ಯಶ್ ರಾಜ್ ಬ್ಯಾನರ್ ಮೇಲೆ ಅಜಯ್ ದೇವಗನ್ ಗರಮ್!
ಸಿಂಗಲ್ ಸ್ಕ್ರೀನ್ ಹೊಂದಿರುವ ಸಾಕಷ್ಟು ಥಿಯೇಟರುಗಳನ್ನು ಯಶ್ ರಾಜ್ ಫಿಲಂ ಬ್ಯಾನರ್, ತಮ್ಮ ಬಿಡುಗಡೆಗೆ ಸಿದ್ಧವಾಗಿರುವ ಶಾರುಖ್ ಖಾನ್ ನಾಯಕತ್ವದ 'ಜಬ್ ತಕ್ ಹೇ ಜಾನ್' ಚಿತ್ರಕ್ಕೆ ಬುಕ್ ಮಾಡಿಕೊಂಡಿದೆ. ಇದು ತಮಗಾಗಿರುವ ಅನ್ಯಾಯ ಎಂದು ಅಜಯ್ ದೇವಗನ್ 'ಕಾಂಪಿಟಿಶನ್ ಕಮಿಷನ್'ಗೆ ಮನವಿ ಸಲ್ಲಿಸಿದ್ದರು. ಆದರೆ ಅವರ ಮನವಿ ತರಸ್ಕೃತವಾಗಿದೆ. ಆದರೂ ಬಿಡದ ಅಜಯ್, 'ಕಾಂಪಿಟಿಶನ್ ಅಪ್ಪೆಲ್ಲೇಟ್ ಟ್ರಿಬ್ಯುನಲ್' ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ತಮಗೆ ಆಗಿರುವ ಅನ್ಯಾಯಕ್ಕೆ ಪರಿಹಾರ ಸಿಗುವುದೆಂಬ ಆಶಾಭಾವನೆಯಲ್ಲಿರುವ ಅಜಯ್, ಈ ಕುರಿತು ಮಾತನಾಡಿದ್ದಾರೆ. ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಜಯ್, "ಯಶ್ ರಾಜ್ ಪಿಲಂ ಬ್ಯಾನರ್ ನವರು ಒಳ್ಳೆಯತನದ ಬಗ್ಗೆ ಮಾತನಾಡುತ್ತಾರೆ. ಹೊಂದಾಣಿಕೆ ಹಾಗೂ ಮಾನವೀಯತೆ ಬಗ್ಗೆ ಗಂಟೆಗಟ್ಟಲೆ ಭಾಷಣ ಮಾಡುತ್ತಾರೆ. ಆದರೆ ಮಾಡುವುದು ಮಾತ್ರ ಅನ್ಯಾಯ. ನನ್ನ ಚಿತ್ರದ ಬಿಡುಗಡೆ ವೇಳೆಗೆ ಅವರು ಈ ರೀತಿಯಲ್ಲಿ ಅನ್ಯಾಯ ಮಾಡಿದ್ದಾರೆ.
ನಾನೇನೂ ಅವರ ಚಿತ್ರವನ್ನು ಬಿಡುಗಡೆ ಮಾಡಬಾರದು ಎಂದು ಹೇಳುತ್ತಿಲ್ಲ. ಅಥವಾ ನನಗೆ ಪರಿಹಾರ ಕೊಡಿ ಎಂದೂ ಕೇಳುತ್ತಿಲ್ಲ. ಬದಲಿಗೆ, ಹೆಚ್ಚುಕಡಿಮೆ ಎಲ್ಲಾ ಸಿಂಗಲ್ ಸ್ಕ್ರೀನ್ ಚಿತ್ರಮಂದಿರವನ್ನು ಅವರೇ ಆಕ್ರಮಿಸಿಕೊಂಡುಬಿಟ್ಟರೆ ನಾವು ನಮ್ಮ ಚಿತ್ರವನ್ನು ಪ್ರದರ್ಶನ ಮಾಡುವುದೆಲ್ಲಿ? ಒಳ್ಳೆಯತನದ ಬಗ್ಗೆ ಕೇವಲ ಮಾತನಾಡಿದರೆ ಸಾಲದು, ಅದನ್ನು ಕಾರ್ಯರೂಪಕ್ಕೂ ತರಬೇಕು ಅಲ್ಲವೇ?" ಎಂದು ಹೇಳಿ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ ಅಜಯ್. ಮುಂದೇನಾಗುತ್ತೋ..! (ಏಜೆನ್ಸೀಸ್)


Click it and Unblock the Notifications












