ಪಾರ್ವತಮ್ಮ ರಾಜ್ಕುಮಾರ್ ಪುಣ್ಯತಿಥಿ: ಯಶಸ್ವಿ ನಿರ್ಮಾಪಕಿ ಬಗ್ಗೆ ಇಲ್ಲಿವೆ ಅಪರೂಪದ ಸಂಗತಿ
ಕನ್ನಡ ಚಿತ್ರರಂಗದ ಯಶಸ್ವಿ ನಿರ್ಮಾಪಕಿ ಪಾರ್ವತಮ್ಮ ರಾಜ್ಕುಮಾರ್ ಪುಣ್ಯತಿಥಿ ಇಂದು, ಡಿಸೆಂಬರ್ 06, 1939 ರಲ್ಲಿ ಜನಿಸಿದ ಪಾರ್ವತಮ್ಮ, ನಿಧನ ಹೊಂದಿದ್ದು, ಮೇ 31, 2017.
ರಾಜ್ಕುಮಾರ್ ಅಂಥಹಾ ಯಶಸ್ವಿ ಪುರುಷನ ಹಿಂದಿದ್ದ ಯಶಸ್ವಿ ಮಹಿಳೆ ಪಾರ್ವತಮ್ಮ ರಾಜ್ಕುಮಾರ್. ನಟ ರಾಜ್ಕುಮಾರ್ಗೆ ಕೊನೆಯ ವರೆಗೂ ಯಾವುದೇ ವ್ಯವಹಾರ ಜಂಜಡ, ಸಂಸಾರ ಜಂಜಡಗಳು ತಾಕದಂತೆ, ಅವರನ್ನು ಅವರಾಗಿಯೇ ಇರಲು ಬಿಟ್ಟು ಎಲ್ಲ ಜವಾಬ್ದಾರಿಗಳನ್ನು ಹೆಗಲ ಮೇಲೆ ಹೊತ್ತು ನಡೆಸಿದ ಧೀರ ಮಹಿಳೆ ಪಾರ್ವತಮ್ಮ.
ರಾಜ್ಕುಮಾರ್ ಯಶಸ್ಸಿನಲ್ಲಿ, ಸಾರ್ಥಕ ಜೀವನದಲ್ಲಿ ಪಾರ್ವತಮ್ಮನವರ ಪಾಲು ಅರ್ಧದಷ್ಟಿದೆ ಎಂದರೆ ಅತಿಶಯೋಕ್ತಿಯಲ್ಲ. ಇಂಥಹಾ ಪಾರ್ವತಮ್ಮ ರಾಜ್ಕುಮಾರ್ ಬಗ್ಗೆ ಕೆಲವು ಅಪರೂಪದ ಸಂಗತಿಗಳು ಇಲ್ಲಿವೆ.
ಪಾರ್ವತಮ್ಮ ರಾಜ್ಕುಮಾರ್ ಅವರು ಡಿಸೆಂಬರ್ 06, 1939ರಲ್ಲಿ ಸಾಲಿಗ್ರಾಮ ಎಂಬಲ್ಲಿ ಜನಿಸಿದರು. ಈಗಿದು ಮೈಸೂರಿ ಜಿಲ್ಲೆ ವ್ಯಾಪ್ತಿಯಲ್ಲಿದೆ. ಪಾರ್ವತಮ್ಮ ರಾಜ್ಕುಮಾರ್ ಎಳವೆಯಲ್ಲಿ ಸಾಕಷ್ಟು ಬುದ್ಧಿವಂತೆ ಆಗಿದ್ದರು. ಶಾಲೆಗೆ ಹೋಗುತ್ತಿದ್ದ ಕೆಲವೆ ಬಾಲಕಿಯರಲ್ಲಿ ಒಬ್ಬರಾಗಿದ್ದ ಪಾರ್ವತಮ್ಮನವರಿಗೆ ಗಣಿತ ವಿಷಯದ ಬಗ್ಗೆ ಆಸಕ್ತಿ ಇತ್ತಂತೆ.

ಎಂಟು ಜನ ಮಕ್ಕಳಲ್ಲಿ ಒಬ್ಬರು
ಪಾರ್ವತಮ್ಮ ರಾಜ್ಕುಮಾರ್ ಅವರ ತಂದೆ ಅಪ್ಪಾಜಿ ಗೌಡ, ತಾಯಿ ಲಕ್ಷ್ಮಮ್ಮ. ತಂದೆ-ತಾಯಿಯ ಎಂಟು ಜನ ಮಕ್ಕಳಲ್ಲಿ ಒಬ್ಬರು ಪಾರ್ವತಮ್ಮ ರಾಜ್ಕುಮಾರ್. ಪಾರ್ವತಮ್ಮನವರ ತಂದೆ ಅಪ್ಪಾಜಿ ಗೌಡ ಸಂಗೀತಗಾರರಾಗಿದ್ದರು. ನಾಟಕಗಳಲ್ಲಿಯೂ ನಟಿಸುತ್ತಿದ್ದರು. ಕೆಲವು ಮಾಹಿತಿಗಳ ಪ್ರಕಾರ ರಾಜ್ಕುಮಾರ್ ಅವರಿಗೆ ಮೊದಲ ಸಂಗೀತದ ಗುರುಗಳು ಪಾರ್ವತಮ್ಮನವರ ತಂದೆ ಅಪ್ಪಾಗಿ ಗೌಡರೇ ಆಗಿದ್ದರು.

'ಈಕೆಯೇ ನನ್ನ ಸೊಸೆ' ಎಂದಿದ್ದ ಸಿಂಗಾನಲ್ಲೂರು ಪುಟ್ಟಸ್ವಾಮಿಯವರು
ಪಾರ್ವತಮ್ಮ ರಾಜ್ಕುಮಾರ್ ಜನಿಸಿದಾಗಲೇ ರಾಜ್ಕುಮಾರ್ ಅವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಿಯರು ಬೆಳ್ಳಿ ನಾಣ್ಯ ತೊಟ್ಟಿಲಲ್ಲಿ ಇಟ್ಟು 'ಈಕೆಯೇ ನನ್ನ ಸೊಸೆ' ಎಂದಿದ್ದರಂತೆ. ಅಂತೆಯೇ ಪಾರ್ವತಮ್ಮನವರಿ 14 ವರ್ಷ ವಯಸ್ಸಾಗಿದ್ದಾಗ ರಾಜ್ಕುಮಾರ್ ಅವರೊಟ್ಟಿಗೆ ವಿವಾಹ ಮಾಡಿಸಲಾಯ್ತು. ಆಗ ರಾಜ್ಕುಮಾರ್ ಅವರಿಗೆ 24 ವರ್ಷ ವಯಸ್ಸು. ಇಬ್ಬರ ಮದುವೆ ಬಗ್ಗೆ ರಾಜ್ಕುಮಾರ್ ಅವರು ಸಂದರ್ಶನವೊಂದರಲ್ಲಿ ರಸವತ್ತಾಗಿ ವರ್ಣಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಲಭ್ಯವಿದೆ.

ನೆನಪುಳಿವ ಹಲವು ಸಿನಿಮಾ ನೀಡಿದ್ದಾರೆ
ಪಾರ್ವತಮ್ಮ ರಾಜ್ಕುಮಾರ್ ಮೊದಲ ಬಾರಿಗೆ ನಿರ್ಮಾಣ ಮಾಡಿದ ಸಿನಿಮಾ 'ತ್ರಿಮೂರ್ತಿ'. ಆ ನಂತರ ಸುಮಾರು 80 ಸಿನಿಮಾಗಳನ್ನು ಪಾರ್ವತಮ್ಮ ರಾಜ್ಕುಮಾರ್ ನಿರ್ಮಾಣ ಮಾಡಿದರು. 'ಕವಿರತ್ನ ಕಾಳಿದಾಸ', 'ಹಾಲು-ಜೇನು', 'ಬೆಟ್ಟದ ಹೂವು', 'ಓಂ', 'ಜೀವನ ಚೈತ್ರ', 'ಅಪ್ಪು', 'ಆನಂದ್' ಇಂತಹಾ ಹಲವು ಕನ್ನಡ ಚಿತ್ರರಂಗ ಮರೆಯದ ಸಿನಿಮಾಗಳನ್ನು ಪಾರ್ವತಮ್ಮ ರಾಜ್ಕುಮಾರ್ ನೀಡಿದ್ದಾರೆ. ಅಷ್ಟೇ ಅಲ್ಲದೆ, ಮೌಲ್ಯಯುತವಾಗಿ ನಿರ್ಮಾಣ ಸಂಸ್ಥೆ ಹೇಗೆ ನಡೆಸಬೇಕೆಂಬುದಕ್ಕೆ ಬುನಾದಿ ಹಾಕಿದವರು ಪಾರ್ವತಮ್ಮ. ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ಭತ್ಯೆ, ಸೌಲಭ್ಯಗಳನ್ನು ಪಾರ್ವತಮ್ಮ ನೀಡುತ್ತಿದ್ದರಂತೆ. ವಜ್ರೇಶ್ವರಿ ಸಂಸ್ಥೆಗೆ ಕೆಲಸ ಮಾಡಿದ ಅನುಭವಗಳನ್ನು ಹಿರಿಯರು ಈಗಲೂ ನೆನಪಿಸಿಕೊಳ್ಳುತ್ತಾರೆ.

ಹೊಸ ಪ್ರತಿಭೆಗಳಿಗೆ ಅವಕಾಶ ಕೊಟ್ಟಿದ್ದ ಪಾರ್ವತಮ್ಮ
ಹಲವು ಹೊಸ ನಟ-ನಟಿಯರಿಗೆ ಅವಕಾಶ ಕೊಟ್ಟು ಬೆಳೆಸಿದ ಅನ್ನದಾತೆಯೂ ಹೌದು ಪಾರ್ವತಮ್ಮ. ಈಗ ಮಿಂಚುತ್ತಿರುವ ನಟಿ ಶ್ರುತಿ, ಸುಧಾರಾಣಿ, ರಮ್ಯಾ, ರಕ್ಷಿತಾ ಸೇರಿದಂತೆ ಹಲವು ನಟಿಯರು, ಪೋಷಕ ನಟ-ನಟಿಯರು, ತಂತ್ರಜ್ಞರಿಗೆ ಪಾರ್ವತಮ್ಮ ಅವಕಾಶ ನೀಡಿದ್ದಾರೆ. ಪಾರ್ವತಮ್ಮ ಪ್ರಾರಂಭಿಸಿದ್ದ ವಜ್ರೇಶ್ವರಿ ಕಂಬೈನ್ಸ್ ನಿಂದ ಹಲವಾರು ಮಂದಿ ಪ್ರತಿಭಾವಂತರು ಹೊರ ಬಂದಿದ್ದಾರೆ.

ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದ ಪಾರ್ವತಮ್ಮ
ಪತಿಯಂತೆ ರಾಜಕೀಯದಿಂದ ಪಾರ್ವತಮ್ಮನವರು ಸಹ ದೂರವೇ ಉಳಿದಿದ್ದರು. ಆದರೂ ಅವರು ಕೇವಲ ಸಿನಿಮಾಗಳಿಗಷ್ಟೆ ತಮ್ಮನ್ನು ಸೀಮಿತಗೊಳಿಸಿಕೊಂಡಿರಲಿಲ್ಲ. ಕಾವೇರಿ ವಿವಾದ ಉಲ್ಬಣವಾದಾಗ ಬೀದಿಯಲ್ಲಿ ನಿಂತು ಪ್ರತಿಭಟನೆ ಮಾಡಿದ್ದರು. ಚಿತ್ರರಂಗದಲ್ಲಿ ಸಮಸ್ಯೆಗಳಾದಾಗ ಸ್ಪಂದಿಸಿ ವಿವಾದ ಬಗೆಹರಿಸುವ ಕಾರ್ಯವನ್ನೂ ಮಾಡುತ್ತಿದ್ದರು. ವಿಶೇಷವಾಗಿ ಯಾವುದೇ ನಟಿಯರಿಗೆ ಸಮಸ್ಯೆಯಾದಾಗ ಅವರ ಹೋಗುತ್ತಿದ್ದುದೇ ಪಾರ್ವತಮ್ಮನವರ ಬಳಿಯಂತೆ!

ಶಕ್ತಿಧಾಮದ ಸಂಸ್ಥಾಪಕಿ ಪಾರ್ವತಮ್ಮ
ಈಗ ರಾಜ್ಯವೇ ಹೆಮ್ಮೆಯಿಂದ ಗೌರವಿಸುವ ಶಕ್ತಿಧಾಮದ ಸಂಸ್ಥಾಪಕಿ ಪಾರ್ವತಮ್ಮ ರಾಜ್ಕುಮಾರ್. ಕಾರಿನಲ್ಲಿ ಬರುವಾಗ ರಸ್ತೆ ಬದಿಯಲ್ಲಿ ನಿಂತ ವೇಶ್ಯೆಯರ ಕಷ್ಟವನ್ನು ಕೇಳಿಸಿಕೊಂಡ ಪಾರ್ವತಮ್ಮನವರು ಅಂಥಹವರ ಬದುಕು ಸರಿಮಾಡಬೇಕು, ಅವರ ಮಕ್ಕಳ ಬದುಕು ಸರಿಮಾಡಬೇಕು ಎಂಬ ಮಾನವೀಯ ದೃಷ್ಟಿಯಿಂದ ಶಕ್ತಿಧಾಮ ಪ್ರಾರಂಭ ಮಾಡಿದರು. ಆ ಶಕ್ತಿಧಾಮ ಇಂದು ರಾಜ್ಯವೇ ಹೆಮ್ಮೆಪಡುವಂತೆ ಬೆಳೆದಿದೆ. ಶಿವರಾಜ್ ಕುಮಾರ್-ಗೀತ ಶಿವರಾಜ್ ಕುಮಾರ್ ಆ ಶಕ್ತಿಧಾಮವನ್ನು ಇನ್ನಷ್ಟು ಅದ್ಭುತವಾಗಿ ಬೆಳೆಸಿಕೊಂಡು ಹೋಗುತ್ತಿದ್ದಾರೆ.


Click it and Unblock the Notifications











