Don't Miss!
- Finance ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಸೇವಾವಧಿ ವಿಸ್ತರಣೆ
- News ಮತ ಹಾಕದಿದ್ದರೆ ನನ್ನ ಅಂತ್ಯಸಂಸ್ಕಾರಕ್ಕಾದರೂ ಬನ್ನಿ. ಮಲ್ಲಿಕಾರ್ಜುನ್ ಖರ್ಗೆ ಭಾವನಾತ್ಮಕ ಮಾತು
- Sports 2024ರ ಟಿ20 ವಿಶ್ವಕಪ್ ರಾಯಭಾರಿಯಾಗಿ ಒಲಿಂಪಿಕ್ ಐಕಾನ್ ಉಸೇನ್ ಬೋಲ್ಟ್ ನೇಮಕ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಷ್ಟದಲ್ಲೇ ಬದುಕಿ, ಕಷ್ಟದಲ್ಲೇ ಹೋದ ಮೋಹನ್ ಜುನೇಜ ಬದುಕಿನ ಕತೆ
'ಜೋಗಿ' ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ಶಿವರಾಜ್ ಕುಮಾರ್ ತನ್ನ ತಾಯಿಯ ಹೆಣದ ಮುಂದೆ ಖುಷಿಯಿಂದ ಕುಣಿಯುವ ದೃಶ್ಯವನ್ನೊಮ್ಮೆ ನೆನಪಿಸಿಕೊಳ್ಳಿ. ಕನ್ನಡ ಸಿನಿಮಾಗಳ ಅತಿ ಭಾವುಕ ದೃಶ್ಯಗಳಲ್ಲಿ ಅದೂ ಒಂದು. ಸತ್ತವರನ್ನು ಹಾಗೆ ಹಾಡುತ್ತಾ, ಕುಣಿಯುತ್ತಾ ಕಳಿಸಿಕೊಡಬೇಕು ಎಂದು ನಾಯಕ ಶಿವಣ್ಣನಿಗೆ ಹೇಳಿಕೊಡುವುದು ಒಂದು ಸಾಮಾನ್ಯದಲ್ಲಿ ಸಾಮಾನ್ಯ ಪೋಷಕ ಪಾತ್ರ. ಆ ಪಾತ್ರ ನಿರ್ವಹಿಸಿದ್ದ ಮೋಹನ್ ಜುನೇಜ ಇಂದು ಇಲ್ಲವಾಗಿದ್ದಾರೆ. ಅವರೇ ಹೇಳಿದಂತೆ ಹಾಡುತ್ತಾ, ಕುಣಿಯುತ್ತಾ ಅವರನ್ನು ಕಳಿಸಿಕೊಡಬೇಕಿದೆ.
ಮೋಹನ್ ಜುನೇಜ ಹೆಸರು ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಬಹುತೇಕ ಸಿನಿಮಾಗಳಲ್ಲಿ ಹೀಗೆ ಬಂದು ಹಾಗೆ ಹೋಗುವ ಪಾತ್ರಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ಮೋಹನ್ ನಟಿಸಿರುವ ನೆನಪುಳಿಯುವ ಪಾತ್ರಗಳೆಂದರೆ 'ಜೋಗಿ', 'ಚೆಲ್ಲಾಟ', 'ಕೆಜಿಎಫ್' ಎಂದು ಕೆಲವನ್ನಷ್ಟೆ ಉದಾಹರಿಸಲು ಸಾಧ್ಯ. ಆದರೆ ಅವರು ನಟಿಸಿರುವುದು ನೂರಾರು ಸಿನಿಮಾಗಳು.
Breaking: ಕನ್ನಡದ ಜನಪ್ರಿಯ ಹಾಸ್ಯನಟ ಮೋಹನ್ ನಿಧನ
ಸಿನಿಮಾಗಳ ಕತೆಯೇ ಇಷ್ಟು, ಪೋಷಕ ಪಾತ್ರಗಳು, ಹಾಸ್ಯ ಕಲಾವಿದರು ಹೀರೋಗೆ ಬಿಲ್ಡಪ್ ಕೊಡಲು ಅತ್ಯವಶ್ಯಕ, ಹೀರೋ ಅನ್ನು ಗ್ರ್ಯಾಂಡ್ ಪರಿಚಯಿಸುವುದೇ ಅವರು ಆದರೆ ಹೀರೋಗೆ ಸಿಗುವ ಗೌರವ, ಸಂಭಾವನೆಯಲ್ಲಿ ಒಂದು ಭಾಗವೂ ಅವರಿಗೆ ಧಕ್ಕುವುದಿಲ್ಲ. ಮೋಹನ್ ಸಹ ಇದರಿಂದ ಹೊರತಲ್ಲ. ಕಷ್ಟದಲ್ಲಿಯೇ ಜೀವನ ಕಟ್ಟಿಕೊಂಡು ಕಷ್ಟದಲ್ಲೇ ಕೊನೆ ಉಸಿರೆಳೆದರು ಮೋಹನ್.
ಗಣೇಶ್ ಕಾಸರಗೋಡು ಹೀಗೆ ಬರೆದುಕೊಂಡಿದ್ದಾರೆ
ಪತ್ರಕರ್ತ ಗಣೇಶ್ ಕಾಸರಗೋಡು ತಮ್ಮ ಫೇಸ್ಬುಕ್ ಪೇಜ್ನಲ್ಲಿ ಬರೆದುಕೊಂಡಿರುವಂತೆ, ''ಆಗ ತಾನೇ ಹೃದಯಕ್ಕೆ ಸಂಬಂಧಿಸಿದ ಪುಟ್ಟದೊಂದು ಸರ್ಜರಿ ಮಾಡಿಸಿಕೊಂಡು ಬಂದಿದ್ದರು ಮೋಹನ್ ಜುನೇಜಾ. ಮತ್ತೆ ಗಾಣಕ್ಕೆ ಹೆಗಲು ಕೊಡಬೇಕು! ಕ್ಯಾಮೆರಾ ಮುಂದೆ ನಿಲ್ಲದಿದ್ದರೆ ಹೊಟ್ಟೆ ಪಾಡಿನ ಗತಿಯೇನು? ಹಾಗೆಂದೇ ಸಿನಿಮಾವೊಂದರ ಚಿತ್ರೀಕರಣಕ್ಕೆಂದು ಕಂಠೀರವಾ ಸ್ಟುಡಿಯೋಕ್ಕೆ ಬಂದಿದ್ದರು ಮೋಹನ್. ನನ್ನನ್ನು ಕಂಡ ತಕ್ಷಣ ಹತ್ತಿರ ಬಂದವರೇ ತಮ್ಮ ಬದುಕಿನ ಗೋಳನ್ನು ಹೇಳತೊಡಗಿದರು : 'ಸರ್, ನೀವು ನನ್ನಂಥಾ ನತದೃಷ್ಟ ಕಲಾವಿದರನ್ನು ಅದೆಷ್ಟು ಮಂದಿಯನ್ನು ನೋಡಿದ್ದೀರೋ ಗೊತ್ತಿಲ್ಲ? ಅದೆಷ್ಟು ಗೋಳಿನ ಕಥೆಯನ್ನು ಬರೆದಿದ್ದೀರೋ? ಆ ಕಥೆಗಳ ಸರಣಿಯಲ್ಲಿ ನನ್ನನ್ನೂ ಸೇರಿಸಿಕೊಂಡು ಬಿಡಿ ಸಾರ್! ಕಲೆಯನ್ನೇ ನಂಬಿ ಬಂದವನು ನಾನು. ಲೆಕ್ಕಕ್ಕುಂಟು ಆಟಕ್ಕಿಲ್ಲ ಎನ್ನುವಂಥ ದುಃಸ್ಥಿತಿ ನನ್ನದು. ಲೆಕ್ಕ ಹಾಕಿದರೆ ನೂರಾರು ಸಿನಿಮಾಗಳಲ್ಲಿ ನಟಿಸಿದ್ದೇನೆ. ಆದ್ರೆ ಜೇಬು ಬರಿದು. ಮೊನ್ನೆ ಸರ್ಜರಿ ಮಾಡಿಸಿಕೊಂಡೆ. ಆಸ್ಪತ್ರೆಯಿಂದ ಹೊರ ಬರುವಾಗ ಬಿಲ್ ಕಟ್ಟದಿದ್ರೆ ಬಿಡ್ತಾರಾ? ಹಾಗೆಯೇ ಆಯ್ತು. ಸಾವಿರಾರು ರೂಪಾಯಿಗಳ ಬಿಲ್ಲು. ಕಟ್ಟೋದು ಹೇಗೆ? ಕೈಲಿ ಬಿಡಿಗಾಸಿಲ್ಲ, ಅದು ಹೇಗೆ ಹೊಂದಿಸಿಕೊಂಡೆನೋ ಗೊತ್ತಿಲ್ಲ. ಅವರಿವರು ಸಹಾಯ ಮಾಡಿದ್ರು. ದೇವರು ದೊಡ್ಡವನು. ಕೈ ಬಿಡಲಿಲ್ಲ. ನಾನು ಗೆಳೆಯರನ್ನು ಸಂಪಾದಿಸಿದ್ದೇನೆಯೇ ಹೊರತು ಹಣ ಸಂಪಾದಿಸಲಿಲ್ಲ. ಕೊಡಬೇಕಾದ ಹಣವನ್ನು ನಿರ್ಮಾಪಕರು ಕೊಟ್ಟರೂ ಸಾಕಿತ್ತು, ಬಡ ಜೀವ ಬದುಕಿ ಬಿಡಬಹುದಿತ್ತು! ಆದ್ರೆ ಯಾರು ಕೊಡ್ತಾರೆ ಹೇಳಿ...?'' ಎಂದಿದ್ದರಂತೆ ಮೋಹನ್.
ಚಿತ್ರಕತೆ ಬರಹಗಾರ, ತಾಂತ್ರಿಕ ವಿಭಾಗದಲ್ಲಿಯೂ ಕೆಲಸ
ಮೋಹನ್ ಜುನೇಜ ಸಿನಿಮಾ, ಕಿರುತೆರೆಗೆ ಬರುವ ಮುನ್ನ ರಂಗಭೂಮಿಯಲ್ಲಿ ಕೆಲಸ ಮಾಡಿದ್ದವರು. ಸಿನಿಮಾಗಳಲ್ಲಿಯೂ ಬಹಳ ಕಾಲದಿಂದ ತೆರೆಯ ಹಿಂದೆ ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡಿದ್ದರು ಮೋಹನ್. ಟೈಗರ್ ಪ್ರಭಾಕರ್, ಸರಿಗಮ ವಿಜಿ ಕಾಲದಿಂದಲೂ ತಾಂತ್ರಿಕ ವಿಭಾಗ, ಚಿತ್ರಕತೆ, ಸಂಭಾಷಣೆ ಇತರೆ ಬರವಣಿಗೆ ವಿಭಾಗದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು ಮೋಹನ್.
ಒಳ್ಳೆಯ ವ್ಯಕ್ತಿಯೆಂದು ಹೆಸರು ಪಡೆದಿದ್ದರು ಮೋಹನ್
ಮೋಹನ್ ಸ್ವಭಾತಃ ಬಹಳ ಸೌಮ್ಯ, ಒಳ್ಳೆಯ ವ್ಯಕ್ತಿಯೆಂದು ಚಿತ್ರರಂಗದಲ್ಲಿ ಹೆಸರು ಮಾಡಿದ್ದವರು. ಹಾಗಾಗಿಯೇ ಸಣ್ಣ ಪಾತ್ರಕ್ಕಾದರೂ ಸರಿ ಅವರನ್ನು ಕರೆದು ಅವಕಾಶ ನೀಡುತ್ತಿದ್ದ ಪರಿಪಾಟ ಇತ್ತು. ಅವರ ಒಳ್ಳೆಯತನದಿಂದಲೇ ಇಷ್ಟು ವರ್ಷಗಳ ಕಾಲ ಒಂದಲ್ಲ ಒಂದು ಸಿನಿಮಾದಲ್ಲಿ ಸಣ್ಣ-ಪುಟ್ಟ ಪಾತ್ರಗಳಲ್ಲಿ ನಟಿಸುತ್ತಲೇ ಬಂದರು. ಅನಾರೋಗ್ಯದ ನಡುವೆಯೂ ನಟನೆಯನ್ನು ಬಿಡಲಿಲ್ಲ. ನಟನೆ ಬಿಟ್ಟರೆ ಬದುಕು ಇನ್ನಷ್ಟು ದುಸ್ತರವಾಗುವ ಭಯ ಮೋಹನ್ ಜುನೇಜಗೆ ಇತ್ತು. ಪರರ ಬಗ್ಗೆ ಕಾಳಜಿ ಹೊಂದಿದ್ದ ಮೋಹನ್ ನೇತ್ರದಾನ ಸಹ ಮಾಡಿದ್ದರು.
ನಟರ್ಯಾರು ಬರಲಿಲ್ಲ: ತಬಲಾ ನಾಣಿ
ಇಂದು ಮೋಹನ್ ಪಾರ್ಥಿವ ಶರೀರ ವೀಕ್ಷಿಸಲು ಹೋಗಿದ್ದ ನಟ ತಬಲಾ ನಾಣಿ ಹೇಳಿದ ಮಾತುಗಳು, ಚಿತ್ರರಂಗದಲ್ಲಿ ಸಣ್ಣ ಕಲಾವಿದರನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ ಎಂಬುದಕ್ಕೆ ಉದಾಹರಣೆಯಾಗಿತ್ತು, ಮಾಧ್ಯಮಗಳೊಟ್ಟಿಗೆ ಮಾತನಾಡಿದ ತಬಲಾ ನಾಣಿ, ''ಮೋಹನ್ ತೀರಿಕೊಂಡಿದ್ದಾರೆ ಎಂದು ಗೊತ್ತಾದರೂ ಯಾವ ನಟರೂ ನೋಡಲು ಬಂದಿಲ್ಲ. ನಂತರ ನಾನು ಕೆಲವರಿಗೆ ಕರೆ ಮಾಡಿ ಮನವಿ ಮಾಡಿದಾಗ ಹಣ ಕಳಿಸಿದ್ದಾರೆ'' ಎಂದರು.
ಜುನೇಜ ಹೆಸರು ಅಂಟಿಕೊಂಡಿದ್ದು ಹೇಗೆ?
ಮೋಹನ್ ಆಗಿದ್ದವರಿಗೆ ಈ ಜುನೇಜ ಹೆಸರು ಅಂಟಿಕೊಂಡಿದ್ದು ಸಹ ಒಂದು ಸ್ವಾರಸ್ಯಕರ ಕತೆ. ಮೋಹನ್ ಚಿತ್ರರಂಗಕ್ಕೆ ಬಂದಾಗ ಇನ್ನೂ ಕೆಲವು ಮೋಹನ್ಗಳು ಚಿತ್ರರಂಗದಲ್ಲಿದ್ದರು. ಹಾಗಾಗಿ ಹೆಸರು ಬದಲಾಯಿಸುವಂತೆ ಸಲಹೆ ನೀಡಲಾಗಿತ್ತು. ಆದರೆ ಅದು ಮೋಹನ್ಗೆ ಇಷ್ಟವಿರಲಿಲ್ಲ. ಆಗ ಕೆಎಸ್ಎಲ್ ಸ್ವಾಮಿ ಅವರು ಮೋಹನ್ರಿಗೆ ಮೋಹನ್ ಜುನೇನ ಎಂದು ನಾಮಕರಣ ಮಾಡಿದರು. ಮೋಹನ್ ನಟಿಸಿದ್ದ ನಾಟಕವೊಂದರಲ್ಲಿ ಅವರ ಪಾತ್ರದ ಹೆಸರು ಜುನೇನ ಎಂದಿತ್ತು. ನಂತರ ಮೋಹನ್ 'ಜಂಭೂ ಸವಾರಿ' ಹೆಸರಿನ ಸಿನಿಮಾದಲ್ಲಿ ನಟಿಸಿದ ಬಳಿಕ ಅವರ ಹೆಸರು ಮೋಹನ್ ಜುನೇಜ ಎಂದಾಯಿತು.
ಖುಷಿಯಿಂದ ಅವರನ್ನು ಕಳಿಸಿಕೊಡಬೇಕಿದೆ
ಹಲವು ದಶಕಗಳಿಂದ ತಮ್ಮ ಕೈಲಾದ ಮಟ್ಟಿಗೆ ಕನ್ನಡ ಸಿನಿಮಾ ಪ್ರೇಕ್ಷಕರನ್ನು ರಂಜಿಸಿದ್ದ ಮೋಹನ್ ಇನ್ನಿಲ್ಲವಾಗಿದ್ದಾರೆ. 'ಜೋಗಿ' ಸಿನಿಮಾದಲ್ಲಿ ಅವರೇ ಹೇಳಿರುವಂತೆ ತೀರಿಕೊಂಡವರನ್ನು ಕಳಿಸಿಕೊಡುವಾಗ ಖುಷಿಯಾಗಿ, ಹಾಡುತ್ತಾ, ಕುಣಿಯುತ್ತಾ ಕಳಿಸಿಕೊಡಬೇಕು. ಹಾಗೆಯೇ ಮೋಹನ್ರನ್ನು ಖುಷಿಯಿಂದ ಕಳಿಸಿಕೊಡಬೇಕಾಗಿದೆ.