ಹೊಸ ವಿವಾದದಲ್ಲಿ ನಿನಗಾಗಿ ಕಾದಿರುವೆ ಚಿತ್ರ

ಪತ್ರಿಕೆಯೊಂದಿಗೆ ಮಾತನಾಡಿರುವ 'ನಿನಗಾಗಿ ಕಾದಿರುವೆ' ಚಿತ್ರದ ನಿರ್ಮಾಪಕ ಬಿ.ವಿ ಸತೀಶ್ ಬಾಬು, ಈ ವಿಚಾರದಲ್ಲಿ ನನ್ನದೇನು ತಪ್ಪಿಲ್ಲ. ಚಿತ್ರದ ನಿರ್ದೇಶಕ ಮತ್ತು ಸಹ ನಿರ್ಮಾಪಕ ಜಾಲಿ ಬಾಸ್ಟಿನ್ ನನಗೆ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ. ತಮ್ಮ ಮೇಲೆ ಈ ರೀತಿ ಆರೋಪ ಹೊರಿಸಿರುವುದಕ್ಕೆ ಕುಪಿತರಾಗಿರುವ ಜಾಲಿ ಬಾಸ್ಟಿನ್ ಅವರು ದೂರು ಕೊಡಲು ಮುಂದಾಗಿದ್ದಾರೆ. ''ನಿರ್ಮಾಪಕ ಸತೀಶ್ ಬಾಬು ಆರೋಪದಲ್ಲಿ ಹುರುಳಿಲ್ಲ. ಅನಾವಶ್ಯಕವಾಗಿ ತಮ್ಮನ್ನು ತೇಜೋವಧೆ ಮಾಡಿದ್ದಾರೆ'' ಎಂದು ಜಾಲಿ ಬಾಸ್ಟಿನ್ ಪ್ರತ್ಯಾರೋಪ ಮಾಡಿದ್ದಾರೆ.
ಆದರೆ ನಿರ್ಮಾಪಕ ಸತೀಶ್ ಬಾಬು ಹೇಳುವ ಕತೆಯೇ ಬೇರೆ, ''ಚಿತ್ರದ ಸಹ ನಿರ್ದೇಶಕರು, ತಂತ್ರಜ್ಞರು, ಕಲಾವಿದರು ಸೇರಿದಂತೆ ಚಿತ್ರದ ತಂಡದ ಇತರೆ ಯಾರಿಗೂ ಇನ್ನೂ ನಯಾಪೈಸೆ ಸಹ ಸಂದಾಯವಾಗಿಲ್ಲ. ನಮ್ಮ್ಮನ್ನೆಲ್ಲಾ ವಂಚಿಸಲಾಗಿದೆ. ಈ ಹಿಂದೆ ತಾವು ಬಾಸ್ಟಿನ್ ಅವರನ್ನು ಹಣ ಕೇಳಿದಾಗ ತಮ್ಮನ್ನು ಕೊಲೆ ಮಾಡುವ ಬೆದರಿಕೆ ಒಡ್ಡಿದ್ದಾಗಿ ಸತೀಶ್ ಬಾಬು ತಿಳಿಸಿದ್ದಾರೆ. ಸುಮಾರು ರು. 1 ಕೋಟಿ ಬಜೆಟ್ ನ ಚಿತ್ರ ಇದಾಗಿದ್ದು. ಶೇ.25ರಷ್ಟು ಹಣವನ್ನು ಬಾಸ್ಟಿನ್ ಲಪಟಾಯಿಸಿದ್ದಾರೆ ಎಂಬುದು ಬಾಬು ಅವರ ಗಂಭೀರ ಆರೋಪ.
''ಚಿತ್ರದ ನಿರ್ಮಾಪಕರಲ್ಲಿ ನಾನೂ ಒಬ್ಬ್ಬ. ನಾನು ಯಾರನ್ನೂ ವಂಚಿಸಿಲ್ಲ.ಚಿತ್ರದ ನಿಗದಿತ ಬಜೆಟನ್ನು ಮೀರಿ ತಾವು ಯಾವ ಸಾಹಸಕ್ಕೂ ಕೈಹಾಕಿಲ್ಲ. ಚಿತ್ರೋದ್ಯಮಕ್ಕೆ ಬಾಬು ಹೊಸಬ. ಚಿತ್ರ ನಿರ್ಮಾಣದ ಬಗ್ಗೆ ಅವರಿಗೆ ಏನೇನು ಗೊತ್ತಿಲ್ಲ'' ಎಂದು ಜಾಲಿ ಬಾಸ್ಟಿನ್ ಕಿಡಿಕಾರಿದ್ದಾರೆ. ಮತ್ತೊಂದು ಆಶ್ಚರ್ಯಕರವಾದ ಸಂಗತಿ ಎಂದರೆ, ಪೂಜಾಗಾಂಧಿ ಸಹ ಜಾಲಿ ಬಾಸ್ಟಿನ್ ಕಡೆಗೇ ಬೆರಳು ತೋರಿಸಿ, ನಮಗೆಲ್ಲಾ ಬಾಸ್ಟಿನ್ ಸಖತ್ತಾಗಿ ಟೋಪಿ ಹಾಕಿದ್ದಾರೆ ಎಂದಿದ್ದಾರೆ.
''ಹೌದು ಚಿತ್ರದ ಪ್ರಧಾನ ಪಾತ್ರಧಾರಿಗಳಿಗೆ ಇನ್ನೂ ಸಂಭಾವನೆ ಹಣ ಸಂದಾಯವಾಗಿಲ್ಲ. ಚಿತ್ರದ ಸ್ಯಾಟಲೈಟ್ ಹಕ್ಕುಗಳು ಮಾರಾಟವಾದರೆ ಶೀಘ್ರ ಅವರ ಸಮಸ್ಯೆಗಳನ್ನು ಇತ್ಯರ್ಥ ಮಾಡುತ್ತೇನೆ. ಚಿತ್ರೋದ್ಯಮದಲ್ಲಿ ತಾವು 24 ವರ್ಷಗಳಿಂದ ಇದ್ದೇನೆ. ಚಿತ್ರರಂಗದಲ್ಲಿ ಒಳ್ಳೆ ಹೆಸರು ಮಾಡಬೇಕು ಎಂಬ ಆಸೆ ನನಗೂ ಇದೆ'' ಎಂಬುದು ಜಾಲಿ ಬಾಸ್ಟಿನ್ ವಿವರಣೆ. ಒಟ್ಟಿನಲ್ಲಿ ಒಬ್ಬರ ಮೇಲೊಬ್ಬರು ದೂರುತ್ತಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಚಿತ್ರದ ತಾರಾಗಣದಲ್ಲಿ ಪೂಜಾಗಾಂಧಿ, ವಿಶಾಲ್ ಹೆಗಡೆ, ಉಮೇಶ್, ಅನುಶ್ರೀ, ಲೋಬೊ, ಶ್ರೀದೇವಿ ಉನ್ನಿ ಮುಂತಾದವರು ಅಭಿನಯಿಸಿದ್ದಾರೆ. ಛಾಯಾಗ್ರಹಣ ಪಿ.ರಾಜನ್.
(ದಟ್ಸ್ ಕನ್ನಡ ಚಿತ್ರವಾರ್ತೆ)
ಕಡೆಗೂ ಕನ್ನಡದಲ್ಲಿ ಪಾಸಾದರು ಪೂಜಾಗಾಂಧಿ!
ಅನಂತ್ ಬಿಚ್ಚಿಟ್ಟ ಶಂಕರ್ ನಾಗ್ ಸಾವಿನ ರಹಸ್ಯ!
ಸಂಗೀತ ನಿರ್ದೇಶಕರಿಗೆ ಲಹರಿ ವೇಲು ಛೀಮಾರಿ
ದರ್ಶನ್ ಗೆ ನಾನೇನು ಅನ್ಯಾಯ ಮಾಡಿದ್ದೇನೆ?


Click it and Unblock the Notifications











