ಜಾಕ್ವೆಲಿನ್ ಫರ್ನಾಂಡೀಸ್ ಕೇಳಿದ್ದು ಅದೊಂದೆ: ವಂಚಕ ಸುಖೇಶ್ ಪತ್ರ
ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅಲಿಯಾಸ್ ರಕ್ಕಮ್ಮನಿಗೆ ಸಂಕಷ್ಟಗಳು ದೂರಾಗತ್ತಲೇ ಇಲ್ಲ. 200 ಕೋಟಿ ರುಪಾಯಿ ಸುಲಿಗೆ ಪ್ರಕರಣದಲ್ಲಿ ಸತತವಾಗಿ ಇಡಿ, ದೆಹಲಿ ಪೊಲೀಸ್ ಹಾಗೂ ವಿಶೇಷ ತನಿಖಾ ದಳದಿಂದ ಸತತವಾಗಿ ವಿಚಾರಣೆಗೆ ಒಳಪಡುತ್ತಲೇ ಇದ್ದಾರೆ.
ಪ್ರಕರಣದ ಪ್ರಮುಖ ಆರೋಪಿ, ಮಹಾ ವಂಚಕ ಸುಕೇಶ್ ಚಂದ್ರಶೇಖರ್ ಜೊತೆಗೆ ಅತ್ಯಾಪ್ತ ಬಂಧವನ್ನು ಜಾಕ್ವೆಲಿನ್ ಫರ್ನಾಂಡೀಸ್ ಹೊಂದಿದ್ದರಿಂದಾಗಿ, ಹಾಗೂ ಸುಕೇಶ್ನಿಂದ ಕೋಟ್ಯಂತರ ರುಪಾಯಿ ಮೌಲ್ಯದ ಉಡುಗೊರೆ, ಹಣವನ್ನು ಪಡೆದಿದ್ದ ಕಾರಣದಿಂದಾಗಿ ಈಗ ಜಾಕ್ವೆಲಿನ್ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಮೊದಲು ಪ್ರಕರಣದ ಸಾಕ್ಷಿಯಾಗಿದ್ದ ಜಾಕ್ವೆಲಿನ್ ಅನ್ನು ಇಡಿಯು ಆರೋಪಿಯನ್ನಾಗಿ ಪರಿಗಣಿಸಿ ವಿಚಾರಣೆ ನಡೆಸುತ್ತಿದೆ.
ಈ ನಡುವೆ, ಪ್ರಕರಣದ ಪ್ರಮುಖ ಆರೋಪಿ, ಸುಕೇಶ್ ಚಂದ್ರಶೇಖರ್, ಜಾಕ್ವೆಲಿನ್ ಫರ್ನಾಂಡೀಸ್ ಕುರಿತಾಗಿ ಇಡಿ ಅಧಿಕಾರಿಗಳಿಗೆ ಪತ್ರವೊಂದನ್ನು ಬರೆದಿದ್ದಾನೆ. ತನ್ನ ಕೈಬರಹದಲ್ಲಿಯೇ ಪತ್ರವನ್ನು ಸುಕೇಶ್ ಬರೆದಿದ್ದು, ವಂಚನೆ ಪ್ರಕರಣಕ್ಕೂ ಜಾಕ್ವೆಲಿನ್ ಫರ್ನಾಂಡೀಸ್ಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾನೆ. ಆಕೆಗೆ ನನ್ನ ಅಕ್ರಮಗಳ ಬಗ್ಗೆ ಗೊತ್ತಿರಲಿಲ್ಲ. ಹಾಗೂ ಆಕೆ ಎಂದೂ ಏನನ್ನೂ ನನ್ನಿಂದ ಬಯಸಿಲ್ಲ ಎಂದು ಸಹ ಹೇಳಿದ್ದಾನೆ.

ಪತ್ರ ಬರೆದಿರುವ ಸುಕೇಶ್
''ನಾನು ಮತ್ತು ಜಾಕ್ವೆಲಿನ್ ಪ್ರೀತಿಯಲ್ಲಿದ್ದೆವು, ಅದು ಆಕೆಯ ತಪ್ಪಲ್ಲ. ಆಕೆ ಎಂದಿಗೂ ನನ್ನನ್ನು ಯಾವ ವಸ್ತುವನ್ನೂ ಕೇಳಿಲ್ಲ. ಆದರೆ ನಾನೇ ಆಕೆಗೆ ಹಾಗೂ ಆಕೆಯ ಕುಟುಂಬಕ್ಕೆ ಉಡುಗೊರೆಗಳನ್ನು ನೀಡಿದೆ. ಇದು ಆಕೆಯ ತಪ್ಪು ಹೇಗಾಗುತ್ತದೆ. ಆಕೆ ಬಯಸಿದ್ದೆಲ್ಲ ಒಂದೇ, ಪ್ರೀತಿ ಮತ್ತು ನಂಬಿಕೆ. ಅದರ ಹೊರತಾಗಿ ಇನ್ಯಾವ ವಸ್ತುವನ್ನೂ ಆಕೆ ನನ್ನಿಂದ ಬಯಸಿಲ್ಲ. ಆಕೆಯನ್ನು ಈ ಪ್ರಕರಣದಲ್ಲಿ ಸಿಲುಕಿರುವುದು ದುರಾದೃಷ್ಟಕರ'' ಎಂದಿದ್ದಾರೆ ಸುಕೇಶ್ ಚಂದ್ರಶೇಖರ್.

ಗಂಭೀರ ತನಿಖೆ ಆಗಬೇಕು: ವಕೀಲ
ಸುಕೇಶ್ ಬರೆದಿರುವ ಪತ್ರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಾಕ್ವೆಲಿನ್ ಫರ್ನಾಂಡೀಸ್ ವಕೀಲ ಪ್ರಶಾಂತ್ ಪಾಟೀಲ್, ''ಪತ್ರ ಹಾಗೂ ಪತ್ರದಲ್ಲಿರುವ ಮಾಹಿತಿಯ ಬಗ್ಗೆ ಗಂಭೀರ ತನಿಖೆ ಆಗಬೇಕು'' ಎಂದಿದ್ದಾರೆ. ಪತ್ರವನ್ನು ಸುಕೇಶ್ನೇ ಬರೆದಿದ್ದಾನೆ ಎಂದ ಮೇಲೆ ಆತ ಪತ್ರದಲ್ಲಿ ಒದಗಿಸಿರುವ ಮಾಹಿತಿಯನ್ನು ಒರೆಗೆ ಹಚ್ಚಬೇಕಾಗಿದೆ. ಕಾನೂನಿನ ನಿಬಂಧನೆಗಳ ಅಡಿಯಲ್ಲಿ ಸುಕೇಶ್ನ ಹೇಳಿಕೆಯನ್ನು ನ್ಯಾಯಾಲಯದಲ್ಲಿ ದಾಖಲಿಸಬಹುದು ಮತ್ತು ಸತ್ಯವನ್ನು ಕಂಡುಹಿಡಿಯಲು ಪತ್ರದ ಬಗ್ಗೆ ತನಿಖೆಯನ್ನು ಕೈಗೊಳ್ಳಬಹುದು" ಎಂದಿದ್ದಾರೆ.

ತನಿಖೆಗೆ ಸಹಕರಿಸಿಲ್ಲ ಎಂದಿರುವ ಇಡಿ
ಇದರ ನಡುವೆ, ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಕ್ವೆಲಿನ್ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯ (ಇಡಿ) ಬಲವಾಗಿ ವಿರೋಧಿಸಿದೆ. ಜಾಕ್ವೆಲಿನ್ ಫರ್ನಾಂಡಿಸ್, ತನಿಖೆಗೆ ಎಂದಿಗೂ ಸಹಕರಿಸಲಿಲ್ಲ ಮತ್ತು ಸಾಕ್ಷ್ಯವನ್ನು ಎದುರಿಗೆ ಇರಿಸಿದಾಗ ಮಾತ್ರವೆ ಆ ಬಗ್ಗೆ ತುಸು ಮಾಹಿತಿ ನೀಡಿದ್ದಾರೆ ಎಂದು ಹೇಳಿದೆ. ಸುಕೇಶ್ ಚಂದ್ರಶೇಖರ್ ಅಕ್ರಮವಾಗಿ ಸಂಪಾದಿಸಿದ ಹಣದಲ್ಲಿ ಸಾಕಷ್ಟು ಪಾಲು ಜಾಕ್ವೆಲಿನ್ಗೆ ಹೋಗಿದೆ. ಅಲ್ಲದೆ, ಸುಕೇಶ್, ಆ ಹಣವನ್ನು ಅಕ್ರಮದಿಂದಲೇ ಗಳಿಸಿದ್ದೆಂದು ಗೊತ್ತಾದ ಬಳಿಕವೂ ಜಾಕ್ವೆಲಿನ್, ಸುಕೇಶ್ನಿಂದ ಉಡುಗೊರೆಗಳನ್ನು ಪಡೆದಿದ್ದಾಳೆ, ಸಂಬಂಧವನ್ನು ಮುಂದುವರೆಸಿದ್ದಾಳೆ ಎಂದಿದೆ ಇಡಿ.

ಯಾರು ಈ ಸುಕೇಶ್ ಚಂದ್ರಶೇಖರ್?
ಸುಕೇಶ್ ಚಂದ್ರಶೇಖರ್ ಮಹಾನ್ ವಂಚಕನಾಗಿದ್ದು, ತಿಹಾರ್ ಜೈಲಿನಲ್ಲಿದ್ದುಕೊಂಡೆ, ಖ್ಯಾತ ಸಂಸ್ಥೆ ರ್ಯಾನ್ಬಾಕ್ಸಿಯ ಮಾಜಿ ಮಾಲೀಕನ ಪತ್ನಿ ಅದಿತಿ ಸಿಂಗ್ರಿಂದ 200 ಕೋಟಿ ವಸೂಲಿ ಮಾಡಿದ್ದ. ತಾನು ಕೇಂದ್ರ ಗೃಹ ಸಚಿವರ ಕಾರ್ಯಾಲಯದವನೆಂದು ಹೇಳಿಕೊಂಡು, ಜೈಲಿನಲ್ಲಿರುವ ಆಕೆಯ ಪತಿಯನ್ನು ಬಿಡುಗಡೆಗೊಳಿಸುವುದಾಗಿ ಹೇಳಿ ಹಣ ವಸೂಲಿ ಮಾಡಿದ್ದ. ಇದು ಮಾತ್ರವೇ ಅಲ್ಲದೆ, ಹಲವು ಖ್ಯಾತನಾಮ ಉದ್ಯಮಿಗಳಿಗೆ, ರಾಜಕಾರಣಿಗಳೆ ಕೋಟ್ಯಂತರ ಹಣ ವಂಚನೆ ಮಾಡಿದ್ದಾನೆ ಸುಕೇಶ್. ತಮಿಳುನಾಡಿನ ಖ್ಯಾತ ರಾಜಕಾರಣಿ ಟಿಟಿವಿ ದಿನಕರ್ಗೆ ಕೋಟ್ಯಂತರ ಹಣ ವಂಚನೆ ಮಾಡಿದ ಪ್ರಕರಣದಲ್ಲಿ 2017 ರಲ್ಲಿ ಬಂಧಿತನಾಗಿ ಆಗಿನಿಂದಲೂ ಜೈಲಿನಲ್ಲಿದ್ದಾನೆ. ಆದರೆ ಅಲ್ಲಿಂದಲೇ ತನ್ನ ವಂಚನೆ ಕಾರ್ಯ ಮುಂದುವರೆಸಿದ್ದ.


Click it and Unblock the Notifications











