Don't Miss!
- News ಹುಬ್ಬಳ್ಳಿ ನೇಹಾ ಕೊಲೆ ಪ್ರಕರಣ: ಸಿದ್ದರಾಮಯ್ಯ ಸರ್ಕಾರವೇ ನೇರ ಹೊಣೆ ಎಂದ ಬಿಜೆಪಿ ಶಾಸಕ
- Lifestyle ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
- Sports LSG vs CSK IPL 2024: ಮತ್ತೊಮ್ಮೆ ಧೋನಿ, ಜಡೇಜಾ ಅಬ್ಬರ; ಲಕ್ನೋ ತಂಡಕ್ಕೆ ಸವಾಲಿನ ಗುರಿ ನೀಡಿದ ಸಿಎಸ್ಕೆ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇಂದು ಕನ್ನಡ ಚಿತ್ರರಂಗದ ಜನ್ಮದಿನ, ನೀವೂ ಹೇಳಿ ಶುಭಾಶಯ!
1934! ಇದು ಕನ್ನಡ ಚಿತ್ರರಂಗದ ಇತಿಹಾಸಕ್ಕೆ ಮುನ್ನುಡಿ ಬರೆದ ವರ್ಷ. ಅಲ್ಲಿಂದ ಇಲ್ಲಿಯವರೆಗೆ ಅದೆಷ್ಟೋ ಏಳು ಬೀಳುಗಳ ನಡುವೆ ಕನ್ನಡ ಚಿತ್ರರಂಗ ಸಾಕಷ್ಟು ಬೆಳೆದಿದೆ, ಬೆಳೆಯುತ್ತಲೇ ಇದೆ. ಮಾರ್ಚ್ 3 ಕನ್ನಡ ಚಿತ್ರರಂಗ ನೆನಪಿಡಬೇಕಾದ ದಿನಾಂಕ. ಏಕೆಂದರೆ ಕನ್ನಡ ಚಿತ್ರರಂಗ ತನ್ನ ಅಸ್ತಿತ್ವವನ್ನು ಕಂಡುಕೊಂಡು ಇಂದಿಗೆ 87 ವರ್ಷ.
1934ರ ಮಾರ್ಚ್ 3ರಂದು ಕನ್ನಡದ ಮೊಟ್ಟಮೊದಲ ವಾಕ್ಚಿತ್ರ 'ಸತಿ ಸುಲೋಚನ' ಬಿಡುಗಡೆಯಾಗಿತ್ತು. ಈ 87 ವರ್ಷಗಳಲ್ಲಿ ಕನ್ನಡದಲ್ಲಿ ಸುಮಾರು 4,500 ಸಿನಿಮಾಗಳು ಬಿಡುಗಡೆಯಾಗಿವೆ. ಕೆಲವು ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿವೆ. ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿವೆ.
ಮೂರ್ಛೆ ಹೋಗಿದ್ದ ಮಹಿಳೆಯರು: ಕನ್ನಡದ ಮೊದಲ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಇದು.!
ಆದರೆ ನೆರೆಯ ಚಿತ್ರಗಳಿಗೆ ಹೋಲಿಸಿದಾಗ ಕನ್ನಡ ಚಿತ್ರರಂಗದ ಒಟ್ಟಾರೆ ಬೆಳವಣಿಗೆ ಅಷ್ಟು ಆಶಾದಾಯವಾಗಿಲ್ಲ ಎಂಬ ಬೇಸರವೂ ಕಾಡದೆ ಇರದು. ಮುಖ್ಯವಾಗಿ ಚಿತ್ರರಂಗ ಈಗ ಸ್ಟಾರ್ ಆಧಾರಿತವಾಗಿದೆ. ಚಿತ್ರದ ವಸ್ತು, ಕಥೆಗಿಂಗಲೂ ನಟರ ವರ್ಚಸ್ಸನ್ನೇ ಪ್ರಧಾನವಾಗಿ ಬಿಂಬಿಸುವ ಚಿತ್ರಗಳಾಚೆ ಹೊಸ ಬಗೆಯ ಪ್ರಯೋಗಾತ್ಮಕ ಚಿತ್ರಗಳು ಭರವಸೆ ಮೂಡಿಸುತ್ತಿವೆ. ಈ 87 ವರ್ಷದ ಪ್ರಯಾಣ ಹೇಗಿತ್ತು? ಒಂದು ಸಣ್ಣ ನೋಟ.
ಕನ್ನಡ ಚಿತ್ರ ಹುಟ್ಟಿದ್ದು ಹೇಗೆ?
ಕನ್ನಡದಲ್ಲಿ ಚಿತ್ರಗಳನ್ನು ತಯಾರಿಸುವ ಪ್ರಯತ್ನಗಳು ಹಿಂದೆಯೂ ನಡೆದಿದ್ದರೂ, ಅದು ಫಲಕೊಟ್ಟು ಚಿತ್ರವೊಂದು ಸಿಕ್ಕಿದ್ದು 'ಸತಿ ಸುಲೋಚನ'ದ ಮೂಲಕ. ತಮಿಳು, ತಮಿಳು ಹಾಗೂ ಹಿಂದಿಯಲ್ಲಿ ನಟಿಸಿ ಆಗಲೇ ಹೆಸರು ಮಾಡಿದ್ದವರು ಆರ್. ನಾಗೇಂದ್ರರಾವ್. ಕನ್ನಡ ಚಿತ್ರರಂಗದ ಭೀಷ್ಮ ಎಂದೇ ಹೆಸರಾದ ಅವರು ಕನ್ನಡದಲ್ಲಿ ಸಿನಿಮಾ ಮಾಡುವ ಆಸೆಯನ್ನು ಹೊಂದಿದ್ದರು.
ಕನ್ನಡ ಸಿನಿಮಾಕ್ಕಾಗಿ ಬಂಡವಾಳ ಹೂಡಿದವರು...
ಆ ಕಾಲದಲ್ಲಿಯೇ ಚಿಕ್ಕಪೇಟೆಯಲ್ಲಿ ನೆಲೆಯೂರಿ ವ್ಯಾಪಾರದಲ್ಲಿ ಹೆಸರು ಮಾಡಿದ್ದ ರಾಜಸ್ಥಾನ ಮೂಲದ ಷಾ ಚಮನ್ಮಲ್ ಡುಂಗಾಜಿ ಮತ್ತು ಷಾ ಭೂರ್ಮಲ್ ಚಮನ್ಮಲ್ ಡುಂಗಾಜಿ ಕನ್ನಡಕ್ಕಾಗಿ ಏನನ್ನಾದರೂ ಮಾಡಬೇಕು ಎಂಬ ಬಯಕೆ ಹೊಂದಿದ್ದರು. ಅವರಿಗೆ ಯಾರೋ ಸಲಹೆ ನೀಡಿದ್ದು, ಕನ್ನಡದಲ್ಲಿ ಸಿನಿಮಾ ನಿರ್ಮಿಸಿ ಎಂದು. ಅತ್ತ ಸಿನಿಮಾ ಮಾಡುವ ಆಸೆ ಹೊಂದಿದ್ದ ನಾಗೇಂದ್ರರಾವ್ ಮತ್ತು ಡುಂಗಾಜಿಯವರ ಭೇಟಿ ಕನ್ನಡ ಚಿತ್ರರಂದ ಪಾಲಿಗೆ ದೊಡ್ಡ ತಿರುವು.
ಪರಿಸ್ಥಿತಿ ಬದಲಾಗಿಲ್ಲ
ಗುಬ್ಬಿ ಕಂಪೆನಿಯಲ್ಲಿದ್ದ ಸುಬ್ಬಯ್ಯ ನಾಯ್ಡು, ಆರ್. ನಾಗೇಂದ್ರರಾವ್, ತ್ರಿಪುರಾಂಬ, ಲಕ್ಷ್ಮಿಬಾಯಿ ಮುಂತಾದವರು ಇದರಲ್ಲಿ ನಟಿಸಿದ್ದರು. 1933ರ ಡಿಸೆಂಬರ್ನಲ್ಲಿ ಆರಂಭವಾದ ಚಿತ್ರ ಎರಡು ತಿಂಗಳಲ್ಲಿ ಮುಕ್ತಾಯಗೊಂಡಿತ್ತು. ಆಗ ನಿರ್ಮಾಪಕರು ಸೀಮಿತ ಬಜೆಟ್ ಹೊಂದಿದ್ದರು. ಇದರಿಂದ ಸಿನಿಮಾಕ್ಕಾಗಿ ದುಡಿದ ಕಲಾವಿದರು ಮತ್ತು ತಾಂತ್ರಿಕ ವರ್ಗದವರಿಗೆ ಸಂಭಾವನೆ ಸಿಗದೆ ಪ್ರತಿಭಟನೆ ನಡೆಸಿದ್ದರು. ಬಳಿಕ ಸಂಧಾನ ಮಾಡಿ ಸಂಭಾವನೆ ನೀಡಲಾಗಿತ್ತು. ಚಿತ್ರರಂಗ 87 ವರ್ಷಗಳಲ್ಲಿ ಸಾಕಷ್ಟು ಬದಲಾಗಿದ್ದರೂ, ಸಂಭಾವನೆಯ ವಿಚಾರದಲ್ಲಿ ಹಾಗೂ ಚಿತ್ರ ಬಳಗವನ್ನು ನಡೆಸಿಕೊಳ್ಳುವ ವಿಚಾರದಲ್ಲಿ ಬದಲಾಗಿಲ್ಲ ಎನ್ನುವುದು ದುರಂತ.
ಕನ್ನಡದ ಮೊದಲ ಚಿತ್ರ
ಭಕ್ತ ಧ್ರುವ ಚಿತ್ರೀಕರಣ ಆರಂಭವಾದ ಕನ್ನಡದ ಮೊದಲ ಸಿನಿಮಾವಾದರೂ, ಸತಿ ಸುಲೋಚನ ಸಿನಿಮಾ 1934ರ ಮಾರ್ಚ್ 3ರಂದು ಬಿಡುಗಡೆಯಾಗಿತ್ತು. ಹೀಗಾಗಿ ಆ ದಿನವನ್ನು ಚಿತ್ರರಂಗ ಜನ್ಮತಾಳಿದ ದಿನ ಎಂದೇ ಗುರುತಿಸಲಾಗಿದೆ.
ನಟರು ಹಾಕಿದ ಪರಂಪರೆ
ಡಾ. ರಾಜ್ಕುಮಾರ್, ಉದಯ್ ಕುಮಾರ್, ಕಲ್ಯಾಣ್ ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ನಾಗ್, ಮುಂತಾದ ತಾರಾ ನಟರು ಹಾಕಿಕೊಟ್ಟ ಭದ್ರ ಬುನಾದಿ ಮೇಲೆ ರವಿಚಂದ್ರನ್, ಶಿವರಾಜ್ ಕುಮಾರ್, ದರ್ಶನ್, ಸುದೀಪ್, ಪುನೀತ್ ರಾಜ್ಕುಮಾರ್, ಜಗ್ಗೇಶ್, ಉಪೇಂದ್ರ, ಯಶ್, ರಮೇಶ್ ಅರವಿಂದ್ ಮುಂತಾದ ನಟರು ತಮ್ಮ ಗುರುತು ಮೂಡಿಸಿದ್ದಾರೆ. ಇತರೆ ಚಿತ್ರರಂಗಗಳಂತೆ ಇನ್ನೂ ಕನ್ನಡ ನಟಿಯರ ವರ್ಚಸ್ಸಿಗೆ ತೆರೆದುಕೊಂಡಿಲ್ಲ.
ಕನಸು ನೂರು-ಸಾಧನೆ ಮೂರು
ಸಾಕಷ್ಟು ಕೊರಗು-ಕೊರತೆಗಳ ನಡುವೆಯೇ ಚಿತ್ರೋದ್ಯಮ ತನ್ನದೇ ದಾರಿಯಲ್ಲಿ ಸಾಗುತ್ತಿದೆ. ರಾಷ್ಟ್ರೀಯ ಮಟ್ಟದಲ್ಲಿ ಕುತೂಹಲ ಹಾಗೂ ಬೇಡಿಕೆ ಸೃಷ್ಟಿಸುವ ತಾಕತ್ತು ಪ್ರದರ್ಶಿಸಿದೆ. ವಾರವೊಂದಕ್ಕೆ ಐದು-ಆರು ಸಿನಿಮಾಗಳನ್ನು ಬಿಡುಗಡೆ ಮಾಡುವಷ್ಟು ಶ್ರೀಮಂತವಾಗಿದೆ. ಆದರೆ ಪ್ರೇಕ್ಷಕರ ಬಲ ಸಿಗದೆ ನಲುಗುತ್ತಿವೆ. ಅದಕ್ಕೆ ಪರಭಾಷಾ ಚಿತ್ರಗಳ ಹೊಡೆತವೂ ಇದೆ. ಇನ್ನೊಂದೆಡೆ ಕಲಾತ್ಮಕ ಚಿತ್ರಗಳು, ವ್ಯಾಪಾರಿ ಚಿತ್ರದ ಸ್ಪರ್ಶದೊಂದಿಗೆ ವಿಭಿನ್ನ ಕಥಾಹಂದರ ಮತ್ತು ನಿರೂಪಣೆಯ ಪ್ರಯೋಗಾತ್ಮಕ ಚಿತ್ರಗಳು 'ತಾರಾ' ನಟರ ಪ್ರೋತ್ಸಾಹ ಬೇಡುವಂತಾಗಿವೆ.
ಈ ಎಲ್ಲ ಹೆಮ್ಮೆ, ಬೇಸರಗಳ ನಡುವೆ ಒಂದಷ್ಟು ನಿರೀಕ್ಷೆಯೊಂದಿಗೆ ಮತ್ತೊಮ್ಮೆ ನಮ್ಮ ಚಿತ್ರರಂಗಕ್ಕೆ ಜನ್ಮದಿನದ ಶುಭಾಶಯ ತಿಳಿಸಿ.