ಹೆಬ್ಬೆರಳು, ತೋರು ಬೆರಳಿನಲ್ಲೇ ಇದ್ಯಾ ರಜನಿಕಾಂತ್ ಸಕ್ಸಸ್ ಸೀಕ್ರೆಟ್?
ಅಭಿಮಾನಿಗಳ ಆರಾಧ್ಯ ದೈವ ಸೂಪರ್ ಸ್ಟಾರ್ ರಜನಿಕಾಂತ್. ಬೆಂಗಳೂರಿನ ಬಿಟಿಎಸ್ ಬಸ್ ಕಂಡೆಕ್ಟರ್ ಆಗಿದ್ದ ಶಿವಾಜಿ ರಾವ್ ಗಾಯಕ್ವಾಡ್ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿದ್ದೇ ರೋಚಕ. ಸಿನಿಮಾಗಳು ಮಾತ್ರವಲ್ಲ ತಮ್ಮ ಸರಳ ಸಜ್ಜನ ಸೇವಾ ಗುಣಗಳಿಂದಲೂ ರಜನಿ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ.
150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ರಜನಿಕಾಂತ್ ಇವತ್ತಿಗೂ ಹೊಸ ಹುರುಪಿನಿಂದ ಕ್ಯಾಮರಾ ಮುಂದೆ ನಟಿಸ್ತಾರೆ.ಇವತ್ತಿಗೂ ದಕ್ಷಿಣ ಭಾರತದ ನಂಬರ್ ವನ್ ಸ್ಟಾರ್ ಆಗಿ ರಜನಿಕಾಂತ್ ಮಿಂಚುತ್ತಿದ್ದಾರೆ. ವಯಸ್ಸು 70 ದಾಟಿದರೂ ತಲೈವಾ ಸ್ಟೈಲ್, ಗ್ರೇಸ್ಗೆ ಇನ್ನು 20ರ ಪ್ರಾಯ. ಈ ವಯಸ್ಸಿನಲ್ಲೂ ಸೂಪರ್ ಸ್ಟಾರ್ ಅಷ್ಟೊಂದು ಎನರ್ಜಿಕ್ ಆಗಿರುತ್ತಾರೆ, ಸಿನಿಮಾಗಳಲ್ಲಿ ಹೀರೊ ಆಗಿ ನಟಿಸ್ತಾರೆ. ಇದೆಲ್ಲ ಹೇಗೆ ಸಾಧ್ಯ ಎನ್ನುವ ಅನುಮಾನ ಕೆಲವರನ್ನು ಕಾಡದೇ ಇರುವುದಿಲ್ಲ. ರಜನಿಕಾಂತ್ ಎರಡು ಕೈ ಬೆರಳುಗಳಲ್ಲಿ ಇಷ್ಟೊಂದು ಶಕ್ತಿ ಇದೆ ಎಂದರೆ ನೀವು ನಂಬಲೇಬೇಕು.
ಅಚ್ಚರಿ ಎನಿಸಿದರೂ ಇದು ಸತ್ಯ. ರಜನಿಕಾಂತ್ ಅವರ ಫೋಟೊಗಳನ್ನು, ವಿಡಿಯೋಗಳನ್ನು ಗಮನಿಸಿದರೆ ನಿಮಗೆ ಒಂದು ವಿಚಾರ ಗೊತ್ತಾಗುತ್ತದೆ. ತಲೈವಾನ ಅದೊಂದು ಅಭ್ಯಾಸ ವಿಶೇಷ ಹಾಗೂ ಅಚ್ಚರಿ ಎನಿಸುತ್ತದೆ. ರಜನಿಕಾಂತ್ ಈ ವಯಸ್ಸಿನಲ್ಲೂ ಅಷ್ಟು ಹುರುಪಿನಿಂದ ಇರುವುದಕ್ಕೆ ಅದೇ ಅಭ್ಯಾಸ ಕಾರಣ ಎಂದರೆ ನೀವು ನಂಬಲೇಬೇಕು.

ಚಿನ್ಮುದ್ರೆಯಿಂದ ತಲೈವಾಗೆ ಸದಾ ಚೈತನ್ಯ
ರಜಿನಿಕಾಂತ್ ತಮ್ಮ ಹೆಬ್ಬೆರಳು, ತೋರು ಬೆರಳು ತುದಿಯನ್ನು ಒತ್ತಿ ಚಿನ್ಮುದ್ರೆ ಹಿಡಿದು ಸದಾ ಕಾಣಿಸಿಕೊಳ್ಳುತ್ತಾರೆ. ಸೂಪರ್ ಸ್ಟಾರ್ ಎಲ್ಲೇ ಹೋದರೂ ಬಂದರೂ ಇದನ್ನು ಅನುಸರಿಸುತ್ತಾರೆ. ಧ್ಯಾನ ಮುದ್ರೆ, ಜ್ಞಾನ ಮುದ್ರೆ, ಚಿನ್ಮುದ್ರೆ ಎಂದು ಈ ಮುದ್ರೆಯನ್ನು ಕರೆಯುತ್ತಾರೆ. ಮುದ್ರೆಗಳ ರಾಜನೆಂದು ಕರೆಯುವುದುಂಟು. ಈ ಮುದ್ರೆಯಿಂದ ದೇಹಕ್ಕೂ ಮತ್ತು ಮನಸ್ಸಿಗೂ ಸಾಕಷ್ಟು ಲಾಭಗಳಿವೆ. ಮೆದುಳಿದ ಶಕ್ತಿ ಚೈತನ್ಯ ಹೆಚ್ಚುತ್ತದೆ. ಮಾನಸಿಕ ನೋವನ್ನು ನಿವಾರಿಸಿ ನೆಮ್ಮದಿ ನೀಡುತ್ತದೆ. ಈ ಮುದ್ರೆಯನ್ನು ಅನುಸರಿಸುವುದರಿಂದಲೇ ತಲೈವಾ ಸದಾ ಚೈತನ್ಯದಿಂದ ಇರುತ್ತಾರೆ. ಇವತ್ತಿಗೂ ಹೀರೊ ಆಗಿ ಸಕ್ಸಸ್ ಸಾಧಿಸಲು ಇದು ಸಹಾಯಕವಾಗಿದೆ. ಹಾಗಾಗಿ ಹಲವು ವರ್ಷಗಳಿಂದ ರಜನಿಕಾಂತ್ ಈ ಮುದ್ರೆ ಫಾಲೋ ಮಾಡುತ್ತಾರೆ.

ರಜನಿಕಾಂತ್ ಬಾಬಾ ಮುದ್ರೆ ಫೇಮಸ್
ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಆಧ್ಯಾತ್ಮದ ಒಲವು ಅಪಾರ. ಸಾಕಷ್ಟು ಬಾರಿ ಅವರು ಹಿಮಾಲಯಕ್ಕೆ ಹೋಗಿ ಬೆಟ್ಟಗಳಲ್ಲಿ ಧ್ಯಾನ ಮಾಡುತ್ತಾ ಕುಳಿತುಬಿಡುತ್ತಾರೆ. ಬರೀ ಚಿನ್ಮುದ್ರೆ ಮಾತ್ರವಲ್ಲ, ಅಪಾನ ಮುದ್ರೆ ಬಗ್ಗೆಯೂ ಅವರಿಗೆ ಅಪಾರ ಒಲವು. ಕ್ರಿಯಾಯೋಗದ ಮುದ್ರೆಯದು. 'ಬಾಬಾ' ಸಿನಿಮಾದಲ್ಲಿ ಇದೇ ಮುದ್ರೆಯನ್ನು ಸ್ಟೈಲ್ ರೀತಿಯೂ ತೋರಿಸಿದ್ದರು. ಇದೇ ಮುದ್ರೆಯನ್ನು ತಮ್ಮ ರಾಜಕೀಯ ಪಕ್ಷದ ಚಿಹ್ನೆಯನ್ನಾಗಿ ಇಡಲು ಮುಂದಾಗಿದ್ದರು.

ಭರದಿಂದ ಸಾಗಿದೆ 'ಜೈಲರ್' ಶೂಟಿಂಗ್
ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ 'ಜೈಲರ್' ಚಿತ್ರದಲ್ಲಿ ರಜಿನಿಕಾಂತ್ ಸದ್ಯ ನಟಿಸ್ತಿದ್ದಾರೆ. ಇದು ತಲೈವಾ ನಟನೆಯ 169ನೇ ಸಿನಿಮಾ. ಸನ್ ಪಿಕ್ಚರ್ಸ್ ಬ್ಯಾನರ್ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಕಂಪೋಸ್ ಮಾಡ್ತಿದ್ದಾರೆ. ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್, ರಮ್ಯಾಕೃಷ್ಣ ಸೇರಿದಂತೆ ಘಟಾನುಘಟಿ ಕಲಾವಿದರು ತಾರಾಗಣದಲ್ಲಿ ಇದ್ದಾರೆ. ಮುಂದಿನ ವರ್ಷ ಸಿನಿಮಾ ತೆರೆಗೆ ಬರಲಿದೆ.

ಶೀಘ್ರದಲ್ಲೇ 'ಕಾಂತಾರ' ವೀಕ್ಷಿಸಲಿರೋ ತಲೈವಾ
ಸೂಪರ್ ಸ್ಟಾರ್ ರಜನಿಕಾಂತ್ 'ಜೈಲರ್' ಸಿನಿಮಾ ಚಿತ್ರೀಕರಣದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಹಾಗಾಗಿ ಅವರು 'ಕಾಂತಾರ' ಸಿನಿಮಾ ಇನ್ನು ನೋಡಿಲ್ಲ. ಇಲ್ಲದೇ ಹೋಗಿದ್ದರೆ ಇಷ್ಟು ಒಳ್ಳೆ ಸಿನಿಮಾವನ್ನು, ದೇಶವೇ ಮಾತನಾಡುತ್ತಿರುವ ದಂತಕಥೆಯನ್ನು ಖಂಡಿತ ನೋಡುತ್ತಿದ್ದರು. ಕೆಲ ದಿನಗಳ ಹಿಂದೆ ಚೆನ್ನೈನಲ್ಲೇ KGF- 2 ಸಿನಿಮಾ ನೋಡಿ ನಿರ್ಮಾಪಕ ವಿಜಯ್ ಕಿರಗಂದೂರ್ ಅವರಿಗೆ ಫೋನ್ ಮಾಡಿ ಮಾತನಾಡಿದ್ದರು. ಸಿನಿಮಾ ಶೂಟಿಂಗ್ನಿಂದ ಬಿಡುವು ಸಿಕ್ಕ ಕೂಡಲೇ ತಲೈವಾ 'ಕಾಂತಾರ' ಸಿನಿಮಾ ನೋಡುತ್ತಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.


Click it and Unblock the Notifications











