ಸಿಎಂ ಮಗನ ಜೊತೆ ಹರಿಪ್ರಿಯಾಗೆ ಲವ್ವಂತೆ; ಅಯ್ಯೋ ಶಿವನೇ!
ಹಾಗಂತೆ ಹೀಗಂತೆ ಸುದ್ದಿಗಳನ್ನು ಹೆಣೆಯುವವರಿಗೆ ಬರವಿಲ್ಲ. ಬಾಲಿವುಡ್ ನಲ್ಲಂತೂ ಗಾಸಿಪ್ ಗಳನ್ನೇ ನಂಬಿಕೊಂಡು ಹಲವು ಮಂದಿ ಬದುಕು ದೂಡುತ್ತಿದ್ದಾರೆ. ಗಾಂಧಿನಗರದಲ್ಲೂ ಈ ರೀತಿಯ ಸುದ್ದಿಗಳು ನೀರ ಮೇಲಿನ ಗುಳ್ಳೆಗಳಂತೆ ಉದ್ಭವಿಸುತ್ತಲೇ ಇರುತ್ತವೆ. ಆದರೆ ಸೂಜಿ ಮುಟ್ಟಿಸಿದ ಬಲೂನುಗಳಂತೆ ಟುಸ್ ಎನ್ನುತ್ತಿರುತ್ತವೆ.
ಅಂತಹದ್ದೇ ಒಂದು ಗಾಳಿ ಸುದ್ದಿ ಚಿತ್ರನಟಿ ಹರಿಪ್ರಿಯಾರ ತೀವ್ರ ಅಸಹನೆಗೆ ಗುರುಯಾಗಿದೆ. ಮಾನ್ಯ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ಅವರ ಮಗನ ಜೊತೆ ಹರಿಪ್ರಿಯಾ ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆ ಎಂಬ ಸುದ್ದಿ ಸ್ಫೋಟಗೊಂಡಿತ್ತು. ಯಡಿಯೂರಪ್ಪ ಅವರ ಮಗ ಹರಿಪ್ರಿಯಾರಿಗೆ ಜಮೀನನ್ನು ಉಡುಗೊರೆಯಾಗಿ ಕೊಟ್ಟಿದ್ದಾರಂತೆ ಎಂಬವರೆಗೂ ವದಂತಿ ವಿಸ್ತರಿಸಿತ್ತು.
ಇದರಿಂದ ಕುಪಿತರಾದ ಹರಿಪ್ರಿಯಾ ಈ ರೀತಿಯ ಗಾಸಿಪ್ ಸುದ್ದಿಗಳನ್ನು ಹಬ್ಬಿಸುವವರ ಬಗ್ಗೆ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಎಚ್ಚರಿಸಿದ್ದಾರೆ. ಮುಖ್ಯಮಂತ್ರಿಗಳಿಗೆ ಮಗ ಇದ್ದಾನೆ ಎಂಬ ಸಂಗತಿಯೇ ನನಗೆ ಗೊತ್ತಿಲ್ಲ.ಕೆಲವರು ಸುಳ್ಳುಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಅಂತಹವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಹರಿಪ್ರಿಯಾ ತಿಳಿಸಿದ್ದಾರೆ.
ತಮ್ಮ ಬಗ್ಗೆ ಇಲ್ಲಸಲ್ಲದ ಸುದ್ದಿಗಳನ್ನು ಕೆಲವರು ವ್ಯವಸ್ಥಿತವಾಗಿ ಹಬ್ಬಿಸುತ್ತಿದ್ದಾರೆ. ತಾನು ಚಿತ್ರೀಕರಣಕ್ಕೆ ಸರಿಯಾಗಿ ಬರುವುದಿಲ್ಲ. ಹೆಚ್ಚಿನ ಸಂಭಾವನೆ ಕೇಳುತ್ತೇನೆ...ಹೀಗೇ ಏನೇನೋ ಮನಸ್ಸಿಗೆ ತೋಚಿದಂತೆ ನನ್ನ ಬಗ್ಗೆ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಅಂತಹವರನ್ನು ಸುಮ್ಮನೆ ಬಿಡುವುದಿಲ್ಲ. ಕೋರ್ಟ್ ಮೆಟ್ಟಿಲು ಹತ್ತಿಸುತ್ತೇನೆ ಎಂದಿದ್ದಾರೆ.
ಈ ರೀತಿ ಅಂತೆ ಕಂತೆ ಸುದ್ದಿಗಳನ್ನು ಬರೆಯುವವರ ವಿರುದ್ಧ ಈ ಹಿಂದೆ ನಟಿ ಸ್ನೇಹಾ ಕಾನೂನು ಸಮರ ಸಾರಿದ್ದರು. ಇದೀಗ ಹರಿಪ್ರಿಯಾ ಸಹ ಅದೇ ರೀತಿಯ ಕ್ರಮಕ್ಕೆ ಮುಂದಾಗಿದ್ದಾರೆ. ಅಂದಹಾಗೆ ಹರಿಪ್ರಿಯಾ ಸದ್ಯಕ್ಕೆ ಶಿವಣ್ಣನ 'ಚೆಲುವೆಯೇ ನಿನ್ನೇ ನೋಡಲು' ಹಾಗೂ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ 'ನಾರಿಯ ಸೀರೆ ಕದ್ದ' ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











