ನಾಗಾಭರಣರಿಗೆ ನಿರ್ದೇಶಕರ ತಿರುಗುಬಾಣ
ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಟಿ ಎಸ್ ನಾಗಾಭರಣ ಕೊಟ್ಟಂತಹ ವ್ಯತಿರಿಕ್ತ ಹೇಳಿಕೆ ಅವರನ್ನು ತಿರುಗುಬಾಣದಂತೆ ಬೆನ್ನಟ್ಟಿದ ಘಟನೆ ಸೋಮವಾರ ನಡೆದಿದೆ. ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸ್ಥಾನದಿಂದ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ಚಲನಚಿತ್ರ ನಿರ್ದೇಶಕರ ಸಂಘದ ಸದಸ್ಯರು ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಪ್ರತಿಭಟಿಸಿದ್ದಾರೆ.
ಶಿವಮೊಗ್ಗದಲ್ಲಿ ಏಪ್ರಿಲ್ ನಲ್ಲಿ ನಡೆದ ರಾಜ್ಯ ಚಲನಚಿತ್ರ ಪ್ರಶಸ್ತಿ ವಿತರಣಾ ಸಮಾರಂಭಕ್ಕೆ ''ಆಹ್ವಾನ ಪತ್ರಿಕೆಗಳನ್ನು ನಿರ್ದೇಶಕರಿಗೆ ಕಳುಹಿಸುವುದು ಬೇಡ; ಕಲಾವಿದರಿಗೆ ಮಾತ್ರ ಕಳುಹಿಸಿದರೆ ಸಾಕು ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ.ಜಯಮಾಲಾ ಹೇಳಿದ್ದಾರೆ'' ಎಂದು ನಾಗಾಭರಣ ಹೇಳಿದ್ದರು. ಈ ಹೇಳಿಕೆ ಚಲನಚಿತ್ರ ನಿರ್ದೇಶಕರ ಪಿತ್ತ ಕೆರಳಿಸಿತ್ತು.
ಜಯಮಾಲಾ ಅವರ ಹೇಳಿಕೆಯನ್ನು ಖಚಿತಪಡಿಸಿಕೊಳ್ಳಲು ನಾಗಾಭರಣ ಅವರನ್ನು ಚಲನಚಿತ್ರ ವಾಣಿಜ್ಯ ಮಂಡಳಿಗೆ ಕರೆಸಿದಾಗ, ಜಯಮಾಲಾ ಆ ಧಾಟಿಯಲ್ಲಿ ಹೇಳಿಲ್ಲ ಎಂದು ವ್ಯತಿರಿಕ್ತವಾಗಿ ಹೇಳಿಕೆ ನೀಡಿದ್ದರು. ನಾಗಾಭರಣ ಅವರ ವ್ಯತಿರಿಕ್ತ ಹೇಳಿಕೆಗಳಿಂದ ಬೇಸತ್ತ ನಿರ್ದೇಶಕರು ಪ್ರತಿಭಟನೆ ಮುಂದಾದರು.
ಪ್ರತಿಭಟನೆಯಲ್ಲಿ ನಿರ್ದೇಶಕರ ಸಂಘದ ಅಧ್ಯಕ್ಷ ಎಸ್ ವಿ ರಾಜೇಂದ್ರ ಸಿಂಗ್ ಬಾಬು, ನಿರ್ದೇಶಕರಾದ ಪ್ರೇಮ್, ಎಂ ಎಸ್ ರಮೇಶ್, ಎ ಎಂ ಆರ್ ರಮೇಶ್, ನಾಗೇಂದ್ರ ಪ್ರಸಾದ್, ನಾಗೇಂದ್ರ ಅರಸ್, ಮಹೇಶ್ ಮೊದಲಾದವರು ಪಾಲ್ಗೊಂಡಿದ್ದರು. ಅಕಾಡೆಮಿ ನಡೆಸುವ ಎಲ್ಲಾ ಕಾರ್ಯಕ್ರಮಗಳನ್ನು ಬಹಿಷ್ಕರಿಸುವುದಾಗಿ ನಿರ್ದೇಶಕರ ಸಂಘ ತಿಳಿಸಿದೆ.


Click it and Unblock the Notifications











