'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದಿಂದ ಯುವರಾಜ್ ಸಿಂಗ್ ತಂದೆಯನ್ನು ಕೈಬಿಟ್ಟ ಚಿತ್ರತಂಡ; ಕಾರಣವೇನು?
ಖ್ಯಾತ ಕ್ರಿಕೆಟಿಗ ಯುವರಾಜ್ ಸಿಂಗ್ ತಂದೆ ನಟ ಯೋಗರಾಜ್ ಸಿಂಗ್ ದಿ ಕಾಶ್ಮೀರ್ ಫೈಲ್ಸ್ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದರು. ಆದರೀಗ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಸಿನಿಮಾದಿಂದ ಯೋಗರಾಜ್ ಸಿಂಗ್ ಅವರನ್ನು ಚಿತ್ರದಿಂದ ಕೈಬಿಟ್ಟಿದಿಯಂತೆ.
ಇತ್ತೀಚಿಗೆ ಯೋಗರಾಜ್ ಸಿಂಗ್ ಮಹಿಳೆಯರ ಬಗ್ಗೆ ನೀಡಿರುವ ಹೇಳಿಕೆ ವಿವಾದ ಸೃಷ್ಟಿಸಿದ ಕಾರಣ ಅವರನ್ನು ಸಿನಿಮಾದಿಂದ ತೆಗೆದು ಹಾಕಿರುವುದಾಗಿ ಚಿತ್ರತಂಡ ಮಾಹಿತಿ ನೀಡಿದೆ. ಅಂದಹಾಗೆ ಈ ಸಿನಿಮಾ ವಿವೇಕ್ ಅಗ್ನಿಹೋತ್ರಿ ಸಾರಥ್ಯದಲ್ಲಿ ಮೂಡಿಬರುತ್ತಿದೆ.
ಯೋಗರಾಜ್ ಸಿಂಗ್ ರೈತ ಪ್ರತಿಭಟನೆಯಲ್ಲಿ ಮಹಿಳೆಯರ ಬಗ್ಗೆ ಮಾತನಾಡಿರುವುದು ವಿವಾದಕ್ಕೆ ಕಾರಣವಾದ ಹಿನ್ನಲ್ಲೆ ಅವರನ್ನು ಸಿನಿಮಾದಿಂದ ಕೈಬಿಡಲಾಗಿದೆ ಎಂದು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ವಿವೇಕ್, 'ರೈತರ ಪ್ರತಿಭಟನೆಯಲ್ಲಿ ಅವರ ಭಾಷಣ ಕೇಳಿ ಆಘಾತಕ್ಕೊಳಗಾದೆ. ಯಾರಾದರು ಸರಿ ಮಹಿಳೆಯರ ಬಗ್ಗೆ ಮಾತನಾಡುವುದನ್ನು ನಾನು ಸಹಿಸುವುದಿಲ್ಲ. ಅವರು ಈಗ ನನ್ನ ಸಿನಿಮಾದ ಭಾಗವಾಗಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

'ಈಗಾಗಲೇ ಟರ್ಮಿನೇಟರ್ ಪತ್ರ ಕಳುಹಿಸಿದ್ದೇನೆ. ಅವರ ಕಡೆಯಿಂದ ಬರುವ ಉತ್ತರ ನನಗೆ ಬೇಕಾಗಿಲ್ಲ. ನಾನು ಕಮರ್ಷಿಯಲ್ ಸಿನಿಮಾ ನಿರ್ದೇಶಕನಲ್ಲ. ನಾನು ಒಂದು ಉದ್ದೇಶದಿಂದ ಸಿನಿಮಾ ಮಾಡುತ್ತೇನೆ. ಸತ್ಯವನ್ನು ಬಹಿರಂಗ ಪಡಿಸುವ ಚಲನಚಿತ್ರ ಮಾಡುತ್ತೇನೆ. ಯೋಗರಾಜ್ ಸಿಂಗ್ ಹೇಳಿರುವುದು ದ್ವೇಷದಾಯಕವಾಗಿತ್ತು ಹಾಗೂ ಈ ರೀತಿಯ ಜನರು ಹಿಂಸಾಚಾರವನ್ನು ಸೃಷ್ಟಿಸಲು ಬಯಸುತ್ತಾರೆ' ಎಂದು ಹೇಳಿದ್ದಾರೆ.
ಯೋಗರಾಜ್ ಸಿಂಗ್ ಹಿಂದೂ ಮಹಿಳೆಯರ ಬಗ್ಗೆ ಮಾತನಾಡುತ್ತಾ, 'ಅಹ್ಮದ್ ಷಾ ದುರಾನಿಯಂಥವರು ಹಿಂದೂ ಮಹಿಳೆಯರನ್ನು ಅಪಹರಿಸಿ ಮಾರಾಟ ಮಾಡುವಾಗ ಸಿಖ್ ರು ಅವರನ್ನು ರಕ್ಷಿಸಿದ್ದು. ಆದರೆ ನಮಗೆ ಅವರು ದ್ರೋಹ ಬಗೆದರು. ಈ ಸಮುದಾಯವು ಸಾವಿರಾರು ವರ್ಷಗಳಿಂದ ಗುಲಾಮರಾಗಿದ್ದಾರೆ' ಎಂದು ಹೇಳಿರುವ ಹೇಳಿಕೆ ವಿವಾದಕ್ಕೆ ಗುರಿಮಾಡಿಕೊಟ್ಟಿದೆ.
ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಯೋಗರಾಜ್ ಸಿಂಗ್ ಡಿಜಿಪಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಈ ಚಿತ್ರ ಕಾಶ್ಮೀರದಲ್ಲಿ ನಡೆದ ಜನಾಂಗೀಯ ಹತ್ಯೆ ಕುರಿತಾಗಿದೆ ಎಂದು ಹೇಳಲಾಗುತ್ತಿದೆ.


Click it and Unblock the Notifications











