ಕಬಡ್ಡಿ ಕಿಶೋರ್ ಮೌನ ಮುರಿದರು
ಕಿಶೋರ್ ಕೊನೆಗೂ ಮೌನ ಮುರಿದಿದ್ದಾರೆ. ತಮ್ಮ ವಿರುದ್ಧ ನಿರ್ದೇಶಕ ನರೇಂದ್ರಬಾಬು ಮಾಡಿದ ಆಪಾದನೆಗಳ ಬಗ್ಗೆ ಅವರು ಮಾತನಾಡದಿದ್ದರೂ 'ಕಬಡ್ಡಿ' ಚಿತ್ರದ ಬಗ್ಗೆ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಸುದ್ದಿಗಾರರೊಂದಿಗೆ ಅನೌಪಚಾರಿಕವಾಗಿ ಮಾತನಾಡಿದ ಕಿಶೋರ್, 'ಕಬಡ್ಡಿ' ಚಿತ್ರದ ಸೋಲನ್ನು ಒಪ್ಪಿಕೊಂಡರು. ಸೋಲಿಗೆ ಅವರು ಕಂಡುಕೊಂಡಿರುವ ಕಾರಣಗಳು ಎರಡು:
ಇಡೀ ಚಿತ್ರದಲ್ಲಿ ಥ್ರಿಲ್ ಇರಲಿಲ್ಲ. ಕಬಡ್ಡಿಯ ರೋಚಕತೆಯನ್ನು ಸಿನಿಮಾ ಕಟ್ಟಿಕೊಡಲಿಲ್ಲ. ಇದು ಸೋಲಿಗೆ ಒಂದು ಕಾರಣ. ಮತ್ತೊಂದು ಕಾರಣ ಪ್ರೇಮದ ಎಳೆಗೆ ಸಂಬಂಧಿಸಿದ್ದು. ನಾಯಕ-ನಾಯಕಿಯ ಪ್ರೇಮ ಅತ್ಯಂತ ತೆಳುವಾಗಿ ಚಿತ್ರಣಗೊಂಡಿದೆ ಅನ್ನೋದು ಕಿಶೋರ್ ಅನಿಸಿಕೆ. ಅವಿನಾಶ್ ಪಾತ್ರಪೋಷಣೆಯೂ ಗಟ್ಟಿಯಾಗಿರಲಿಲ್ಲ ಎನ್ನೋದು ಅಡಿ ಟಿಪ್ಪಣಿ.
'ಕಬಡ್ಡಿ' ರಾಜ್ಯದ ಅನೇಕ ಭಾಗಗಳಲ್ಲಿ ಇನ್ನೂ ತೆರೆಕಾಣಬೇಕಾಗಿದೆ. ಹಾಗಾಗಿ ಚಿತ್ರವನ್ನು ಸರಿಪಡಿಸಲಿಕ್ಕೆ ಮತ್ತೊಂದು ಅವಕಾಶವಿದೆ. ನಿರ್ದೇಶಕರು ಮನಸ್ಸು ಮಾಡಬೇಕಷ್ಟೇ ಎನ್ನುವುದು ಕಿಶೋರ್ ಮಾರ್ಮಿಕ ಮಾತು.
ಕಬಡ್ಡಿ ಬಿಟ್ಟು ಬೇರೇನು ಸಮಾಚಾರ? ಕಿಶೋರ್ ನಕ್ಕರು. ಅವರೀಗ ಕನ್ನಡಕ್ಕಿಂತಲೂ ತಮಿಳು ಚಿತ್ರಗಳಲ್ಲೇ ಹೆಚ್ಚು ಬಿಜಿ.


Click it and Unblock the Notifications











