ಸುಶಾಂತ್ ಮ್ಯಾನೇಜರ್ 'ಆತ್ಮಹತ್ಯೆ' ಪ್ರಕರಣ: ಕೇಂದ್ರ ಸಚಿವನ ವಿರುದ್ಧ ಎಫ್ಐಆರ್
ನಟ ಸುಶಾಂತ್ ಸಿಂಗ್ ಸಾವು ಬಾಲಿವುಡ್ನಲ್ಲಿ ಎಬ್ಬಿಸಿದ ಬಿರುಗಾಳಿ ಇನ್ನೂ ತಣ್ಣಗಾಗಿಲ್ಲ. 2020ರಲ್ಲಿ ಬಹುವಾಗಿ ಚರ್ಚಿತವಾಗಿದ್ದ ವಿಷಯ ಸುಶಾಂತ್ ಸಿಂಗ್ ಸಾವು.
ಸುಶಾಂತ್ ಸಿಂಗ್ 2020 ರ ಜೂನ್ 14 ರಂದು ಮುಂಬೈನ ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅದಕ್ಕೆ ಒಂದು ವಾರದ ಹಿಂದೆ ಅಂದರೆ ಜೂನ್ 08 ರಂದು ಸುಶಾಂತ್ರ ಮ್ಯಾನೇಜರ್ ದಿಶಾ ಸಾಲಿಯಾನ್ ಕಟ್ಟಡದ ಮೇಲಿಂದ ಬಿದ್ದು ಅಸುನೀಗಿದ್ದರು. ಇದು ಆತ್ಮಹತ್ಯೆ ಎನ್ನಲಾಗಿತ್ತು.
ಈಗ ದಿಶಾ ಸಾಲಿಯಾನ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವರು ಹಾಗೂ ಅವರ ಪುತ್ರನ ವಿರುದ್ಧ ಎಫ್ಐಆರ್ ದಾಖಲಾಗಿದೆ.

ದಿಶಾ ಸಾಲಿಯಾನ್ ಸಾವು ಮೊದಲಿಗೆ ಹೆಚ್ಚು ಸುದ್ದಿಯಾಗಿರಲಿಲ್ಲ. ಸುಶಾಂತ್ ಸಾವಿನ ಬಳಿಕ ದಿಶಾ ಸಾಲಿಯನ್ ಬಗ್ಗೆ ಅತಿಯಾದ ಚರ್ಚೆ ನಡೆಯಿತು. ಸುಶಾಂತ್ ಸಾವು ಬಿಹಾರ ಚುನಾವಣೆ ಪ್ರಮುಖ ವಿಷಯವಾಗಿ ಬದಲಾದ ಬಳಿಕ ಹಲವು ರಾಜಕಾರಣಿಗಳು ಸುಶಾಂತ್ ಸಾವಿನ ಬಗ್ಗೆ ಹಲವು ಹೇಳಿಕೆಗಳನ್ನು ನೀಡಿದರು. ಅದರಲ್ಲಿ ಕೇಂದ್ರ ಸಚಿವ ನಾರಾಯಣ ಅವರ ಪುತ್ರ ಶಾಸಕ ನಿತೀಶ್ ರಾಣೆ ಅವರುಗಳು ಸಹ ಒಬ್ಬರು.
ಸುಶಾಂತ್ ಸಿಂಗ್ ಪ್ರಕರಣ ತೀವ್ರ ಚರ್ಚೆಯಲ್ಲಿರುವ ಸಂದರ್ಭದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಬಿಜೆಪಿ ಕೇಂದ್ರ ಸಚಿವ ನಾರಾಯಣ ರಾಣೆ ಹಾಗೂ ಅವರ ಪುತ್ರ, ಶಾಸಕ ನಿತೇಶ್ ರಾಣೆ, ''ದಿಶಾ ಸಾಲಿಯಾನ್ ಮೇಲೆ ಅತ್ಯಾಚಾರ ಮಾಡಲಾಗಿತ್ತು. ಆಕೆ ಗರ್ಭಿಣಿ ಆಗಿದ್ದಳು'' ಎಂದು ಹೇಳಿಕೆ ನೀಡಿದ್ದರು. ಇದು ತೀವ್ರ ವಿವಾದ ಹುಟ್ಟುಹಾಕಿತ್ತು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಹಾರಾಷ್ಟ್ರ ಮಹಿಳಾ ಆಯೋಗ, ''ಈ ಪ್ರಕರಣದಲ್ಲಿ ಸುಳ್ಳು ಸುದ್ದಿ ಹರಡಿಸುವವರ ಸಾಮಾಜಿಕ ಜಾಲತಾಣವನ್ನು ಬಂದ್ ಮಾಡಿ ಎಂದೂ ಹಾಗೂ ದಿಶಾ ಸಾಲಿಯಾನ್ ಬಗ್ಗೆ ಸುಳ್ಳು ಹಾಗೂ ಮಾನಹಾನಿಕಾರಕ ಸುದ್ದಿ ಹಬ್ಬಿಸಿದ ನಾರಾಯಣ ರಾಣೆ ಹಾಗೂ ನಿತೇಶ್ ರಾಣೆ ಹಾಗೂ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ವಿರುದ್ಧ ಕ್ರಮ ಜರುಗಿಸುವಂತೆ ಮುಂಬೈ ಪೊಲೀಸರಿಗೆ ಪತ್ರ ಬರೆದಿದ್ದಾರೆ. ಅದರಂತೆ ಮೂವರ ವಿರುದ್ಧವೂ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
''ದಿಶಾ ಸಾಲಿಯಾನ್ ಮರಣೋತ್ತರ ಪರೀಕ್ಷಾ ವರದಿಯನ್ನು ಪೊಲೀಸ್ ಇಲಾಖೆಯು ಆಯೋಗಕ್ಕೆ ನೀಡಿತ್ತು. ಅದರ ಪ್ರಕಾರ ದಿಶಾ ಸಾಲಿಯಾನ್ ಮೇಲೆ ಯಾವುದೇ ಅತ್ಯಾಚಾರ ನಡೆದಿರಲಿಲ್ಲ. ಆಕೆ ಗರ್ಭಿಣಿಯೂ ಆಗಿರಲಿಲ್ಲ. ಹಾಗಾಗಿ ದಿಶಾ ಸಾಲಿಯಾನ್ ಬಗ್ಗೆ ತಪ್ಪು ಹಾಗೂ ಮಾನಹಾನಿಕಾರಕ ಹೇಳಿಕೆ ನೀಡುವವರ ವಿರುದ್ಧ ಪ್ರಕರಣ ದಾಖಲಿಸಬೇಕು'' ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಮನವಿ ಮಾಡಿದ್ದಾರೆ.


Click it and Unblock the Notifications











