ಅಸಹ್ಯಕರ ಪುರುಷತ್ವದ ಪ್ರದರ್ಶನ: 'ಕಾಂತಾರ'ವನ್ನು ಟೀಕಿಸಿದ 'ತುಂಬಾಡ್' ಸಹ ನಿರ್ಮಾಪಕ
ಕನ್ನಡದ 'ಕಾಂತಾರ' ಸಿನಿಮಾ ದೇಶದಾದ್ಯಂತ ದೊಡ್ಡ ಹಿಟ್ ಆಗಿದೆ. ಕಡಿಮೆ ಬಜೆಟ್ನಲ್ಲಿ ನಿರ್ಮಾಣವಾದ ಈ ಸಿನಿಮಾ ಕರ್ನಾಟಕ ಮಾತ್ರವೇ ಅಲ್ಲದೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಿ ಬಹುದೊಡ್ಡ ಹಿಟ್ ಆಗಿದೆ.
ಸಿನಿಮಾವನ್ನು ಸಾಮಾನ್ಯ ಸಿನಿಮಾ ಪ್ರೇಕ್ಷಕರು ಮಾತ್ರವೇ ಅಲ್ಲದೆ ದೆಶದಾದ್ಯಂತ ಹಲವು ಸಿನಿಮಾ ಕರ್ಮಿಗಳು ಒಪ್ಪಿಕೊಂಡು ಮೆಚ್ಚಿಕೊಂಡಿದ್ದಾರೆ. ಸಿನಿಮಾದ ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ಒಂದೇ ಸಿನಿಮಾದ ಮೂಲಕ ರಾಷ್ಟ್ರಮಟ್ಟದ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ.
ಆದರೆ ಸಿನಿಮಾದ ಬಗ್ಗೆ ಕೆಲವರು ಋಣಾತ್ಮಕವಾಗಿಯೂ ಮಾತನಾಡುತ್ತಿದ್ದಾರೆ. ಸಿನಿಮಾ ಬಿಡುಗಡೆ ಆದಾಗಿನಿಂದಲೂ ಒಂದು ವರ್ಗ ಸಿನಿಮಾದ ವಿರುದ್ಧ ಮಾತನಾಡುತ್ತಲೇ ಇದ್ದಾರೆ. ಆರಂಭದಲ್ಲಿ 'ಕಾಂತಾರ' ಸಿನಿಮಾವನ್ನು ಮರಾಠಿಯ 'ತುಂಬಾಡ್' ಸಿನಿಮಾಕ್ಕೆ ಹೋಲಿಸಲಾಗಿತ್ತು. ಇದೀಗ 'ತುಂಬಾಡ್' ಸಿನಿಮಾದ ಸಹ ನಿರ್ಮಾಪಕ ಹಾಗೂ ಚಿತ್ರಕತೆ ಬರಹಗಾರ 'ಕಾಂತಾರ' ಸಿನಿಮಾ ನೋಡಿದ್ದು, ಸಿನಿಮಾ ಚೆನ್ನಾಗಿಲ್ಲವೆಂದಿದ್ದಾರೆ!

''ಕಾಂತಾರ' ಸಿನಿಮಾ 'ತುಂಬಾಡ್' ನಂತೆ ಇಲ್ಲ'
'ಕಾಂತಾರ' ಸಿನಿಮಾವನ್ನು ತಮ್ಮ 'ತುಂಬಾಡ್' ಸಿನಿಮಾದೊಂದಿಗೆ ಹೋಲಿಸಲಾಗುತ್ತಿರುವ ಬಗ್ಗೆ ಅಸಮಾಧಾನಗೊಂಡು ಟ್ವೀಟ್ ಮಾಡಿರುವ 'ತುಂಬಾಡ್' ಸಿನಿಮಾದ ಸಹ ನಿರ್ಮಾಪಕ ಹಾಗೂ ಸಹ ಚಿತ್ರಕತೆ ಬರಹಗಾರ ಆನಂದ್ ಗಾಂಧಿ, ''ಕಾಂತಾರ' ಸಿನಿಮಾ ಸ್ವಲ್ಪವೂ 'ತುಂಬಾಡ್' ಸಿನಿಮಾ ರೀತಿಯಲ್ಲಿಲ್ಲ. ತುಂಬಾಡ್ ಮಾಡುವಾಗ, ಹಾರರ್ ಅನ್ನು ಪುರುಷತ್ವದ ರೂಪಕವಾಗಿ ಬಳಸುವುದು ನನ್ನ ಯೋಚನೆ ಆಗಿತ್ತು. ಆದರೆ ಕಾಂತಾರದಲ್ಲಿ ಅದು ಪೂರ್ಣ ವಿರೋಧವಾಗಿದೆ'' ಎಂದಿದ್ದಾರೆ.

ಅಸಹ್ಯಕರ ಪುರುಷತ್ವದ ಪ್ರದರ್ಶನ: ಆನಂದ್
''ನನ್ನ ಸಿನಿಮಾ ಪುರುಷತ್ವ ಹಾಗೂ ಸಂಕುಚಿತ ಮನೋಭಾವನೆಯ ವಿರುದ್ಧ ಸಿನಿಮಾ ಆದರೆ ಕಾಂತಾರದಲ್ಲಿ ಪುರುಷತ್ವವನ್ನು ಅಸಹ್ಯಕರ ರೀತಿಯಲ್ಲಿ ಪ್ರದರ್ಶಿಸಲಾಗಿದೆ. ಹಾಗೂ ಅಗಾಧವಾದ ಸಂಕುಚಿತತೆಯನ್ನು ಸಿನಿಮಾದ ಕತೆ ಒಳಗೊಂಡಿದೆ. ಪುರುಷತ್ವ ಹಾಗೂ ಸಂಕುಚಿತತೆಯನ್ನು 'ಕಾಂತಾರ' ಸಿನಿಮಾದಲ್ಲಿ ವೈಭವೀಕರಿಸಲಾಗಿದೆ'' ಎಂದಿದ್ದಾರೆ ಆನಂದ್ ಗಾಂಧಿ.

'ಕಾಂತಾರ' ತುಸುವೂ ಚೆನ್ನಾಗಿಲ್ಲ ಎಂದ ಅವಿರೂಪ್
ಆನಂದ್ ಗಾಂಧಿ ಮಾತ್ರವೇ ಅಲ್ಲದೆ ಸಿನಿಮಾ ವಿಮರ್ಶಕ ಅವಿರೂಪ್ ಬಾಸು ಸಹ 'ಕಾಂತಾರ' ಸಿನಿಮಾವನ್ನು ಟೀಕಿಸಿದ್ದಾರೆ. ''ಇದು ಬುದ್ಧಿವಂತಿಗೆ ಮಾಡುವ ಅಪಮಾನ. ಕಳಪೆಯಾಗಿ ನಿರ್ಮಿಸಲಾಗಿರುವ, ಅನವಶ್ಯಕವಾಗಿ ಲೌಡ್ ಆದ, ಹಲವು ತಪ್ಪುಗಳಿಂದ ಕೂಡಿದ ಸಿನಿಮಾ ಇದಾಗಿದೆ, ಸಿನಿಮಾದಲ್ಲಿ ಯಾವುದೇ ನೈಜ ಪಾತ್ರಗಳಿಲ್ಲ, ಕತೆಯಲ್ಲಿ ಬರುವ ಟ್ವಿಸ್ಟ್ಗಳು ಕೇವಲ ಗಿಮಿಕ್ಗಳಾಗಿವೆ ಕತೆಯಲ್ಲಿನ ತಿರುವುಗಳು ಕತೆಗೆ ಅನುಗುಣವಾಗಿಲ್ಲ. ನಾಯಕನಿಗೆ ಸಾಕ್ಷಾತ್ಕಾರ ಆಗುವ ದೃಶ್ಯವಂತೂ ನಗು ತರಿಸುತ್ತದೆ. ಸಿನಿಮಾದಲ್ಲಿ ಅತಿಯಾಗಿ ಮೆಚ್ಚಲಾಗಿರುವ ಕ್ಲೈಮ್ಯಾಕ್ಸ್ ಹಂತಕ್ಕೆ ಬರುವ ವೇಳೆಗೆ ನನಗಂತೂ ಸಿನಿಮಾದ ಮೇಲೆ ಆಸಕ್ತಿಯೇ ಹೊರಟು ಹೋಗಿತ್ತು'' ಎಂದಿದ್ದಾರೆ.

'ಕಾಂತಾರ' ಸಿನಿಮಾವನ್ನು ಜನ ಮೆಚ್ಚಿದ್ದಾರೆ
ಯಾರು ಏನೇ ಹೇಳಿದರು, ಬಹುಸಂಖ್ಯೆಯ ಜನ 'ಕಾಂತಾರ' ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಸಿನಿಮಾದ ವಿಷಯದಲ್ಲಿ ಪ್ರೇಕ್ಷಕನ ತೀರ್ಪಿಗೆ ಹೆಚ್ಚು ಮಾನ್ಯತೆ. 'ಕಾಂತಾರ' ಸಿನಿಮಾದ ವಿಷಯದಲ್ಲಿ ಪ್ರೇಕ್ಷಕ ಸಿನಿಮಾದ ಪರ ನಿಂತಿದ್ದಾನೆ. ಸಿನಿಮಾವು ಹಲವು ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಐವತ್ತು ದಿನ ಪೂರೈಸಿವೆ. ಸಿನಿಮಾವು ಎಲ್ಲ ಭಾಷೆಗಳಲ್ಲಿ ಸುಮಾರು 400 ಕೋಟಿ ಕಲೆಕ್ಷನ್ ದಾಟಿದೆ. ಸಿನಿಮಾವನ್ನು ರಿಷಬ್ ಶೆಟ್ಟಿ ನಿರ್ದೇಶಿಸಿ ನಟನೆ ಸಹ ಮಾಡಿದ್ದಾರೆ. ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಹೊಂಬಾಳೆ ಫಿಲಮ್ಸ್ ಈ ಸಿನಿಮಾವನ್ನು ನಿರ್ಮಾಣವನ್ನು ಮಾಡಿದೆ. ಇದೀಗ ಈ ಸಿನಿಮಾದ ಮುಂದಿನ ಭಾಗವೂ ಬರಲಿದೆ.


Click it and Unblock the Notifications











