ಸಿನಿಪ್ರಿಯರಿಗೆ ತಿಳಿಯದ ಸೂಪರ್ ಹಿಟ್ ಟೈಟಲ್ ಸರದಾರ
ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕ ರಮೇಶ್ ಯಾದವ್ ದಶಕಗಳಿಂದ ಸಿನಿಮಾ ಮಾಡಿಕೊಂಡು ಬಂದಿದ್ದಾರೆ. 'ದಾಸ', 'ವಾಲಿ', 'ಗಟ್ಟಿಮೇಳ', 'ಕೃಷ್ಣ' ಹೀಗೆ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.
Recommended Video

ತಮ್ಮ ಸಿನಿಮಾಗಳ ಜೊತೆಗೆ ಎಷ್ಟೋ ಬೇರೆ ಬೇರೆ ಸಿನಿಮಾಗೆ ಅವರು ಟೈಟಲ್ ನೀಡಿದ್ದಾರೆ. ಇದು ಅನೇಕರಿಗೆ ತಿಳಿಯದ ವಿಚಾರವಾಗಿದೆ. ಅವರು ಟೈಟಲ್ ನೀಡಿದ ಎಷ್ಟೋ ಸಿನಿಮಾಗಳು ಸೂಪರ್ ಹಿಟ್ ಆಗಿದೆ. ವಿಶೇಷ ಅಂದರೆ, ವಿಷ್ಣುವರ್ಧನ್, ರವಿಚಂದ್ರನ್, ದರ್ಶನ್, ಸುದೀಪ್ ಹೀಗೆ ಸ್ಟಾರ್ ನಟರ ಸಿನಿಮಾಗಳಿಗೆ ಇವರು ಟೈಟಲ್ ನೀಡಿದ್ದು, ಆ ಸಿನಿಮಾಗಳೆಲ್ಲ ಸೂಪರ್ ಹಿಟ್ ಆಗಿದೆ.

'ಗಜ' ಸಿನಿಮಾದ ಟೈಟಲ್
'ಗಜ' ಚಿತ್ರದ ಟೈಟಲ್ ರಮೇಶ್ ಯಾದವ್ ಅವರದ್ದು. ಅವರ ನಿರ್ಮಾಣದ 'ದಾಸ' ಮತ್ತು 'ಡಾನ್' ಚಿತ್ರಗಳಿಗೆ ಮಾದೇಶ್ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದರು. ಮಾದೇಶ್ ಅವರ ಮೊದಲ ನಿರ್ದೇಶನದ ಸಿನಿಮಾಗಾಗಿ ರಮೇಶ್ 'ಗಜ' ಟೈಟಲ್ ನೀಡಿದರು. 'ಗಜ' ಟೈಟಲ್ ಗೆ ದರ್ಶನ್ ರಿಗೆ ಸೂಕ್ತ ಎಂದು ರಮೇಶ್ ಆ ಟೈಟಲ್ ಕೊಟ್ಟಿದ್ದಾರೆ.

'ಆಟ್ರೋಗ್ರಾಫ್' ಟೈಟಲ್ 'ಮೈ ಆಟೋಗ್ರಾಫ್' ಆಯ್ತು
ತಮಿಳಿನ 'ಆಟ್ರೋಗ್ರಾಫ್' ಸಿನಿಮಾ ನೋಡಿ ಅದನ್ನು ಕನ್ನಡಕ್ಕೆ ರಿಮೇಕ್ ಮಾಡಬೇಕು ಎಂದು 'ಆಟೋಗ್ರಾಫ್' ಟೈಟಲ್ ಅನ್ನು ರಮೇಶ್ ಯಾದವ್ ರಿಜಿಸ್ಟರ್ ಮಾಡಿಸಿದ್ದರು. ಆದರೆ, ಅಷ್ಟೊತ್ತಿಗೆ ಸುದೀಪ್ ರಿಮೇಕ್ ರೈಟ್ಸ್ ತೆಗೆದುಕೊಂಡಿದ್ದರಂತೆ. ನಂತರ ಸುದೀಪ್ ಮೊದಲ ನಿರ್ದೇಶನದ ಸಿನಿಮಾಗಾಗಿ ರಮೇಶ್ ತಮ್ಮ ಟೈಟಲ್ ನೀಡಿದರು.

'ಪಟೇಲ', 'ಚಂದು', 'ಸಾಹುಕಾರ'
ಇವುಗಳ ಜೊತೆಗೆ ಜಗ್ಗೇಶ್ ನಟನೆಯ 'ಪಟೇಲ', ಸುದೀಪ್ ಅಭಿನಯದ 'ಚಂದು', ವಿಷ್ಣುವರ್ಧನ್ ಹಾಗೂ ರವಿಚಂದ್ರನ್ ಅವರ 'ಸಾಹುಕಾರ' ಟೈಟಲ್ ಗಳು ಸಹ ರಮೇಶ್ ಯಾದವ್ ಅವರದ್ದೇ ಆಗಿದೆ. ತಾವು ಸಿನಿಮಾ ಮಾಡಬೇಕು ಎಂದು ಟೈಟಲ್ ರಿಜಿಸ್ಟರ್ ಮಾಡಿಸುವ ರಮೇಶ್ ಅಗತ್ಯವಿದ್ದಾಗ ಅದನ್ನು ಇತರರಿಗೆ ನೀಡಿದ್ದಾರೆ.

'ಬಾಸ್' ಟೈಟಲ್
ನಟ ದರ್ಶನ್ ಅಭಿನಯದ 'ಬಾಸ್' ಸಿನಿಮಾವನ್ನು ಕೂಡ ರಮೇಶ್ ಯಾದವ್ ನಿರ್ಮಾಣ ಮಾಡಿದ್ದಾರೆ. ಆ ಸಿನಿಮಾದ ಟೈಟಲ್ ಕೂಡ ಅವರೇ ಇಟ್ಟಿದ್ದಾರೆ. ಸಿನಿಮಾಗೆ ಏನು ಟೈಟಲ್ ಇಡೋಣ ಎಂದು ಯೋಚನೆ ಮಾಡುತ್ತಿದ್ದ ಅವರ ತಲೆಗೆ 'ಬಾಸ್' ಎಂಬ ಹೆಸರು ಹೊಳೆದಿದೆ. ದರ್ಶನ್ ಯಾವಾಗ ಸಿಕ್ಕರೂ, ರಮೇಶ್ 'ಬಾಸ್' ಎಂದೇ ಕರೆಯುತ್ತಿದ್ದರಂತೆ. ಮುಂದೆ ಅದೇ ಸಿನಿಮಾದ ಟೈಟಲ್ ಆಗಿದೆ.

ಪುನೀತ್ ಗೆ 'ಮೈತ್ರಿ' ಟೈಟಲ್
ಇನ್ನೂ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೂ ನಿರ್ಮಾಪಕ ರಮೇಶ್ ಯಾದವ್ ಒಂದು ಟೈಟಲ್ ಬಿಟ್ಟುಕೊಟ್ಟಿದ್ದಾರೆ. ಅದೇ 'ಮೈತ್ರಿ'. 2015 ರಲ್ಲಿ ಬಿಡುಗಡೆ ಆಗಿದ್ದ ಬಿ.ಎಂ.ಗಿರಿರಾಜ್ ನಿರ್ದೇಶನದ ಪುನೀತ್ ರಾಜ್ ಕುಮಾರ್ ನಟನೆಯ ಚಿತ್ರ 'ಮೈತ್ರಿ'. ಇದೇ ಚಿತ್ರದಲ್ಲಿ ಮೋಹನ್ ಲಾಲ್ ಕೂಡ ಅಭಿನಯಿಸಿದ್ದರು.

ಗಣೇಶ್ ಗೆ 'ಖುಷಿ ಖುಷಿಯಾಗಿ'
ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಅಮೂಲ್ಯ ಅಭಿನಯದ 'ಖುಷಿ ಖುಷಿಯಾಗಿ' ಚಿತ್ರಕ್ಕೂ ನಿರ್ಮಾಪಕ ರಮೇಶ್ ಯಾದವ್ ಟೈಟಲ್ ಬಿಟ್ಟುಕೊಟ್ಟಿದ್ದಾರೆ. 2015 ರಲ್ಲಿ ತೆರೆಗೆ ಬಂದ ಸಿನಿಮಾ 'ಖುಷಿ ಖುಷಿಯಾಗಿ'. ರೊಮ್ಯಾಂಟಿಕ್ ಮತ್ತು ಕಾಮಿಡಿ ಮಿಶ್ರಣ ಇರುವ ಈ ಚಿತ್ರಕ್ಕೆ ಯೋಗಿ.ಜಿ.ರಾಜ್ ಆಕ್ಷನ್ ಕಟ್ ಹೇಳಿದ್ದಾರೆ.


Click it and Unblock the Notifications











