"ಯಶ್ ಅವಕಾಶ ಕೇಳಿಕೊಂಡು ಬಂದಾಗ ನಾನು ರಿಜೆಕ್ಟ್ ಮಾಡಿದ್ದೆ": ಕುಮಾರ್ ಗೋವಿಂದ್
ತಿನ್ನುವ ಪ್ರತಿಯೊಂದು ಅಗಳಿನ ಮೇಲೆ ತಿನ್ನುವವರ ಹೆಸರು ಇರುತ್ತೆ ಅನ್ನುವ ಮಾತಿದೆ. ಯಾರಿಗೆ ಯಾವುದು ಸಿಗಬೇಕೋ ಅದು ಸಿಕ್ಕೇ ಸಿಗುತ್ತದೆ. ನಟ ಯಶ್ ಇವತ್ತು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಆದರೆ ಆರಂಭದಲ್ಲಿ ಒಂದೊಂದು ಅವಕಾಶಕ್ಕಾಗಿ ಯಶ್ ಗಾಂಧಿನಗರದ ಗಲ್ಲಿ ಗಲ್ಲಿ ಅಲೆದಿದ್ದರು.
ಹಾಸನದಲ್ಲಿ ಮಧ್ಯಮವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದ ಯಶ್, ಸೂಪರ್ ಸ್ಟಾರ್ ಆಗುತ್ತಾರೆ ಎಂದು ಯಾರು ಊಹಿಸಿರಲಿಲ್ಲ. ಚಿತ್ರರಂಗದಲ್ಲಿ ದೊಡ್ಡ ನಟನಾಗಿ ಕೋಟಿ ಕೋಟಿ ಸಂಭಾವನೆ ಎಣಿಸುತ್ತಾರೆ ಎಂದು ಅವರ ಕುಟುಂಬ ಸದಸ್ಯರು ಕೂಡ ಅಂದುಕೊಂಡಿರಲಿಲ್ಲ. ನವೀನ್ ಕುಮಾರ್ ಗೌಡ ತೆರೆಮೇಲೆ ಯಶ್ ಆಗಿ ಮ್ಯಾಜಿಕ್ ಮಾಡಿದ್ದು ಗೊತ್ತೇಯಿದೆ. ಇವತ್ತು ಇಡೀ ಭಾರತೀಯ ಚಿತ್ರರಂಗವೇ ರಾಕಿಂಗ್ ಸ್ಟಾರ್ನ ಕೊಂಡಾಡುತ್ತಿದೆ. ಆದರೆ ಅಂದು ಕಡೇ ಕ್ಷಣದಲ್ಲಿ ಒಂದು ಪುಟ್ಟ ಪಾತ್ರ ಯಶ್ ಕೈತಪ್ಪಿತ್ತು.
2010ರಲ್ಲಿ ನಟ, ನಿರ್ಮಾಪಕ ಕುಮಾರ್ ಗೋವಿಂದ್ 'ಸತ್ಯ' ಎನ್ನುವ ಸಿನಿಮಾ ನಿರ್ಮಿಸಿ, ನಿರ್ದೇಶಿಸಿ ನಟಿಸಿದ್ದರು. ಆ ಚಿತ್ರದ ಪಾತ್ರಗಳಿಗೆ ಕಲಾವಿದರ ಆಯ್ಕೆ ಮಾಡುವಾಗ ಯಶ್ ಕೂಡ ಹೋಗಿದ್ದರಂತೆ. ಆಗಿನ್ನು ಯಶ್ ಯಾವುದೇ ಚಿತ್ರದಲ್ಲಿ ನಟಿಸಿರಲಿಲ್ಲ. ಆದರೆ ಕುಮಾರ್ ಗೋವಿಂದ್ ಯಶ್ ಅವರನ್ನು ರಿಜೆಕ್ಟ್ ಮಾಡುವಂತಾಗಿತ್ತು. ಅದ್ಯಾಕೆ ಎನ್ನುವುದನ್ನು ಟಿವಿ9 ಸಂದರ್ಶನದಲ್ಲಿ ವಿವರಿಸಿದ್ದಾರೆ.

'ಸತ್ಯ' ಸಿನಿಮಾ ಶುರುವಾಗಿದ್ದೇಗೆ?
ಉಪೇಂದ್ರ ನಿರ್ದೇಶನದ 'ಶ್' ಸಿನಿಮಾ ಮೂಲಕ ಹೀರೊ ಆಗಿ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು ಕುಮಾರ್ ಗೋವಿಂದ್. ನಂತರ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ ಇವರು ಒಮ್ಮೆ ಕ್ರೇಜಿಸ್ಟಾರ್ ರವಿಚಂದ್ರನ್ ಹೇಳಿದ ಮಾತಿನಂತೆ ಸಿನಿಮಾ ನಿರ್ದೇಶನ ಮಾಡುವ ಸಾಹಸಕ್ಕೆ ಕೈ ಹಾಕಿದ್ದರು. ತಮ್ಮದೇ ನಿರ್ಮಾಣದಲ್ಲಿ 'ಸತ್ಯ' ಎನ್ನುವ ಸಿನಿಮಾ ನಿರ್ದೇಶಿಸಿ ನಟಿಸಿದ್ದರು.

ಪಾತ್ರ ಕೇಳಿ ಹೋಗಿದ್ದ ಯಶ್
"ಚಿತ್ರಕ್ಕೆ ನಾನೇ ಹೀರೊ, ನಾಯಕಿಯಾಗಿ ಹೊಸ ಹುಡುಗಿಯನ್ನು ಆಯ್ಕೆ ಮಾಡಿಕೊಂಡಿದ್ದೆ. ಕಾಲೇಜು ಎಪಿಸೋಡ್ನಲ್ಲಿ 4 ಜನ ಸ್ನೇಹಿತರು ಬೇಕಿತ್ತು. ಒಬ್ಬ ಹುಡುಗ ಸಿಕ್ಕಿರಲಿಲ್ಲ. ನಾನು ಅದಾಗಲೇ ಆಯ್ಕೆ ಮಾಡಿದ್ದ ಮೂವರಲ್ಲಿ ಶಂಕರ್ ಎನ್ನುವ ಹುಡುಗ ಇದ್ದ. ಆತ 2 ದಿನದ ನಂತರ ಯಶ್ನ ಕರ್ಕೊಂಡು ಬಂದಿದ್ದ. ಆದರೆ ಅದಕ್ಕಿಂತ ಒಂದು ದಿನ ಹಿಂದೆ ಒಬ್ಬ ಹುಡುಗ ಸಿಕ್ಕಿದ್ದ. ಅವನೇ ಸೂಕ್ತ ಎಂದು ಫೈನಲ್ ಮಾಡಿ ಅಡ್ವಾನ್ಸ್ ಕೂಡ ಕೊಟ್ಟುಬಿಟ್ಟಿದ್ದೆ."

ಯಶ್ ಅವರನ್ನು ರಿಜೆಕ್ಟ್ ಮಾಡಿದ್ದೆ
"ಮಾರನೇ ದಿನ ಶಂಕರ್, ಯಶ್ನ ಕರ್ಕೊಂಡು ಬಂದಿದ್ದ. ಸರ್ ನೀವು ಕೇಳಿದ್ರಲ್ಲ, ಇನ್ನೊಬ್ಬ ಹುಡುಗ ಬೇಕು ಅಂತ. ನೋಡಿ ನಮ್ಮ ಸ್ನೇಹಿತ ಯಶ್ ಅಂತ ಪರಿಚಯ ಮಾಡಿಕೊಟ್ಟಿದ್ದ. ನಂತರ ನಾನು ಅವರಿಗೆ ಹೇಳ್ದೆ. ನೋಡಿ ಈ ತರ ಮತ್ತೊಬ್ಬರನ್ನ ಸೆಲೆಕ್ಟ್ ಮಾಡಿಬಿಟ್ಟಿದ್ದೀನಿ, ಇನ್ಯಾವುದು ಪಾತ್ರ ಇಲ್ಲ ಅಂತ ಎಲ್ಲಾ ವಿವರಿಸಿದ್ದೆ. ಮುಂದಿನ ಚಿತ್ರದಲ್ಲಿ ಖಂಡಿತ ಅವಕಾಶ ಕೊಡುತ್ತೇನೆ" ಎಂದಿದ್ದಾಗಿ ಆ ಘಟನೆ ನೆನಪಿಸಿಕೊಂಡಿದ್ದಾರೆ.

ಯಶ್ ಬೆಳೆದ ರೀತಿ ಅದ್ಭುತ
"ಯಶ್ ಅವರನ್ನು ನೋಡಿ, ನೀವು ನೋಡಲು ಹೀರೊ ತರ ಇದ್ದೀರಾ, ನಿಮ್ಮನ್ನು ನೋಡಿದರೆ ಚಿರಂಜೀವಿ ಮಗನ ನೆನಪಾಗುತ್ತದೆ. ನಿಮ್ಮ ಹೇರ್ಸ್ಟೈಲ್ ಎಲ್ಲಾ ಆ ತರ ಇದೆ. ನಿಮಗೆ ಒಳ್ಳೆಯದಾಗುತ್ತೆ ಎಂದು ಹೇಳಿ ಕಾಫಿ ತರಿಸಿ ಕೊಟ್ಟಿದ್ದೆ. ನಂತರ ಸರಿ ಎಂದು ಹೊರಟರು. ಅಬ್ಬಬ್ಬಾ ಆಮೇಲೆ ಯಶ್ ಬೆಳೆದ ರೀತಿ ನಿಜಕ್ಕೂ ಅದ್ಭುತ" ಎಂದು ಕುಮಾರ್ ಗೋವಿಂದ್ ಹೇಳಿದ್ದಾರೆ.


Click it and Unblock the Notifications











