'ಅಟ್ಟಹಾಸ' ಚಿತ್ರಕ್ಕೆ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಅಡ್ಡಗಾಲು
ದಂತಚೋರ, ಕಾಡುಗಳ್ಳ, ನರಹಂತಕ ವೀರಪ್ಪನ್ ಕುರಿತ 'ಅಟ್ಟಹಾಸ' ಚಿತ್ರವನ್ನು ಎಎಂಆರ್ ರಮೇಶ್ ನಿರ್ದೇಶಿಸುತ್ತಿರುವುದು ಗೊತ್ತೇ ಇದೆ. ಈಗ ಈ ಚಿತ್ರಕ್ಕೆ ವಿಘ್ನವೊಂದು ಎದುರಾಗಿದೆ. ವೀರಪ್ಪನ್ ಧರ್ಮಪತ್ನಿ ಮುತ್ತುಲಕ್ಷ್ಮಿ ಚಿತ್ರವನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ.
"ಚಿತ್ರದಲ್ಲಿ ನಟಿ ವಿಜಯಲಕ್ಷ್ಮಿ ಅವರು ಮುತ್ತುಲಕ್ಷ್ಮಿ ಪಾತ್ರವನ್ನು ಪೋಷಿಸುತ್ತಿದ್ದಾರೆ. ಆದರೆ ಚಿತ್ರದಲ್ಲಿ ಮುತ್ತುಲಕ್ಷ್ಮಿ ಪಾತ್ರಕ್ಕೆ ಹೆಚ್ಚಿನ ಗ್ಲಾಮರ್ ಅಂಶಗಳನ್ನು ಸೇರಿಸಿರುವ ಅಂಶ ನನ್ನ ಗಮನಕ್ಕೆ ಬಂದಿದೆ. ಇದರಿಂದ ತಮ್ಮ ಘನತೆಗೆ ಕುತ್ತು ಬರುತ್ತದೆ" ಎಂದು ಮುತ್ತುಲಕ್ಷ್ಮಿ ಹೇಳಿದ್ದಾರೆ.
'ಅಟ್ಟಹಾಸ' ಚಿತ್ರವನ್ನು ಆರಂಭಿಸಬೇಕಾದರೆ ತಮ್ಮನ್ನು ಚಿತ್ರದ ನಿರ್ದೇಶಕರು ಭೇಟಿ ಮಾಡಿಲ್ಲ. ವೀರಪ್ಪನ್ ಅವರ ಜೀವನ ಶೈಲಿಯ ಬಗ್ಗೆ ವಿವರಗಳನ್ನು ಕೇಳಿಲ್ಲ. ಚಿತ್ರಕತೆಯನ್ನು ಅವರೇ ಊಹಿಸಿಕೊಂಡು ತೆರೆಗೆ ತರುತ್ತಿದ್ದಾರೆ. ಹಾಗಾಗಿ ಚಿತ್ರ ವೀರಪ್ಪನ್ ನೈಜ ಜೀವನದ ಬಗ್ಗೆ ಮಾಹಿತಿಯನ್ನು ನೀಡಲ್ಲ. ಅವರ ಸಮಯ ಹಾಗೂ ದುಡ್ಡು ಎರಡೂ ವ್ಯರ್ಥ ಎಂದಿದ್ದಾರೆ ಮುತ್ತುಲಕ್ಷ್ಮಿ.
ಡಾ.ರಾಜ್ ಅಪಹರಣ, 108 ದಿನಗಳ ಒತ್ತೆ, ಬಿಡುಗಡೆ, ಆನಂತರದ ಬೆಳವಣಿಗೆಗಳೇ ಚಿತ್ರದ ಕಥಾವಸ್ತು. ವೀರಪ್ಪನ್ ಬಂಧನದಿಂದ ಪಾರಾದ ನಾಗಪ್ಪ ಮಾರಡಗಿ ಕೂಡ ಚಿತ್ರದಲ್ಲಿ ಕಾಣಿಸಲಿದ್ದಾರೆ. ಇದು ದ್ವಿಭಾಷಾ ಚಿತ್ರವಾಗಿದ್ದು ಕನ್ನಡದಲ್ಲಿ 'ಅಟ್ಟಹಾಸ' ಎಂದು ತಮಿಳಿನಲ್ಲಿ 'ವನ ಯುದ್ಧಂ' ಎಂದು ಹೆಸರಿಟ್ಟಿದ್ದಾರೆ ಚಿತ್ರದ ನಿರ್ದೇಶಕ ಎ ಎಂ ಆರ್ ರಮೇಶ್. (ಒನ್ಇಂಡಿಯಾ ಕನ್ನಡ)


Click it and Unblock the Notifications











