Don't Miss!
- News ಆರ್ಥಿಕ ಸಾಮರ್ಥ್ಯ ಆಧರಿಸಿ ಮಗು ಸುಪರ್ದಿ ನಿರ್ಧರಿಸಲಾಗುವುದಿಲ್ಲ-ಹೈಕೋರ್ಟ್ ಆದೇಶ
- Finance ನೆಸ್ಲೆಯ ಸೆರೆಲಾಕ್ ಶಿಶು ಹಾಲಿನಲ್ಲಿ ಸಕ್ಕರೆ ಅಂಶ ಪತ್ತೆ: ತನಿಖಾ ವರದಿಯಲ್ಲಿ ಬಹಿರಂಗ
- Technology ಬೋರಿಂಗ್ ಫೋನ್ಗಾಗಿ ಕೈಜೋಡಿಸಿದ HMD, ಹೈನೆಕೆನ್ ಮತ್ತು ಬೊಡೆಗಾ! ಯಾತಕ್ಕಾಗಿ ಈ ಫೋನ್?
- Lifestyle ಆಕಾಶದಲ್ಲಿ ಮತ್ತೆ ಕಾಣಿಸಿಕೊಂಡ ವಿಚಿತ್ರ ವಸ್ತು.! ಸ್ಪಷ್ಟನೆ ಬೇಕೆಂದ ನಿವಾಸಿಗಳು..!
- Automobiles Tata: ಮಧ್ಯಮ ವರ್ಗದವರಿಗೆ ಸಿಹಿಸುದ್ದಿ.. ಮುಂಬರಲಿರುವ ಟಾಟಾ ಕಾರುಗಳಿವು, ಒಂದಕ್ಕಿಂತ ಒಂದು ಭರ್ಜರಿಯಾಗಿವೆ!
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಗ್ಬಾಸ್ ನಲ್ಲಿ ಸ್ವಜನ ಪಕ್ಷಪಾತ: ಎಷ್ಟು ನಿಜ, ಎಷ್ಟು ಸುಳ್ಳು?
ಪ್ರತಿಭೆಗಿಂತಲೂ 'ತಮ್ಮವರು' ಎಂಬುದೇ ಮುಖ್ಯವಾಗುವ ಸ್ಥಿತಿಯನ್ನು 'ಸ್ವಜನಪಕ್ಷಪಾತ' ಎನ್ನಬಹುದು. ತಮಗೆ ಬೇಕಾದವರಿಗೆ ಅವಕಾಶ ಕೊಡುವ, ತಮ್ಮವರ ತಪ್ಪುಗಳನ್ನು ತಪ್ಪುಗಳೆಂದು ಪರಿಗಣಿಸಿದಿರುವ, ತಮ್ಮವರಿಗೆ ಪ್ರಶಸ್ತಿಗಳು ಸಿಗುವಂತೆ ನೋಡಿಕೊಳ್ಳುವ ಹೀಗೆ ಹಲವು ಆಯಾಮಗಳು ಈ ಸ್ವಜನ ಪಕ್ಷಪಾತಕ್ಕಿವೆ.
ಕನ್ನಡ ಪ್ರಖ್ಯಾತ ರಿಯಾಲಿಟಿ ಶೋ ಬಿಗ್ಬಾಸ್ ಮೇಲೆಯೂ ಹಲವಾರು ಬಾರಿ ಸ್ವಜನ ಪಕ್ಷಪಾತದ ಆರೋಪಗಳು ಬಂದಿವೆ. ಪ್ರತಿ ಬಾರಿ ಬಿಗ್ಬಾಸ್ ಶೋ ಪ್ರಾರಂಭವಾದಾಗಲೂ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬಹು ಜೋರಾದ ಚರ್ಚೆಗಳು ನಡೆಯುತ್ತವೆ. ಆದರೆ ಈ ಬಗ್ಗೆ ಆಯೋಜಕರಾಗಲಿ, ಶೋ ನಿರೂಪಕರಾಗಲಿ ಒಂದಕ್ಷರವೂ ಉಲಿಯದೇ ಶೋ ಜೊತೆಗೆ ಚರ್ಚೆಯೂ ಮುಗಿದು ಹೋಗುತ್ತದೆ. ಮತ್ತೆ ಮುಂದಿನ ಸೀಸನ್ ಪ್ರಾರಂಭವಾದಾಗ ಚರ್ಚೆ ಮತ್ತೆ ತಲೆ ಎತ್ತುತ್ತದೆ.
'ಬಿಗ್ ಬಾಸ್' ಕನ್ನಡ ರನ್ನರ್ ಅಪ್ ಗಳು ನೆನಪಿದ್ದಾರಾ? ಈಗೇನು ಮಾಡ್ತಿದ್ದಾರೆ? ಇಲ್ಲಿದೆ ಮಾಹಿತಿ
ಕನ್ನಡ ಬಿಗ್ಬಾಸ್ ನ ಮೊದಲ ಸೀಸನ್ನಿಂದಲೂ ಸ್ವಜನ ಪಕ್ಷಪಾತದ ಆರೋಪಗಳು ಕೇಳುತ್ತಾ ಬಂದಿವೆ. ಮೊದಲ ಸೀಸನ್, ಕನ್ನಡ ಬಿಗ್ಬಾಸ್ ನ ಈವರೆಗಿನ ಉತ್ತಮ ಸೀಸನ್ ಎನ್ನಲಾಗುತ್ತದೆ. ಬಹು ಪ್ರತಿಭಾವಂತ ಸ್ಪರ್ಧಿಗಳು ಆ ಸೀಸನ್ನಲ್ಲಿದ್ದರು, ಉತ್ತಮ ಮನರಂಜನೆ ಒದಗಿಸಿದರು. ಆ ಸೀಸನ್ನ ಅತಿ ಮುಖ್ಯ ಆಕರ್ಷಣೆ ಆಗಿದ್ದದ್ದು ಅರುಣ್ ಸಾಗರ್. ಆದರೆ ಕೊನೆಯ ದಿನ ಸುದೀಪ್ ಕೈ ಹಿಡಿದು ಎತ್ತಿದ್ದು ಮಾತ್ರ ವಿಜಯ್ ರಾಘವೇಂದ್ರ ಅವರನ್ನು. ಹಾಗೆಂದು ವಿಜಯ್ ರಾಘವೇಂದ್ರ ಕೆಟ್ಟ ಸ್ಪರ್ಧಿ ಎಂದಲ್ಲ. ಅವರು ಬಹಳ ಸಂಯಮದಿಂದ, ನ್ಯಾಯಪರವಾಗಿ ಆಟ ಆಡಿದರು. ಆದರೆ ನಿಜವಾದ ಮನರಂಜನೆ ಒದಗಿಸಿದ್ದು ಅರುಣ್ ಸಾಗರ್.
ಅಕುಲ್ ಬಾಲಾಜಿ-ಸೃಜನ್ ಲೋಕೇಶ್
ಬಿಗ್ಬಾಸ್ ಸೀಸನ್ 2 ನಲ್ಲಿ ಅಕುಲ್ ಬಾಲಾಜಿ ವಿಜೇತರಾದಾಗಲೂ ಸ್ವಜನ ಪಕ್ಷಪಾತದ ಚರ್ಚೆ ಜೋರಾಯಿತು. ಗೆಲ್ಲಬೇಕಾಗಿದ್ದು ಸೃಜನ್ ಲೋಕೇಶ್ ಎಂದು ಬಹಳ ಜನ ವಾದಿಸಿದರು. 'ಅಕುಲ್ ಒಳ್ಳೆಯ ಸ್ಪರ್ಧಿ ಆಗಿರಲಿಲ್ಲ. ಆಟದ ವೇಳೆ ಸಹ ಸ್ಪರ್ಧಿಯೊಬ್ಬರ ಮೇಲೆ ಹಲ್ಲೆ ಮಾಡಿದ್ದರೂ ಅವರ ಮೇಲೆ ಕ್ರಮ ಕೈಗೊಳ್ಳಲಿಲ್ಲ' ಇನ್ನೂ ಹಲವು ಆರೋಪಗಳು ಅಕುಲ್ ಮೇಲೆ ಕೇಳಿಬಂದವು. ಆದರೆ ಅಂತಿಮವಾಗಿ ಗೆದ್ದಿದ್ದು ಅವರೇ. ಇಂಥಹಾ ಸಂಗತಿಗಳಾದಾಗ 'ಸ್ವಜನ ಪಕ್ಷಪಾತ'ದ ಗುಮಾನಿ ಹೆಚ್ಚಾಗದೇ ಇರಲು ಅಸಾಧ್ಯ.
ವಿಡಿಯೋ ವೈರಲ್ ಆಗಿದ್ದು ನೆನಪಿದೆಯೇ?
ಬಹುತೇಕ ಪ್ರತಿ ಬಿಗ್ಬಾಸ್ ಸೀಸನ್ನಲ್ಲೂ ವಿಜೇತರ ವಿಷಯವಾಗಿ ಸ್ವಜನ ಪಕ್ಷಪಾತದ ಆರೋಪ ಕೇಳಿಬರುತ್ತಲೇ ಇರುತ್ತದೆ. ಆದರೆ ಇದರ ಹೊರತಾಗಿ, ಆಟದ ವಿಷಯದಲ್ಲಿ, ಕೆಲವು ಸ್ಪರ್ಧಿಗಳನ್ನು ವಿಶೇಷವಾಗಿ 'ಟ್ರೀಟ್' ಮಾಡುವ ವಿಷಯದಲ್ಲಿಯೂ ಬಿಗ್ಬಾಸ್ ಟೀಕೆಗೆ ಗುರಿಯಾಗಿದೆ. ಪ್ರಭಾವಿ ರಾಜಕಾರಣಿ, ನಟಿ ಆಗಿದ್ದವರು ಬಿಗ್ಬಾಸ್ ಮನೆಗೆ ಹೋಗಿದ್ದಾಗ, ಬಿಗ್ಬಾಸ್ ಮನೆಯ ಮುಖ್ಯ ಗೇಟಿನ ಹೊರಗೆ ಹೋಗಿ ಯಾರೊಂದಿಗೊ ಮಾತನಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿತ್ತು. ಈ ಘಟನೆ ಬಗ್ಗೆ ಹೇಳಿಕೆ ನೀಡುವ ಗೋಜಿಗೂ ಬಿಗ್ಬಾಸ್ ಆಯೋಜಕರು ಹೋಗಲಿಲ್ಲ.
''ದೊಡ್ಡ ಸೆಲೆಬ್ರಿಟಿ ಆಗ್ತೀನಿ, ಸಿನಿಮಾ ಆಫರ್ ಬರುತ್ತೆ ಅಂತ ಬಿಗ್ಬಾಸ್ಗೆ ಹೋಗಬೇಡಿ''
ವೈಲ್ಡ್ ಕಾರ್ಡ್ ಎಂಟ್ರಿಗೆ ಮಾನದಂಡವೇನು?
ವೈಲ್ಡ್ ಕಾರ್ಡ್ ಎಂಟ್ರಿಗಳು ಸಹ ಬಲು ವಿಚಿತ್ರ. ಈಗಾಗಲೇ ಶೋ ನಿಂದ ಹೊರಬಿದ್ದ ಸ್ಪರ್ಧಾಳುಗಳನ್ನು ಮರಳಿ ಮನೆಯೊಳಕ್ಕೆ ಕರೆತರಲಾಗುತ್ತದೆ. ಇದಕ್ಕೆ ಸ್ಪಷ್ಟ ಕಾರಣವೇ ಇಲ್ಲ. ಹೀಗೆ ಮರಳಿ ಕರೆತರಲು ಆ ಸ್ಪರ್ಧಿಯ ಮೇಲೆ ಆಯೋಜಕರಿಗಿರುವ 'ಸಾಫ್ಟ್ ಕಾರ್ನರ್' ಕಾರಣ ಎಂಬ ಆರೋಪ ಆಗಾಗ್ಗೆ ಕೇಳಿ ಬಂದಿದೆ. ಚೆನ್ನಾಗಿ ಆಡುತ್ತಿದ್ದ, ಜನಮನ್ನಣೆ ಗಳಿಸಿದ ಸ್ಪರ್ಧಾಳುಗಳು ಹಠಾತ್ತನೆ ಎಲಿಮಿನೇಟ್ ಸಹ ಆಗಿದ್ದಾರೆ.
ವೋಟಿಂಗ್ ಪದ್ಧತಿಯಲ್ಲಿ ಪಾರದರ್ಶಕತೆ ಕೊರತೆ
ಬಿಗ್ಬಾಸ್ ನ ಮತದಾನ ಅಥವಾ ವೋಟಿಂಗ್ ಪದ್ಧತಿಯ ಬಗ್ಗೆ ಗುಮಾನಿ ಮೊದಲಿನಿಂದಲೂ ಇದೆ. ಯಾವ ಸ್ಪರ್ಧಿಗೆ ಎಷ್ಟು ಮತ ಬಂದಿದೆ ಎಂದು ಶೋ ನಲ್ಲಿ ಹೇಳಲಾಗುತ್ತದೆ. ಆದರೆ ಅದು ಎಲ್ಲಿಂದ ಬಂದಿದೆ, ಇಷ್ಟೇ ಮತ ಗಳಿಸಿದ್ದಾರೆ ಎಂಬುದಕ್ಕೆ ಸಾಕ್ಷ್ಯವನ್ನು ಸ್ಪರ್ಧಿಗಳಿಗೆ ಅಥವಾ ವೀಕ್ಷಕರಿಗೆ ಒದಗಿಸಲಾಗುವುದಿಲ್ಲ. ಆಧುನಿಕ ತಂತ್ರಜ್ಞಾನ ಯುಗದಲ್ಲಿ ಯಾವ ಜಿಲ್ಲೆಯಿಂದ ಎಷ್ಟು ಮತ ಬಂದಿದೆ, ಯಾವ ಸಂಖ್ಯೆಯಿಂದ ಎಷ್ಟು ಮತ ಬಂದಿದೆ ಎಂಬುದನ್ನು ಒಟ್ಟು ಮಾಡಿ, ಮೊಬೈಲ್ ಸಂಖ್ಯೆಯ ಕೊನೆಯ ಮೂರು ಸಂಖ್ಯೆಗಳನ್ನಾದರೂ ಪ್ರದರ್ಶಿಸುವುದು ಕಷ್ಟಕರವಾದ ಕೆಲಸವೇನಲ್ಲ. ಕೆಲವು ಬಾರಿ ಸ್ಪರ್ಧಿಗಳ ಪರವಾಗಿ ಅಭಿಮಾನಿಗಳು ಹಣ ತೆತ್ತು ವೋಟಿಂಗ್ ಮಾಡಿಸಿದ ಸಂದರ್ಭಗಳೂ ಇವೆ.
ಸಲ್ಮಾನ್ ಖಾನ್ ಗೆ ಪಕ್ಷಪಾತ ಎಂಬುದು ಮಾಮೂಲು
ಹಿಂದಿ ಬಿಗ್ಬಾಸ್ ನಲ್ಲಿ ಸ್ವಜನ ಪಕ್ಷಪಾತ ಎಂಬುದು ಢಾಳಾಗಿ ಕಾಣುತ್ತದೆ. ನಿರೂಪಕ ಸಲ್ಮಾನ್ ಖಾನ್ ಸ್ವತಃ ಅಂಗಿ ತೋಳು ಮಡಚಿ ಸ್ಪರ್ಧಿಗಳಿಗೆ ಧಮ್ಕಿ ಹಾಕುತ್ತಾರೆ. 'ಹೊರಗೆ ಬಾ ನೋಡಿಕೊಳ್ಳುತ್ತೇನೆ' ಎನ್ನುತ್ತಾರೆ. ಕೆಲವರ ತಪ್ಪನ್ನು ಅಲಕ್ಷಿಸುವುದು, ಕೆಲವರ ಸಣ್ಣ ಮಾತಿಗೂ ಅರಚಾಡುವುದು ಸಲ್ಮಾನ್ ಖಾನ್ ಗೆ ಸಾಮಾನ್ಯ. ಕನ್ನಡದ ಮಟ್ಟಿಗೆ ಸುದೀಪ್ ಈ ಕೆಲಸವನ್ನು ಈವರೆಗೆ ಮಾಡಿಲ್ಲ. ಗಾಂಭೀರ್ಯತೆ ಇಟ್ಟುಕೊಂಡೇ ಕಾರ್ಯಕ್ರಮ ನಿರೂಪಿಸುತ್ತಾರೆ. ಈ ವಿಷಯಕ್ಕೆ ಸುದೀಪ್ ಅಭಿನಂದನಾರ್ಹರು.
'ಸ್ವಜನಪಕ್ಷಪಾತವಿಲ್ಲ' ಎಂದು ಗಟ್ಟಿದನಿಯಲ್ಲಿ ಹೇಳಲಾಗದು
ಒಟ್ಟಿನಲ್ಲಿ ಹೇಳುವುದಾದರೆ, 'ಬಿಗ್ಬಾಸ್ ನಲ್ಲಿ ಸ್ವಜನ ಪಕ್ಷಪಾತ ಇಲ್ಲ' ಎಂದು ಗಟ್ಟಿದನಿಯಲ್ಲಿ ಹೇಳಲು ಸಾಧ್ಯವಿಲ್ಲ ಅಥವಾ ಈ ಹಿಂದೆ ನಡೆದ ಕೆಲವು ಘಟನೆಗಳು ಹೀಗೆ ಹೇಳಲು ಅನುವು ಮಾಡಿಕೊಡುವುದಿಲ್ಲ. 'ಬಿಗ್ಬಾಸ್ ನಲ್ಲಿ ಸ್ವಜನ ಪಕ್ಷಪಾತ ಇದೆ' ಎಂದು ಆರೋಪಗಳಿಗೆ ಉತ್ತರಿಸುವ ಕಾರ್ಯ ಮಾಡಬೇಕಾದ ಆಯೋಜಕರು ಮೌನವಾಗಿರುವುದು ಸಹ ಆರೋಪಗಳಿಗೆ ಇನ್ನಷ್ಟು ತೀಕ್ಷಣತೆ ಒದಗಿಸಿದೆ.