ತಂದೆಯ ಎರಡನೇ ಮದುವೆಯನ್ನು ಸುಶಾಂತ್ ಒಪ್ಪಿಕೊಂಡಿರಲಿಲ್ಲ: ಶಿವಸೇನೆ ಸಂಸದ ಸಂಜಯ್ ರಾವತ್
ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸುಶಾಂತ್ ಸಿಂಗ್ ಅವರದ್ದು ಕೊಲೆಯೊ ಆತ್ಮಹತ್ಯೆಯೋ ಎನ್ನುವ ಚರ್ಚೆಯೂ ಜೋರಾಗಿ ನಡೆಯುತ್ತಿದೆ. ಬಾಲಿವುಡ್ ಪ್ರಭಾವಿ ವ್ಯಕ್ತಿಗಳ ಕಿರುಕುಳ, ಪ್ರೇಯಸಿ ರಿಯಾ ಚಕ್ರವರ್ತಿ ಜೊತೆಗಿನ ಮನಸ್ತಾಪ, ಖಿನ್ನತೆ ಹೀಗೆ ಪೊಲೀಸರು ವಿವಿದ ಆಂಗಲ್ ಗಳಲ್ಲಿ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಇದೀಗ ಸುಶಾಂತ್ ಸಾವಿನ ಪ್ರಕರಣದಲ್ಲಿ ಶಿವಸೇನ ನಾಯಕ ಸಂಜಯ್ ರಾವತ್ ಹೇಳಿಕೆ ಮತ್ತೊಂದು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ. ಈ ಪ್ರಕರಣವನ್ನು ರಾಜಕೀಯಗೊಳಿಸಲಾಗುತ್ತಿದೆ ಮತ್ತು ಒತ್ತಡ ತಂತ್ರಗಳನ್ನು ಬಳಸಲಾಗಿದೆ ಎಂದು ಆರೋಪಿಸಿರುವ ಸಂಜಯ್ ಸುಶಾಂತ್ ಮತ್ತು ತಂದೆಯ ನಡುವಿನ ಸಂಬಂಧದ ಬಗ್ಗೆಯು ಪ್ರಶ್ನೆ ಮಾಡಿದ್ದಾರೆ. ಮುಂದೆ ಓದಿ..

ತಂದೆಯ ಜೊತೆ ಉತ್ತಮ ಸಂಬಂಧ ಹೊಂದಿರಲಿಲ್ಲ
ಸುಶಾಂತ್ ಸಿಂಗ್ ಮತ್ತು ಅವರ ತಂದೆಯ ಜೊತೆಗಿನ ಸಂಬಂಧದ ಬಗ್ಗೆ ಹೇಳಿರುವ ಸಂಜಯ್, "ಸುಶಾಂತ್ ಸಿಂಗ್ ಅವರ ತಂದೆ ಕೆಕೆ ಸಿಂಗ್ ಅವರೊಂದಿಗೆ ಉತ್ತಮ ಸಂಬಂಧ ಹೊಂದಿಲ್ಲ. ತಂದೆಯ ಎರಡನೇ ಮದುವೆ ಸುಶಾಂತ್ ಸಿಂಗ್ ಒಪ್ಪಿಗೆ ಇರಲಿಲ್ಲ. ಸುಶಾಂತ ಸಿಂಗ್ ಪಾಟ್ನಾದಲ್ಲಿರುವ ಅವರ ಮನೆಗೆ ಎಷ್ಟು ಬಾರಿ ಭೇಟಿ ನೀಡಿದ್ದಾರೆ ಎಂಬ ಸಂಗತಿಗಳು ಹೊರಬರಲಿ. ಅಂಕಿತಾ ಲೋಖಂಡೆ, ಸುಶಾಂತ್ ಸಿಂಗ್ ಯಾಕೆ ದೂರ ಆದರು ಎನ್ನುವುದು ತನಿಖೆಯ ಭಾಗವಾಗಿರಬೇಕು" ಎಂದಿದ್ದಾರೆ.

ಸಂಜಯ್ ರಾವತ್ ಹೇಳಿಕೆಗೆ ಸುಶಾಂತ್ ಸೋದರ ಸಂಬಂಧಿ ಪ್ರತಿಕ್ರಿಯೆ
ಸಂಜಯ್ ರಾವತ್ ಹೇಳಿಕೆಯಿಂದ ಸುಶಾಂತ್ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಅಲ್ಲದೆ ಸುಶಾಂತ್ ಸಿಂಗ್ ಸೋದರ ಸಂಬಂಧಿ ಹಾಗೂ ಬಿಹಾರದ ಬಿಜೆಪಿ ಶಾಸಕ ನೀರಜ್ ಕುಮಾರ್, ಸಂಜಯ್ ರೌತ್ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ. ಇಲ್ಲವಾದರೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಬೆದರಿಕೆ ಹಾಕಿದ್ದಾರೆ.

ಮಾನನಷ್ಟ ಮೊಕದ್ದಮೆ ಹೂಡುತ್ತೇನೆ- ನೀರಜ್ ಕುಮಾರ್
"ಸತ್ಯಗಳನ್ನು ತಿಳಿಯದೆ ಇಂತಹ ಸೂಕ್ಷ್ಮ ಪ್ರಕರಣದಲ್ಲಿ ಇಂತಹ ಪ್ರತಿಕ್ರಿಯೆಯನ್ನು ನೀಡುತ್ತೀರಿ. ನಾನು ಮಾನನಷ್ಟ ಮೊಕದ್ದಮೆ ಹೂಡುತ್ತೇನೆ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಕೆಕೆ ಸಿಂಗ್ ಎರಡನೇ ಮದುವೆ ಆಗಿಲ್ಲ-ಸುಶಾಂತ್ ಮಾವ
ಸುಶಾಂತ್ ಸಿಂಗ್ ಅವರ ಮಾವ ಮಾತನಾಡಿ, "ಸುಶಾಂತ್ ಸಿಂಗ್ ತಂದೆಯ ಜೊತೆ ಉತ್ತಮ ಸಂಬಂಧ ಹೊಂದಿದ್ದರು. ಸಿಬಿಐ ವಿಚಾರಣೆಯ ದಿಕ್ಕನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನ ನಡೆಯುತ್ತಿದೆ. ಸಂಜಯ್ ರೌತ್ ಆರೋಪಿಸಿದ ಹಾಗೆ ಕೆಕೆ ಸಿಂಗ್ ಎರಡನೇ ಮದುವೆ ಆಗಿಲ್ಲ" ಎಂದು ಹೇಳಿದ್ದಾರೆ.


Click it and Unblock the Notifications











