ದಾದಾ ಪಕ್ಕದಲ್ಲಿ ಇದ್ದಾಗಲೇ ಅಣ್ಣಾವ್ರ ಮೇಲೆ ಚಪ್ಪಲಿ ಬಿದ್ದಿತ್ತು.. ಮುಂದೇನಾಗಿತ್ತು?
ಗಣ್ಯರ ಮೇಲೆ ಕಿಡಿಗೇಡಿಗಳು ಚಪ್ಪಲಿ ಎಸೆದು ಅವಮಾನ ಮಾಡುವ ಪ್ರಕರಣಗಳು ದಶಕಗಳಿಂದ ನಡೆಯುತ್ತಲೇ ಇದೆ. ಹೊಸಪೇಟೆಯಲ್ಲಿ 'ಕ್ರಾಂತಿ' ನಟ ದರ್ಶನ್ ಮೇಲೆ ಚಪ್ಪಲಿ ತೂರಿದ್ದ ಘಟನೆ ಇನ್ನು ಮಾಸಿಲ್ಲ. ಆದರೆ ಡಾ. ರಾಜ್- ವಿಷ್ಣು ಇದ್ದ ವೇದಿಕೆ ಮೇಲೆಯೂ ಚಪ್ಪಲಿ ಎಸೆದ ಘಟನೆ ನಡೆದಿತ್ತು.
ನಟಸಾರ್ವಭೌಮ ಡಾ. ರಾಜ್ಕುಮಾರ್ ಹಾಗೂ ಸಾಹಸ ಸಿಂಹ ವಿಷ್ಣುವರ್ಧನ್ ನಡುವೆ ಆತ್ಮೀಯ ಅನುಬಂಧ ಇತ್ತು. ಆದರೆ ಕಾರಣಾಂತರಗಳಿಂದ ಇಬ್ಬರು ಅಭಿಮಾನಿಗಳ ನಡುವೆ ಪದೇ ಪದೇ ಸಂಘರ್ಷ ನಡೆಯುತ್ತಲೇ ಇತ್ತು. ಅಭಿಮಾನಿಗಳ ನಡುವೆ ಇದ್ದ ಶೀತಲ ಸಮರ ಗೊತ್ತಿಲ್ಲದ ವಿಚಾರ ಏನಲ್ಲ. ಸಣ್ಣ ಪುಟ್ಟ ಕಿರಿಕ್ಗಳು, ಆರೋಪ- ಪ್ರತ್ಯಾರೋಪಗಳು ನಡೆಯುತ್ತಲೇ ಇತ್ತು. ಥಿಯೇಟರ್ಗಳ ಅಂಗಳದಲ್ಲಿ ಜಟಾಪಟಿ ಕೂಡ ನಡೆದಿದ್ದ ಉದಾಹರಣೆಗಳಿವೆ. ಇವತ್ತಿಗೂ ಸೋಶಿಯಲ್ ಮೀಡಿಯಾದಲ್ಲಿ ಅದು ಕಮ್ಮಿ ಆಗಿಲ್ಲ. ಆದರೆ ನಿಜಕ್ಕೂ ಮೇರು ನಟರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ. ಇಬ್ಬರು ಸಹೋದರರಂತೆ ಇದ್ದರು. ಅದನ್ನು ಉದಾಹರಣೆ ಸಮೇತ ತಿಳಿಸಿದ್ದಾರೆ.
ದಶಕಗಳ ಹಿಂದೆ ರಾಜ್ಯೋತ್ಸವ ಸಮಾರಂಭಕ್ಕೆ ಡಾ. ರಾಜ್ಕುಮಾರ್ ಹಾಗೂ ವಿಷ್ಣುವರ್ಧನ್ ಇಬ್ಬರು ಮುಖ್ಯ ಅತಿಥಿಗಳಾಗಿ ಹೋಗಿದ್ದರು. ಇಬ್ಬರು ವೇದಿಕೆಯಲ್ಲಿ ಇದ್ದಾಗ ತೂರಿ ಬಂದ ಚಪ್ಪಲಿ ಅಣ್ಣಾವ್ರ ಮೇಲೆ ಬಿದ್ದಿತ್ತು. ಈ ವಿಚಾರವನ್ನು ಕನ್ನಡ ಮಾಣಿಕ್ಯ ಯೂಟ್ಯೂಬ್ ಸಂದರ್ಶನದಲ್ಲಿ ಹಿರಿಯ ಸಿನಿಮಾ ವಿತರಕ ಮುನಿರಾಜು ಎಂ. ನೆನಪಿಸಿಕೊಂಡಿದ್ದರು.

"ಮಾಗಡಿ ರಸ್ತೆಯ ರೈಲ್ವೆ ಕ್ವಾಟರ್ಸ್ ಹಿಂದೆ ಮೈದಾನದಲ್ಲಿ ಕನ್ನಡ ರಾಜೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅಣ್ಣಾವ್ರು, ವಿಷ್ಣು ಸರ್ ಇಬ್ಬರು ಅತಿಥಿಗಳಾಗಿ ಬಂದಿದ್ದರು. ಜನ ಸಾಗರವೇ ನೆರೆದಿತ್ತು. ಇದ್ದಕ್ಕಿದಂತೆ ಎಲ್ಲಿಂದಲೋ ಚಪ್ಪಲಿ ಬಂದು ಬಿದ್ದಿತ್ತು. ಅಣ್ಣಾವ್ರ ಮೇಲೆ ಚಪ್ಪಲಿ ಬಿತ್ತು. ವಿಷ್ಣು ಸರ್ಗೆ ಬೀಳಲಿಲ್ಲ. ಅಣ್ಣಾವ್ರು ಕೂಡಲೇ ಕೈ ಮುಗಿಯುತ್ತಾ ಮೇಲೆದ್ದು ನಿಂತರು. "ನಾವೆಲ್ಲಾ ಕಲಾವಿದರು, ನಾವೆಲ್ಲಾ ಒಂದೇ, ನೀವು ಹೀಗೆಲ್ಲಾ ಮಾಡಬಾರದು" ಎಂದರು.
"ಈ ಘಟನೆಯಿಂದ ವಿಷ್ಣುವರ್ಧನ್ ಅವರಿಗೆ ಮುಜುಗರವಾಗಿತ್ತು. ಬೇಸರದಿಂದ ಹೊರಡುತ್ತೇನೆ ಎಂದು ಹೇಳಿ ಹೊರಟುಬಿಟ್ಟರು. ಕಾರ್ಯಕ್ರಮ ಸಂಪೂರ್ಣವಾಗಿ ಮುಗಿಸಲಿಲ್ಲ. ಅಂತಹ ಸನ್ನಿವೇಶಗಳು ಆಗಿತ್ತು" ಎಂದು ವಿತರಕ ಮುನಿರಾಜು ವಿವರಿಸಿದ್ದಾರೆ. ಅದೇ ರೀತಿ ಫಿಲ್ಮ್ ಚೇಂಬರ್ ವತಿಯಿಂದ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಣ್ಣಾವ್ರು, ವಿಷ್ಣು ನಡುವಿನ ಆತ್ಮೀಯ ಕ್ಷಣಗಳ ಬಗ್ಗೆ ಕೂಡ ಹೇಳಿದ್ದಾರೆ.
"ಒಮ್ಮೆ ಫಿಲ್ಮ್ ಚೇಂಬರ್ ವತಿಯಿಂದ ಸೇವಾದಳ ಶಾಲೆಯ ಆವರಣದಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಣ್ಣಾವ್ರು, ಪಾರ್ವತಮ್ಮ ಇನ್ನು ವೇದಿಕೆ ಏರಿರಲಿಲ್ಲ. ವೇದಿಕೆ ಮುಂಭಾಗದ ಕುರ್ಚಿಯಲ್ಲಿ ಕೂತಿದ್ದರು. 'ದೇವಾ' ಸಿನಿಮಾ ಚಿತ್ರೀಕರಣದಿಂದ ಮೇಕಪ್ ಸಮೇತ ದಾದಾ ಕಾರ್ಯಕ್ರಮಕ್ಕೆ ಬಂದಿದ್ದರು. ಕಪ್ಪುಬಣ್ಣದ ಟೀ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ತೊಟ್ಟಿದ್ದ ವಿಷ್ಣು ಪಾತ್ರಕ್ಕಾಗಿ ಮೀಸೆ ಮೇಲಕ್ಕೆ ತಿರುವಿಕೊಂಡಿದ್ದರು. ಬಂದ ಕೂಡಲೇ ವೇದಿಕೆ ಏರಿದ್ದರು. ವೇದಿಕೆ ಮುಂಭಾಗದಲ್ಲಿ ಕೂತಿದ್ದ ಅಣ್ಣಾವ್ರು, ದಾದಾನ ನೋಡಿ ಅವರಂತೆಯೇ ಮೀಸೆ ತಿರುವಿದ್ದರಂತೆ. ಕೂಡಲೇ ವೇದಿಕೆಯಿಂದ ಕೆಳಗಿಳಿದು ಬಂದ ದಾದಾ ಅಣ್ಣಾವ್ರ ಕಾಲಿಗೆ ನಮಸ್ಕರಿಸಿದ್ದರು. ಅಷ್ಟು ಅನ್ಯೋನ್ಯತೆ ಅವರಿಬ್ಬರ ನಡುವೆ ಇತ್ತು".

ಅದೊಮ್ಮೆ ಈ ರೀತಿ ಅಭಿಮಾನಿಗಳ ನಡುವಿನ ಸಂಘರ್ಷ ಹೆಚ್ಚಾಗಿ ಗಲಾಟೆ ನಡೆದಿತ್ತು. ಇದರಿಂದ ಬೇಸರಗೊಂಡು ಸಾಹಸಿಸಿಂಹ ವಿಷ್ಣುವರ್ಧನ್ ಚೆನ್ನೈಗೆ ಹೋಗಿಬಿಟ್ಟಿದ್ದರು. ಕುಟುಂಬ ಸಮೇತ ಅಲ್ಲೇ ಉಳಿದುಕೊಂಡಿದ್ದರು. ಮತ್ತೆ ಸಿನಿಮಾಗಳಲ್ಲಿ ನಟಿಸೋದು ಬೇಡ, ಕನ್ನಡ ಚಿತ್ರರಂಗವೇ ಬೇಡ ಎನ್ನುವ ಮಟ್ಟಕ್ಕೆ ಚಿಂತಿಸಿದ್ದರು ಎನ್ನಲಾಗುತ್ತದೆ. ಈ ವಿಚಾರವನ್ನು ನೆನಪಿಸಿಕೊಂಡಿರುವ ವಿತರಕ ಮುನಿರಾಜು "ಈ ರೀತಿಯ ಗಲಾಟೆ ಆದಾಗ ವಿಷ್ಣು ಸರ್ ಮನಸ್ಸಿಗೆ ಬೇಸರವಾಗಿ ಕನ್ನಡ ಚಿತ್ರರಂಗವೇ ಬೇಡ ಎಂದು ಚೆನ್ನೈಗೆ ಹೋಗಿದ್ದರು. ಆಗ ಅಣ್ಣಾವ್ರು ಹೋಗಿ ನಾವೆಲ್ಲಾ ಕಲಾವಿದರು, ನೀವು ಈ ರೀತಿ ಮಾಡಬಾರದು ಎಂದು ಸಮಾಧಾನ ಮಾಡಿ ಅಣ್ಣಾವ್ರೇ ಕರ್ಕೊಂಡು ಬಂದರು" ಎಂದು ಹೇಳಿದ್ದಾರೆ.


Click it and Unblock the Notifications











