ವಿಜಯ್, ಶುಭಾ ಪೂಂಜಾ ಗೃಹಪ್ರವೇಶ
ಬ್ಲ್ಯಾಕ್ ಕೋಬ್ರಾ ವಿಜಯ್ ಮತ್ತು ಶುಭಾ ಪೂಂಜಾ ಮದುವೆಯಾಗಿದ್ದಾರೆ. ಅದು ಹಳೇ ಸುದ್ದಿ. ಅವರಿಬ್ಬರೂ ಮತ್ತೊಮ್ಮೆ ಮದುವೆಯಾಗಿದ್ದಾರೆ! ಇದು ಹೊಸ ಸುದ್ದಿ. ತಾವು ಕಟ್ಟಿಸಿದ ಮನೆಗೆ ಶುಭಾಪೂಂಜಾರನ್ನು ಕರೆದೊಯ್ದು, ಹೊಸ್ತಿಲ ಮೇಲೆ ಅಕ್ಕಿ ತುಂಬಿದ ಪಾವು ಇಡಿಸಿ ಸದೆ ಒದಿಸಿ ಶುಭಾರನ್ನು ವಿಜಯ್ ಮನೆ ತುಂಬಿಸಿಕೊಂಡಿದ್ದಾರೆ. ಇದು ನವೆಂಬರ್ 27, 2009ರಂದು ಸಿಡಿದ ಹೊಚ್ಚ ಹೊಸ ಸುದ್ದಿ.
ಬೆಂಗಳೂರಿನ ವಿದ್ಯಾಪೀಠ ಸರ್ಕಲ್ ಹಿಂದಿನ ವಿವೇಕಾನಂದ ನಗರದಲ್ಲಿ ವಿಜಯ್ 'ದುನಿಯಾ ಋಣ' (Duniya Runa) ಎಂಬ ಹೆಸರಿನ ಬಂಗಲೆ ಕಟ್ಟಿಸಿದ್ದಾರೆ. ತಮಗೆ ಬ್ರೇಕ್ ನೀಡಿದ ಚಿತ್ರ 'ದುನಿಯಾ' ಆದ್ದರಿಂದ ಆ ಹೆಸರು ಮನೆಗಿಟ್ಟಿರುವುದರಲ್ಲಿ ಆಶ್ಚರ್ಯವಿಲ್ಲ. ಹಿಂದೆ 'ನಾಗರಹಾವು' ಬ್ರೇಕ್ ನೀಡಿದ್ದರಿಂದ ವಿಷ್ಣುವರ್ಧನ್ ಅವರು ತಮ್ಮ ಬಂಗಲೆಗೆ 'ವಲ್ಮೀಕ' (ಹುತ್ತ್ತ) ಅಂತ ಹೆಸರಿಟ್ಟಿದ್ದರು.
ಹಿರಿಯ ನಟ ಸಿ ಅರ್ ಸಿಂಹ ತಮ್ಮ ಮನೆಗೆ 'ಗುಹೆ' ಅಂತಲೂ, ಅವರ ತಮ್ಮ ಶ್ರೀನಾಥ್ 'ಹೃದಯ' ಅಂತಲೂ ಹೆಸರಿಟ್ಟುಕೊಂಡಿದೆಲ್ಲಾ ಹಳೆಯ ಮಾತು. ಆದರೆ 'ದುನಿಯಾ' ಜೊತೆಗೆ Runa ಅಂತ ವಿಜಯ್ ಸೇರಿಸಿರುವುದಕ್ಕೆ ಮತ್ತೊಂದು ಕಾರಣವೂ ಇದೆ. ಅದು ರುದ್ರಪ್ಪ ನಾಗಮ್ಮ ಅಂತಲೂ ಆಗುತ್ತದೆ. ಅದು ವಿಜಯ್ ತಂದೆ ತಾಯಿಯ ಹೆಸರು.
ಹೊಸ ಮನೆಗೆ ಹೊಸ ಸೊಸೆಯನ್ನು ಕರೆತಂದು ಪಾವು ಒದೆಸಿದ ವಿಜಯ್, ಯಾವ ಕಾರಣಕ್ಕೂ ಇದು ಪತ್ರಕರ್ತರಿಗೆ ಗೊತ್ತಾಗಬಾರದು ಅಂತ ಎಚ್ಚರವಹಿಸಿದ್ದರು. ಗೃಹ ಪ್ರವೇಶಕ್ಕೆ ಮುಂಚೆ ಶುಭಾ ಪೂಂಜಾರೊಂದಿಗೆ ಅವರು ವಿಧ್ಯುಕ್ತವಾಗಿ ಮದುವೆಯನ್ನೂ ಮತ್ತೊಮ್ಮೆ ಆಗಿದ್ದರು: ನೆಂಟರಿಷ್ಟರ ಸಮ್ಮ್ಮುಖದಲ್ಲಿ ಇವರೆಡಕ್ಕೂ ಮೀರಿದ ವೈಚಿತ್ರ್ಯವೊಂದು ಗೃಹಪ್ರವೇಶದ ಸಂದರ್ಭದಲ್ಲಿ ನಡೆಯಿತು.
ಅದೇನೆಂದರೆ ವಿಜಿಯ ದ್ವಿತೀಯ ಪತ್ನಿ ಜಯಲಕ್ಷ್ಮಿ(?) ಈ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದರು.
ವಿಜಯ್ ರನ್ನು ಹತ್ತಿರದಿಂದ ಬಲ್ಲವರ ಪ್ರಕಾರ, ಶುಭಾ ಪೂಂಜಾರೊಂದಿಗಿನ ಅವರ ವಿವಾಹ ಮೂರನೆಯದು. ಮೊದಲು ಅವರೊಬ್ಬ ಹುಡುಗಿಯನ್ನು ಪ್ರೀತಿಸಿ ಗುಟ್ಟಾಗಿ ಮದುವೆಯಾಗಿದ್ದರು. ಆದರೆ ಮನೆಯಲ್ಲಿ ಪ್ರತಿರೋಧ ಇದಿರಾದ್ದರಿಂದ ಆ ಮದುವೆ ಹಾಗೆಯೇ ಬತ್ತಿಹೋಗಿ, ಬಿಟ್ಟುಹೋಯಿತು. ಆಗ ವಿಜಯ್ ಗೂ ಆರ್ಥಿಕ ಭದ್ರತೆಇರಲಿಲ್ಲ. ಪ್ಲಂಬಿಂಗ್ (ನಲ್ಲಿ ರಿಪೇರಿ) ಮಾಡುತ್ತಿದ್ದರು. ಪೆಪ್ಸಿ ವಿತರಣೆ ಮಾಡುತ್ತಿದ್ದರು. ಜಿಮ್ ನಲ್ಲಿ ಇನ್ ಸ್ಟ್ರಕ್ಟರ್ ಆಗಿದ್ದರು. ಈ ಹಂತದಲ್ಲಿ, ಸರಕಾರಿ ನೌಕರರಾಗಿದ್ದ ವಿಜಯ್ ತಂದೆ ತಾಯಿ ತಮ್ಮ ಮೂಲ ಊರಾದ ಆನೇಕಲ್ ಕಡೆಯಿಂದಲೇ ಜಯಲಕ್ಷ್ಮಿಯವರನ್ನು ತಂದು ಮದುವೆ ಮಾಡಿದರು. ಆ ಮದುವೆಗೆ ಮೂರು ಮಕ್ಕಳು.
ಈ ಮಧ್ಯೆ 'ಚಂಡ' ಚಿತ್ರೀಕರಣ ವೇಳೆ ವಿಜಯ್ ಮನಸು ಕೊಟ್ಟದ್ದು ಶುಭಾ ಪೂಂಜಾ ಅವರಿಗೆ. ತಮ್ಮ ಪತ್ನಿಯಿಂದ ತಮಗೆ ತುಂಬ ತೊಂದರೆಯಿದೆಯೆಂದೂ, ಮಾನಸಿಕವಾಗಿ ಆಕೆ ಅನಾರೋಗ್ಯವಂತಳೆಂದೂ, ಒಂದು ಹಂತದಲ್ಲಿ ತಮಗೆ ಪತ್ನಿಯಿಂದ ಪ್ರಾಣಭಯವಿದೆಯೆಂದೂ ವಿಜಿ ಹೇಳುತ್ತಿದ್ದರು. ಆ ಕಡೆ ವಿಜಯ್ ಪತ್ನಿ ಜಯಲಕ್ಷ್ಮಿ ಮೂರು ಮಕ್ಕಳನ್ನು ಕರೆದೊಯ್ದು 'ತನಗೆ ಪತಿಯಿಂದ ಅನ್ಯಾಯವಾಗುತ್ತಿದೆಯೆಂದೂ, ಅವರು ಶುಭಾ ಪೂಂಜಾ ಅವರ ಮೋಹಕ್ಕೆ ಬಿದ್ದಿದ್ದಾರೆಂದೂ' ಕೆಲವು ಪತ್ರಿಕೆಗಳಲ್ಲಿ ಬರೆಸಿದರು.
ಆ ಆಪಾದನೆಗೆ ಸಮರ್ಥನೆ ಎಂಬಂತೆ ವಿಜಯ್ ಮತ್ತು ಶುಭಾ ಪೂಂಜಾ ಬೆಂಗಳೂರಿನ ಬಿಟಿಎಂ ಲೇಔಟ್ನ ಫ್ಲ್ಯಾಟೊಂದರಲ್ಲಿ ಸಂಸಾರ ಸಾಗಿಸುತ್ತಿದ್ದರು. ಮಕ್ಕಳನ್ನು ವಿಜಯ್ ಅಲ್ಲಿಲ್ಲಿ ಕರೆಸಿಕೊಂಡು ಮಾತನಾಡಿ ಕಳುಹಿಸುತ್ತಿದ್ದರು. ಆದರೆ ಈಗ ಪರಿಸ್ಥಿತಿ ಸುಧಾರಿಸಿದಂತೆ ಕಾಣುತ್ತಿದೆ. ಶುಭಾ ಪೂಂಜಾ ಹಾಗೂ ಜಯಲಕ್ಷ್ಮಿ ಇಬ್ಬರೊಡನೆ ವಿಜಯ್ ಗೃಹಪ್ರವೇಶ ಮಾಡಿದ್ದಾರೆ. ಮೂವರ ಮುಖದಲ್ಲೂ ಅನ್ಯೋನ್ಯತೆ ಇರುವುದು ಗೊತ್ತಾಗುತ್ತದೆ. ಅಚ್ಚರಿಯ ಸಂಗತಿ ಎಂದರೆ ಈ ಗೃಹ ಪ್ರವೇಶಕ್ಕೆ ವಿಜಿಯ ತಂದೆ ತಾಯಿ ಬಂದಿರಲಿಲ್ಲ. ಬಿಡಿ, ಅದು ಅಂತ ಪ್ರಾಣಭಯದ ಸಂಗತಿಯೇನಲ್ಲ.


Click it and Unblock the Notifications











