ಅಪ್ಪು ಸರ್ ಕೊನೆ ಸಿನಿಮಾನೇ ನನ್ನ ಮೊದಲ ಸಿನಿಮಾ: ಅವರು ಅಮರ ಎಂದ ಲೇಡಿ ಬಾಡಿ ಬಿಲ್ಡರ್ ಮಮತಾ
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ 'ಯುವರತ್ನ' ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದ ವೇಳೆ ಒಂದು ಫೋಟೊ ವೈರಲ್ ಆಗಿತ್ತು. ಅಪ್ಪು ಜೊತೆ ಲೇಡಿ ಬಾಡಿ ಬಿಲ್ಡರ್ ಒಬ್ಬರು ನಿಂತಿದ್ದ ಫೋಟೊ ಪುನೀತ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು. ಅವರು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವ ಬಾಡಿ ಬಿಲ್ಡರ್ ಆಗಿದ್ದು, ಅಪ್ಪು ಜೊತೆ ನಟಿಸುತ್ತಾರಾ? ಅನ್ನುವ ಅನುಮಾನ ಕಾಡಿತ್ತು. ಅದರಂತೆ 'ಯುವರತ್ನ' ಚಿತ್ರದಲ್ಲಿ ಚಿಕ್ಕದೊಂದು ಆಕ್ಷನ್ ಸೀಕ್ವೆನ್ಸ್ನಲ್ಲಿ ಪುನೀತ್ ಜೊತೆ ಫೈಟ್ ಮಾಡಿದ್ದರು. ಅದೇ ಲೇಡಿ ಬಾಡಿಬಿಲ್ಡರ್ ಈಗ ಪುನೀತ್ ರಾಜ್ಕುಮಾರ್ ಅವರನ್ನು ನೆನಪಿಸಿಕೊಂಡಿದ್ದಾರೆ.
ಮೂರು ದಿನ ಯುವರತ್ನ ಸಿನಿಮಾದ ಶೂಟಿಂಗ್ನಲ್ಲಿ ಬಾಡಿ ಬಿಲ್ಡರ್ ಮಮತಾ ಭಾಗಿಯಾಗಿದ್ದರು. ಅಪ್ಪು ಜೊತೆ ಆಕ್ಷನ್ ಸೀನ್ನಲ್ಲಿ ಫೈಟ್ ಮಾಡಿದ್ದರು. ಆ ಮೂರು ಅವರೊಂದಿಗೆ ಕಳೆದ ನೆನಪುಗಳನ್ನು, ಅವರ ಸಹಾಯ ಮನೋಭಾವ, ಅವರ ಗುಣಗಳನ್ನ ಬಗ್ಗೆ ಖಾಸಗಿ ಮಾಧ್ಯಮವೊಂದರಲ್ಲಿ ಮನಬಿಚ್ಚಿ ಮಾತಾಡಿದ್ದಾರೆ. ಸಿನಿಮಾ ಶೂಟಿಂಗ್ ವೇಳೆ ಅವರು ಉಪಚರಿಸಿದ ರೀತಿಯನ್ನು ಸ್ಮರಿಸಿದ್ದಾರೆ.

ಯುವರತ್ನ ಸಿನಿಮಾವೇ ನನ್ನ ಮೊದಲ ಸಿನಿಮಾ
ಲೇಡಿ ಬಾಡಿ ಬಿಲ್ಡರ್ ಮಮತಾರನ್ನು ನೋಡಿ ಪುನೀತ್ ರಾಜ್ಕುಮಾರ್ ಶಾಕ್ ಆಗಿದ್ದರು. ಮಹಿಳೆ ಹೇಗೆ ಬಾಡಿ ಬಿಲ್ಡ್ ಮಾಡಿದ್ದಾರೆ? ಮದುವೆ ಆಗಿ ಮಕ್ಕಳಿದ್ದರೂ ಬಾಡಿ ಬಿಲ್ಡ್ ಮಾಡಿದ್ದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದರು. ನಟನಿಗಿಂತ ಅವರೊಬ್ಬ ಉತ್ತಮ ವ್ಯಕ್ತಿ ಎಂದು ಮನಬಿಚ್ಚಿ ಮಾತಾಡಿದ್ದಾರೆ. " ನನ್ನ ಮೊದಲ ಸಿನಿಮಾನೇ ಯುವರತ್ನ. ಅದು ನನಗೆ ಸಿಕ್ಕ ಆಶೀರ್ವಾದ. ಅವರ ಕೊನೆ ಸಿನಿಮಾ ನನಗೆ ಮೊದಲ ಸಿನಿಮಾ. ಮೊದಲು ಅವರನ್ನು ಭೇಟಿ ಮಾಡಲು ಹೋದಾಗ, ಅವರು ಶಾಕ್ ಆಗಿದ್ದರು. ಹೇಗೆ ಬಾಡಿ ಬಿಲ್ಡ್ ಮಾಡುತ್ತೀರಾ ಅಂತ ಕೇಳಿದ್ದರು. ಅವರನ್ನು ಒಬ್ಬ ನಟನಾಗಿ ನೋಡುವುದಕ್ಕಿಂತ ಒಬ್ಬ ವ್ಯಕ್ತಿಯಾಗಿ ಇಷ್ಟ ಪಡುತ್ತೇನೆ. ನಾನು ಒಂದೇ ದಿನ ಸೆಟ್ಟಿಗೆ ಹೋಗಿತ್ತು. ಆರು ತಿಂಗಳಾದ ಮೇಲೆ ಅವರು ಹೇ ಮಮತಾ ಹೇಗಿದ್ದೀಯಾ ಅಂತ ಕೇಳಿದ್ದರು." ಎಂದು ಟಿವಿ9 ಸಂದರ್ಶನದಲ್ಲಿ ಮಾತಾಡಿದ್ದಾರೆ.

ಪುನೀತ್ ಸರ್ ಸತ್ತಿಲ್ಲ ಎಂದ ಲೇಡಿ ಬಾಡಿ ಬಿಲ್ಡರ್
"ಅವರು ತುಂಬಾ ಹಂಬಲ್. ಅವರು ಸತ್ತಿಲ್ಲ. ಇವತ್ತೂ ಕೂಡ ನಾನು ನಂಬಿಲ್ಲ. ಅವರು ಎಲ್ಲೋ ಶೂಟಿಂಗ್ ಮಾಡಿಕೊಂಡು ಇದ್ದಾರೆ ಅಂತಾನೇ ಅಂದುಕೊಂಡಿದ್ದೇನೆ. ಅವರು ಕಲಿಸಿಕೊಟ್ಟು ಹೋಗಿದ್ದಾರೆ. ಜೀವನದಲ್ಲಿ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ. ಏನೇ ಆದರೂ, ನಾವು ಇನ್ನೊಬ್ಬರಿಗೆ ದಾನ, ಧರ್ಮ ಮಾಡಿ, ಇನ್ನೊಬ್ಬರ ಖುಷಿಯಲ್ಲಿ ನಮ್ಮ ಖುಷಿಯನ್ನು ಕಾಣಬೇಕು ಅಂತ ಹೇಳಿಕೊಟ್ಟು ಹೋಗಿದ್ದಾರೆ. ಅದನ್ನು ನಾವು ಪಾಲಿಸಬೇಕು ಅಷ್ಟೇ." ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಸಹಾಯ ಬೇಕಿದ್ದರೆ ಕೇಳು ಎಂದಿದ್ರು
"ಓಲಂಪಿಯಾ ನನ್ನ ಮುಂದಿನ ಗುರಿ ಅಂತ ಸರ್ಗೆ ಹೇಳಿದ್ದೆ. ನಿನಗೆ ಏನೇ ಸಹಾಯ ಬೇಕು ಅಂದರೂ ನನಗೆ ಕಾಲ್ ಮಾಡು ಅಂತ ಹೇಳಿದ್ದರು. ನನಗೆ ಫೋನ್ ನಂಬರ್ ಕೂಡ ಕೊಟ್ಟಿದ್ದರು. ಯಾವ ಹೀರೋ ಕೂಡ ಪೋನ್ ನಂಬರ್ ಶೇರ್ ಮಾಡುವುದಿಲ್ಲ. ಅವರು ಫೋನ್ ನಂಬರ್ ಕೊಟ್ಟು ನಿನಗೆ ಏನೇ ಸಹಾಯ ಬೇಕಿದ್ದರೂ ಫೋನ್ ಮಾಡು ಅಂತ ಹೇಳಿದ್ದರು. ವಿಸಾ, ಫ್ಲೈಟ್ ಟಕೆಟ್ ಏನೂ ಇದ್ದರೂ ಪೋನ್ ಮಾಡು ಅಂದಿದ್ದರು." ಎಂದು ಟಿವಿ9ಗೆ ತಿಳಿಸಿದ್ದಾರೆ.

20 ಸೆಕೆಂಡ್ ನಟಿಸಿದನ್ನು ಎಂದಿಗೂ ಮರೆಯುವುದಿಲ್ಲ
"ಯುವರತ್ನದಲ್ಲಿ ಕಿಕ್ ಮಾಡುವ ಸೀನ್ ಇತ್ತು. ಕಿಕ್ ಮಾಡಬೇಕಾದರೆ, ಅವರಿಗೆ ತಗುಲಿತು. ಆಗ ಅವರಿಗೆ ಸ್ವಲ್ಪ ನೋವಾಗಿತ್ತು. ಆ ಮೇಲೆ ಬಂದು ನನಗೆ ಇದಕ್ಕಿಂತ ಫೋರ್ಸ್ ಆಗಿ ಬೇಕು. ಆಗಲೇ ಸೀನ್ ಚೆನ್ನಾಗಿ ಬರುತ್ತೆ ಎಂದು ಹೇಳಿದ್ದರು. ಇಷ್ಟು ದೊಡ್ಡ ನಟನಿಗೆ ಒದ್ದು ಬಿಟ್ಟೆನಲ್ಲಾ ಅಂತ ನನಗೆ. ಸಾರಿ ಕೇಳಿದೆ. ಇನ್ನೂ ಫೋರ್ಸ್ ಬೇಕು ಅಂದಿದ್ದರು. ನಾನು ಕಾಣಿಸಿಕೊಂಡಿದ್ದು 20 ಸೆಕೆಂಡ್ ಇರಬಹುದು. ಅದನ್ನು ನಾನು ಕೊನೆ ಉಸಿರು ಇರುವವರೆಗೂ ನೆನಪಿಸಿಕೊಳ್ಳುತ್ತೇನೆ." ಎಂದು ಲೇಡಿ ಬಾಡಿ ಬಿಲ್ಡರ್ ಮಮತಾ ತಿಳಿಸಿದ್ದಾರೆ.


Click it and Unblock the Notifications











