ಕನ್ನಿಕಾ ಕಪೂರ್ ಗೆ ನೊಟೀಸ್ ನೀಡಿದ ಪೊಲೀಸರು: ಬಂಧಿಸುವ ಎಚ್ಚರಿಕೆ
ಕೊರೊನಾ ಕಾರಣದಿಂದ ರಾತ್ರೋರಾತ್ರಿ ಜನಪ್ರಿಯತೆಯನ್ನು ಹತ್ತುಪಟ್ಟಾಗಿಸಿಕೊಂಡ ಬಾಲಿವುಡ್ ಗಾಯಕಿ ಕನ್ನಿಕಾ ಕಪೂರ್ ಗೆ ಈಗ ಕಾನೂನು ತೊಂದರೆಗಳು ಎದುರಾಗಿವೆ.
Recommended Video
ಕೊರೊನಾ ಗೆ ತುತ್ತಾಗಿ, ಹಾಗೂ-ಹೀಗೂ ಅದರ ವಿರುದ್ಧ ಹೋರಾಡಿ ಗುಣಮುಖರಾಗಿ ಹೊರಗೆ ಬಂದಿರುವ ಕನ್ನಿಕಾ ಕಪೂರ್ ಹಿಂದೆ ಈಗ ಪೊಲಿಸರು ಬಿದ್ದಿದ್ದಾರೆ.
ಉತ್ತರ ಪ್ರದೇಶದ ಪೊಲೀಸರು ಕನ್ನಿಕಾ ಕಪೂರ್ ಗೆ ನೊಟೀಸ್ ನೀಡಿದ್ದಾರೆ. ಕೊರೊನಾ ಲಾಕ್ಡೌನ್ ಸಮಯದಲ್ಲಿ ನಿರ್ಲಕ್ಷ್ಯತನ ತೋರಿದ್ದಕ್ಕೆ ಈ ನೊಟೀಸ್ ಅನ್ನು ಪೊಲೀಸರು ನೀಡಿದ್ದಾರೆ.
ವಿದೇಶದಿಂದ ಬಂದವರು ಸರ್ಕಾರಕ್ಕೆ ಮಾಹಿತಿ ನೀಡಬೇಕು, ವಿದೇಶದಿಂದ ವಾಪಸ್ಸಾದವರು ಸತತ 14 ದಿನ ಕಡ್ಡಾಯವಾಗಿ ಕ್ವಾರಂಟೈನ್ನಲ್ಲಿರಬೇಕು ಎಂದು ಸರ್ಕಾರ ಆದೇಶ ಹೊರಡಿಸಿದ್ದಾಗಲೇ, ವಿದೇಶದಿಂದ ಬಂದಿದ್ದ ಕನ್ನಿಕಾ ಆದೇಶದ ಬಗ್ಗೆ ನಿರ್ಲಕ್ಷ್ಯ ಪ್ರದರ್ಶಿಸಿದ್ದರು.

ದೊಡ್ಡವರೊಂದಿಗೆ ಪಾರ್ಟಿ ಮಾಡಿದ್ದ ಕನ್ನಿಕಾ
ವಿದೇಶದಿಂದ ಬಂದಿದ್ದ ಕನ್ನಿಕಾ ಕಪೂರ್, ಸರ್ಕಾರದಿಂದ ಈ ವಿಷಯ ಮುಚ್ಚಿಟ್ಟಿದ್ದು ಮಾತ್ರವಲ್ಲದೆ, ದೊಡ್ಡವರ ಸೇರಿ ಪಾರ್ಟಿ ಸಹ ಮಾಡಿದ್ದರು. ಕನ್ನಿಕಾ ಮಾಡಿದ್ದ ಪಾರ್ಟಿಯಲ್ಲಿ ರಾಜಸ್ಥಾನ ಮಾಜಿ ಸಿಎಂ ವಸುಂಧರಾ ರಾಜೆ, ಅವರ ಪುತ್ರ ದುಷ್ಯಂತ್ ಸಿಂಗ್ ಭಾಗವಹಿಸಿದ್ದರು. ನಂತರ ದುಷ್ಯಂತ್ ಸಿಂಗ್ ಲೋಕಸಭೆಗೂ ಹೋಗಿದ್ದರಿಂದ ರಾಷ್ಟ್ರಪತಿಗಳು ಸೇರಿ ಕೆಲವು ಸಚಿವರುಗಳು ಕ್ವಾರಂಟೈನ್ಗೆ ಒಳಗಾಗುವಂತಾಯಿತು.

ಕನ್ನಿಕಾ ಕಪೂರ್ ವಿರುದ್ಧ ದೂರು
ಆಗಲೇ ಕನ್ನಿಕಾ ಕಪೂರ್ ವಿರುದ್ಧ ದೂರುಗಳು ದಾಖಲಾಗಿದ್ದವು. ಕನ್ನಿಕಾ ಕಪೂರ್ ನಿರ್ಲಕ್ಷ್ಯ ತೋರಿದ್ದಾರೆ ಅವರಿಗೆ ಸೂಕ್ತ ಶಿಕ್ಷೆ ಆಗಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿತ್ತು. ಆದರೆ ಕನ್ನಿಕಾ ಕಪೂರ್ ಕೊರೊನಾ ಚಿಕಿತ್ಸೆಯಲ್ಲಿದ್ದ ಕಾರಣ ಈ ಕುರಿತು ತನಿಖೆ ನಡೆದಿರಲಿಲ್ಲ.

ನಯಾಜ್ ನಗರ ಠಾಣೆಯಿಂದ ನೊಟೀಸ್
ಇದೀಗ ಉತ್ತರ ಪ್ರದೇಶದ ನಯಾಜ್ ನಗರ ಪೊಲೀಸ್ ಠಾಣೆಯಿಂದ ಕನ್ನಿಕಾ ಕಪೂರ್ ಗೆ ನೊಟೀಸ್ ನೀಡಲಾಗಿದ್ದು, ಏಪ್ರಿಲ್ 30 ರಂದು ಠಾಣೆಗೆ ಬಂದು ಹೇಳಿಕೆ ದಾಖಲಿಸಬೇಕು, ಇಲ್ಲವಾದಲ್ಲಿ ಬಂಧಿಸಿ ಕರೆತರಲಾಗುವುದು ಎಂದು ಪೊಲೀಸ್ ಅಧಿಕಾರಿ ಎಚ್ಚರಿಕೆ ನೀಡಿದ್ದಾರೆ.

ಪ್ಲಾಸ್ಮಾ ನೀಡಲಿರುವ ಕನ್ನಿಕಾ ಕಪೂರ್
ಕೊರೊನಾ ದಿಂದ ಗುಣಮುಖ ಆಗಿರುವ ಕನ್ನಿಕಾ ಕಪೂರ್ ಈಗ ತಮ್ಮ ಪ್ಲಾಸ್ಮಾ ಅನ್ನು ನೀಡಲು ಸಮ್ಮತಿಸಿದ್ದಾರೆ. ಪ್ಲಾಸ್ಮಾ ಮೂಲಕ ಇತರೆ ರೋಗಿಗಳಿಗೆ ಚಿಕಿತ್ಸೆ ನೀಡಬಹುದಾಗಿದೆ.


Click it and Unblock the Notifications











