ಎನ್ಟಿಆರ್ ಎದುರು ಕಾಲ್ ಮೇಲೆ ಕಾಲ್ ಹಾಕಿ ಕೂತಿದ್ದ ಮೋಹನ್ ಬಾಬು, ರೇಗಾಡಿದ ನಿರ್ದೇಶಕ
ತೆಲುಗು ಚಿತ್ರರಂಗದಲ್ಲಿ ಡೈಲಾಗ್ ಕಿಂಗ್ ಅಂತಲೇ ಪ್ರಸಿದ್ಧಿ ಪಡೆದಿರುವ ನಟ ಮೋಹನ್ ಬಾಬು. ನೆರೆಯ ಟಾಲಿವುಡ್ ಇಂಡಸ್ಟ್ರಿಯಲ್ಲಿ ದೊಡ್ಡ ಹೆಸರು. ರೆಬೆಲ್ ಸ್ಟಾರ್ ಅಂಬರೀಶ್ಗೆ ಬಹಳ ಆಪ್ತರು. ಸೂಪರ್ ಸ್ಟಾರ್ ರಜನಿಕಾಂತ್ಗೂ ಆತ್ಮೀಯರು. ಬಹಳ ವರ್ಷಗಳ ಹಿಂದೆ ಎನ್ಟಿಆರ್ ಜೊತೆ ಮೋಹನ್ ಬಾಬು ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಆ ಸಿನಿಮಾದಲ್ಲಿ ಇವರದೊಂದು ಸಣ್ಣ ಕೇಡಿ ಪಾತ್ರ. ಎನ್ಟಿಆರ್ ಎಂದು ಕರೆಯಿಸಿಕೊಳ್ಳುತ್ತಿದ್ದ ನಂದಮೂರಿ ತಾರಕ ರಾಮಾರಾವ್ ಆ ಕಾಲಕ್ಕೆ ಇಡೀ ಆಂಧ್ರಪ್ರದೇಶ ಆಳಿದ ಸೂಪರ್ ಸ್ಟಾರ್.
ಆ ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ಎನ್ಟಿಆರ್ ಒಂದು ಬದಿಯಲ್ಲಿ ಕುಳಿತಿದ್ದರಂತೆ. ಅವರ ಎದುರೇ ಅನತಿ ದೂರದಲ್ಲಿ ಮೋಹನ್ ಬಾಬು ಒಂದು ಚೇರಲ್ಲಿ ಕಾಲ್ ಮೇಲೆ ಕಾಲ್ ಹಾಕ್ಕೊಂಡು ಕೂತಿದ್ದರಂತೆ. ಮೋಹನ್ ಬಾಬುರನ್ನು ಗಮನಿಸಿದ ನಿರ್ದೇಶಕರ ರಾಘವೇಂದ್ರ ರಾವ್ ಫಟ್ ಅಂತ ಹತ್ತಿರಕ್ಕೆ ಬಂದು ಬೈಯ್ದಿದ್ದರಂತೆ. ಆಮೇಲೆ ಏನಾಯ್ತು? ಸಂಭಾಷಣೆಕಾರ ಮಾಸ್ತಿ ಈ ಬಗ್ಗೆ ವಿವರಿಸಿದ್ದಾರೆ. ಮುಂದೆ ಓದಿ...

ಮೋಹನ್ ಬಾಬು ನೋಡಿ ಕೋಪಗೊಂಡ ನಿರ್ದೇಶಕ
ಮೋಹನ್ ಬಾಬು ಕಾಲ್ ಮೇಲೆ ಕಾಲ್ ಹಾಕ್ಕೊಂಡು ಕುಳಿತಿದ್ದ ಸಮಯದಲ್ಲಿ ಸೀನ್ ಪೇಪರ್ ಹಿಡಿದು ಹಾದು ಹೋಗುತ್ತಿದ್ದ ಆ ಚಿತ್ರದ ನಿರ್ದೇಶಕ ರಾಘವೇಂದ್ರರಾವ್ 'ಏಯ್ ಅಲ್ಲಿ ದೊಡ್ಮನುಷ್ಯ ಕೂತಿದಾನೆ, ಅವರ ಎದರುಗಡೇನೇ ಹಿಂಗ್ ಕಾಲ್ ಮೇಲೆ ಕಾಲ್ ಹಾಕ್ಕೊಂಡ್ ಧಿಮಾಕಾಗಿ ಕೂತಿದ್ದೀಯಲ್ಲ ಎಷ್ಟು ಅಹಂಕಾರ ಇರಬೇಕು ನಿನಗೆ ಇಳಿಸಯ್ಯ ಕಾಲು ಅಂತ ಗದರಿದ್ದಾರೆ. ಸರಿ ಮೋಹನ್ ಬಾಬು ಕಾಲು ಕೆಳಗಿಳಿಸಿ ತೆಪ್ಪಗೆ ಕುಳಿತಿದ್ದಾರೆ.

ಮತ್ತೆ ಕಾಲ್ ಮೇಲೆ ಕಾಲ್ ಹಾಕ್ಕೊಂಡು ಕುಳಿತ ಬಾಬು
ಹತ್ತು ನಿಮಿಷದ ನಂತರ ವಾಪಸ್ಸಾಗುತ್ತಿದ್ದ ರಾಘವೇಂದ್ರ ರಾಯರಿಗೆ ಮೋಹನ್ ಬಾಬು ಪುನಃ ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತಿರುವುದು ಕಣ್ಣಿಗೆ ಬಿದ್ದಿದೆ, ಸರ್ರನೆ ಅವರ ಪಿತ್ತ ನೆತ್ತಿಗೇರಿದೆ, ಕೋಪದಿಂದ ಅವರಲ್ಲಿಗೆ ಬಂದ ಅವರು ನಿನಗೆ ಇರೋದು ಅಹಂಕಾರ ಅಲ್ಲ ಕಣಯ್ಯ ದುರಹಂಕಾರ ಅಂತ ಬೈಯಲು ಶುರು ಮಾಡುತ್ತಿದ್ದಂತೆ. ಆ ಕಡೆಯಿಂದ ಖುದ್ದು ಎನ್ಟಿಆರ್ ಅವರು 'ನಿರ್ದೇಶಕರೇ ಆ ಹುಡುಗ ನನ್ನತ್ರ ಪರ್ಮಿಷನ್ ತಗೊಂಡು ಹೋಗೇ ಕೂತಿದಾನೆ ತಲೆಕೆಡಸ್ಕೋಬೇಡಿ' ಅಂತ ಹೇಳಿದ್ದಾರೆ.

ನೇರವಾಗಿ ಹೇಳಿಬಿಟ್ಟಿದ್ದ ಮೋಹನ್ ಬಾಬು
ಅಂದ್ಹಾಗೆ, ರಾಘವೇಂದ್ರ ರಾಯರು ಮೊದಲ ಬಾರಿಗೆ ಬೈದು ಅತ್ತ ಹೋದ ತಕ್ಷಣ ಈ ವಯ್ಯ ಸೀದಾ ಎನ್ಟಿಆರ್ ಅವರ ಬಳಿ ಹೋಗಿ ಕೈ ಮುಗಿಯುತ್ತಾ 'ಅಣ್ಣಾ ನನಗೆ ಕಾಲು ಉದ್ದ ಅಲ್ಲದೇ ಸ್ವಲ್ಪ ನೋವು ಇದೆ ಅದಕ್ಕೆ ಕಾಲ್ ಮೇಲೆ ಹಾಕ್ಕೊಂಡು ಕೂತ್ಕೋತೀನಿ ನೀವು ಅನ್ಯಥಾ ಭಾವಿಸಬೇಡಿ' ಎಂದಿದ್ದಾರೆ. ಆಗ ಅವರು 'ಏಯ್ ಬ್ರದರ್ ಅಗತ್ಯವಾಗಿ ಕಾಲು ಹಾಕ್ಕೋಂಡು ಆರಾಮಾಗಿ ಕೂತ್ಕೋ ಅದರಲ್ಲೇನಿದೆ' ಎಂದು ಅನುಮತಿಸಿದ್ದು ತಿಳಿದಿದೆ.

ನಾಯಕನಟನಾಗಿ ಪ್ರವೇಶ
ಸಣ್ಣ ಪುಟ್ಟ ನೆಗೆಟಿವ್ ಪಾತ್ರಗಳನ್ನು ಮಾಡಿಕೊಂಡಿದ್ದ ಇವರು ಮುಂದೆ ಸ್ವಲ್ಪ ಹಣ ಹೊಂದಿಸಿಕೊಂಡು ಸೀದಾ ಇದೇ ರಾಘವೇಂದ್ರ ರಾಯರ ಬಳಿ ಹೋಗಿ 'ಗುರುಗಳೇ ನನ್ನತ್ರ ಇರೋದಿಷ್ಟು ದಯವಿಟ್ಟು ನೀವೇ ನಿರ್ದೇಶನ ಮಾಡ್ಕೊಡಬೇಕು ಅಂತ 'ಅಲ್ಲುಡುಗಾರು' ಎಂಬ ಸಿನಿಮಾದ ಹೀರೋ ಆಗಿ ನಟಿಸುವುದರ ಜೊತೆಗೆ ನಿರ್ಮಾಣ ಮಾಡುತ್ತಾರೆ ಅದು ದೊಡ್ಡ ಮಟ್ಟದ ಹಿಟ್ ಆಗುತ್ತದೆ. ಮೋಹನ್ ಬಾಬು ತೆಲುಗು ಚಿತ್ರರಂಗದಲ್ಲಿ ನಾಯಕನಾಗಿ ನೆಲೆನಿಲ್ಲುತ್ತಾರೆ.
Recommended Video

ಎನ್ಟಿಆರ್ ಜೊತೆಯೇ ಸಿನಿಮಾ ಮಾಡ್ತಾರೆ
ಮುಂದೆ ತಮ್ಮದೇ ನಿರ್ಮಾಣ ಸಂಸ್ಥೆಯಲ್ಲೇ ಮೇರುನಟ ಎನ್ಟಿಆರ್ ಅವರನ್ನು ಹಾಕಿಕೊಂಡು ಒಂದು ಸಿನಿಮಾ ನಿರ್ಮಿಸುತ್ತಾರೆ ಅದು ಗಲ್ಲಾಪೆಟ್ಟಿಗೆಯಲ್ಲಿ ಅಭೂತಪೂರ್ವ ಯಶಸ್ಸು ಪಡೆಯುವುದರೊಂದಿಗೆ ಇತಿಹಾಸ ಸೃಷ್ಟಿಸುತ್ತದೆ.
ಚಿತ್ರಕೃಪೆ: ಟ್ವಿಟ್ಟರ್, ತೆಲುಗು ಫಿಲ್ಮಬೀಟ್


Click it and Unblock the Notifications











