ನಾನು ಸ್ವಾಮಿಯ ಶಿಷ್ಯೆಯಷ್ಟೆ, ಪ್ರೇಯಸಿ ಅಲ್ಲ
ಬೆಡ್ ರೂಂ ನಲ್ಲಿ ಸ್ವಾಮಿ ನಿತ್ಯಾನಂದ ಜೊತೆ ತಾವು ನಡೆದುಕೊಂಡರೀತಿಯಲ್ಲಿ ಯಾವುದೇ ತಪ್ಪಿಲ್ಲ ಎಂದು ನಟಿ ರಂಜಿತಾ ಪ್ರತಿಕ್ರಿಯಿಸಿದ್ದಾರೆ. ರಂಜಿತಾ ಪ್ರಕಾರ, ನಾನು ಸ್ವಾಮಿಯ ಶಿಷ್ಯೆಯಷ್ಟೆ. ಪ್ರೇಯಸಿ ಅಲ್ಲ. ಅವರಿಗೆ ಮಾತ್ರೆ ಕೊಡಲು, ಕೈಕಾಲು ಒತ್ತಲು ಮಾತ್ರ ಇರುವವಳು ನಾನು ಎಂದಿದ್ದಾರೆ.
ನನ್ನ ಮತ್ತು ಸ್ವಾಮೀಜಿಗಳ ನಡುವೆ ಇಲ್ಲ ಸಲ್ಲದ ಸಂಬಂಧವನ್ನು ಕಲ್ಪಿಸಬೇಡಿ ಎಂದು ನಟಿ ರಂಜಿತಾ ಇದೇ ಮೊದಲ ಬಾರಿಗೆ ಮಾಧ್ಯಮಗಳಿಗೆ ಆಗ್ರಹಿಸಿದ್ದಾರೆ. ತಮಿಳು ವಾರಪತ್ರಿಕೆಯ ಸಂದರ್ಶನದಲ್ಲಿ ರಂಜಿತಾ ತಮ್ಮ ಮೇಲಿನ ಆಪಾದನೆಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.
ಸ್ವಾಮಿಗಳು ಮಹಾಜ್ಞಾನಿಗಳು. ನಾನೇನಿದ್ದರೂ ಅವರ ಶಿಷ್ಯೆಯಷ್ಟೆ. ವಿಡಿಯೋದಲ್ಲಿ ತೋರಿಸಿರುವುದೆಲ್ಲಾ ಕಪೋಲ ಕಲ್ಪಿತ . ಶೀಘ್ರದಲ್ಲೇ ಸ್ವಾಮಿಗಳು ಮಾಧ್ಯಮಗಳ ಮುಂದೆ ಬಂದು ಎಲ್ಲವನ್ನೂ ವಿಶದವಾಗಿ ತಿಳಿಸಲಿದ್ದಾರೆ ಎಂದು ರಂಜಿತಾ ಹೇಳಿದ್ದಾರೆ.
ಸುದೀರ್ಘ ಸಮಯದಿಂದ ಉಬ್ಬಸದಿಂದ ಬಳಲುತ್ತಿದ್ದ ನನ್ನನ್ನು ಸ್ವಾಮೀಜಿಗಳು ಒಂದೇ ಒಂದು ದಿನದಲ್ಲಿ ಗುಣಪಡಿಸಿದರು. ದೂರವಾಣಿ ಮೂಲಕ ಸಂದರ್ಶನ ನೀಡಿರುವ ರಂಜಿತಾ, ಮಾಧ್ಯಮಗಳು ಅನಾವಶ್ಯಕವಾಗಿ ಇದನ್ನು ದೊಡ್ಡ ಸುದ್ದಿ ಮಾಡಿವೆ. ಸ್ವಾಮೀಜಿಗಳು ನನಗೆ ಬಹಳ ವರ್ಷಗಳಿಂದ ಗೊತ್ತು. ನಮ್ಮ ನಡುವೆ ಯಾವುದೇ ಮುಚ್ಚುಮರೆಯಿಲ್ಲ ಎಂದಿದ್ದಾರೆ.
ಅವರ ಪರಮ ಶಿಷ್ಯೆಯಾಗಿ ನಾನು ಅವರಿಗೆ ನನ್ನ ಕೈಲಾದ ಸೇವೆ ಸಲ್ಲಿಸಿದ್ದೇನೆ. ಅವರಿಗೆ ಊಟ ಮಾಡಿಸುತ್ತಿದ್ದೆ. ಅವರ ಕೊಠಡಿಯಲ್ಲಿ ಸ್ವಾಮೀಜಿಗೆ ಮಸಾಜ್ ಮಾಡಿದ್ದೇನೆ. ರಾತ್ರಿಯ ಹೊತ್ತು ಸುದೀರ್ಘ ಹೊತ್ತು ಸೇವೆಯಲ್ಲಿ ತಲ್ಲೀನಳಾಗಿರುತ್ತಿದ್ದೆ. ಈ ವಿಚಾರ ಇಡೀ ಆಶ್ರಮಕ್ಕೇ ಗೊತ್ತಿತ್ತು ಎಂದು ವಿವರ ನೀಡಿದ್ದಾರೆ.
ಸ್ವಾಮೀಜಿಯೊಂದಿಗೆ ವಿಡಿಯೋದಲ್ಲಿ ಇರುವುದು ತಾನೆ ಎಂಬುದನ್ನು ರಂಜಿತಾ ಖಚಿತಪಡಿಸಿದ್ದಾರೆ. ಸ್ವಾಮೀಜಿಯ ಶಿಷ್ಯ ಲೆನಿನ್ ಕರುಪ್ಪನ್ ತೆಗೆದಿರುವ ಈ ಸಿಡಿಯಿಂದ ನನಗೆ ಲಾಭ ಮಾಡಿಕೊಳ್ಳುವ ಯಾವ ಉದ್ದೇಶವೂ ಇಲ್ಲ. ಸ್ವಾಮೀಜಿಯ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ಅವರು ಶುದ್ಧವಾದ ಆತ್ಮವುಳ್ಳವರು. ಅವರು ಅದೇ ಶುದ್ಧ ಆತ್ಮದೊಂದಿಗೆ ಮತ್ತೆ ಹಿಂತಿರುಗಲಿದ್ದಾರೆ ಎಂದು ರಂಜಿತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


Click it and Unblock the Notifications











