ಸಣ್ಣ ವಯಸ್ಸಿಗೆ ಚಿರು ಸರ್ಜಾ ಸಾವು: ವೈದ್ಯರು ಹೇಳುವುದೇನು?
ನಟ ಚಿರಂಜೀವಿ ಸರ್ಜಾ ಅಕಾಲಿಕ ಮೃತ್ಯುವಿಗೆ ಹಲವರು ಕಂಬನಿ ಮಿಡಿದಿದ್ದಾರೆ. 39 ವರ್ಷ ವಯಸ್ಸಿಗೆ ಚಿರಂಜೀವಿ ಸರ್ಜಾ ಬದುಕಿನ ವ್ಯವಹಾರ ಮುಗಿಸಿದ್ದಾರೆ.
ಚಿರಂಜೀವಿ ಸರ್ಜಾ ಸಾವಿಗೆ ಅತೀವ ದುಃಖ ವ್ಯಕ್ತಪಡಿಸಲಾಗುತ್ತಿದೆ. 39 ಸಾಯುವ ವಯಸ್ಸಲ್ಲ. ಅದರಲ್ಲೂ ಮದುವೆಯಾಗಿ ಎರಡು ವರ್ಷವಾಗಿತ್ತು, ಚಿರು ಅಪ್ಪನಾಗಲಿದ್ದರು ಇಂಥಹಾ ಸಮಯದಲ್ಲಿ ನಿಧನವಾಗಿರುವುದು ವಿಧಿಯನ್ನು ಶಪಿಸುವಂತೆ ಮಾಡಿದೆ.
ಸಣ್ಣ ವಯಸ್ಸಿಗೆ ಸಾವನ್ನಪ್ಪಿರುವುದು ಉಂಟು ಮಾಡಿರುವ ಅತೀವ ವಿಷಾದದ ಜೊತೆಗೆ ಕೆಲವು ಅನುಮಾನಗಳನ್ನೂ ಹುಟ್ಟಿಸಿದೆ. ಸಿನಿರಂಗದವರ ಬಗೆಗಿರುವ ಕುತೂಹಲ ಇಂಥಹಾ ಅನುಮಾನಗಳಿಗೆ ಕಾರಣವಿರಬಹುದು.
ಚಿರಂಜೀವಿ ಸರ್ಜಾ ಗೆ ದುಶ್ಚಟಗಳಿದ್ದವೇ? ಅವುಗಳ ಕಾರಣದಿಂದ ಅವರು ಸಾಯುವಂತಾಯಿತೆ? ಕುಡಿತ ಅವರ ಪ್ರಾಣ ತೆಗೆಯಿತೆ? ಹೀಗೆ ಹಲವು ಅನುಮಾನಗಳು ಹೊರಗಿನಿಂದ ನೋಡುವವರಿಗೆ ಇದೆ. ಆದರೆ ವೈದ್ಯರು ಹೇಳುವುದು ತುಸು ಭಿನ್ನ ಕತೆ.

ಸಾವಿಗೆ ವಯಸ್ಸಿನ ಮಿತಿ ಇಲ್ಲ
ಚಿರಂಜೀವಿ ಸಾವು ಸಣ್ಣ ವಯಸ್ಸಿಗೆ ಆಗಿಬಿಟ್ಟಿದೆ. ವೈದ್ಯರು ಹೇಳುವ ಪ್ರಕಾರ ಸಾವಿಗೆ ವಯಸ್ಸಿಲ್ಲ. ಸಾವಿಗೆ ಇರುವುದು ಕಾರಣಗಳು ಮಾತ್ರ. ಅಂದಿನ ಅವರ ದೇಹಸ್ಥಿತಿ, ಅಷ್ಟೆ ಅಲ್ಲ ಆ ಕ್ಷಣದ ಅವರ ದೇಹಸ್ಥಿತಿ ಸಹ ಸಾವಿಗೆ ಕಾರಣವಾಗಬಹುದು!

ಚಿರಂಜೀವಿ ಸರ್ಜಾ ಸಾವಿಗೆ ನಿಖರ ಕಾರಣವೇನು?
'ಚಿರಂಜೀವಿ ಸರ್ಜಾ ಕುಡಿಯುತ್ತಿದ್ದರು, ಸಿಗರೇಟು ಸೇದುತ್ತಿದ್ದರು ಎಂದು ನಂಬಿದಾದಲ್ಲಿ ಅವುಗಳೇ ಅವರ ಸಾವಿಗೆ ಕಾರಣ ಎಂದು ಹೇಳಲಸಾಧ್ಯ ಹಾಗೆಂದು ಅವು ಕಾರಣವಲ್ಲವೆಂದೂ ಸಹ ಹೇಳಲಾಗದು' ಎನ್ನುತ್ತಾರೆ ಸುಮಾರು 15 ವರ್ಷ ಅನುಭವಿ ಹಿರಿಯ ಸರ್ಕಾರಿ ವೈದ್ಯರೊಬ್ಬರು.

ಯಾವುದೇ ದುಶ್ಚಟಗಳಿಲ್ಲದ ವ್ಯಕ್ತಿಗೂ ಹೃದಯಾಘಾತ ಆಗಬಹುದು
ಯಾವುದೇ ದುಶ್ಚಟಗಳಿಲ್ಲದ ವ್ಯಕ್ತಿಗೂ ಹೃದಯಾಘಾತ ಆಗುತ್ತದೆ. ಕೇವಲ ಸಾಮಾನ್ಯ ಸ್ನಾಯು ಸೆಳೆತ (ಎದೆಯ ಭಾಗದ) ಮನುಷ್ಯರ ಜೀವವನ್ನೇ ತೆಗೆದಿರುವ ಉದಾಹರಣೆಗಳು ಇವೆ. ಗಂಟಲಲ್ಲಿ ಅನ್ನ ಸಿಕ್ಕಿಕೊಂಡು ಸಾವನ್ನಪ್ಪಿರುವ ಸುದ್ದಿ ಓದಿದ್ದೇವೆ. ಸಾವಿಗೆ ನಿರ್ದಿಷ್ಟ ವಯಸ್ಸು ಇಲ್ಲ ಎಂಬುದನ್ನು ವಿವರಿಸಲು ಇವನ್ನು ಉದಾಹರಣೆಯಾಗಿ ನೀಡಿದರು ಅವರು.

ಸಾವು ವಿಧಿಯಾಟವೆಂದು ಸುಮ್ಮನಾಗುವುದೇ?
ಹಾಗೆಂದರೆ ಸಾವು ವಿಧಿಯಾಟ ಎಂದು ಸುಮ್ಮನಾಗಿಬಿಡುವುದೇ? ಎಂಬ ಪ್ರಶ್ನೆಗೆ, 'ಖಂಡಿತ ಇಲ್ಲ, ಎಲ್ಲಾ ಸಾವಿಗೂ, ಎಲ್ಲಾ ಖಾಯಿಲೆಗೂ ಕಾರಣ ಇದ್ದೇ ಇದೆ. ಕಾರಣವೇ ಇಲ್ಲದ ಖಾಯಿಲೆ, ಸಾವು ಇಲ್ಲವೇ ಇಲ್ಲ. ಆದರೆ ಎಷ್ಟೋ ಪ್ರಕರಣಗಳಲ್ಲಿ ವ್ಯಕ್ತಿ ಸತ್ತ ಬಳಿಕವೇ ಆ ಕಾರಣ ಗೊತ್ತಾಗುತ್ತದೆ' ಎಂದು ಮಾನವನ ದೇಹ, ಖಾಯಿಲೆಗಳ ಸ್ವರೂಪ ಎಷ್ಟು ನಿಗೂಢವಾದುದು ಎಂದರು ಹೆಸರು ಹೇಳಲಿಚ್ಛಿಸದ ವೈದ್ಯರು.

ಚಿಕಿತ್ಸೆ ನೀಡಿದ ವೈದ್ಯರು ಸ್ಪಷ್ಟವಾಗಿ ಹೇಳಬಲ್ಲರು
ಮತ್ತೆ ಚಿರಂಜೀವಿ ಸರ್ಜಾ ಸಾವಿನ ಕಡೆಗೆ ಹೊರಳಿ, ಚಿರಂಜೀವಿ ಸರ್ಜಾ ಅವರಿಗೆ ಸಾಯುವ ಹಿಂದಿನ ದಿನ ಪಿಟ್ಸ್ ಆಗಿತ್ತು, ಸಾಯುವ ದಿನವೂ ಪಿಟ್ಸ್ ಆಗಿತ್ತು ಎಂದು ಮಾಧ್ಯಮಗಳು ಹೇಳುತ್ತಿವೆ. ದೇಹದ ಎಲ್ಲಾ ಅಂಗಾಂಗಳನ್ನು ಒಂದೆಂದು ಭಾವಿಸಿದರೆ ಪಿಟ್ಸ್ ಬಂದ ಕ್ಷಣದ ಒತ್ತಡದಿಂದಾಗಿ ಹೃದಯದ ಕಾರ್ಯ ಏರುಪೇರಾಗಿರುವ ಸಾಧ್ಯತೆ ಇದೆ. ಇದನ್ನು ವೈದ್ಯಕೀಯ ಪದಗಳಲ್ಲಿ ಹೇಳುವುದು ಸರಳವಲ್ಲ. ಆದರೆ ಇದು ಊಹೆಯಷ್ಟೆ. ಏನು ಸಂಭವಿಸಿದೆ ಎಂಬುದನ್ನು ಚಿರು ಗೆ ಚಿಕಿತ್ಸೆ ನೀಡಿದ ವೈದ್ಯರೇ ಹೇಳಬೇಕಿದೆ ಎಂದರು ವೈದ್ಯರು.


Click it and Unblock the Notifications











