ಆರೇ ತಿಂಗಳಲ್ಲಿ ಏಳು ಪ್ರಮುಖ ಸಿನಿಮಾಗಳನ್ನು ಕಳೆದುಕೊಂಡಿದ್ದರು ಸುಶಾಂತ್ ಸಿಂಗ್!
ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಕಾರಣ ಏನು ಎಂಬುದು ಇನ್ನೂ ನಿಗೂಢವಾಗಿದೆ. ಈ ಸಾವು ಬಾಲಿವುಡ್ನ ಆತ್ಮವಿಮರ್ಶೆಗೆ ಕಾರಣವಾಗುತ್ತಿದೆ. ಅಷ್ಟೇ ಅಲ್ಲ, ಬಾಲಿವುಡ್ ಎರಡು ಬಣಗಳಾಗಿ ವಿಭಜನೆಯಾಗುವ ಸೂಚನೆಗಳು ಕಂಡುಬಂದಿವೆ. ಈ ಸಾವಿನ ಬೆನ್ನಲ್ಲೇ ಚಿತ್ರರಂಗದ ಒಳಗೆ ಇರುವ ಅನೇಕರು ಕೌಟುಂಬಿಕ ಪ್ರಭಾವಗಳು ಮತ್ತು ಹಿಡಿತಗಳ ಬಗ್ಗೆ ಗಟ್ಟಿಧ್ವನಿಯಲ್ಲಿ ಮಾತನಾಡುವ ಛಾತಿ ಪ್ರದರ್ಶಿಸುತ್ತಿದ್ದಾರೆ.
Recommended Video
ಸುಶಾಂತ್ ಸಿಂಗ್ ಸಾವಿಗೆ ಹಲವಾರು ಕಾರಣಗಳನ್ನು ಪಟ್ಟಿಮಾಡಲಾಗುತ್ತಿದೆ. ಅದರಲ್ಲಿ ಪ್ರಮುಖವಾಗಿ ಚರ್ಚೆಯಾಗುತ್ತಿರುವುದು ಬಾಲಿವುಡ್ನಲ್ಲಿನ ಕುಟುಂಬ ಆಳ್ವಿಕೆ. ಸುಶಾಂತ್ ಒಬ್ಬ ಪ್ರತಿಭಾವಂತ ನಟರಾಗಿದ್ದರೂ, ತಾವು ನಟಿಸಿದ ಸಿನಿಮಾ ಮತ್ತು ಧಾರಾವಾಹಿಗಳ ಮೂಲಕ ಅವುಗಳನ್ನು ಸಾಬೀತುಪಡಿಸಿದ್ದರೂ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು, ನಿರ್ದೇಶಕರು ಅವರನ್ನು ಕಡೆಗಣಿಸುತ್ತಾ, ಅವಮಾನಿಸುತ್ತಾ ಬಂದಿದ್ದವು ಎಂಬುದಕ್ಕೆ ಅನೇಕ ಉದಾಹರಣೆಗಳನ್ನು ತೆರೆದಿಡಲಾಗುತ್ತಿದೆ.
ಹಿಟ್ ಸಿನಿಮಾಗಳನ್ನು ನೀಡಿದ್ದರೂ ಸುಶಾಂತ್ ದೊಡ್ಡ ಅವಕಾಶಗಳನ್ನು ಕಳೆದುಕೊಂಡಿದ್ದರು ಎಂದು ರಾಜಕಾರಣಿ ಸಂಜಯ್ ನಿರುಪಮ್ ಆರೋಪಿಸಿದ್ದಾರೆ.

ಬಾಲಿವುಡ್ನ ಕ್ರೌರ್ಯ
'ಛಿಚೋರೆಯ ಯಶಸ್ಸಿನ ಬಳಿಕ ಸುಶಾಂತ್ ಸಿಂಗ್ ಸುಮಾರು ಏಳು ಚಿತ್ರಗಳಿಗೆ ಸಹಿ ಹಾಕಿದ್ದರು. ಆದರೆ ಆರೇ ಆರು ತಿಂಗಳಲ್ಲಿ ಈ ಎಲ್ಲ ಸಿನಿಮಾಗಳನ್ನೂ ಅವರು ಕಳೆದುಕೊಂಡಿದ್ದರು. ಏಕೆ? ಚಿತ್ರರಂಗದಲ್ಲಿನ ಕ್ರೌರ್ಯ ಮತ್ತೊಂದು ಮಟ್ಟದಲ್ಲಿ ಕೆಲಸ ಮಾಡುತ್ತದೆ. ಈ ಕ್ರೌರ್ಯ ಅವರ ಜೀವವನ್ನೇ ಬಲಿತೆಗೆದುಕೊಂಡಿತು. ನಾವು ಪ್ರತಿಭಾವಂತ ನಟನನ್ನು ಕಳೆದುಕೊಂಡೆವು. ಸುಶಾಂತ್ ಅವರಿಗೆ ನನ್ನ ನಮನಗಳು' ಎಂದು ಸಂಜಯ್ ನಿರುಪಮ್ ಬರೆದಿದ್ದಾರೆ.

ಆ ನೋವು ನನಗೆ ಗೊತ್ತು
ನೀನು ಅನುಭವಿಸುತ್ತಿದ್ದ ನೋವು ನನಗೆ ತಿಳಿದಿತ್ತು. ನಿಮ್ಮನ್ನು ಕುಸಿಯುವಂತೆ ಮಾಡಿರುವ ಜನಗಳ ಕಥೆ ನನಗೆ ಗೊತ್ತಿದೆ. ಆಗ ನೀವು ನನ್ನ ಹೆಗಲ ಮೇಲೆ ಅಳುತ್ತಿದ್ದಿರಿ. ಕಳೆದ ಆರು ತಿಂಗಳಲ್ಲಿ ನಾನು ನಿಮ್ ಜತೆಗಿರಬೇಕಿತ್ತು ಎನಿಸುತ್ತಿದೆ. ನೀವಾದರೂ ನನ್ನನ್ನು ಸಂಪರ್ಕಿಸಬೇಕಿತ್ತು. ನಿನಗೆ ಏನು ಆಗಿದೆಯೋ ಅದು ಅವರ ಕರ್ಮ. ನಿನ್ನದಲ್ಲ ಎಂದು ಶೇಖರ್ ಕಪೂರ್ ಹೇಳಿದ್ದಾರೆ.

ವ್ಯವಸ್ಥೆಯ ವಿರುದ್ಧ ಹೋರಾಡಿ
ಕೆಲವು ಜನರ ಹೆಸರನ್ನು ತಿಳಿಸುವುದರಿಂದ ಪ್ರಯೋಜನವಿಲ್ಲ. ಪ್ರತಿಯೊಬ್ಬರೂ ಯಾವುದರ ವಿರುದ್ಧ ಹೋರಾಡುತ್ತಿದ್ದಾರೋ ಅವರೇ ಆ ವ್ಯವಸ್ಥೆಯ ಬಲಿಪಶುಗಳು ಮತ್ತು ಉತ್ಪನ್ನಗಳಾಗಿದ್ದಾರೆ. ನೀವು ನಿಜಕ್ಕೂ ಕಾಳಜಿ ತೋರುವುದಾದರೆ, ನೀವು ನಿಜಕ್ಕೂ ಕ್ರುದ್ಧರಾಗಿದ್ದರೆ ಈ ವ್ಯವಸ್ಥೆಯನ್ನು ಕೆಳಕ್ಕಿಳಿಸಿ. ಯಾವುದೇ ವ್ಯಕ್ತಿಯನ್ನು ಅಲ್ಲ. ಅದು ಗೆರಿಲ್ಲಾ ಯುದ್ಧತಂತ್ರ. ಸಿಟ್ಟಿನ ಅವೇಶವಲ್ಲ ಎಂದು ಶೇಖರ್ ತಿಳಿಸಿದ್ದಾರೆ.

ಬಾಲಿವುಡ್ ಗೇಟ್ ಕೀಪರ್ಗಳು
ಸುಶಾಂತ್ ಸ್ವತಃ ತೆಗೆದುಕೊಂಡ ನಿರ್ಧಾರಕ್ಕಾಗಿ ಯಾರನ್ನೋ ದೂಷಿಸುವುದು ಸರಿಯಲ್ಲ. ಅವರು ದೊಡ್ಡ ಮೊತ್ತದ ಆಟದಲ್ಲಿ ಆಡುತ್ತಿದ್ದರು. ಅದರಲ್ಲಿ ಗೆಲ್ಲುತ್ತಿದ್ದರೋ ಸೋಲುತ್ತಿದ್ದರೋ. ಆದರೆ ಬಾಲಿವುಡ್ನ ಸ್ವಯಂ ನೇಮಕದ ಗೇಟ್ ಕೀಪರ್ಗಳ ಬಗ್ಗೆ ಕೆಲವು ಹೇಳಲೇಬೇಕಾಗುತ್ತದೆ ಎಂದು ರಣವೀರ್ ಶೋರಿ ಪರೋಕ್ಷವಾಗಿ ಹೇಳಿದ್ದಾರೆ


Click it and Unblock the Notifications











