ತಮಿಳಿಗೆ ಕ್ಯಾಪ್ಟನ್ ಗೋಪಿನಾಥ್, ತೆಲುಗಿಗೆ ಮೇಜರ್ ಸಂದೀಪ್: ಏನಾಗಿದೆ ನಮ್ಮ ನಿರ್ದೇಶಕರಿಗೆ?
ಕನ್ನಡಿಗರಲ್ಲಿ ಸಾಧಕರಿಗೆ ಕಡಿಮೆಯಿಲ್ಲ್. ಭಾರತಕ್ಕೆ, ವಿಶ್ವಕ್ಕೆ ಹಲವು ಸಾಧಕರನ್ನು ಕನ್ನಡದ ನೆಲ ನೀಡಿದೆ. ಆದರೆ ನಮ್ಮ ಸಾಧಕರ ಸಾಹಸಗಾಥೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ವಿಫಲರಾಗುತ್ತಿದ್ದೇವಾ ಎಂಬ ಅನುಮಾನ ಕಾಡುತ್ತಿದೆ.
ಅದರಲ್ಲಿಯೂ ಕನ್ನಡದ ಸಾಧಕರ ಬಗ್ಗೆ ಕನ್ನಡ ಚಿತ್ರರಂಗದ ತೋರುತ್ತಿರುವ ಅಸಡ್ಡೆ ಗಮನಿಸಿದರೆ ಅನುಮಾನ ಸತ್ಯವೇನೋ ಎನಿಸುತ್ತದೆ.
ಇತ್ತೀಚೆಗಷ್ಟೆ ತಮಿಳಿನಲ್ಲಿ 'ಸೂರರೈ ಪೊಟ್ರು' ಸಿನಿಮಾ ಬಿಡುಗಡೆ ಆಯಿತು. ಆ ಸಿನಿಮಾವು ಕನ್ನಡದ ಕ್ಯಾಪ್ಟನ್ ಗೋಪಿನಾಥ್ ಅವರ ಜೀವನವನ್ನು ಆಧರಿಸಿದ ಸಿನಿಮಾ ಆಗಿತ್ತು. ಇದೀಗ ಮತ್ತೊಬ್ಬ ವೀರ ಕನ್ನಡಿಗ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಜೀವನ ಸಿನಿಮಾ ಆಗುತ್ತಿದೆ, ಅದು ತೆಲುಗಿನಲ್ಲಿ. ಕನ್ನಡದ ನಿರ್ದೇಶಕರಿಗೆ ನಮ್ಮ ಸಾಧಕರು ಕಾಣುತ್ತಿಲ್ಲವೇ? ಎಂಬ ಅನುಮಾನವನ್ನು ನೆಟ್ಟಿಗರು ವ್ಯಕ್ತಪಡಿಸಿದ್ದಾರೆ.
2008 ರ ಮುಂಬೈ ದಾಳಿಯಲ್ಲಿ ಹುತಾತ್ಮರಾದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರು ಕರ್ನಾಟಕದ ಹೆಮ್ಮೆ. ಕನ್ನಡ ಚಿತ್ರರಂಗದ ಕೇಂದ್ರ ಸ್ಥಾನ ಗಾಂಧಿನಗರದಿಂದ 25 ಕಿ.ಮೀ ಸಹ ದೂರವಿಲ್ಲ ಯಲಹಂಕದಲ್ಲಿರುವ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ನಿವಾಸ.

ರೌಡಿಗಳ ಜೀವನವಷ್ಟೆ ಕಾಣುತ್ತದೆಯೇ ನಮ್ಮ ನಿರ್ದೇಶಕರುಗಳಿಗೆ?
ನಮ್ಮ್ ಕನ್ನಡದ ನಿರ್ದೇಶಕರಿಗೆ, ರೌಡಿಗಳಾದ, ಕಾನೂನು ಪ್ರಕಾರ ಅಪರಾಧಿಗಳಾದ ಕೊತ್ವಾಲ, ಜಯರಾಜ್, ಮುತ್ತಪ್ಪ ರೈ, ಡೆಡ್ಲಿ ಸೋಮ, ಬುಲೆಟ್ ರವಿ, ಸತ್ಯ, ಇಂಥಹಾ ರೌಡಿಗಳ ಜೀವನವಷ್ಟೆ ಕಾಣುತ್ತದೆಯೇ ವಿನಃ ಕ್ಯಾಪ್ಟನ್ ಗೋಪಿನಾಥ್, ಸಂದೀಪ್ ಉನ್ನಿಕೃಷ್ಣನ್ ಅವರಂಥಹಾ ಸಾಧಕರ ಜೀವನ ಕಾಣುವುದೇ ಇಲ್ಲವೇ? ಎಂಬ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಅನೇಕ ನೆಟ್ಟಿಗರು.

ನೆಲದ ಸಾಧಕರನ್ನು ಗುರುತಿಸುವುದು ಜವಾಬ್ದಾರಿ ಆಗಬೇಕಿತ್ತಲವೇ?
ನಮ್ಮ ನೆಲದ ಸಾಧಕರನ್ನು ಗುರುತಿಸುವುದು ನಮ್ಮ ಜವಾಬ್ದಾರಿ ಆಗಬೇಕಿತ್ತಲ್ಲವೇ? ಈಗಿನ ತಲೆಮಾರಿನ ಹಿರಿಯರು ಈ ತಪ್ಪು ಮಾಡಿರಲಿಲ್ಲ. ಕನಕದಾಸ, ಬಸವಣ್ಣಾದಿ ಶರಣರ ಬಗ್ಗೆ ಸಿನಿಮಾ ಮಾಡಿದ್ದರು. ನಾಡಿಗಾಗಿ ಹೋರಾಡಿದ ಕನ್ನಡದ ಅರಸರ ಕತೆಗಳು ಸಿನಿಮಾಗಳಾಗಿದ್ದವು. ಶಿವಪುರದ ಧ್ವಜ ಸತ್ಯಾಗ್ರಹ, ಇತರೆ ಕೆಲವು ಕನ್ನಡದ ಸ್ವಾತಂತ್ರ್ಯ ಹೋರಾಟಗಾರರ ಕತೆಗಳು ಸಿನಿಮಾಗಳಾಗಿ ನಿಜ ದೇಷಪ್ರೇಮ ಉದ್ಧೀಪಿಸಿದ್ದವು.

ಕೆಲವು ಸಿನಿಮಾಗಳು ಆಗಿವೆ, ಆಗುತ್ತಿವೆ
ಈ ವಿಷಯದಲ್ಲಿ ಇಡೀಯ ಕನ್ನಡ ಚಿತ್ರರಂಗವನ್ನು ಸಹ ತೆಗಳುವಂತಿಲ್ಲ. ಈಗಿನ ಕೆಲವು ನಟರು, ನಿರ್ದೇಶಕರು ಇನ್ನೂ ತುಸು ಸಂವೇದನಾಶೀಲತೆ ಉಳಿಸಿಕೊಂಡಿದ್ದಾರೆ. ಗಂಡುಗಲಿ ಕುಮಾರರಾಮ, ಸಂಗೊಳ್ಳಿ ರಾಯಣ್ಣ, ವೀರ ಮದಕರಿ, ನಿಘಂಟು ನೀಡಿದ ಕಿಟೆಲ್ ಜೀವನಕತೆಗಳು ಸಿನಿಮಾಗಳಾಗಿವೆ, ಆಗುತ್ತಿವೆ. ಆದರೆ ಅಲ್ಲಿಯೂ ಇತಿಹಾಸ ದರ್ಶನಕ್ಕಿಂತಲೂ ಹೆಚ್ಚು ನಾಯಕನ ವೈಭವೀಕರಣಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತದೆ ಎಂಬ ವಾದವನ್ನು ಅಲ್ಲಗಳೆಯಲಾಗದು.

ತೆಲುಗು ಸಿನಿಮಾದ ಪೋಸ್ಟರ್ ಬಿಡುಗಡೆ
ಇದೀಗ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಜೀವನವನ್ನು ತೆಲುಗಿನವರು ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾಕ್ಕೆ 'ಮೇಜರ್' ಎಂದು ಹೆಸರಿಡಲಾಗಿದೆ. ನಟ ಅಡಿವಿ ಶೇಶ್ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಶಶಿಕಿರಣ್ ಟಿಕ್ಕಾ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ನಟ ಮಹೇಶ್ ಬಾಬು ಸೇರಿದಂತೆ, ಸೋನಿ ಪಿಕ್ಚರ್ಸ್ ಈ ಸಿನಿಮಾಕ್ಕೆ ಬಂಡವಾಳ ಹೂಡಿದೆ.


Click it and Unblock the Notifications











