ಕರುಣಾಕರ ಶೆಟ್ಟಿ ಸಾವು ಮಾನವೀಯತೆ ಮರೆತ ಗಾಂಧಿನಗರ
ಸಿನಿಮಾ ಉದ್ಯಮವೇ ಹಾಗೆ. ಇಲ್ಲಿ ಇವತ್ತು ಜೊತೆಗಿದ್ದವ ನಾಳೆ ಇನ್ನೆಲ್ಲೋ ಇರುತ್ತಾನೆ. ಒಂದು ಹಂತದವರೆಗೆ ಮಾತ್ರ ಪ್ರೀತಿ-ವಿಶ್ವಾಸಗಳು ಮನೆ ಮಾಡುತ್ತವೆ. ವರ್ಷದ ನಂತರ ಅದೇ ಜೊತೆಗಾರರು 69 ಹೋಗಿ 96 ರಂತೇ ತಿರುಗಾ ಮುರುಗಾ ಆಗಿಬಿಡುತ್ತಾರೆ! ಇದಕ್ಕೆ ಇನ್ನೊಂದು ತಾಜಾ ಉದಾಹರಣೆ ಕ್ಯಾಮೆರಾ ಅಸಿಸ್ಟೆಂಟ್ ಆಗಿದ್ದ ಕುಂದಾಪುರದ ದಿ. ಕರುಣಾಕರ ಶೆಟ್ಟಿ.
ಇವರು ಸರಿಸುಮಾರು ಎಂಟು ವರ್ಷದ ಹಿಂದೆ ಅಣಜಿ ನಾಗರಾಜ್ಗೆ ಅಸಿಸ್ಟೆಂಟ್ ಮತ್ತು ಅ-ಜೀವ ಗೆಳೆಯನೂ ಆಗಿದ್ದರು. ಓಂ ಪ್ರಕಾಶ್ರಾವ್ ನಿರ್ದೇಶನದ 'ಹುಚ್ಚ' ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾಗ ಚಾಮರಾಜನಗರದ ಪೊಲೀಸ್ ಕ್ವಾಟರ್ಸ್ನಲ್ಲಿ ಜೇನು ಕಡಿದು ಸ್ಥಳದಲ್ಲೇ ಸಾವನ್ನಪ್ಪಿದರು. ಕ್ಯಾಮೆರಾಗೆ ಏನೂ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಕ್ರೇನ್ ಮೇಲೆ ನಿಂತಿದ್ದ ಕರುಣಾಕರ ಅವರು ಅಲ್ಲೇ ನಿಂತು ಕೊನೆಯ ಉಸಿರು ಹೋಗುವ ತನಕ ಹೋರಾಡಿದರು. ಕೊನೆಗೂ ಕ್ಯಾಮೆರಾ ಸೇಫ್ ಆಯಿತು; ಶೆಟ್ಟರ ಉಸಿರು ಉಳಿದುಕೊಳ್ಳಲೇ ಇಲ್ಲ.
ನಿಮಗೆ ಗೊತ್ತಾ? ಅವರಿಗೆ ಮದುವೆಯಾಗಿ ಎರಡು ವರ್ಷವಾಗಿತ್ತು. ಮಡದಿ ರಾಜೇಶ್ವರಿ ಆಗಿನ್ನೂ ಒಂಬತ್ತು ತಿಂಗಳ ಮಗು ಹೊತ್ತ ಬಸುರಿ! ಆಗ ಸ್ವತಃ ರಾಜ್ ಫ್ಯಾಮಿಲಿ ಕರುಣಾಕರ ಶೆಟ್ಟರ ಸಹಾಯಕ್ಕೆ ನಿಂತರು. ಗೀತಾ ಶಿವರಾಜ್ಕುಮಾರ್ ಶೆಟ್ಟರ ಮಗುವಿನ ಹೆಸರಲ್ಲಿ ಒಂದಷ್ಟು ಹಣ ಕೂಡಿಡಲು ಮುಂದಾದರು. ಆದರೆ, ದುರಂತ ಎಂದರೆ 'ಹುಚ್ಚ' ಚಿತ್ರದ ನಿರ್ಮಾಪಕ ರೆಹೆಮಾನ್ ಮಾತ್ರ ಏನೂ ಆಗಲಿಲ್ಲ ಎಂಬಂತೇ ಮೈ ಕೊಡವಿ ಮುಂದೆ ಹೋದರು!
ಇಷ್ಟೇ ಆಗಿದ್ದರೆ ಶೆಟ್ಟರ ಸುದ್ದಿ ಈಗ ನೆನಪಾಗುತ್ತಿರಲಿಲ್ಲ. ಇತ್ತೀಚೆಗೆ ಅದೇ ಶೆಟ್ಟರ ಹೆಂಡತಿಯ ತಮ್ಮ ಹರ್ಷ ಮೊನ್ನೆ ಮೊನ್ನೆ ಬೆಂಗಳೂರಿಗೆ ಬಂದಿದ್ದರು. ಹಳ್ಳಿ ಹೈದ ಪ್ಯಾಟೆಗೆ ಬಂದಿದ್ದಾನೆ ಎಂದರೆ ಏನೆಲ್ಲಾ ಕಷ್ಟಗಳು ಸಾಮಾನ್ಯ ಎಂಬುದು ನಿಮಗೂ ಗೊತ್ತು. ಹರ್ಷಗೆ ಏನು ಮಾಡಬೇಕು ಎಂದು ಗೊತ್ತಾಗದೇ ತನ್ನ ಭಾವನ ಹಳೇ ಗೆಳೆಯ ಅಣಜಿ ನಾಗರಾಜ್ ಹತ್ತಿರ ಬಂದು ಒಂದೇ ಒಂದು ಕೆಲಸ ಕೊಡಿ, ದಮ್ಮಯ್ಯಾ ಎಂದು ಕೇಳಿಕೊಂಡಿದ್ದಾನೆ.
ಅದಕ್ಕೆ ಅಣಜಿ ನಾಗರಾಜ್ ಕೊಟ್ಟ ರಿಯಾಕ್ಷನ್ ಹೇಗಿತ್ತು ಎಂದರೆ-ಕರುಣಾಕರ ಶೆಟ್ಟಿ ಯಾರು ಎಂಬುದೇ ನೆನಪಿಲ್ಲ ಎನ್ನುವಂತೇ ಕೈಚೆಲ್ಲಿಬಿಟ್ಟರು. ಯಾವುದೋ ದೇಶದಿಂದ ಬಂದ ಇನ್ಯಾವುದೋ ಪ್ರಾಣಿಯನ್ನು ಕಂಡಂತೆ ಕಡೆಗಣಿಸಿ ಹೊರಟೇಬಿಟ್ಟರು ಅಣಜಿ. ಅದೆಂದೋ ಇದೇ ಅಣಜಿಯವರ ಕ್ಯಾಮೆರಾಗೋಸ್ಕರ ಪ್ರಾಣವನ್ನೂ ಲೆಕ್ಕಿಸದ ಕರುಣಾಕರ ಶೆಟ್ಟರು ಒಮ್ಮೆಯಾದರೂ ನೆನಪಾಗಿದ್ದರೆ ಅಣಜಿ ಈ ಮಟ್ಟದ ಕೃತಘ್ನತೆ ತೋರುತ್ತಿರಲಿಲ್ಲ! ಇದನ್ನು ದುರಂತ ಎನ್ನುವುದಕ್ಕಿಂತ ಗಾಂಧಿನಗರದ ನೀರಿನ ಸೈಡ್ ಎಫೆಕ್ಟ್ ಎನ್ನಬಹುದೇನೋ...


Click it and Unblock the Notifications











