದಾಖಲೆಗಳ ಪರಿಶೀಲನೆ ನಂತರ ಶಿಲ್ಪಾಶೆಟ್ಟಿ ದಂಪತಿ ಮೇಲೆ ಯಾವ ಕ್ರಮ ಜರುಗಿಸಬಹುದು ಎಂಬುದನ್ನು ನಿರ್ಧರಿಸಲಾಗುತ್ತದೆ.
ಶೆಟ್ಟಿಗೆ ದಂಡ ಇದೇ ಮೊದಲಲ್ಲ, ಕಳೆದ ಫೆಬ್ರವರಿ ತಿಂಗಳಿನಲ್ಲಿ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರ ಜೋಡಿಗೆ 100 ಕೋಟಿ ರು ಪಾವತಿಸುವಂತೆ ಜಾರಿ ನಿರ್ದೇಶನಾಲಯ ನೋಟಿಸ್ ಜಾರಿ ಮಾಡಿತ್ತು.
ಇಂಡಿಯನ್ ಪ್ರಿಮಿಯರ್ ಲೀಗ್ ನ ರಾಜಸ್ಥಾನ ರಾಯಲ್ಸ್ ಮೂಲಕ ವಿದೇಶಿ ಬಂಡವಾಳ ಹೂಡಿಕೆ ಅವ್ಯವಹಾರಗಳು ಎಗ್ಗಿಲ್ಲದೆ ನಡೆದಿದೆ. ಐಪಿಎಲ್ ಗೂ ಮುನ್ನವೇ ವಿದೇಶಿಯರಿಂದ ಹೂಡಿಕೆಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ತಂಡದ ಹೆಸರಿನಲ್ಲಿ ಸಂಗ್ರಹವಾದ ಹೂಡಿಕೆ ಹಂಚಿಕೆ ಹಾಗೂ ಷೇರುಗಳ ವಿವರ ಗೊಂದಲಮಯವಾಗಿದೆ.ಫೆಮಾ ಕಾಯ್ದೆಯ ಯಾವುದೇ ನಿಯಮಗಳನ್ನು ರಾಜಸ್ಥಾನ್ ರಾಯಲ್ಸ್ ತಂಡ ಪಾಲಿಸಿಲ್ಲ.
ಈ ಬಗ್ಗೆ ಏಪ್ರಿಲ್ 2011ರಲ್ಲೇ ಜೈಪುರದ ಐಪಿಎಲ್ ತಂಡಕ್ಕೆ ಹಲವು ಬಾರಿ ಶೋಕಾಸ್ ನೋಟಿಸ್ ನೀಡಲಾಗಿತ್ತು. ನೋಟಿಸ್ ಗೆ ಯಾವುದೇ ಉತ್ತರ ಬಂದಿಲ್ಲ. ಫೆಮಾ ನಿಯಮ ಉಲ್ಲಂಘನೆ ಆರೋಪದ ಮೇಲೆ 100 ಕೋಟಿ ರು ದಂಡ ವಿಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿತ್ತು. ಜಾರಿ ನಿರ್ದೇಶನಾಲಯದ ದಂಡದ ವಿರುದ್ಧ ಫೆಮಾಕ್ಕೆ ಶಿಲ್ಪಾ ಶೆಟ್ಟಿ ತಂಡ ಮೇಲ್ಮನವಿ ಸಲ್ಲಿಸಿದ್ದರು.


Click it and Unblock the Notifications











