ಸಿಂಗಂ ವಿರುದ್ಧ ಕನ್ನಡಿಗರು ಘರ್ಜಿಸಿದ್ದು ಏಕೆ? ರೈಗೆ ಪ್ರಶ್ನೆಗಳು
ಕನ್ನಡಿಗ(?) ರೋಹಿತ್ ಶೆಟ್ಟಿ ನಿರ್ದೇಶನದ ಅಜಯ್ ದೇವಗನ್ ಹಾಗು ಮತ್ತೊಬ್ಬ ಕನ್ನಡಿಗ ಪ್ರಕಾಶ್ ರೈ(?), ಅಲ್ಲಾ ಅಲ್ಲಾ ಪ್ರಕಾಶ್ ರಾಜ್ ಅಭಿನಯದ ಸಿಂಗಂ ಹಿಂದಿ ಚಿತ್ರದಲ್ಲಿ ಕನ್ನಡಿಗರನ್ನ taken for granted ಅಂದುಕೊಂಡಿರುವುದು ನಿಮಗೆ ತಿಳಿದಿದೆ.
ಈ ಚಿತ್ರತಂಡ ಕನ್ನಡಿಗರ ಬಗ್ಗೆ ಅವಹೇಳನಕಾರಿ ಸಂಭಾಷಣೆಯನ್ನು ಚಿತ್ರದಲ್ಲಿ ಅಳವಡಿಸಿದ್ದೂ ತಿಳಿದಿದೆ. ಮುಂದೇನು? ಪರಿಸ್ಥಿತಿ ಈಗ ಶಾಂತವಾದರೂ ರಿಲಯನ್ಸ್ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾನೂನು ಕ್ರಮ ಜರುಗಿಸಲು ಚಿಂತನೆ ನಡೆಸಿದೆ. ನಿಯಮ ಮೀರಿ ಪ್ರಿಂಟ್ ಹಾಕಿ, ಪ್ರದರ್ಶನ ಮಾಡಿರುವ ಆರೋಪ ರಿಲಯನ್ಸ್ ಸಂಸ್ಥೆ ಮೇಲಿದೆ.
ಚಿತ್ರದಲ್ಲಿನ ಸಂಭಾಷಣೆ ಈ ರೀತಿ ಇತ್ತು:
ಪ್ರಕಾಶ್ ರಾಜ್: ಕರ್ನಾಟಕದ ಗಡಿಯಿಂದ 1000 ಜನರನ್ನ ತಂದು ನಿಲ್ಲಿಸ್ತೀನಿ.
ಅಜಯ್ ದೇವಗನ್: ನಾನು ಮರಾಠ. ಹತ್ತು ಸಾವಿರ ಜನರನ್ನು ನನ್ನ ಭಾಗದಿಂದ ಕರೆತರುವ ಸಾಮರ್ಥ್ಯ ನನಗಿದೆ. ಆದರೆ ನಿನ್ನಂತಹ ನಾಯಿಗಳನ್ನು ಎದುರಿಸಲು ನನ್ನಂತಹ ಒಬ್ಬ ಸಿಂಹ ಸಾಕು.
ಪ್ರಕಾಶ್ ರಾಜ್ ಸೇರಿದಂತೆ ಚಿತ್ರತಂಡಕ್ಕೆ ಈಗ ಪ್ರಶ್ನೆಗಳು:-
1. ಕರ್ನಾಟಕದ ಗಡಿ ಅಂತ ಪ್ರಸ್ತಾಪ ಮಾಡಿ, ಅಲ್ಲಿಂದ 1000 ಜನರನ್ನ ಕರೆಸ್ತೀನಿ ಅಂತ ಹೇಳಿ, ಆಮೇಲೆ ನಾಯಕನು ನಿನ್ನಂತಹ ನಾಯಿಗಳನ್ನು ಎದುರಿಸುವ ಸಿಂಹ ನಾನು ಅಂದ್ರೆ, ಕರ್ನಾಟಕದವರು ನಾಯಿಗಳು ಅಂತ ಅರ್ಥ ಬರಲ್ವಾ?
2. ಟಿವಿ9 ಸೇರಿದಂತೆ ಖಾಸಗಿ ಮಾಧ್ಯಮಗಳಿಗೆ ಪ್ರಕಾಶ್ ರಾಜ್ ಕೊಟ್ಟ ಸ್ಪಷ್ಟನೆ ಹಾಸ್ಯಾಸ್ಪದವಾಗಿತ್ತು. ಕರ್ನಾಟಕದ ಗಡಿ ಇಂದ ಜನರನ್ನ ಕರೆಸ್ತೀನಿ ಅಂತ ಹೇಳಿದೀವಿ ಹೊರತು ಕನ್ನಡಿಗರು ಅಂತ ಪ್ರಸ್ತಾಪ ಮಾಡಿಲ್ಲ ಅಂದ್ರು. ಅಲ್ಲ ಸ್ವಾಮಿ ಕರ್ನಾಟಕದ ಗಡಿ ಅಥವಾ ಕರ್ನಾಟಕದಲ್ಲಿ ಕನ್ನಡಿಗರಲ್ಲದೇ ಜರ್ಮನರು, ಜಪಾನೀಯರು, ಇಂಗ್ಲಿಷರು, ಫ್ರೆಂಚರು ಇದ್ದಾರಾ?
3.ಪ್ರಕಾಶ್ ರಾಜ್ ಹೇಳಿದ್ದು "ಅನವಶ್ಯಕವಾಗಿ ಕಿಡಿಗೇಡಿಗಳು ಇದನ್ನ ದೊಡ್ಡ ವಿಷಯ ಮಾಡುತ್ತಿದ್ದಾರೆ ಅಂತ. ಇವ್ರು ಕನ್ನಡಿಗರನ್ನ ನಾಯಿಗಳು ಅಂತೆಲ್ಲಾ ಬಯ್ಕೊಂಡಿದ್ರು ಕನ್ನಡಿಗರು ಸುಮ್ಮನೆ ಕೂತಿರಬೇಕಾ? ಕರ್ನಾಟಕದ ರಕ್ಷಣಾ ವೇದಿಕೆ ಪ್ರತಿಭಟಿಸಿದ್ದು ಕನ್ನಡಿಗರಿಗಾಗಿರುವ ಅವಮಾನದ ವಿರುದ್ಧ.
Reliance Entertainments ಗೆ ಕೆಲವು ಪ್ರಶ್ನೆಗಳು:
1. ಚಿತ್ರ ನಿರ್ಮಾಣವಾದ ಮೇಲೆ ರಶಸ್ (ಚಿತ್ರದ ಅಂತಿಮ ಪ್ರತಿ) ನೋಡುವಾಗ ಜನರ ಭಾವನೆಗಳಿಗೆ ಧಕ್ಕೆ ಬರುವ ಸಂಭಾಷಣೆಯ ಇದ್ದಲ್ಲಿ, ಅದನ್ನು ತೆಗೆದು ಹಾಕಿಸಬೇಕೆಂಬ ಚಿಕ್ಕ ಅಂಶವು ಇಂತಹ ದೊಡ್ಡ ಸಂಸ್ಥೆಯ ಗಮನಕ್ಕೆ ಬಾರದೇ ಇದ್ದುದು ಹೇಗೆ?
2. ಸೆನ್ಸಾರ್ ಮಂಡಳಿ ಜಾಣ ನಿದ್ದೆಯಲ್ಲಿರೋದು ಹಿಂದಿ ಚಿತ್ರ ತಯಾರಕರ ಪ್ರಾಬಲ್ಯವನ್ನು ಸಾಬೀತು ಮಾಡುವುದಿಲ್ಲವೆ.
3 ಆಕ್ಷೇಪಾರ್ಹ ಸಂಭಾಷಣೆಯನ್ನು ಮ್ಯೂಟ್ ಮಾಡುವ ಮೊದಲು ಚಿತ್ರದ ದೃಶ್ಯದಲ್ಲೇ ಕ್ಷಮಾಯಾಚನೆ ಕೋರಿ ಪ್ರದರ್ಶಿಸಿ, ಇದು ದೇಶದ ಎಲ್ಲೆಡೆ ಜಾರಿಗೊಳ್ಳಬೇಕು.
ಕನ್ನಡಿಗರಿಗೆ ಕಿವಿಮಾತು: ನೋಡಿದ್ರಾ ಹಿಂದಿ ಹೇರಿಕೆಯ ದುಷ್ಪರಿಣಾಮಗಳು ಯಾವ ಮಟ್ಟಕ್ಕಿದೆ ಅಂತ. ನಮ್ಮವರು ಹಿಂದಿ ರಾಷ್ಟ್ರ ಭಾಷೆ ಅನ್ನುವ ಪೊಳ್ಳುವಾದವನ್ನು ಇನ್ನೂ ಪ್ರತಿಪಾದಿಸ್ತಾನೆ ಇದ್ದಾರೆ. ಆದರೆ ಹಿಂದಿ ಚಿತ್ರ ತಯಾರಕರು ಕನ್ನಡಿಗರನ್ನ, ಕರ್ನಾಟಕದ ಜನರನ್ನ ನಾಯಿಗಳಂತೆಲ್ಲಾ ಬೈಯ್ದಾಡುತಿದ್ದಾರೆ.
ಇನ್ನಾದರೂ ಪರಭಾಷೆ ಚಿತ್ರಗಳಿಗೆ ಗುಡ್ ಬೈ ಹೇಳಬೇಕಿರೋದು ನಮ್ಮ ಸ್ವಾಭಿಮಾನದ ಪ್ರಶ್ನೆ ಅಲ್ಲವೇ. ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಕನ್ನಡಿಗರು ಎಚ್ಚೆತ್ತುಕೊಳ್ಳಬೇಕಿದೆ. ನಾವು ಯಾರ ತಂಟೆಗೂ ಹೋಗುವವರಲ್ಲ. ನಮ್ಮ ತಂಟೆಗೆ ಯಾರು ಬಂದರೂ ನಾವು ಸಹಿಸಲಾರೆವು ಅನ್ನುವ ಸಂದೇಶ ಈ ಮೂಲಕ ಸಾರೋಣ ಬನ್ನಿ.


Click it and Unblock the Notifications











