ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸ್ಫೋಟಗೊಂಡ ಭಿನ್ನಮತ

ಕೆಲ ದಿನಗಳ ಹಿಂದೆ ಕನ್ನಡ ಚಿತ್ರರಂಗದ ಧೀರ ನಿರ್ಮಾಪಕ ಎಂದೇ ಹೆಸರಾದ ರಾಕ್ಲೈನ್ ವೆಂಕಟೇಶ್ ಅವರು ಮಂಡಳಿಗೆ ರಾಜೀನಾಮೆ ನೀಡಿ ಹೊರಬಂದಿದ್ದರು. ಈಗ ಇವರ ಹಿಂದೆಯೇ ವಿತರಕರ ಸಂಘದ ಉಪಾಧ್ಯಕ್ಷ ಸ್ಥಾನಕ್ಕೆ ಕೆ ಮಂಜು ರಾಜೀನಾಮೆ ಸಲ್ಲಿಸಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
"ಬಸಂತ್ ಕುಮಾರ್ ಪಾಟೀಲ್ ಅವರು ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಅವರ ತೀರ್ಮಾನಗಳು ಕನ್ನಡ ಚಿತ್ರರಂಗದ ಹಿತ ಕಾಯಲು ಸಾಧ್ಯವಾಗುತ್ತಿಲ್ಲ. ಅಧ್ಯಕ್ಷರ ವರ್ತನೆಗೆ ಬೇಸತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಮಂಜು ತಿಳಿಸಿದ್ದಾರೆ. ರಾಕ್ಲೈನ್ ವೆಂಕಟೇಶ್ ರಾಜೀನಾಮೆ ನೀಡಿದಾಗ, ಈ ಬಗ್ಗೆ ಯಾರ ಬಳಿಯೂ ಚರ್ಚಿಸದೆ ಅಧ್ಯಕ್ಷರು ರಾಜೀನಾಮೆ ಅಂಗೀಕರಿಸಿದ್ದರು." ಎಂಬುದು ಮಂಜು ಆರೋಪ.
"ಡಬ್ಬಿಂಗ್ ವಿವಾದಎದುರಿಸುತ್ತಿರುವ 'ಕಾಫಿ ಶಾಪ್' ಚಿತ್ರದ ಬಗ್ಗೆ ಮಂಡಳಿಯಲ್ಲಿ ಚರ್ಚಿಸದೆ ಅದನ್ನು ನ್ಯಾಯಾಲಯಕ್ಕೆ ಕಳುಹಿಸಿದ್ದಾರೆ. ಈ ರೀತಿಯ ಹಲವಾರು ತಪ್ಪು ನಿರ್ಧಾರಗಳನ್ನು ಅಧ್ಯಕ್ಷರು ತೆಗೆದುಕೊಂಡಿದ್ದಾರೆ. ಚಲನಚಿತ್ರ ನಿರ್ಮಾಪಕರ ಸಂಘ ಹಾಗೂ ಮಂಡಳಿ ಜೊತೆ ನನಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಮ್ಮ ತೀರ್ಮಾನಗಳಿಗೆ ಸರಿಯಾದ ಪ್ರತಿಕ್ರಿಯೆ ಸಿಗುತ್ತಿಲ್ಲ. ಹಾಗಾಗಿ ಈ ದಿಢೀರ್ ನಿರ್ಧಾರ ತೆಗೆದುಕೊಂಡದ್ದಾಗಿ" ಮಂಜು ವಿವರ ನೀಡಿದ್ದಾರೆ.
ಬಸಂತಕುಮಾರ್ ಪಾಟೀಲ್ ವಿರುದ್ಧ ಮೊಳಗಿರುವ ಬಂಡಾಯದ ಕಹಳೆ ಮತ್ತಷ್ಟು ರಾಜೀನಾಮೆಗಳಿಗೆ ಕಾರಣವಾಗುವ ಸಾಧ್ಯತೆಗಳಿವೆ. ಮೂಲಗಳ ಪ್ರಕಾರ 23 ಮಂದಿ ಕಾರ್ಯಕಾರಿ ಸದಸ್ಯರು ರಾಜೀನಾಮೆ ಪತ್ರಗಳನ್ನು ಸಿದ್ಧವಾಗಿಟ್ಟುಕೊಂಡಿದ್ದು ಬಸಂತ್ಗೆ ಸಲ್ಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಕಲಾವಿದರ ಸಂಘದ ಅಧ್ಯಕ್ಷ ರೆಬೆಲ್ ಸ್ಟಾರ್ ಅಂಬರೀಷ್ ಹಾಗೂ ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರ ಮಧ್ಯಸ್ಥಿಕೆಯಲ್ಲಿ ಸಮಸ್ಯೆ ಪರಿಹಾರ ಕಾಣಬಹುದು ಎಂದು ನಿರೀಕ್ಷಿಸಲಾಗಿದೆ.


Click it and Unblock the Notifications











