ಬೆಂಗಳೂರು: ಹಿಂದೂಪರ ಸಂಘಟನೆಗಳ ಒತ್ತಾಯ, ಮತ್ತೊಂದು ಸ್ಟಾಂಡಪ್ ಕಾಮಿಡಿ ಶೋ ರದ್ದು
ಬೆಂಗಳೂರಿನಲ್ಲಿ ನಡೆಯಬೇಕಿದ್ದ ಮತ್ತೊಂದು ಸ್ಟಾಂಡ್ಅಪ್ ಕಾಮಿಡಿ ಶೋ ರದ್ದಾಗಿದೆ. ಈ ಬಾರಿಯೂ ಸಹ ಹಿಂದಪರ ಸಂಘಟನೆಗಳ ಪ್ರತಿಭಟನೆಗಳ ಒತ್ತಾಯದಿಂದಲೇ ಶೋ ರದ್ದಾಗಿದೆ.
ಈ ಹಿಂದೆ ಕಮಿಡಿಯನ್ಗಳಾದ ಮುನಾವರ್ ಫಾರುಖಿ, ಕುನಾಲ್ ಕಾಮ್ರಾ ಅವರ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಸ್ಟಾಂಡಪ್ ಕಾಮಿಡಿ ಶೋಗಳು ರದ್ದಾಗಿದ್ದವು. ಈಗ ಅಂತರಾಷ್ಟ್ರೀಯ ಖ್ಯಾತಿಯುಳ್ಳ ಭಾರತೀಯ ಮೂಲದ ಕಮಿಡಿಯನ್ ವೀರ್ದಾಸ್ರ ಶೋ ರದ್ದಾಗಿದೆ. ವೀರ್ ದಾಸ್ ಸಿನಿಮಾ ನಟರೂ ಆಗಿದ್ದಾರೆ.
ವೀರ್ ದಾಸ್ ಹಿಂದೂ ವಿರೋಧಿ, ಭಾರತ ವಿರೋಧಿ ಎಂದು ಹಿಂದುಪರ ಸಂಘಟನೆಗಳು ಆರೋಪಿಸಿದ್ದು, ಇದೇ ಕಾರಣಕ್ಕೆ ಇಂದು (ನವೆಂಬರ್ 10) ಮಲ್ಲೇಶ್ವರಂನ ಚೌಡಯ್ಯ ಮೆಮೊರಿಯಲ್ ಹಾಲ್ನಲ್ಲಿ ನಡೆಯಬೇಕಿದ್ದ ಸ್ಟಾಂಡಪ್ ಕಾಮಿಡಿ ಶೋಗೆ ಅನುಮತಿಯನ್ನು ನಿರಾಕರಿಸಲಾಗಿದೆ. ವಯ್ಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಜನಜಾಗೃತಿ ಸಮಿತಿ ಹೆಸರಿನ ಸಂಘಟನೆಯೊಂದು ವೀರ್ ದಾಸ್ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದೆಂದು ಆಗ್ರಹ ಸಲ್ಲಿಸಿತ್ತು.

ಟಿಕೆಟ್ ಹಣ ಹಿಂತಿರುಗಿಸುತ್ತಿರುವ ಆಯೋಜಕರು
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಪ್ರಕಟಿಸಿರುವ ವೀರ್ ದಾಸ್, ''ಬಗೆಹರಿಸಲಾಗದ ಅಡ್ಡಿಯೊಂದು ಎದುರಾದ ಕಾರಣ ಶೋ ಅನ್ನು ರದ್ದು ಮಾಡಲಾಗಿದೆ. ಕ್ಷಮಿಸಿ'' ಎಂದಿದ್ದಾರೆ. ವೀರ್ ದಾಸ್ ಶೋನ ಬಹುತೇಕ ಟಿಕೆಟ್ಗಳು ಬಿಕರಿಯಾಗಿದ್ದವು. 2000-3000 ರು ಬೆಲೆ ತೆತ್ತು ಹಲವರು ಟಿಕೆಟ್ ಖರೀದಿಸಿದ್ದರು. ಆದರೆ ಈಗ ಶೋ ರದ್ದಾಗಿರುವುದರಿಂದ ಶೋನ ಆಯೋಜಕರು ಟಿಕೆಟ್ ಹಣ ಮರಳಿಸಲಿದ್ದಾರೆ.

'ಎರಡು ಭಾರತ' ಶೋ ವಿರುದ್ಧ ದೂರು
ವೀರ್ ದಾಸ್ ವಿದೇಶಗಳಲ್ಲಿಯೂ ಹಲವು ಸ್ಟಾಂಡಪ್ ಶೋಗಳನ್ನು ನೀಡಿದ್ದು, ಇತ್ತೀಚೆಗೆ ಅವರು ಅಮೆರಿಕದ ವಾಷಿಂಗ್ಟನ್ನಲ್ಲಿ ನೀಡಲಾಗಿದ್ದ ಶೋ ವಿವಾದಕ್ಕೆ ಕಾರಣವಾಗಿತ್ತು. ಮೊನೊಲಾಗ್ ಮಾದರಿಯ ಮಾತುಕತೆಯಲ್ಲಿ ವೀರ್ ದಾಸ್, ಎರಡು ರೀತಿಯ ಭಾರತ ಇದೆ ಎಂದು ಭಾರತದ ಎರಡು ಮುಖಗಳ ತೋರಿಸುವ ಪ್ರಯತ್ನ ಮಾಡಿದ್ದರು. ವೀರ್ ದಾಸ್ ತಮ್ಮ ಶೋನಲ್ಲಿ ಭಾರತವನ್ನು ಅಪಮಾನಿಸಿದ್ದಾರೆ ಎಂದು ಕೆಲವರು ವೀರ್ ದಾಸ್ ವಿರುದ್ಧ ದೂರು ಸಹ ದಾಖಲಿಸಿದ್ದು, ಎಫ್ಐಆರ್ ಸಹ ನೊಂದಣಿ ಆಗಿದೆ.

'ಮೋದಿ ಬಗ್ಗೆ, ಹಿಂದೂ ಧರ್ಮದ ಬಗ್ಗೆ ಗೌರವವಿಲ್ಲ'
ಇದೀಗ ವಯ್ಯಾಲಿ ಕಾವಲ್ನಲ್ಲಿ ವೀರ್ ದಾಸ್ ವಿರುದ್ಧ ದೂರು ದಾಖಲಿಸಿರುವ ಜನಜಾಗೃತಿ ಸಮಿತಿಯು 'ಟು ಇಂಡಿಯಾ' ವಿಷಯವನ್ನು ಅರ್ಜಿಯಲ್ಲಿ ದಾಖಲಿಸುವ ಜೊತೆಗೆ, ವೀರ್ ದಾಸ್ ತಮ್ಮ ಕೆಲವು ವಿದೇಶಿ ಕಾರ್ಯಕ್ರಮಗಳಲ್ಲಿ ಭಾರತದ ಬಗ್ಗೆ, ಮೋದಿ ಬಗ್ಗೆ, ಮಹಿಳೆಯರ ಬಗ್ಗೆ ಅವಾಚ್ಯವಾಗಿ ಮಾತನಾಡಿದ್ದಾರೆ. ಆತ ಭಾರತ ಹಾಗೂ ಹಿಂದೂ ವಿರೋಧಿ ಎಂದಿದ್ದಾರೆ. ಅಂತೆಯೇ ಹಿಂದೂಪರ ಸಂಘಟನೆಗಳ ಒತ್ತಾಯಕ್ಕೆ ಮಣಿದು ಪೊಲೀಸರು ಕಾರ್ಯಕ್ರಮಕ್ಕೆ ಅವಕಾಶ ನಿರಾಕರಿಸಿದ್ದಾರೆ.


Click it and Unblock the Notifications











